Thursday 29 January, 2009

ಮನುಭಾಷಿತ - 12

ವ್ಯಕ್ತಿ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಮನುಷ್ಯನ ಎಲ್ಲ ಚಟುವಟಿಕೆಗಳು ಮನಸ್ಸಿನ ಅಧೀನ. ಮನಸ್ಸು ಕುಣಿಸಿದಂತೆ ಕುಣಿಯುವ ಸೂತ್ರದ ಬೊಂಬೆ ಈ ದೇಹ. ಕಣ್ಣು - ಮೂಗು - ಕಿವಿ - ಚರ್ಮ - ನಾಲಗೆ ಮುಂತಾದ ಇಂದ್ರಿಯಗಳೆಲ್ಲ ಮನಸ್ಸು ನುಡಿದಂತೆ ತಾನೇ ನಡೆಯುವುದು?

ಪ್ರತಿಯೊಬ್ಬ ಕೊಲೆಗಾರ ಹೊರಗೆ ಕೊಲ್ಲುವ ಮುನ್ನ ತನ್ನ ಮನಸ್ಸಿನಲಿಯೇ ಕೊಂದಿರುತ್ತಾನೆ. ಕಳ್ಳ ಕಳ್ಳತನ ಮಾಡುವುದು ಮೊದಲು ಮನಸ್ಸಿನಲ್ಲಿಯೇ. ವ್ಯಭಿಚಾರಿ ವ್ಯಭಿಚಾರ ಮಾಡುವುದೂ ಮೊದಲು ಮನದಲ್ಲಿಯೇ. ಎಲ್ಲ ಅಪರಾಧಗಳ ಜನ್ಮಭೂಮಿ ಮನಸ್ಸು.

ಅಪರಾಧ ಜಗತ್ತಿನಲ್ಲಿ ಶಿಕ್ಷೆಯಾಗುವುದು, ಹೊರ ಅಪರಾಧಗಳಿಗೆ. ಯಾಕೆಂದರೆ ಮನಸ್ಸಿನೊಳಗಿನ ಅಪರಾಧಕ್ಕೆ ಸಾಕ್ಷಿ ಇಲ್ಲ ; ಸಾಕ್ಷಿಯಿಲ್ಲದ ಅಪರಾಧ ಸಿಂಧುವಲ್ಲ ; ಸಿಂಧುವಾಗದ್ದಕ್ಕೆ ಶಿಕ್ಷೆಯಿಲ್ಲ.

ಮನಸ್ಸು ತಪ್ಪು ಮಾಡದಂತಿರಲು ಅಂತಸ್ಸಾಕ್ಷಿಯ ಜಾಗ್ರತಿ ಅಗತ್ಯ. ನ್ಯಾಯದ ಹಾದಿಯಲ್ಲಿ ಮುನ್ನಡೆಸುವ ಆ ಅಂತಸ್ಸಾಕ್ಷಿಗೆ ಹೆಸರು 'ವೈವಸ್ವತಯಮ'. ಅನುಭವಿಗಳು ನುಡಿಯುವುದು ಅದನ್ನೇ-

ಯಮೋ ವೈವಸ್ವತೋ ರಾಜಾ ಯಸ್ತವೈಷ ಹೃದಿಸ್ಥಿತಃ |
ತೇನ ಚೇದವಿವಾದಸ್ತೇ ಮಾ ಗಂಗಾನ್ ಮ ಕುರೂನ್ ಗಮಃ |
ತೇನ ಚೇಚ್ಚ ವಿವದಸ್ತೇ ಮಾ ಗಂಗಾನ್ ಮಾ ಕುರೂನ್ ಗಮಃ |

"ನಿನ್ನ ಹೃದಯದಲಿ ಬೆಳಗುತ್ತಿರುವ ಯಮಧರ್ಮನೊಂದಿಗೆ ನಿನಗೆ ವಿವಾದವಿಲ್ಲವಾದರೆ, ಅವನ ಧರ್ಮಪಥ ನಿನಗೆ ಪಥ್ಯವೆನಿಸಿದರೆ, ನಿನ್ನ ನಡೆ ಅವನಿಗೆ ಸಮ್ಮತವಾದರೆ, ನೀನು ಪುಣ್ಯಜೀವಿ ; ಪುಣ್ಯ ಸಂಪಾದನೆಗಾಗಿ ನೀನು ಕಾಶಿಕ್ಷೇತ್ರಕ್ಕೋ, ಕುರುಕ್ಷೇತ್ರಕ್ಕೋ ಯಾತ್ರೆ ಮಾಡಬೇಕಿಲ್ಲ. ನಿನಗೂ ಯಮನಿಗೂ ವಿವಾದವಿದ್ದರೆ, ನಿನ್ನ ಮನಸ್ಸು ಅವನಿಗೆ ಸರಿಹೊಂದದಿದ್ದರೆ ನೀನು ಪಾಪಿ ; ನೀನೆಲ್ಲಿಗೂ ಯಾತ್ರೆ ಮಾಡಬೇಕಿಲ್ಲ ; ನಿನ್ನ ಯಾತ್ರೆ ವ್ಯರ್ಥ".

ಮನು ತಪಸ್ಸಿನ ತಪ್ಪಾದ ಚಿಂತನೆಗಳನ್ನೂ ಅಶುಭ ಕರ್ಮವೆಂದು ಹೆಸರಿಸುತ್ತಾನೆ-

ಪರದ್ರವ್ಯೇಷ್ವಭಿಧ್ಯಾನಂ ಮನಸಾsನಿಷ್ಟಚಿಂತನಮ್ |
ವಿತಥಾಭಿನಿವೇಶಶ್ಚ ತ್ರಿವಿಧಂ ಕರ್ಮ ಮಾನಸಮ್ ||

ಅನ್ಯರ ಗಳಿಕೆಯನ್ನು ಕಬಳಿಸುವ ಯೋಚನೆ ; ಮನಸ್ಸಿನ ತುಂಬ ಕೆಟ್ಟ ಚಿಂತನೆ. ಸತ್ಯವನ್ನು ಸುಳ್ಳೆಂದೂ, ಸುಳ್ಳನ್ನು ಸತ್ಯವೆಂದೂ ನಂಬುವುದು ಇದು ಮನಸ್ಸಿನ ಅಪರಾಧ. ಈ ಅಪರಾಧ ಮನಸ್ಸಿನ ಕ್ಷೋಭೆಗೆ ಕಾರಣ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

No comments: