Sunday 4 January, 2009

ಮನುಭಾಷಿತ - 9

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಸ್ತ್ರೀ - ಪುರುಷ ಸಂಯೋಗ ಸೃಷ್ಟಿಸಹಜ ಕಾರ್ಯ. ಹೆಣ್ಣಿಗೆ ಗಂಡಿನಲ್ಲಿ ಒಲವು ; ಗಂಡಿಗೆ ಹೆಣ್ಣಿನಲ್ಲಿ ಅನುರಕ್ತಿ ; ಇದು ಸೃಷ್ಟೀಶ ಸೃಷ್ಟಿಗಿತ್ತ ವರ.

ಪ್ರಾಣಿಸಮೂಹದಲ್ಲಿ ಇದು ಮುಕ್ತ. ಮನುಷ್ಯರಲ್ಲಿ ಅದರಲ್ಲೂ ಭಾರತೀಯರಲ್ಲಿ ಇದಕ್ಕೊಂದು ಚೌಕಟ್ಟಿದೆ ; ಪರಿಧಿಯಿದೆ. ಈ ಚೌಕಟ್ಟಿಗೆ "ದಾಂಪತ್ಯ" ಎಂದು ಹೆಸರು.

ದಾಂಪತ್ಯ ಎರಡು ಹೃದಯಗಳ ಕೂಡುವಿಕೆಯ ವಿಶಿಷ್ಟ ಬದುಕು. ಅದು ಅನನ್ಯ ಕೂಡ.

ಮಮ ಹೃದಯಂ ತೇ ಅಸ್ತು |
ಮಮ ಚಿತ್ತೋ ಚಿತ್ತಮಸ್ತು ತೇ ||

ನನ್ನ ಹೃದಯದಲ್ಲಿ ನಿನ್ನ ಹೃದಯವಿರಲಿ, ನನ್ನ ಮನದಲ್ಲಿ ನಿನ್ನ ಮನಸ್ಸು ನೆಟ್ಟಿರಲಿ. ವಿವಾಹದ ಮಂಗಲ ಮುಹೂರ್ತದಲ್ಲಿ ವರ ವಧುವಿನೊಂದಿಗೆ ಹಂಚಿಕೊಳ್ಳುವ ಮಧುರ ಭಾವಾಭಿವ್ಯಕ್ತಿಯಿದು.

ಇಂತಹ ದಾಂಪತ್ಯವನ್ನೇ ಕವಿ ಭವಭೂತಿ ಅದ್ವೈತಕ್ಕೆ ಹೋಲಿಸುತ್ತಾನೆ. ಅವನ ನೋಟದಲ್ಲಿ ದಾಂಪತ್ಯ ಸುಖ - ದುಃಖಗಳ ಸಮ್ಮಿಶ್ರಣ ; ಅಸಂಖ್ಯ ಅವಸ್ಥೆಗಳ ಸಮ್ಮಿಲನ.

ಸಂಕೀರ್ಣವಾದ ದಾಂಪತ್ಯದ ಸಮಸ್ಯೆಗೆ ಮನು ಸೂಚಿಸುವುದು ಸರಳವಾದ ಪರಿಹಾರವನ್ನು -

ಸಂತುಷ್ಟೋ ಭಾರ್ಯಯಾ ಭರ್ತಾ
ಭರ್ತ್ರಾ ಭಾರ್ಯಾ ತಥೈವ ಚ |
ಯಸ್ಮಿನ್ನೇವ ಕುಲೇ ನಿತ್ಯಂ
ಕಲ್ಯಾಣಂ ತತ್ರ ವೈ ಧ್ರುವಮ್ ||

ಕುಟುಂಬದಲ್ಲಿ ಕಲ್ಯಾಣ ಸದಾ ನೆಲೆಸಿರಬೇಕೆಂದರೆ ಸತಿಪತಿಯರ ಪರಸ್ಪರ ಸಂಬಂಧ ಸುಮಧುರವಾಗಿರಬೇಕು.

ಸಂಬಂಧ ಸುಮಧುರವಾಗಿರಬೇಕೆಂದರೆ ಒಬ್ಬರಿಂದೊಬ್ಬರು ಸಂತುಷ್ಟರಾಗಬೇಕು. ಪತ್ನಿಯಿಂದಾಗಿ ಪತಿಯ ಬದುಕು ಸದಾ ಹಸಿರಾಗಬೇಕು ; ಪತಿಯಿಂದ ಪತ್ನಿಯ ಜೀವನಕ್ಕೆ ಹರ್ಷದ ನೆಲೆ ಒದಗಬೇಕು.

ಅರಿವಿನಿಂದ ಕೂಡಿದ ಅನ್ಯೋನ್ಯತೆಯ ಅನನ್ಯ ಸಹಜೀವನ ಭಾರತೀಯ ಪರಂಪರೆಯ ಅನುಪಮ ಕೊಡುಗೆ. ಅದನ್ನು ಉಳಿಸುಕೊಳ್ಳುವ ಮನೋದಾರ್ಢ್ಯ ದಂಪತಿಗಳದ್ದಾಗಿರಬೇಕಷ್ಟೇ!

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

2 comments:

thandacool said...

yavagalu bekaguva mattu jnanakke agatya eruv brahagalu mudi baruttive. dhanyavad. nanage idondu refrence blog.

ಜಗದೀಶಶರ್ಮಾ said...

ಹೊಸ ಸ್ಫೂರ್ತಿ ನೀಡಿದ್ದಕ್ಕೆ ಧನ್ಯವಾದಗಳು...........