Saturday 3 January, 2009

ರಾಮರಾಜ್ಯ

ಕಳೆದ ಶತಮಾನ ಮತ್ತು ಈ ಶತಮಾನಗಳ ಭಾರತದ ರಾಜಕೀಯ ಪುಟಗಳನ್ನು ತೆರೆದಾಗ 'ರಾಮರಾಜ್ಯ' ಎನ್ನುವ ಶಬ್ದದ ವ್ಯಾಪಕ ಬಳಕೆಯನ್ನು ಗಮನಿಸಬಹುದು. ಈ ಶಬ್ದದ ಬಳಕೆಗೆ ಅಥವಾ 'ರಾಮರಾಜ್ಯ'ದ ಪರಿಕಲ್ಪನೆಗೆ ಕಾರಣವಾದದ್ದು ವಾಲ್ಮೀಕಿಗಳು ವರ್ಣಿಸಿದ ರಾಮರಾಜ್ಯದ ಹಿರಿಮೆ - ಗರಿಮೆ.

ರಾಮರಾಜ್ಯದ ವಿಧಾನದ ಕುರಿತಾಗಿ ಅಲ್ಲ ; ರಾಮರಾಜ್ಯದ ಪರಿಣಾಮದ ಕುರಿತಾಗಿ ವಾಲ್ಮೀಕಿಗಳ ಕಥನವನ್ನು ಇಲ್ಲಿ ಸಂಗ್ರಹಿಸಿದೆ.

ರಾಮರಾಜ್ಯದಲ್ಲಿ....

* ಯಾರೂ ಅಕಾಲ ಮರಣಕ್ಕೆ ತುತ್ತಾಗುತ್ತಿರಲಿಲ್ಲ ; ಇದರಿಂದಾಗಿ ವಿಧವೆಯರ ದುಃಖದ ಪರಿಚಯ ಯಾರಿಗೂ ಇರಲಿಲ್ಲ.

* ವಿಷವೈದ್ಯರಿಗೆ ವೃತ್ತಿಯಿರಲಿಲ್ಲ ; ಏಕೆಂದರೆ ಸರ್ಪ ಮುಂತಾದ ವಿಷಜಂತುಗಳ ಭಯವೇ ಇರಲಿಲ್ಲ.

* ರೋಗದ ಭೀತಿ ಯಾರಿಗೂ ಇರಲಿಲ್ಲ ; ಏಕೆಂದರೆ ರೋಗವೇ ಇರಲಿಲ್ಲ.

* ಮನೆಗಳಿಗೆ ಅಲಂಕಾರಕ್ಕಾಗಿ ಮಾತ್ರ ದ್ವಾರಗಳಿದ್ದವು ; ಏಕೆಂದರೆ ಕಳ್ಳರೇ ಇರಲಿಲ್ಲ.

* ಹಿರಿಯರು ಕಿರಿಯರಿಗೆ ಪ್ರೇತಕಾರ್ಯ ಮಾಡುವ ಪರಿಸ್ಥಿತಿ ಇರಲಿಲ್ಲ ; ಏಕೆಂದರೆ ಎಲ್ಲರೂ ದೀರ್ಘಾಯುಷಿಗಳಾಗಿದ್ದರು.

* ಅಳು - ಆಕ್ರಂದನ ಎಲ್ಲೂ ಕೇಳುತ್ತಿರಲಿಲ್ಲ ; ಏಕೆಂದರೆ ಎಲ್ಲೆಲ್ಲೂ ಆನಂದವೇ ತುಂಬಿತ್ತು.

* ನ್ಯಾಯಸ್ಥಾನಗಳ ಅವಶ್ಯಕತೆ ಇರಲಿಲ್ಲ ; ಏಕೆಂದರೆ ಪ್ರಜೆಗಳು ಪರಸ್ಪರ ಕಲಹವನ್ನೇ ಮಾಡುತ್ತಿರಲಿಲ್ಲ.

* ಕಲಹ ಇಲ್ಲವಾಗಿತ್ತು ; ಆದ್ದರಿಂದ ಹಿಂಸೆಯೇ ಇರಲಿಲ್ಲ.

* ವೃಕ್ಷಗಳು ಬೀಳುತ್ತಿರಲಿಲ್ಲ ; ಏಕೆಂದರೆ ಆಳವಾದ - ದೃಢವಾದ ಬೇರುಗಳನ್ನು ಹೊಂದಿದ್ದವು.

* ನಿರ್ದಿಷ್ಟ ಫಲಪುಷ್ಪಗಳಿಗಾಗಿ ನಿರೀಕ್ಷಿಸಬೇಕಾಗಿರಲಿಲ್ಲ ; ಏಕೆಂದರೆ ವರ್ಷವಿಡೀ ಫಲಪುಷ್ಪ ಸಮೃದ್ಧಿ ಇರುತ್ತಿತ್ತು.

* ಪ್ರವಾಹ - ಬರಗಾಲ ಎರಡೂ ಇರಲಿಲ್ಲ ; ಏಕೆಂದರೆ ಪರ್ಜನ್ಯನು ಜನರ ಇಚ್ಛೆಯಂತೆ ಮಳೆಯನ್ನು ಸುರಿಸುತ್ತಿದ್ದನು.

* ಉಷ್ಣ ಮತ್ತು ಶೀತದ ಬಾಧೆಯೇ ಇರುತ್ತಿರಲಿಲ್ಲ ; ಏಕೆಂದರೆ ಜನರಿಗೆ ಹಿತವಾಗುವಂತೆಯೇ ವಾಯುವು ಸದಾ ಬೀಸುತ್ತಿದ್ದನು.

* ಕಾರ್ಯಗಳನ್ನು ನಿರ್ವಹಿಸಲು ಅಧಿಕಾರಿಗಳು ಬೇಕಿರಲಿಲ್ಲ ; ಏಕೆಂದರೆ ಎಲ್ಲರೂ ತಮ್ಮ ವೃತ್ತಿಯನ್ನು ಪ್ರೀತಿಸಿ ನಿರ್ವಹಿಸುತ್ತಿದ್ದರು.

* ಸುಳ್ಳು ಎಲ್ಲಿಯೂ ಇರಲಿಲ್ಲ ; ಏಕೆಂದರೆ ಎಲ್ಲರೂ ಸತ್ಯವಂತರಾಗಿದ್ದರು.

* ಅಧರ್ಮದ ಪ್ರಸಕ್ತಿಯೇ ಇರಲಿಲ್ಲ ; ಎಲ್ಲರೂ ಧರ್ಮಪರಾಯಣರಾಗಿದ್ದರು.

ಇದು ವಾಲ್ಮೀಕಿಗಳು ಕಂಡ ರಾಮರಾಜ್ಯ.
ಇಂತಹ ರಾಮರಾಜ್ಯವೇ ತಾನೇ ನಮಗೂ ಬೇಕಿರುವುದು?


(೨೦೦೬ ಸೆಪ್ಟೆಂಬರ್ 'ಧರ್ಮಭಾರತೀ'ಯಲ್ಲಿ ಪ್ರಕಟಿತ ಲೇಖನ)

No comments: