Wednesday 15 December, 2010

ವಿವೇಕ-ವಿಚಾರ : ಸೋಲು

ಇದನ್ನಂತೂ ಯಾರೂ ಬಯಸರು, ಯಾರಿಗೂ ಇಷ್ಟವಾಗದು ಸೋಲು.
ಗೆಲುವಿಗಾಗಿ ತಾನೇ ನಮ್ಮ ಹಂಬಲ.
ನಮೆಲ್ಲ ಕಾಯಕವೂ ಗೆಲುವಿಗಾಗೇ ಇರುವಾಗ ಸೋಲು ಯಾರಿಗೆ ಬೇಕು..?
ವಸ್ತು ಸ್ಥಿತಿ ಎಂದರೆ ಬದುಕಿಗೆ ಸಣ್ಣ ಸೋಲುಗಳು ಬೇಕು.
ಬೇಕೆಂಬುದಷ್ಟೇ ಅಲ್ಲ ; ಅವು ಜೀವನದ ಜೊತೆ ಜೊತೆಗೆಯೇ ಸಾಗಿಬರಬೇಕು..
ಏಕೆಂದರೆ ಸೋಲಿಲ್ಲದೇ ಗೆಲುವಿಲ್ಲ.
ವಾಸ್ತವವಾಗಿ ಸಣ್ಣಸೋಲುಗಳೇ ನಮ್ಮಲ್ಲಿ ಗೆಲುವಿನ ಆಕಾಂಕ್ಷೆಯನ್ನು ಗಟ್ಟಿಗೊಳಿಸುವಂಥವುಗಳು;
ಗೆಲ್ಲಲೇ ಬೇಕೆನ್ನುವ ಛಲವನ್ನು ತುಂಬಿಸುವಂಥವುಗಳು.
ಸೋಲಿನ ನೋವು ಮನವನ್ನು ಕಾಡದಿದ್ದರೆ ಗೆಲುವಿನ ಆಸೆಯೇ ಹುಟ್ಟಲಾರದು..!
ನಾವಾಗ ಎಲ್ಲದರಲ್ಲೂ ನಿರಾಸಕ್ತರಾಗಿ ಇದ್ದುಬಿಡುತ್ತೇವೆ.
ಹಾಗಾಗಿ ಆಗಾಗ ಸೋಲುತ್ತಿರಬೇಕು.
ಆ ಸೋಲು ಸಣ್ಣದಾದರೂ ಮನಸ್ಸು ಸ್ವಲ್ಪ ಕಾಲವಾದರೂ ನರಳುವಂತಿರಬೇಕು;
ನಮ್ಮ ಸಾಮಥ್ಯ೯ವನ್ನು ತಟ್ಟಿ ಹಂಗಿಸಬೇಕು; ಆಂತರ್ಯದ ಆತ್ಮವಿಶ್ವಾಸ ಕದಲಬೇಕು; ಸಮಾನರೊಂದು
ನಿರ್ಲಕ್ಷ್ಯದ ನಗುವನ್ನು ಎಸೆಯಬೇಕು. ಆಗ ಹುಟ್ಟುವ ಗೆಲುವಿನ ಬಯಕೆ ಗಾಳಿಯಾಗುತ್ತದೆ, ಬಿರುಗಾಳಿಯಾಗುತ್ತದೆ.
ಅದು ಅಂತಿಮ ಗೆಲುವಿನ ಅತ್ಯುಪಯುಕ್ತ ಸಾಧನವಾಗುತ್ತದೆ. ಆಗ ಸಹಜವಾಗಿಯೇ ಗೆಲುವು ನಮ್ಮದಾಗುತ್ತದೆ.

('ಬ್ರಹ್ಮ' ಪತ್ರಿಕೆಯ ಅಂಕಣಬರಹ.)

Wednesday 8 December, 2010

ಒಂದನೇ ತರಗತಿಯ ಮಕ್ಕಳೊಂದಿಗೊಂದು ದಿನ...

ತರಗತಿಯನ್ನು ಪ್ರವೇಶಿಸಿದೆ.

"ಅಭಿವಾದಯೇ" ಸಮೂಹದ ಧ್ವನಿ ಮೊಳಗಿತು.

ಏನೆನ್ನಬೇಕೆಂದೇ ತಿಳಿಯಲಿಲ್ಲ.

"ನಾನೇನು ಹೇಳಬೇಕು" ಎಂದೆ.

"ಶ್ರೇಯೋಸ್ತು" ಹೇಳಿ. ಮತ್ತೆ ಮೊಳಗಿತು ಸಮೂಹದ ಧ್ವನಿ.

ಅದು ಸಂಸ್ಕೃತಪಾಠಶಾಲೆಯಲ್ಲ, ಗುರುಕುಲವೂ ಅಲ್ಲ, ಅದಿರುವುದು ಗ್ರಾಮೀಣಭಾಗದಲ್ಲೂ ಅಲ್ಲ, ಅದು ಹಿರಿಯ ತರಗತಿಯೂ ಅಲ್ಲ.

ಬೆಂಗಳೂರು ಮಹಾನಗರಿಯ ಆಧುನಿಕ ಶಿಕ್ಷಣದ ಶಾಲೆಯೊಂದರ ಒಂದನೇ ತರಗತಿಯದು. ಅಚ್ಚರಿಯಲ್ಲಿ ಮುಳುಗಿಹೋದೆ.

ಬೇರೆ ಶಾಲೆಗಳಿಗಿಂತ ಶಾಲೆ ವಿಭಿನ್ನ ಅಂತ ಗೊತ್ತಿತ್ತು, ಸಂಸ್ಕೃತಿಗೆ ಇಲ್ಲಿ ಹೆಚ್ಚು ಒತ್ತು ಅಂತಲೂ ಗೊತ್ತಿತ್ತು. ಆದರೆ ಇಷ್ಟು ನಿರೀಕ್ಷೆಯಿರಲಿಲ್ಲ.

"ಸಂಸ್ಕೃತ ಬರತ್ತಾ?" ನನ್ನ ಪ್ರಶ್ನೆ. "ಆಮ್" ಸಂಸ್ಕೃತದಲ್ಲೇ ಪ್ರತ್ಯುತ್ತರ ಬಂತು. ಆದರೂ ಸಂಸ್ಕೃತದಲ್ಲಿ ಮಾತುಕತೆ ಮುಂದುವರಿಸುವ ಧೈರ್ಯವಾಗಲಿಲ್ಲ. ಎಷ್ಟೆಂದರೂ ಪುಟ್ಟ ಮಕ್ಕಳಲ್ವ. ಕನ್ನಡದಲ್ಲೇ "ಒಬ್ಬಬ್ಬರಾಗಿ ನಿಮ್ಮ ಹೆಸರು ಹೇಳಿ" ಎಂದೆ. "ಮಮ ನಾಮ ಸುರಭಿ ಇತಿ" ಉಲಿಯಿತೊಂದು ಪುಟ್ಟ ಕೋಗಿಲೆ.

............

"ನಾವೊಂದು ಶಾಲೆ ಮಾಡಿದ್ದೇವೆ, ಸೃಷ್ಟಿಶೀಲ ಕಲಿಕೆಗೆ ಒತ್ತು, ಸಂಸ್ಕೃತಿಯನ್ನು ಪ್ರಧಾನವಾಗಿ ಗಮನದಲ್ಲಿಟ್ಟಿಕೊಂಡಿದ್ದೇವೆ. ನೀವೊಮ್ಮೆ ಬಂದು ನಮ್ಮ ಮಕ್ಕಳಿಗೆ ಪಾಠ ಮಾಡಬೇಕು, ನಾವು ಶಿಕ್ಷಕರೂ ಕುಳಿತಿರುತ್ತೇವೆ" ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿರೇಖಾ ಮೇಡಮ್ ಹೀಗೆಂದಿದ್ದರು. ಕೊಟ್ಟ ಮೊದಲ ಡೇಟಿಗೆ ಹೋಗಲಾಗದೆ ಎರಡನೆಯ ಅವಕಾಶ ಬಳಸಿಕೊಂಡೆ. ಶಾಲೆಯ ಹೊರನೋಟವೇ ಆಕರ್ಷಕವಾಗಿತ್ತು. ಹಸೆಚಿತ್ರಗಳು ಶಾಲೆಯ ಹೆಸರನ್ನೂ ಮೀರಿ ನಿಂತಿದ್ದವು. ಶಾಲೆಯ ಸಂಸ್ಥಾಪಕರಾದ ಉತ್ಸಾಹಿ ಕ್ರಿಯಾಶೀಲ ಯುವಕರು ಶಶಿರೇಖಾರೊಂದಿಗೆ ಸ್ವಾಗತಿಸಿದರು. ಉಭಯ ಕುಶಲೋಪರಿ ಮುಗಿದ ಮೇಲೆ ತರಗತಿಯೆಡೆಗೆ ಸಾಗಿದೆವು. ನಮ್ಮನ್ನಲ್ಲಿ ಗುಬ್ಬಚ್ಚಿ ಮರಿಗಳ ಗುಂಪು ಕಾಯುತ್ತಿತ್ತು.

..........

'ವಿಷಯಗಳನ್ನು ಹೇರದೇ, ಅದು ಪಠ್ಯವೆಂದೆನಿಸದೇ, ಆಸಕ್ತಿಯಿಂದ, ಲವಲವಿಕೆಯಿಂದ ಮಕ್ಕಳು ಕಲಿಯುವಂತೆ ಕಲಿಸಬೇಕು' ಎನ್ನುವ ಹತ್ತು ವರ್ಷದ ಪ್ರಯೋಗ-ಪರಿಶ್ರಮದ ಹಿನ್ನೆಲೆಯಲ್ಲಿ ಒಂದಷ್ಟು ಯೋಜನೆ ಮಾಡಿಕೊಂಡಿದ್ದೆ. 'ದೇವರು ಮತ್ತು ರಾಕ್ಷಸರು' ಎನ್ನುವ ವಿಷಯ ಹೇಳಬೇಕು, 'ನಾವೇ ದೇವರು' ಅನ್ನುವುದನ್ನು ಅರ್ಥ ಮಾಡಿಸಬೇಕು ಎನ್ನುವುದು ನನ್ನ ಯೋಚನೆಯಾಗಿತ್ತು. ಹೀಗೆ ಮಾಡಬೇಕೆಂದಿದ್ದೇನೆ ಎಂದು ತಮ್ಮನಂತಿರುವ ಗೆಳೆಯ ಮಧು ದೊಡ್ಡೇರಿಗೆ ಹೇಳಿದ್ದೆ. ಮಧು ನಗುತ್ತಾ "ನಾವೇ ದೇವರು ಅನ್ನೋ ಕಾನ್ಸೆಪ್ಟ್ ನಮಗೇ ಅರ್ಥ ಆಗೋದಿಲ್ಲ, ಸಣ್ಣ ಮಕ್ಕಳಿಗೆ ಹೇಗೆ ಗೊತ್ತಾಗತ್ತೆ" ಎಂದಿದ್ದ. ಅವನ ಮಾತು ಸರಿಯೆನಿಸಿದ್ದರೂ ಒಳಗಿರುವ ಶಿಕ್ಷಕ ಪ್ರಯತ್ನಕ್ಕೆ ಮುಂದಾಗಿದ್ದ.

..........

"ಮಕ್ಕಳೇ, ನಿಮಗೆ ಇವತ್ತು ಬೇರೆ ಹೆಸರಿಡೋಣ್ವಾ?" ಕೇಳಿದೆ. "ಹೋ" ಎಂದವು ಖುಷಿಯಿಂದ. ವಿಷ್ಣುವಿನ ದಶಾವತಾರಗಳನ್ನು ಅದು ಅದೆಂದು ಹೇಳದೆ ಮಕ್ಕಳಿಗೆ ಹೆಸರಿಟ್ಟು ಕಲಿಸಬೇಕೆಂದು ಯೋಜನೆ ಹಾಕಿದ್ದೆ. ಹೆಸರಿಡಲು ಪ್ರಾರಂಭಿಸುತ್ತಿದ್ದಂತೆಯೇ ಯೋಜನೆ ಮುರಿದುಬಿತ್ತು. ಹತ್ತು ಅವತಾರಗಳ ಹೆಸರನ್ನು ಮಕ್ಕಳು ಹೇಳಿ ಮುಗಿಸಿದರು. ಸಾವರಿಸಿಕೊಂಡು ತಕ್ಷಣ ಅಲ್ಲೇ ಮತ್ತೊಂದು ಯೋಜನೆ ರೂಪಿಸಿಕೊಂಡೆ. ಮಕ್ಕಳಿಗೆ ಮಾಹೇಶ್ವರ ಸೂತ್ರಗಳನ್ನು ಹೆಸರಿಟ್ಟರೆ ಹೇಗೆ? ಎನಿಸಿತು. ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ವೈಜ್ಣಾನಿಕವಾದ ಸಂಸ್ಕೃತವ್ಯಾಕರಣದ ಬೇಸ್ ಅದು. ಹದಿನಾಲ್ಕು ಸೂತ್ರಗಳ ಅಡಿಪಾಯದ ಮೇಲೆಯೇ ಮಹರ್ಷಿ ಪಾಣಿನಿ ತಮ್ಮ ಅಷ್ಟಾಧ್ಯಾಯೀ ಗ್ರಂಥ ರಚಿಸಿದ್ದು. ಸಂಸ್ಕೃತವಿದ್ಯಾರ್ಥಿಗಳು ಮೊದಲು ಕಲಿಯಲು ತಿಣುಕಾಡುವುದು ಅದನ್ನೇ. ನಾಮಕರಣ ಆರಂಭವಾಯಿತು, "ಸುರಭಿಯ ಹೆಸರು ಅಇಉಣ್, ಶ್ರೀಲಕ್ಷ್ಮಿಯ ಹೆಸರು ಋಲೃಕ್, ವಾಸುಕಿಯ ಹೆಸರು ಏಓ, ಸುಶ್ರುತನ ಹೆಸರು ಐಔಚ್, ಗೋಪಾಲನ ಹೆಸರು ಹಯವರಟ್,.... ಲಣ್, ಝಭಯ್.... ಹೀಗೆ ಸಾಗಿತು. ವ್ಯರ್ಥಪ್ರಯತ್ನವೆಂದು ಅಂದುಕೊಂಡೇ ಸಾಗುತ್ತಿದ್ದೆ. ಆದರೆ ಮಕ್ಕಳು ಅದನ್ನು ವ್ಯರ್ಥಗೊಳಿಸಲೇ ಇಲ್ಲ. ಪಾಠ ಮುಗಿಯುವವರೆಗೂ ತಮ್ಮ ಹೆಸರನ್ನು ನೆನಪಿಸುತ್ತಲೇ ಇದ್ದರು. ನಾನು ಮಧ್ಯದಲ್ಲಿ "ಗೋಪಾಲ, ನೀನು ಹೇಳು" ಎಂದರೆ ಸಾಕು, "ಅವನ ಹೆಸರು ಹಯವರಟ್" ಎನ್ನುತ್ತಿದ್ದರು.

ಒಂದಷ್ಟು ಒಳ್ಳೆಯ ಗುಣಗಳನ್ನೂ ಕೆಟ್ಟಗುಣಗಳನ್ನೂ ಮಕ್ಕಳಿಂದಲೇ ಹೇಳಿಸಿದೆ. ಪಟ್ಟಿಯನ್ನೇ ಇಟ್ಟುಕೊಂಡು ಒಳ್ಳೆಯದೆಲ್ಲ ದೇವರಗುಣ, ಕೆಟ್ಟದ್ದೆಲ್ಲ ರಾಕ್ಷಸರ ಗುಣ ಎಂದು ಮನವರಿಕೆ ಮಾಡಿದೆ. "ದೇವರು ಕಷ್ಟದಲ್ಲಿದ್ದವರಿಗೆ ಹೆಲ್ಪ್ ಮಾಡ್ತಾನೆ, ನಾವೂ ಹಾಗೇ ಮಾಡಬೇಕು" ಎನ್ನುತ್ತಾ "ಕರಿ ಮಕರಿಗೆ ಸಿಕ್ಕಿ" ಕಥೆ ಹೇಳಲಾರಂಭಿಸಿದೆ. ಮತ್ತೆ ನನಗೇ ಸೋಲು. ಸುರಭಿ ಅಲಿಯಾಸ್ ಅಇಉಣ್ ಕಥೆ ಹೇಳಿ ಮುಗಿಸಿದಳು.

'ಗಲಾಟೆ ಇಲ್ಲದ ತರಗತಿ ನಿರ್ಜೀವ' ಅನ್ನುವುದು ನನ್ನ ಅಭಿಪ್ರಾಯ. ಪೂರ್ಣಪ್ರಮತಿಯ ಅಭಿಪ್ರಾಯವೂ ಅದೇ. ಹಾಗಾಗಿ ಮಕ್ಕಳು ಅವಧಿ ಪೂರ್ಣ ಮಾತನಾಡುತ್ತಲೇ ಇದ್ದರು. ಅದರಲ್ಲಿ ನಮ್ಮ ಅಇಉಣ್ ಹೆಚ್ಚು ಮಾತನಾಡುತ್ತಿದ್ದಳು. ಸ್ವಲ್ಪ ಸುಮ್ಮನಾಗಿಸಲು "ದೇವರು ಹೆಚ್ಚು ಮಾತನಾಡುವುದಿಲ್ಲ" ಎಂದೆ. ಬಾಣದಂತೆ ಪ್ರಶ್ನೆ ತೂರಿಬಂತು "ದೇವರು ಮಾತಾಡ್ತಾನಾ?" "ಹೌದು" ಎಂದೆ. "ನಮಗೆ ಕೇಳಲ್ವಲ್ಲಾ?" ಪಾಟೀಸವಾಲು. "ಧ್ಯಾನ ಮಾಡಿದ್ರೆ ಕೇಳ್ಸತ್ತೆ" ಎಂದೆ. ನನ್ನ ಮಾತಿನ್ನೂ ಪೂರ್ಣ ಆಗುವ ಮೊದಲೇ ಎಲ್ಲಮಕ್ಕಳೂ ಕೈಯನ್ನು ಚಿನ್ಮುದ್ರೆಯಾಗಿಸಿ, ಕಣ್ಮುಚ್ಚಿ, ಮಾತು ನಿಲ್ಲಿಸಿ ಧ್ಯಾನ ಆರಂಭಿಸಿಯೇ ಬಿಟ್ಟರು. ನಾನಂತೂ ತಬ್ಬಿಬ್ಬಾಗೋದೆ. ನನ್ನೊಂದಿಗೆ ಬಂದಿದ್ದ ಸುರೇಶ, ಲೋಹಿತರಂತೂ ಕಣ್ಣರಳಿಸಿ ನೋಡುತ್ತಿದ್ದರು.

ಅಂತೂ ಅಚ್ಚರಿಯ ಸಾಗರದಲ್ಲಿ ಮುಳುಗಿಹೋಗಿ ಅವಧಿ ಮುಗಿಸಿದೆ. ಹೊರಬರುವಾಗ "ಇನ್ನ್ಯಾವಾಗ ಬರ್ತೀರಾ?" ಎನ್ನುವ ಪ್ರಶ್ನೆ ಕಿವಿಯನ್ನು ತುಂಬಿತ್ತು.

........

'ಪೂರ್ಣಪ್ರಮತಿ' ಕೆಲವು ಯುವಮನಸ್ಸುಗಳ ಸೃಷ್ಟಿ. ಇಂದಿನ ಶಿಕ್ಷಣಕ್ಷೇತ್ರದ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರ ಕನಸು ದೊಡ್ಡದಿದೆ. ಸಮಾಜ ಸಹಕರಿಸಬೇಕಷ್ಟೆ.

ಸಂಸ್ಥೆಯ ಹೆಚ್ಚಿನ ಪರಿಚಯಕ್ಕೆ..

http://purnapramati.in/

Monday 29 November, 2010

ಸಂಗತ


"ಯದ್ಯದಾಚರತಿ ಶ್ರೇಷ್ಠಃ
ತತ್ತದೇವೇತರೇ ಜನಾಃ|
ಸಯತ್ಪ್ರಮಾಣಂ ಕುರುತೇ
ಲೋಕಸ್ತದನುವರ್ತತೇ||
ಮಹಾತ್ಮರಾದವರನ್ನು ಜನರು ಅನುಸರಿಸುವುದು ಲೋಕರೂಢಿ. ಈ ಹಿಂದೆ ನೂರಾರು ಮಂದಿ ತಮ್ಮ ಜೀವನದ ಸಿಹಿಕಹಿಗಳನ್ನು ಬರೆದು ಹತ್ತು ಮಂದಿಗೆ ತಿಳಿಸಿ ಹಂಚಿಕೊಂಡಿದ್ದಾರೆ. ಲಿಖಿತ ರೂಪ ಕೊಡದ ಹಿರಿಯರೂ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹಿರಿಯರ ಕಥೆಗಳೊಂದಿಗೆ ತಮ್ಮ ಜೀವನಾನುಭವಗಳನ್ನೂ, ಕಲ್ಪನೆಗಳನ್ನೂ ತಿಳಿಸಿ ಅವರ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ನನ್ನ ತಂದೆ ಜೀವನದುದ್ದಕ್ಕೂ ತನ್ನ ಜೀವನದ ಏರಿಳಿತದ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರ ಪರಿಣಾಮವಾಗಿ ನಮ್ಮ ಜೀವನವಿಧಾನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಇತಿಹಾಸ ಓದುವ, ಕಲಿಸುವ ಗುರಿ ಇದೇ ತಾನೆ?

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆತ್ತವರು, ಮಕ್ಕಳು ಜೊತೆಯಲ್ಲಿದ್ದು ಅನುಭವ ಹಂಚಿಕೊಳ್ಳುವ ಕಾಲಾವಕಾಶ ಕಡಿಮೆ. ಅಪ್ಪ-ಅಮ್ಮನ ಡೈರಿನೋಡಿ ಮಕ್ಕಳು ತಿಳಿದುಕೊಳ್ಳುವ ಕಾಲವೂ ಮರೆಯಾಗಿ ಅಪ್ಪನ ಗಣಕಯಂತ್ರ-ಈ ಮೇಲ್ ಗಳ ಮೂಲಕ ಮಾಹಿತಿ ಪಡೆದುಕೊಳ್ಳುವ ಕಾಲ ಇದಿರಾಗುತ್ತಿರುವ ಈ ಕಾಲದಲ್ಲಿ ನಮ್ಮ ಜೀವನಾನುಭವಗಳನ್ನು ಹಿತೈಷಿಗಳೊಂದಿಗೆ ಹಂಚಿಕೊಳ್ಳಲು ಇಂತಹ ಜೀವನಕಥೆಗಳು ಸಹಾಯಕವಲ್ಲವೇ?"

ಇದು ಶ್ರೀ ಎಸ್. ಈಶ್ವರ ಭಟ್, ಎಳ್ಯಡ್ಕ ಅವರು ತಮ್ಮ 'ದೃಷ್ಟ-ಅದೃಷ್ಟ' ಪುಸ್ತಕದ ಮುನ್ನುಡಿಯಲ್ಲಿ ಹೇಳುವ ಮಾತು. 'ದೃಷ್ಟ-ಅದೃಷ್ಟ' ಶ್ರೀಭಟ್ಟರ ಆತ್ಮಚರಿತ್ರೆ. ಒಮ್ಮೆ ಓದಲೇಬೇಕಾದ ಪುಸ್ತಕವಿದು.

ಯಾವುದೇ ವ್ಯಕ್ತಿಯ ಆತ್ಮಚರಿತ್ರೆಯೆಂದರೆ ಸಹಜವಾಗಿಯೇ ಅದು ಆತ್ಮಸ್ತುತಿಯ ಆಗರವಾಗಿರುತ್ತದೆ. ಓದುಗ ಅಸಹನೀಯ ವೇದನೆಯನ್ನು ಅನುಭವಿಸುವಂತಿರುತ್ತದೆ. ಯಾಕೆಂದರೆ ವ್ಯಕ್ತಿ ತನ್ನನ್ನು ದೊಡ್ಡವನನ್ನಾಗಿಸಿಕೊಳ್ಳುವ ಪ್ರಯತ್ನವನ್ನು ಅಲ್ಲಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ 'ದೃಷ್ಟ-ಅದೃಷ್ಟ' ಅದಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿ ಈಶ್ವರ ಭಟ್ಟರು ತಮ್ಮನ್ನು ದೊಡ್ಡವರನ್ನಾಗಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಪ್ರಾಥಮಿಕ ಶಾಲೆಗೆ ಹೋಗುವ ಯಾವ ಸಾಧ್ಯತೆಯೂ ಇಲ್ಲದ ತಮ್ಮ ದುರ್ಭರ ಬಾಲ್ಯದ ಸಂಕಟಗಳನ್ನೆದುರಿಸಿ ಮುಖ್ಯಾಧ್ಯಾಪಕರಾಗುವವರೆಗಿನ ಅವರ ಯಶೋಗಾಥೆ ಓದುಗನ ಮನದಲ್ಲಿ ಅವರನ್ನು ದೊಡ್ಡವರನ್ನಾಗಿಸುತ್ತದೆ.

('ತ್ರಿವಿಕ್ರಮ' ಪತ್ರಿಕೆಯ ಅಂಕಣಬರಹ)

Friday 26 November, 2010

ಸಾಮ್ರಾಜ್ಯದಲ್ಲಿ 'ಸಾಮ್ರಾಟ್' ಇನ್ನಿಲ್ಲ

ಸಾಮ್ರಾಟ್ ಇನ್ನಿಲ್ಲ. ಶ್ರೀಮಠದ ಗೋಲೋಕ ರಾಜನಿಲ್ಲದ ರಾಜ್ಯವಾಗಿದೆ. ಸಾಮ್ರಾಟನನ್ನು ಕಂಡವರು, ಪ್ರೀತಿಸಿದವರು ಅವನಿಲ್ಲದ ಅಮೃತಧಾರಾ ಗೋಲೋಕವನ್ನು ಕಲ್ಪಿಸಿಕೊಳ್ಳಲಾರರು. ಅವನ ಇರುವಿಕೆಯೇ ಹಾಗಿತ್ತು. ಅವನು ಮಲಗಿದರೂ, ನಿಂತರೂ, ನಡೆದಾಡಿದರೂ, ಮುಕುಟ ಧರಿಸಿದ ಮಹಾರಾಜನಂತೆ ಕಾಣುತ್ತಿದ್ದ. ಅವನನ್ನು ನೋಡುವುದೇ ಸೊಬಗು. ಗೋಲೋಕದ ವೀಕ್ಷಕರಂತೂ ಒಟ್ಟು ಗೋಲೋಕವನ್ನು ನೋಡಿದಷ್ಟು ಹೊತ್ತು ಸಾಮ್ರಾಟ್ ಮುಂದೂ ನಿಂತಿರುತ್ತಿದ್ದರು.

೨೦೦೭ ಏಪ್ರಿಲ್ ನಲ್ಲಿ ನಡೆದ ಚಾರಿತ್ರಿಕ ವಿಶ್ವಗೋಸಮ್ಮೇಳನದಲ್ಲಿ ಶ್ರೀಶ್ರೀಗಳವರ ಅನಂತರದ ಕೇಂದ್ರಬಿಂದು ಸಾಮ್ರಾಟನೇ ಆಗಿದ್ದ. ಹೆಚ್ಚಾಗಿ ಭವ್ಯ-ವಿಶಾಲ ಸಭಾಂಗಣದಲ್ಲಿ ನಿಂತಿರುತ್ತಿದ್ದ ಅವನನ್ನು ನೋಡುವುದೇ ಜನರಿಗೆ ಹಬ್ಬವಾಗಿತ್ತು. ಅಂತಹ ಅದ್ಭುತ ಆಕಾರವನ್ನು ದೂರದಿಂದ ಕಂಡು ಬೆಚ್ಚಿದವರೂ ಅವನ ಶಾಂತಗಂಭೀರ ಸ್ತಿಮಿತತೆಯನ್ನು ಕಂಡು ಅಚ್ಚರಿ ತಾಳುತಿದ್ದರು. ಭಾವುಕರಂತೂ ಸಮ್ಮೇಳನಕ್ಕೆ ಬಂದ ದೈವಪ್ರತಿನಿಧಿ, ಪ್ರತ್ಯಕ್ಷ ನಂದಿ ಎಂದು ಕೈಮುಗಿದಿದ್ದರು.

ಸಾಮ್ರಾಟ್ ಮೂಲತಃ ಗುಜರಾತಿನವನು. ಅಹಮದಾಬಾದ್‌ನ ಶ್ರೀಜಗನ್ನಾಥ ಮಂದಿರದ ಗೋಶಾಲೆಯಲ್ಲಿದ್ದವ. ಅಲ್ಲಿದ್ದಾಗ ಅವನ ಹೆಸರು ಸಾಮ್ರಾಟ್ ಎಂದೂ ಅಲ್ಲ. ಅವನಾಗ ಸಾಮ್ರಾಟನೂ ಅಲ್ಲ. ಗಾಡಿ ಎಳೆಯುವ ಸಾಮಾನ್ಯ ಎತ್ತು. ಅಲ್ಲಿಗೆ ಚಿತ್ತೈಸಿದ್ದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳವರ ಕಣ್ಣಿಗೆ ಈ ಚೆಲುವಾಂತ ಚೆನ್ನಿಗ ಕಾಣಸಿಕ್ಕಿದ. ಪಾಮರ ಕಣ್ಣು ಗುರುತಿಸದ ಅವನ ಹಿರಿಮೆಯನ್ನು ಆ ಕಣ್ಣು ಗುರುತಿಸಿತು. ಶ್ರೀಶ್ರೀಗಳ ಸೂಚನೆಯಂತೆ ಗಾಡಿ ಎಳೆಯುವ ಈ ಸಾಮಾನ್ಯ ಎತ್ತು ಶ್ರೀಮಠಕ್ಕೆ ಬಂತು.

ಪರಮಪೂಜ್ಯರು ಅವನನ್ನು ಸಾಮ್ರಾಟ್ ಎಂದರು. ಅವನ ಹೆಸರಷ್ಟೇ ಅಲ್ಲ, ಅವನು ಸಾಮ್ರಾಟನೇ ಆದ ಗೋಪ್ರೇಮಿಗಳ ಹೃದಯದಲ್ಲಿ. ಸಾಮ್ರಾಟ್ ಬಂದ ಕೆಲವೇ ದಿನಕ್ಕೆ ವಿಶ್ವಗೋಸಮ್ಮೇಳನ. ಅದರ ಮೌಲ್ಯವನ್ನೇ ಸಾಮ್ರಾಟ್ ಹೆಚ್ಚಿಸಿಬಿಟ್ಟ. ಅನಂತರದ್ದು ಅವನ ವಿಜೃಂಭಣೆಯ ಇತಿಹಾಸ. ಶ್ರೀಮಠದ ಕಾಮದುಘಾದ ಮೂಲಪುರುಷ ಗಾಂಭೀರ್ಯವೇ ಮೈವೆತ್ತ ಮಹಾನಂದಿಯನ್ನೂ ಮೀರಿಸುವ ಜನಪ್ರಿಯತೆ ಅವನದಾಗಿಬಿಟ್ಟಿತ್ತು. ಎತ್ತರದ ಅವನ ಕೋಡುಗಳ ವಿನ್ಯಾಸ, ಅದನ್ನು ಹೊತ್ತ ಅವನ ನೋಟ, ನಡೆ ಎಲ್ಲವೂ ಎಲ್ಲರ ಮನಸ್ಸನ್ನು ಸೆರೆಹಿಡಿದವು.

ಅಂತಹ ಸಾಮ್ರಾಟ್ ಇನ್ನಿಲ್ಲವಾದ. ಕೆಲ ದಿನಗಳ ಹಿಂದೆಯಷ್ಟೇ ಆಕಸ್ಮಿಕವಾಗಿ ಬಿದ್ದು ಒಂದು ಕೋಡನ್ನು ಮುರಿದುಕೊಂಡಿದ್ದೇ ನೆವವಾಯಿತು. ಅಲ್ಲಿಂದಲೇ ಸ್ವಲ್ಪ ಅನಾರೋಗ್ಯ ಅವನನ್ನು ಕಾಡುತ್ತಲೇ ಇತ್ತು. ಅಂತೂ ೨೨ರ ಹರೆಯದಲ್ಲಿ ಈ ಜನ್ಮ ಮುಗಿಸಿದ. ಇನ್ನು ಅವನ ನೆನಪಷ್ಟೇ...

"ಪ್ರಿಯ ಸಾಮ್ರಾಟ್, ಉನ್ನತ ಲೋಕದಲ್ಲಿ ನೀನಿರುವಿ. ಮತ್ತೆ ಬಾ ಈ ಕರಾಳ ಲೋಕಕ್ಕೆ ಎಂದು ಕರೆಯಲಾರೆವು. ಏಕೆಂದರೆ ನಾವು ಆಳುತ್ತಿರುವ ಈ ಪ್ರಪಂಚ ನಿನ್ನ ವಂಶಕ್ಕೆ ನಿರ್ಭೀತಿಯಿಂದ ಬದುಕಲು ಯೋಗ್ಯವಾಗಿಲ್ಲ. ಆದರೆ ನಿನ್ನಲ್ಲಿ ನಮ್ಮ ಪ್ರಾರ್ಥನೆ ಇಷ್ಟೇ....

ಅಲ್ಲಿಂದಲೇ ನಮ್ಮನ್ನು ಹರಸು. ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ನಮಗಾಗಿ ವರ ಕೇಳಿಕೊಳ್ಳಲು ನಾವು ಸಮರ್ಥರು. ವರ ಬೇಡ. ನಿನ್ನ ವಂಶದ ರಕ್ಷಣೆಯ ಮನಸ್ಸು ನಮ್ಮದಾಗಲಿ; ಅದಕ್ಕೆ ಬೇಕಾದ ಬುದ್ಧಿಬಲ-ಬಾಹುಬಲಗಳು ನಮ್ಮದಾಗಲಿ; ಮನುಷ್ಯರಲ್ಲಿ ಮನುಷ್ಯತ್ವವಾದರೂ ಉಳಿಯಲಿ"

('ಧರ್ಮಭಾರತಿ'ಮಾಸ ಪತ್ರಿಕೆಯ ಸಂಪಾದಕ ಬರಹ.)

Wednesday 24 November, 2010

ನೃತ್ಯವೋ ಜಗವೆಲ್ಲ...

ಬ್ರಹ್ಮಾಂಡವೇ ನೃತ್ಯವೇದಿಕೆ; ಭಗವಂತನೇ ಸೂತ್ರಧಾರ; ಜೀವಗಳೆಲ್ಲ ನರ್ತಕರು; ಬದುಕಿನೆಲ್ಲ ನಡೆಯೇ ನರ್ತನದ ಪದವಿನ್ಯಾಸ; ಸೂತ್ರಧಾರನ ಸೂತ್ರಕ್ಕೆ ಒಪ್ಪುವಂತಿದ್ದರೆ ಅದು ಪ್ರೇಕ್ಷಕರ ಮನ ತಣಿಸುವ, ಹೃದಯ ಮಣಿಸುವ, ನರ್ತಕರನ್ನು ಸೂತ್ರದ ಸುಮವಾಗಿಸುವ ನೃತ್ಯ. ಸೂತ್ರದಿಂದ ಹೊರಬಂದರೆ ಅದು ತಪ್ಪು ನಡೆ, ತಪ್ಪಿದ ನಡೆ. ಹಾಗಾದಾಗ ಬದುಕು ಸೂತ್ರ ಹರಿದ ಗಾಳಿಪಟ.

ಜೀವನನೃತ್ಯದ ಈ ಸೂತ್ರಧಾರ ಸ್ವಯಂ ನೃತ್ಯಗಾರನೂ ಹೌದು. ಅವನ ತಾಂಡವ ಜೀವಗಳ ಸಂಹಾರಕ್ಕೆ ಕಾರಣವಾದರೆ, ಅವನ ಶಕ್ತಿರೂಪಿಣಿಯ ಲಾಸ್ಯ ಪ್ರಪಂಚವನ್ನೇ ಸೃಷ್ಟಿಸುವಂತದ್ದು. ಶ್ರೀಶಂಕರಭಗವತ್ಪಾದರು-
ಪ್ರಪಂಚಸೃಷ್ಟ್ಯುನ್ಮುಖಲಾಸ್ಯಕಾಯೈ
ಸಮಸ್ತಸಂಹಾರಕತಾಂಡವಾಯ|
ಜಗಜ್ಜನನ್ಯೈ ಜಗದೇಕಪಿತ್ರೇ
ನಮಃ ಶಿವಾಯೈ ಚ ನಮಃ ಶಿವಾಯ||
ಎಂದು ಲಾಸ್ಯ-ತಾಂಡವಗಳಲ್ಲಿನ ದೈವಕಾರ್ಯಗಳನ್ನು ವರ್ಣಿಸುತ್ತಾರೆ. ಮಾತೆ ಶಿವೆ ನರ್ತಿಸಿದರೆ ಅವಳ ವಾತ್ಸಲ್ಯಧಾರೆಯಲ್ಲಿ ಮಿಂದೆದ್ದ ಜೀವಲೋಕ ಹುಟ್ಟಿಕೊಳ್ಳುತ್ತದೆ; ತಂದೆ ಶಿವ ನರ್ತಿಸಿದರೆ ಎಲ್ಲ ಜೀವಿಗಳೂ ಅಸ್ತಿತ್ವ ಕಳೆದುಕೊಂಡು ಮಹಾಪ್ರಳಯ ಸಂಭವಿಸುತ್ತದೆ.

ಕೀರ್ತಿಶೇಷರಾದ ಶ್ರೀ ಡಿ. ವಿ. ಜಿ-
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ|
ಪ್ರತ್ಯೇಕಜೀವದಶೆಯವನಂಗಭಂಗಿ||
ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ|
ಪ್ರತ್ಯಗಾತ್ಮನು ನೀನು - ಮಂಕುತಿಮ್ಮ||
ಎನ್ನುತ್ತಾರೆ. ಅವರ ಕ್ರಾಂತದರ್ಶಿಯಾದ ಕವಿಮನಸ್ಸು ಜಗವೆಲ್ಲ ನಟರಾಜನ ನೃತ್ಯವೆಂದು ಗುರುತಿಸುತ್ತದೆ. ನೃತ್ಯದ ಅಂಗಭಂಗಿಗಳೆಲ್ಲಿ? ಎಂದರೆ ಜೀವದ ಜೀವನದ ದಶೆಗಳೆಲ್ಲ ಅವನ ಅಂಗಭಂಗಿಗಳೆನ್ನುತ್ತಾರೆ. ಕಣ್ಣನ್ನು ತೆರೆದು ಜಗವನ್ನು ಕಂಡರೆ ನೃತ್ಯದ ದೃಶ್ಯ, ಕಣ್ಮುಚ್ಚಿ ಅಂತರಂಗವನ್ನು ಕಂಡರೆ ನಿಶ್ಚಲತೆಯೆನ್ನುವ ಅವನ ನರ್ತಿಸುತ್ತಲೂ ನರ್ತಿಸದ, ನರ್ತಿಸದೆಯೂ ನರ್ತಿಸುವ ವಿಚಿತ್ರವಿನ್ಯಾಸವನ್ನು ಮತ್ತೆ ಶ್ರೀ ಡಿ. ವಿ. ಜಿ ಹೀಗೆನ್ನುತ್ತಾರೆ-
ಕಣ್ದೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ|
ಕಣ್ಮುಚ್ಚಿ ನೋಡು, ನಿಶ್ಚಲಶುದ್ಧಸತ್ತ್ವ||
ಉನ್ಮುಖನು ನೀನೆರಡು ಜಗಕಮಿರುತಿರುವಾಗ|
ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ||

ಅವನ ಸೃಷ್ಟಿಯೆನ್ನುವ ನರ್ತನವೇ ವಿಚಿತ್ರ-ವಿಶಿಷ್ಟ. ಎಲ್ಲವನ್ನೂ ಎಲ್ಲರನ್ನೂ ತಣಿಸುವ ರಚನೆಯದು. ಅಲ್ಲಿ ಎಲ್ಲ ಜೀವಗಳಿಗೂ ಸುಖವಿದೆ-ಸಂತೋಷವಿದೆ-ನೆಮ್ಮದಿಯಿದೆ. ಸಿಹಿ ರುಚಿಯೆನಿಸಿದವಗೆ ಸಿಹಿಯಿದೆ; ಕಹಿ ಪಥ್ಯವೆನಿಸಿದರೆ ಕಹಿಯೂ ಇದೆ. ಕರುಣೆಯಲ್ಲಿ ರಸ ಕಾಣುವುದಾದರೆ ಕರುಣೆಯಿದೆ; ಶೃಂಗಾರರಸಜೀವಿಗೆ ಶೃಂಗಾರವೂ ಇದೆ. ಉಪ್ಪು-ಖಾರಗಳು; ಹುಳಿ-ಒಗರುಗಳು; ಅದ್ಭುತ-ವೀರಗಳು; ಹಾಸ್ಯ-ಭಯಾನಕಗಳು; ರೌದ್ರ-ಭೀಭತ್ಸಗಳು ಎಲ್ಲವೂ ಇದೆ ಸೃಷ್ಟಿನೃತ್ಯದಲ್ಲಿ. ಇದೆಲ್ಲವನ್ನೂ ಮೀರಿದ ಮಧುರಶಾಂತವೂ ಎಲ್ಲದರೊಂದಿಗೆ ಮೇಳೈಸಿದೆ.

ಇಂತಹ ಸೃಷ್ಟಿನೃತ್ಯದ ಪ್ರತಿಕೃತಿ ಅಥವಾ ಪ್ರತಿನಿಧಿ ನಮ್ಮ ಭಾರತೀಯ ನೃತ್ಯಕಲೆ. ಇಲ್ಲಿ ಸೃಷ್ಟಿಯ ಕತೆಯಿದೆ; ಸ್ಥಿತಿಯ ವಿಸ್ತಾರವಿದೆ; ಲಯದ ರುದ್ರತೆಯಿದೆ. ಮಹೋನ್ನತ ಸತ್ತ್ವರ ಚರಿತೆಯಿದೆ; ದುಷ್ಟರ ದೌಷ್ಟ್ಯವಿದೆ. ದುಷ್ಟತನವಳಿದು ಸತ್ತ್ವ ಬೆಳಗಿದ ಜೀವನಪಾಠವಿದೆ. ಇತಿಹಾಸವಿದೆ; ಪುರಾಣವಿದೆ. ಭಾವವಿದೆ; ಭಾಷೆಯಿದೆ. ರಸವಿದೆ; ರಾಗವಿದೆ. ಸಾಧನೆಯಿದೆ; ಸಿದ್ಧಿಯಿದೆ... ಹೀಗೆ ಬದುಕಿನ ಎಲ್ಲವೂ ಇದ್ದರೂ ಇರುವ ಎಲ್ಲದಕ್ಕೂ ಸೂತ್ರಬದ್ಧತೆಯಿದೆ. ಆ ಸೂತ್ರದಲ್ಲಿ ಪೋಣಿಸಿದ ಸುಮಗಳಾಗಿ ಈ ಎಲ್ಲವೂ ವಿಶ್ವಚೇತನದ ಕಂಠವನ್ನು ಅಲಂಕರಿಸುವ ಮಹದುದ್ದೇಶ ನೃತ್ಯಕ್ಕೆ ದಿವ್ಯತೆಯನ್ನು ಮೇಳೈಸಿದೆ.

ಅಂತಹ ನೃತ್ಯಕ್ಕೂ, ನಮ್ಮ ಒಳಹೊರಗೆ ದಿವ್ಯನೃತ್ಯಗೈಯುವ ಶಿವ-ಶಿವೆಯರಿಗೂ, ಅದನ್ನು ನಮಗಿತ್ತ ಭರತಮುನಿಗೂ, ಉಳಿಸಿ-ಬೆಳಸಿದ ಇತಿಹಾಸ ಕಂಡ ಸಹಸ್ರ ಸಹಸ್ರ ನೃತ್ಯಸಾಧಕರಿಗೂ, ವೈಪರೀತ್ಯದ ಇಂದಿನ ಬದುಕಿನಲ್ಲೂ ನೃತ್ಯಕ್ಕೆ ಜೀವಂತಿಕೆಯನ್ನೀಯುತ್ತೀರುವ ಎಲ್ಲ ನೃತ್ಯಪಟುಗಳಿಗೂ ಲೋಕ ನಿರಂತರ ಕೃತಜ್ಞ.

'ಭರತಾಮೃತಮ್' ಸ್ಮರಣ ಸಂಚಿಕೆಯಲ್ಲಿ ಪ್ರಕಟಿತ ಬರಹ.

Tuesday 16 November, 2010

ಬಾಯಿಂದ ಹೊರಬಾರದಿರಲಿ; ಹೃದಯಕ್ಕೂ ಇಳಿಯದಿರಲಿ; ಜೀರ್ಣವಾಗಲದು ಕಂಠದಲಿ;

ಮನುಷ್ಯನಿಗೆ ಮಾತಿನ ತೆವಲು. ಮಾತನಾಡುತ್ತಲೇ ಇರಬೇಕು. ಮಾತಿಗೊಂದು ಉದಾತ್ತ ಉದ್ದೇಶವಿಲ್ಲದಿದ್ದಾಗ, ಅದಕ್ಕೊಂದು ಗಾಂಭೀರ್ಯವೂ ಇರುವುದಿಲ್ಲ. ಮಾತನಾಡಬೇಕು ಅಷ್ಟೆ. ಆದರೆ ಮಾತನಾಡಲು ವಿಷಯ ಬೇಕು. ವಿಷಯಾಧಾರಿತವಾಗಿ ಬಹಳ ಹೊತ್ತು ಮಾತನಾಡುವುದು ಕಷ್ಟವೇ. ಆಗ ಆರಂಭವಾಗುವುದೇ ಲಘುವಾದ ಮಾತುಕತೆಗಳು. ಅದಕ್ಕೆ ಸಿಗುವ ಆಶ್ರಯವೆಂದರೆ ವ್ಯಕ್ತಿವಿಮರ್ಶೆ. ಬಹಳ ಸುಲಭವಾದದ್ದಿದು. ಯಾರದೋ ನಡತೆ, ಮಾತು, ಕಾರ್ಯಗಳ ಕುರಿತು ಆಡಿಕೊಳ್ಳುವುದು. ಟೀಕೆಯೇ ಉದ್ದೇಶವಾಗಿಬಿಟ್ಟರೆ ಎಲ್ಲವನ್ನೂ ಟೀಕಿಸಬಹುದು. ನೋಡುವ ನೋಟವನ್ನು ಅವಲಂಬಿಸಿದೆ ಇದು. ನಕಾರಾತ್ಮಕವಾದ ನೋಟಕ್ಕೆ ಎಲ್ಲೆಲ್ಲೂ ತಪ್ಪೇ ಕಾಣುವುದು. ಹಗುರ ಮಾತುಗಾರಿಕೆಗೆ ನಕಾರನೊಟವೂ ಸೇರಿಬಿಟ್ಟರೆ ಮುಗಿಯಿತು. ಯಾರದೋ ಬದುಕು ಬಯಲಿಗೆ ಬಂದಿತೆಂದೇ ಅರ್ಥ. ಅಷ್ಟೇ ಅಲ್ಲದೇ ಪ್ರತಿ ವ್ಯಕ್ತಿಯಲ್ಲಿಯೂ ಒಂದಿಷ್ಟು ದೋಷಗಳಿರುವುದು ಸಹಜವೇ. ಹಾಗಿರಬಾರದೆನ್ನುವುದು ಆದರ್ಶವಾದರೂ ವಾಸ್ತವ ಹಾಗಿರುವುದಿಲ್ಲ. ವ್ಯಕ್ತಿಯ ಇಂತಹ ದೌರ್ಬಲ್ಯಗಳು ಮಾತನಾಡುವವರಿಗೆ ಸಿಕ್ಕಿಬಿಟ್ಟರಂತೂ ಮಾತು ಮಹಾನದಿಪ್ರವಾಹವಾಗಿ ಹರಿದು ಬಿಡುತ್ತದೆ; ಅಕ್ಕಪಕ್ಕದ್ದನ್ನೆಲ್ಲ ಕೊಚ್ಚಿಕೊಂಡು. ಇದರಿಂದ ಕಷ್ಟಕ್ಕೊಳಗಾಗುವುದು ವ್ಯಕ್ತಿಯ ಬದುಕು.
ಮಾತು ಹೀಗಿಲ್ಲದಿರುವುದು ಒಳಿತು. ಅಂತಹ ಮಾತು ಸೊಗಸು ಕೂಡ. ಯಾರದೋ ಕುರಿತು ಮಾತನಾಡುವುದು ಸರಿಯಲ್ಲ. ಅದರಲ್ಲೂ ನಕಾರಾತ್ಮಕ ಮಾತುಗಳಂತೂ ಎಷ್ಟಕ್ಕೂ ಸರಿಯಲ್ಲ. ನಮ್ಮ ಪ್ರತಿಚರ್ಯೆಯೂ ಉಳಿದವರಿಗೆ ಒಳಿತಾಗುವಂತಿರಬೇಕು. ಕೊನೆಯ ಪಕ್ಷ ಕೆಡುಕಂತೂ ಆಗಬಾರದಲ್ಲ. ಅಲ್ಲದೆ ನಮ್ಮ ಹೃದಯದಲ್ಲಿ ಇಂತಹ ಮಾತನಾಡುತ್ತಾ ಎಲ್ಲರ ಕುರಿತು ದುರ್ಭಾವನೆಗಳೇ ತುಂಬಿಹೋಗಿಬಿಡಬಹುದು. ಅದು ಅತ್ಯಂತ ಅಪಾಯಕಾರಿ. ಹೃದಯದ ಮೃದುತ್ವ ನಾಶವಾಗಿಬಿಡಬಹುದು. ಮಾನವಕುಲದ ಮೇಲಿನ ನಂಬಿಕೆ ಕುಸಿಯಬಹುದು. ಸುತ್ತಲಿನವರ ಕುರಿತಾದ ವಿಶ್ವಾಸವೇ ನಶಿಸಿದ ಮೇಲೆ ಬದುಕು ಮಾಡುವುದು ಕಷ್ಟವಾದೀತು. ಅಲ್ಲದೆ ಹಾಗೆ ಮಾತನಾಡುವವರ ಕುರಿತು ಜನರಿಗೂ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ. ಎದುರಿಗೆ ಸಹಜವಾಗಿಯೇ ಇದ್ದರೂ ಹಿಂದಿನಿಂದ ಅವರನ್ನೂ ಟೀಕಿಸುತ್ತಾರೆ. ಎಂಬಲ್ಲಿಗೆ ಅಂತಹ ಮಾತು ಮಾತನಾಡುವವರಿಗೂ ಒಳಿತಲ್ಲ.
ಶಿವನಂತಿರಬೇಕು ವಿಷಯದಲ್ಲಿ. ಅದು ಸಮುದ್ರಮಥನದ ಸಂದರ್ಭ. ಅಮೃತಕ್ಕಾಗಿ ದೇವಾಸುರರು ಪ್ರಯತ್ನಿಸುತ್ತಿದ್ದರು. ಕಡೆದು ಕಡೆದು ಇನ್ನೇನು ಅಮೃತ ಬಂದೀತೆಂದು ಕಾಯುತ್ತಿರುವಾಗ ಹೊರಬಂದಿದ್ದು ಹಾಲಾಹಲವಿಷ.
ಅದೆಷ್ಟು ಭಯಂಕರವೆಂದರೆ, ಕುಡಿದವರು ಮಾತ್ರ ಸಾಯುವುದಲ್ಲ; ಅದು ತಾನಾಗಿಯೇ ಜಗತ್ತನ್ನು ಸುಡತೊಡಗಿತು. ಆಗಲ್ಲಿಗೆ ಪರಶಿವನ ಆವಿರ್ಭಾವವಾಯಿತು. ವಿಷವನ್ನು ಶಿವ ಕುಡಿದ. ಒಳಗಿಳಿದರೆ ಶಿವನ ಹೃದಯದ ಅಮೃತಸಮುದ್ರ ಕಲಕೀತು. ಹೊರಹಾಕಿದರೆ ಸೃಷ್ಟಿ ಸುಟ್ಟೀತು. ಹಾಗಾಗಿ ತನ್ನ ಕಂಠದಲ್ಲೇ ಅದನ್ನವ ನಿಲ್ಲಿಸಿಕೊಂಡ. ಬೇರೆಯವರ ದೋಷವನ್ನು ಹೀಗೆ ಗ್ರಹಿಸಬೇಕು. ಹೃದಯಕ್ಕೆ ಅದನ್ನು ಇಳಿಸಿಕೊಳ್ಳಬಾರದು. ಹೊರಗೂ ಉಗುಳಬಾರದು. ಕಂಠದಲ್ಲಿಯೇ ಜೀರ್ಣಗೊಳಿಸಿಬಿಡಬೇಕು. ಅಂದರೆ ವ್ಯಕ್ತಿಯ ಕುರಿತಾಗಿ ದುರ್ಭಾವ ತಾಳಬಾರದು. ದೋಷ-ದೌರ್ಬಲ್ಯಗಳು ಅವನಿಗೆ ಸೇರಿದ್ದು. ಅದವನ ಪುರ್ವಾರ್ಜಿತ ಕರ್ಮ. ನಮಗೇಕೆ ಅದರ ಉಸಾಬರಿ. ಹಾಗೆಯೇ ಅದರ ಕುರಿತು ಆಡಲೂಬಾರದು. ಅದು ಆಡುವವರಿಗೂ, ಆಡಿಸಿಕೊಂಡವರಿಗೂ, ಸಮಾಜಕ್ಕೂ ಮಾರಕ.
ಮುಖೇನ ನೋದ್ಗಿರತ್ಯೂರ್ಧ್ವಂ ಹೃದಯೇನ ನಯತ್ಯಧಃ|
ಜರಯತ್ಯಂತರೇ ಸಾಧುರ್ದೋಷಂ ವಿಷಮಿವೇಶ್ವರಃ||
'ತ್ರಿವಿಕ್ರಮ' ಮಾಸಪತ್ರಿಕೆಯ ಸಂಪಾದಕ ಬರಹ.

Friday 5 November, 2010

ಟಿ.ವಿ. ಬೇಕೇ?

ಹೀಗೊಂದು ಪ್ರಶ್ನೆಗೆ ನಮಗೆಲ್ಲಿದೆ ಅವಕಾಶ ?
ಅನ್ನುವುದು ವಾಸ್ತವ ಪ್ರಶ್ನೆ. ಯಾಕೆಂದರೆ - ಬದುಕಿನ ಎಲ್ಲದರೊಂದಿಗೆ ಹೆಣೆದುಕೊಂಡಿರುವುದನ್ನು ಬೇಕು ಬೇಡದ ಜಿಜ್ಞಾಸೆಗೆ ಒಳಪಡಿಸುವುದು ಹೇಗೆ?
ಟಿ.ವಿ.ಯ ಆವಶ್ಯಕತೆಯನ್ನು ವಿಮರ್ಶೆಗೆ ಒಳಪಡಿಸುವ ಮೊದಲು ಮನೋರಂಜನೆಯ ಸ್ವರೂಪ ನಿಷ್ಕರ್ಷೆಯಾಗಬೇಕು.
ದಿನವಿಡಿಯ ಮನೋರಂಜನೆ ನಮ್ಮ ಸಂಸ್ಕೃತಿಗೆ ಪಥ್ಯವಾದದ್ದಂತೂ ಅಲ್ಲ. ಯಾವ ಜೀವನವಿಧಾನವೂ ಇದನ್ನು ಒಪ್ಪಿಕೊಳ್ಳಲಾರದು. ಹೇಗೆ ಒಪ್ಪಲು ಸಾಧ್ಯ ? ಅದು ಜೀವನದ ಒಂದು ಅಂಗ ಮಾತ್ರ ಆಗಿರಬೇಕಷ್ಟೇ.
ಮನೋರಂಜನೆಯನ್ನೇ ವೃತ್ತಿಯಾಗಿ ಸ್ವೀಕರಿಸುವವರ ವಿಷಯ ಬೇರೆ ; ಆದರೆ ಕೇಳುಗ ಅಥವಾ ನೋಡುಗ ಮನೋರಂಜನೆಯನ್ನೇ ನಿತ್ಯಕಾಯಕವಾಗಿಸಿಕೊಳ್ಳುವುದು ಸರಿಯಲ್ಲ. ಬದಲಾದ ಜೀವನಶೈಲಿ ಮನೋರಂಜನೆಯನ್ನೇ ಬದುಕಿನಲ್ಲಿ ಪ್ರಧಾನವಾಗಿಸಿಕೊಂಡಿದೆ. ಇದರಿಂದಾಗಿ ಊಟಕ್ಕೆ ಉಪ್ಪಿನಕಾಯಿಯ ಬದಲು ಉಪ್ಪಿನಕಾಯಿಯೇ ಊಟವಾಗಿದೆ.
ಮನಸ್ಸಿಗೆ ವೃತ್ತಿ ಅಥವಾ ಪ್ರವೃತ್ತಿಯ ಕಾರ್ಯಗಳಿಂದ ಏಕತಾನತೆ ಒದಗಿದಾಗ, ಅನ್ಯಾನ್ಯ ಕಾರಣಗಳಿಂದಾಗಿ ಬೇಸರ-ನೋವು-ನಿರಾಸೆಗಳು ಮನಸ್ಸನ್ನು ಆಕ್ರಮಿಸಿದಾಗ, ಮತ್ತೊಮ್ಮೆ ಹೊಸತನ ತುಂಬಿಕೊಳ್ಳಲು ಮನೋರಂಜನೆ ಅತ್ಯವಶ್ಯ. ಹಾಗಾಗದೆ ವೃತ್ತಿಯಷ್ಟೇ ಟಿ.ವಿ. ವೀಕ್ಷಣೆಯು ಪ್ರಮುಖವಾದರೆ ?

ಹಾಗಾಗಿ ಮನೋರಂಜನೆಯ ಈ ಸಿದ್ಧಾಂತ ಬದಲಾಗದೆ ಟಿ.ವಿ. ಉತ್ತಮಗೊಳ್ಳುವುದು ಅಸಾಧ್ಯ. ಟಿ.ವಿ.ಯ ಪ್ರಯೋಜನ ಖಂಡಿತವಾಗಿ ಮನೋರಂಜನೆ ಮಾತ್ರವಲ್ಲ, ಶಿಕ್ಷಣ-ಮಾಹಿತಿ ಸಂವಹನ-ಕಲಾಪ್ರದರ್ಶನ-ಸುದ್ದಿಪ್ರಸಾರ-ಸಾರ್ವಜನಿಕರ ಅಭಿಪ್ರಾಯ ಪ್ರಕಟಣೆಯ ಸಾಧ್ಯತೆ.... ಹೀಗೆ ಅದು ಬಹುವಿಧ ಪ್ರಯೋಜನಕಾರಿ.
ಆದರೆ ಇದೆಲ್ಲದರ ಉಪಯೋಗವನ್ನು ಬಹುಜನತೆ ಹೇಗೆ ಪಡೆದುಕೊಳ್ಳುತ್ತಿದೆ ? ಮನೆ-ಮನೆಗಳ ಟಿ.ವಿ. ಇವೆಲ್ಲದಕ್ಕಿಂತ ಧಾರಾವಾಹಿ-ಸಿನಿಮಾ-ಸಿನಿಮಾಧಾರಿತ ಕಾರ್ಯಕ್ರಮಗಳಿಗೆ ತನ್ನನ್ನು ತೆರೆದುಕೊಂಡಿರುತ್ತದೆ.
ಜೀವನಕ್ಕೊಂದು ಆದರ್ಶದ ಚೌಕಟ್ಟು ನಿರ್ಮಿಸುವ ಇರಾದೆಯೇ ಇಲ್ಲದ ಈ ಕಾರ್ಯಕ್ರಮಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿವೆ. ಕೌಟುಂಬಿಕಪರಿಸರ ಪ್ರಧಾನವಾಗಿ ಟಿ.ವಿ.ಯಿಂದಾಗಿ ಛಿದ್ರಗೊಳ್ಳುತ್ತಿದೆ. ಕುಟುಂಬ ಸದಸ್ಯರ ಪರಸ್ಪರ ಮಾತುಕತೆಗಾಗಲೀ, ಮನೆಗೆ ಬಂದವರೊಂದಿಗೆ ಮಾತನಾಡುವುದಕ್ಕಾಗಲೀ ಅವಕಾಶವಿಲ್ಲದಂತೆ ಟಿ.ವಿ.ಯ ದೃಶ್ಯ ಮತ್ತು ಶಬ್ದಗಳು ಮನೆಯನ್ನು ತುಂಬಿಕೊಳ್ಳುತ್ತಿವೆ.
ಹಾಗಾಗಿ ಮರುಚಿಂತನೆ ಇಂದಿನ ತುರ್ತು ಆವಶ್ಯಕತೆ-
“ಇಂದು ಇರುವ ವಿಧಾನದಲ್ಲಿ ನಮಗೆ ಟಿ.ವಿ. ಬೇಕೇ ?”

Monday 1 November, 2010

ತಮವ ಕಳೆಯಲಿ ದೀಪಾವಳೀ

ದೀಪಾವಳಿ ಮತ್ತೆ ಬಂದಿದೆ. ಅದು ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ನಾವು ಹುಟ್ಟುವ ಮೊದಲೂ ಬರುತ್ತಿತ್ತು; ನಾವು ಇಲ್ಲವಾದರೂ ಬರುತ್ತದೆ. ನಾವಿರುವಾಗಲೂ ಬರುತ್ತಲೇ ಇದೆ. ಕಾಲಾತೀತಪುರುಷನ ಪ್ರೀತಿಯ ಹರಿವು ಅದು. ಅವನ ಪ್ರೀತಿ ಅದಮ್ಯ. ಅಂದರೆ ಅದನ್ನು ದಮನ ಮಾಡಲು ಸಾಧ್ಯವೇ ಇಲ್ಲ. ಪ್ರೀತಿಯನ್ನು ದಮನ ಮಾಡಲು ಇರುವ ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ನಿರ್ಲಕ್ಷ್ಯ. ಪ್ರೀತಿ ಎಲ್ಲವನ್ನೂ ಸಹಿಸುತ್ತದೆ, ನಿರ್ಲಕ್ಷ್ಯ್ವನ್ನು ಮಾತ್ರ ಸಹಿಸಲಾರದು. ನಿರ್ಲಕ್ಷ್ಯ ಇರುವಲ್ಲಿ ಪ್ರೀತಿ ಇರದು. ಆದರೆ ಅವನ ಪ್ರೀತಿ ಇದನ್ನು ಮೀರಿದ್ದು. ನಮ್ಮೆಲ್ಲ ನಿರ್ಲಕ್ಷ್ಯವನ್ನೂ ನಿರ್ಲಕ್ಷ್ಯೈಸಿ ಅವನ ಪ್ರೀತಿ ಹರಿಯುತ್ತಲೇ ಇರುತ್ತದೆ.

ಪ್ರತಿದಿನದ ಸಂಧ್ಯಾಕಾಲಗಳು, ವರ್ಷವಿಡೀ ನಿಯತವಾಗಿ ಬರುವ ಹಬ್ಬಗಳು-ಹರಿದಿನಗಳು ಇವೆಲ್ಲ ಪ್ರೀತಿಯ ಅಭಿಜ್ಞಾನಗಳು. ಅಷ್ಟೇ ಅಲ್ಲ ಅವು ನಮ್ಮ ಏಳ್ಗೆಯ ಸಾಧನಗಳು ಕೂಡ. ಕೊಡುವವ ಇದನ್ನು ಕೊಡುತ್ತಲೇ ಇದ್ದಾನೆ. ನಾವು ಬಳಸಿಕೊಳ್ಳುತ್ತಿಲ್ಲವೆನ್ನುವುದು ದೌರ್ಭಾಗ್ಯ.

ಮತ್ತೆ ದೀಪಾವಳಿಗೆ ಬರೋಣ. ಅದಂತೂ ಮತ್ತೆ ಬಂದಿದೆ. ನಾವು ನೋಡದಿದ್ದರೂ ಅದು ಬೆಳಗೇ ಬೆಳಗುತ್ತದೆ. ನಾವು ಕಣ್ದೆರೆದರೆ ಬೆಳಕು ಕಾಣಿಸೀತು, ಬೆಳಕಿನಲ್ಲಿ ಕಾಣಬೇಕಾದ್ದೂ ಕಾಣಿಸೀತು.

ನಾಲ್ಕು ಸಾಮಯಿಕ ಸಮಸ್ಯೆಗಳ ಕತ್ತಲೆಯನ್ನು ಈ ದೀಪಾವಳಿ ಬೆಳಗಬೇಕಿದೆ:

ಮೊದಲನೆಯದು...
ನಮ್ಮ ರಾಜ್ಯರಾಜಕೀಯ ಜಂಜಡ. ದಿನದಿಂದ ದಿನಕ್ಕೆ ಅದು ವಿಷಮಿಸುತ್ತಿದೆ. ಆರೋಪ-ಪ್ರತ್ಯಾರೋಪಗಳು, ತಂತ್ರ-ಪ್ರತಿತಂತ್ರಗಳು ಕ್ಷಣಕ್ಷಣದ ಬೆಳವಣಿಗೆಗಳಾಗಿವೆ. ಮುಂದೆ ಏನಾದೀತೆನ್ನುವ ಕಲ್ಪನೆ ಪ್ರಜೆಗಳಿಗಿರಲಿ ನಾಯಕರಿಗೇ ತಿಳಿಯದಾಗಿದೆ. ಎಲ್ಲರ ಹೃದಯದಲ್ಲಿಯೂ ಕತ್ತಲೆ ಮುಸುಕಿದೆ. ದೀಪಾವಳಿಯ ದೀಪಮಾಲೆ ನಮ್ಮ ನಾಯಕರ ಹೃದಯವನ್ನು ಬೆಳಗಲಿ; ದ್ವೇಷಾಸೂಯೆಗಳು ಅಳಿದು ಉತ್ತಮ ನಾಯಕತ್ವ ನಮಗೆ ಸಿಗಲಿ.

ಎರಡನೆಯದು...
ಕಾಮನ್ವೆಲ್ತ್ ಕ್ರೀಡಾಕೂಟ ಭಾರತಕ್ಕೆ ಸಿಕ್ಕ ಅಪೂರ್ವ ಅವಕಾಶವದು. ಜಾಗತಿಕ ಸ್ತರದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾದದ್ದು. ಕ್ರೀಡಾಕೂಟ ಆಯೋಜನೆಯ ಯಶಸ್ಸಿನಿಂದ ಚೀನಾದ ಕುರಿತಾಗಿ ವಿದೇಶಗಳಲ್ಲಿ ಮೂಡಿದ್ದಂತ ಭಾವನೆ ಭಾರತದ ಕುರಿತೂ ಮೂಡುವಂತಾಗಬೇಕಿತ್ತು. ಆದರೆ ಪೂರ್ವಸಿದ್ಧತೆಯ ಹಂತದ ದೊಂಬರಾಟ ದಿಗ್ಭ್ರಮೆ ಮೂಡಿಸಿತ್ತು. ಕ್ರೀಡಾಕೂಟ ಅಪಯಶಸ್ಸನ್ನು ಕಟ್ಟಿಕೊಳ್ಳುತದೆಯೇನೋ ಎಂದು ಅನ್ನಿಸಿಬಿಟ್ಟಿತು. ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗಳ ಆರೋಪ ವಿಜೃಂಭಿಸಿತು. ಏನೇ ಇರಲಿ ಕ್ರೀಡಾಕೂಟ ಯಶಸ್ವಿಯಾಯಿತು. ಭಾರತದ ಕ್ರೀಡಾಪಟುಗಳು ದೇಶದ ಕೀರ್ತಿಯನ್ನು ಹೆಚ್ಚಿಸಿದರು. ಈಗ ಭ್ರಷ್ಟಾಚಾರದ ತನಿಖೆಯ ಮಾತುಗಳು ಕೇಳಿಬರುತ್ತಿದೆ. ದೇಶದ ಮರ್ಯಾದೆ ಕಾಯುವವರ ಬುದ್ಧಿಯ ಕತ್ತಲೆಯಂತೂ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ದೀಪಾವಳಿ ಅದನ್ನು ಕಳೆಯಲಿ; ಬದ್ಧತೆಯ ಬೆಳಕು ಬೆಳಗಲಿ.

ಮೂರನೆಯದು...
ಅಯೋಧ್ಯಾ ವಿವಾದದ ನಿಟ್ಟುಸಿರು. ಏನೋ ಆದೀತೆಂದು ಬಗೆದಿದ್ದ ನ್ಯಾಯಾಲಯದ ತೀರ್ಪು ಏನೂ ಆಗದಂತೆ ಮಾಡಿತು. ನಾಯಕರಿಂದ ಸಾಮಾನ್ಯರವರೆಗೆ ಎಲ್ಲರೂ ಕ್ಷಣಕಾಲ ನೆಮ್ಮದಿ ಕಂಡರು. ಹಾಗೆಂದು ಉಭಯ ಪಕ್ಷದ ಎಲ್ಲರಿಗೂ ತೀರ್ಪು ಸಮಾಧಾನ ತಂದಿಲ್ಲ. ಅಸಮಾಧಾನಗೊಂಡವರು ನ್ಯಾಯಾಂಗ ಹೋರಾಟವನ್ನು ಮುಂದುವರಿಸುವ ಮಾತನಾಡುತ್ತಿದ್ದಾರೆ. ಇನ್ನು ಕೆಲವರು ಇದೇ ಅಂತಿಮ ತೀರ್ಪಾಗಲಿ ಎನ್ನುತ್ತಿದ್ದಾರೆ. ಮಾತುಕತೆಯಲ್ಲಿ ಪರಿಹಾರ ಕಂಡುಕೊಳ್ಳುವ ಮಾತೂ ಕೇಳಿಬರುತ್ತಿದೆ. ಎಲ್ಲಕ್ಕಿಂತ ಮುಖ್ಯವಾದುದು ನ್ಯಾಯ. ಜನ್ಮಭೂಮಿ ವಿಚಾರದಲ್ಲಿ ನ್ಯಾಯ ಗೆಲ್ಲಬೇಕಷ್ಟೆ. ಎಲ್ಲರ ವಿವೇಕವನ್ನು ದೀಪಾವಳಿ ಬೆಳಗಲಿ; ನ್ಯಾಯಕ್ಕೆ ಸ್ವಯಂಪ್ರೇರಿತವಾಗಿ ತಲೆಬಾಗುವಂತಾಗಲಿ.

ನಾಲ್ಕನೆಯದು...
ಗೋಹತ್ಯಾ ನಿಷೇಧ ವಿಚಾರ. ಕರ್ನಾಟಕ ರಾಜ್ಯ ಸರ್ಕಾರ ಅಂತದ್ದೊಂದು ಐತಿಹಾಸಿಕ ನಿರ್ಣಯ ಕೈಗೊಂಡಿದೆ. ನೀರೀಕ್ಷೆಯಂತೆ ಪರ-ವಿರೋಧದ ಚಟುವಟಿಕೆಗಳು ನಡೆದಿದೆ. ಹೇಳಿಕೆ-ಪ್ರತಿಹೇಳಿಕೆ, ಪ್ರತಿಭಟನೆ ಎನೆಲ್ಲ ನಡೆದಿದೆ. ಆದರೆ ಸೈದ್ಧಾಂತಿಕ ಚರ್ಚೆ-ಚರ್ಯೆಗಳಿಗಿಂತ ರಾಜಕಿಯ ಹಿತಾಸಕ್ತಿಯೇ ಪ್ರಕರಣವನ್ನು ವ್ಯಾಪಿಸಿದೆ. ಗೋಮಾತೆಯ ಜೀವ ಉಳಿಸುವಲ್ಲಿ ಸ್ವಾರ್ಥ ಮರೆಯಾಗಬೇಕಿದೆ. ತಿನ್ನುವುದೇ ಬದುಕೆನ್ನುವ ಜೀವನಸಿದ್ಧಾಂತವಂತೂ ಅಚ್ಚರಿ ಮೂಡಿಸುತ್ತಿದೆ. ಇಂತಹ ಅರೆಬೆಂದ ವಿಚಾರಗಳಿಂದ ಗೋವನ್ನು ಕೊಲ್ಲುವ ಹಕ್ಕಿನ ಪ್ರತಿಪಾದನೆ ವಿಚಿತ್ರವೇ ಸರಿ. ದೀಪಾವಳಿ ಅವರೆಲ್ಲರ ಬದುಕಿನ ಕತ್ತಲೆಯನ್ನು ಕಳೆಯಲಿ; ಗೋವಿನ ಬೆಳಕು ಅವರೆಲ್ಲರನ್ನೂ ವ್ಯಾಪಿಸಲಿ.

Friday 1 October, 2010

ಕೆರೆ ಕಟ್ಟುವ ಕರುಣೆಯ ಕಾಯಕ

ಧರ್ಮವೇ ಹಾಗೆ. ಅದು ಬದುಕಿಗೆ ತಂಪೆರೆಯುವ ಎಲ್ಲವನ್ನೂ ತನ್ನ ತೆಕ್ಕೆಯೊಳಗೆ ಒಳಗೊಳ್ಳುತ್ತದೆ. ಹಾಗೆನ್ನುವುದಕ್ಕಿಂತ ತಂಪೆಲ್ಲ ಅದರದ್ದೇ ಎನ್ನುವುದೇ ಸರಿ. ಅದರ ಈ ಸ್ವಭಾವವನ್ನು ಕಂಡಾಗ ಧರ್ಮವೇ ತಂಪೆನ್ನಬೇಕಾಗುತ್ತದೆ.

ತನ್ನ ಬದುಕು ಸುಖಮಯವಾಗಬೇಕೆಂದು ಬಯಸುವ ಪ್ರತಿಯೊಬ್ಬನೂ ಜೀವಲೋಕಕ್ಕೆ ಸುಖ ನೀಡಬೇಕೆಂಬುದು ಅದರ ಪ್ರತಿಪಾದನೆ. ಇನ್ನೊಬ್ಬರದನ್ನು ಕಿತ್ತುಕೊಂಡಾಗಲಷ್ಟೆ ತಾನು ಸುಖಿಯಾಗಬಹುದೆನ್ನುವ ವಿಚಾರಧಾರೆಯಿಂದ ಅದು ವಿಭಿನ್ನ. ಎಷ್ಟೆಷ್ಟು ಸಂತೋಷ-ನೆಮ್ಮದಿಗಳನ್ನು ಸೃಷ್ಟಿಗೆ ಹಂಚುತ್ತೇವೆಯೋ ಅಷ್ಟಷ್ಟು ನಮ್ಮದಾಗುತ್ತದೆ.

ಇಂತಹ ಉದಾತ್ತ ಸಿದ್ಧಾಂತದ ಹಿನ್ನೆಲೆಯಲ್ಲಿ ಸೃಷ್ಟಿಸೇವೆಯನ್ನು ಧರ್ಮಾಚರಣೆಯ ಅಂಗವಾಗಿಸಿದೆ ನಮ್ಮ ಪರಂಪರೆ. ಭೀಷ್ಮ ಯುಧಿಷ್ಠಿರನಿಗೆ ಕೆರೆಗಳ ನಿರ್ಮಾಣದ ಕುರಿತು ಹೇಳುವ ಮಾತುಗಳು ಧರ್ಮದ ಈ ವೈಶಿಷ್ಟ್ಯವನ್ನು ಸ್ಪಷ್ಟಪಡಿಸುತ್ತವೆ.

ಭೀಷ್ಮ ನುಡಿಯುತ್ತಾನೆ:
"ಕೆರೆಗಳನ್ನು ಕಟ್ಟಿಸುವವನು ಮೂರುಲೋಕಗಳ ಗೌರವಕ್ಕೆ ಪಾತ್ರನಾಗುತ್ತಾನೆ. ಕೆರೆಗಳನ್ನು ನಿರ್ಮಿಸುವುದು ವಿಶ್ವಮೈತ್ರಿಯಂತೆ. ಏಕೆಂದರೆ ಅದು ಎಲ್ಲ ಪ್ರಾಣಿಗಳಿಗೂ ಬದುಕು ನೀಡುತ್ತವೆ. ಕಟ್ಟಿಸಿದ ಕೆರೆಯಲ್ಲಿ ವರ್ಷಕಾಲದಲ್ಲಿ ನೀರು ತುಂಬಿದ್ದರೆ ಸಾವಿರ ಗೋದಾನ ಮಾಡಿದ ಪುಣ್ಯ; ಹೇಮಂತ ಋತುವಿನಲ್ಲಿ ಜಲಸಮೃದ್ಧಿಯಿದ್ದರೆ ಬಂಗಾರವನ್ನೇ ದಕ್ಷಿಣೆಯಾಗಿ ನೀಡುವ ಯಜ್ಞವನ್ನು ಮಾಡಿದ ಪ್ರಯೋಜನ; ಶಿಶಿರ ಋತುವಿನಲ್ಲಿ ಕೆರೆ ತುಂಬಿದ್ದರೆ ಅಗ್ನಿಷ್ಟೋಮ ಯಜ್ಞ ಮಾಡಿದ ಲಾಭ; ವಸಂತ ಋತುವಿನಲ್ಲಿ ಜಲಭರಿತವಾಗಿದ್ದರೆ ಅತಿರಾತ್ರ ಯಾಗ ಮಾಡಿದ ಪುಣ್ಯ; ಬಿರು ಬೇಸಿಗೆಯಲ್ಲಿ ಕೆರೆ ದಾಹವನ್ನು ತಣಿಸಿದರೆ ಅಶ್ವಮೇಧ ಯಾಗ ಮಾಡಿದ ಮಹಾಫಲ. ಕೆರೆಯ ನೀರನ್ನು ಗೋವುಗಳು, ಮೃಗಗಳು, ಪಕ್ಷಿಗಳು ಮತ್ತು ಸಜ್ಜನರು ಕುಡಿದರೆ ಕಟ್ಟಿಸಿದವನ ಸಮಗ್ರ ವಂಶವೇ ಉದ್ಧಾರವಾಗುತ್ತದೆ."

ಇವು ಭೀಷ್ಮನ ಮಾತುಗಳು. ಸಾಮಾನ್ಯರ ಸಾಮರ್ಥ್ಯವನ್ನು ಮೀರಿದ ಮಹಾಯಾಗಗಳ ಪ್ರಯೋಜನ ಕೆರೆ ಕಟ್ಟಿಸುವುದರಿಲ್ಲಿದೆ ಎನ್ನುತ್ತಾ ಭೀಷ್ಮ ಅದರ ಹಿರಿತನವನ್ನು ಆಗಸದೆತ್ತರಕ್ಕೆ ಎರಿಸುತ್ತಾನೆ. ಎಂತಹ ಅದ್ಭುತವಲ್ಲವೇ?

ನಾವು ಕಟ್ಟಿಸಿದ ಕೆರೆಯಲ್ಲಿ, ಹಾರಿಹಾರಿ ಬಾಯಾರಿದ ಪುಟ್ಟಹಕ್ಕಿ ನೀರು ಕುಡಿದು ತಂಪಾದರೆ; ತಿರುತಿರುಗಿ ಬೆಂಡಾದ ಗೋವಿನ ಕರುವೊಂದು ನೀರು ಕುಡಿದು ದಣಿವಾರಿಸಿಕೊಂಡರೆ;
ನಡೆನಡೆದು ದಣಿದ ದಾರಿಹೋಕನೊಬ್ಬನ ಬಾಯಾರಿಕೆ ಇಂಗಿದರೆ; ಬಡರೈತನೊಬ್ಬ ತನ್ನ ಗದ್ದೆಗೆ ನೀರುಣಿಸಿ ಸಮೃದ್ಧ ಬೆಳೆಬೆಳೆದು ಕಣ್ಣಲ್ಲಿ ಜಿನುಗಿದ ನೆಮ್ಮದಿಯ ನೀರನ್ನು ಒರೆಸಿಕೊಂಡರೆ;........
ಅಹಾ, ಎಂಥ ಮಧುರ ಭಾವಗಳು!

Tuesday 21 September, 2010

ಬುದ್ಧಿ-ಮನಸ್ಸುಗಳ ನಿಲುಗಡೆ

ಅದು ದ್ವಾಪರಯುಗ. ಕುರುಕ್ಷೇತ್ರ ಮಹಾಸಂಗ್ರಾಮ ಮುಗಿದಿದೆ. ದುರ್ಯೋಧನ, ಅವನ ಅನುಜರು, ಮತ್ತವನ ದುರುಳ ಪರಿವಾರ ಸಂಪೂರ್ಣವಾಗಿ ನಾಶವಾಗಿದೆ. ಈಗ ಧರ್ಮದ ರಾಜ್ಯಭಾರ. ಯಾಕೆಂದರೆ ಆಳ್ವಿಕೆ ಯುಧಿಷ್ಠಿರನದು.

ಕೆಲಕಾಲ ಕಳೆದಿದೆ. ಧೃತರಾಷ್ಟ್ರ ವಾನಪ್ರಸ್ಥಕ್ಕೆ ತೆರಳುವ ಮನಸ್ಸು ಮಾಡಿದ್ದಾನೆ. ಅವನೊಂದಿಗೆ ಗಾಂಧಾರಿ, ವಿದುರರೂ ಹೊರಟು ನಿಂತಿದ್ದಾರೆ. ಅಚ್ಚರಿಯೆಂದರೆ ರಾಜಮಾತೆ ಕುಂತಿ ಕೂಡ ವಾನಪ್ರಸ್ಥದ ನಿರ್ಣಯ ಮಾಡಿದ್ದಾಳೆ. ಕುಂತಿಗೆ ಮಾತ್ರ ಸಾಧ್ಯವಾಗುವ ಕಾರ್ಯವಿದು.

ವಾಸ್ತವವಾಗಿ ಕುಂತಿಗಿದು ನೆಮ್ಮದಿಯ ಕಾಲ. ಅಸಂಖ್ಯ ವರ್ಷಗಳ ಕಷ್ಟವಳಿದು ಸೌಖ್ಯ ಬದುಕನ್ನಾವರಿಸಿದೆ. ಅಕಾಲದಲ್ಲಿ ಪತಿಯ ಮರಣ. ಅದಿನ್ನೂ ಕುಂತಿಯ ಯೌವನದ ಕಾಲ. ಮಕ್ಕಳನ್ನು ಬೆಳೆಸುವುದಷ್ಟೇ ಅಲ್ಲ, ಅವರನ್ನು ಉಳಿಸಿಕೊಳ್ಳುವ ಸಂಕಷ್ಟ ಬೇರೆ. ಅರಗಿನ ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕುವಷ್ಟು ಭೀಭತ್ಸಕರ ಕ್ರೌರ್ಯ, ಅದೂ ಸ್ವಕೀಯರಿಂದಲೇ. ಕಾಡುಮೇಡಿನಲ್ಲಿ ಅಲೆದಾಟ. ಕೊನೆಗೊಮ್ಮೆ ಇಂದ್ರಪ್ರಸ್ಥ ಪಾಂಡವರದ್ದಾಯಿತು ಎಂದುಕೊಳ್ಳುತ್ತಿರುವಾಗಲೇ ಜೂಜಿನ ದೌರ್ಭಾಗ್ಯ. 'ಅಂತೂ ಇಂತೂ ಕುಂತಿಮಕ್ಕಳಿಗೆ ವನವಾಸ' ಎನ್ನುವ ಗಾದೆಮಾತಿಗೆ ಎಣೆಯಾಗುವಂತಹ ಬದುಕು ಮಕ್ಕಳದ್ದು. ಮತ್ತೊಂದು ಯುದ್ಧ.

ಈಗಿನದ್ದು ಸಮೃದ್ಧ ತಂಪಿನ ಕಾಲ. ಶೇಷವೂ ಇಲ್ಲದಂತೆ ಶತ್ರುನಾಶವಾಗಿದೆ. ಮಗ ಯುಧಿಷ್ಠಿರ ರಾಜನಾಗಿದ್ದಾನೆ. ಕುಂತಿ ಈಗ ರಾಜಮಾತೆ. ಬೇರೆ ಯಾರೇ ಆಗಿದ್ದರೂ ಅರಮನೆಯಲ್ಲಿ ಉಂಡುಟ್ಟು ಸುಖವಾಗಿರುತ್ತಿದ್ದರು. ಕುಂತಿ ಮತ್ತೆ ಕಾಡಿನ ದಾರಿ ಹಿಡಿದಿದ್ದಾಳೆ. ಅದೂ ವಾನಪ್ರಸ್ಥಕ್ಕೆ. ವಾನಪ್ರಸ್ಥವೆಂದರೆ ಬಹು ಕಷ್ಟದ ಬದುಕು. ಅದು ವನವಿಹಾರವಲ್ಲ. ಕಾಡಿನ ನಡುವೆ ಪುಟ್ಟದೊಂದು ಅರಮನೆ ಕಟ್ಟಿಕೊಂಡು ಆಳುಕಾಳುಗಳನ್ನು ಇಟ್ಟುಕೊಂಡು ಬದುಕುವುದೂ ಅಲ್ಲ. ಕುಟೀರದಲ್ಲಿ ವಾಸ. ನೆಲದ ಮೇಲೆ ಮಲಗುವುದು. ಊಟಕ್ಕೆ ಪಂಚಭಕ್ಷ್ಯ ಪರಮಾನ್ನಗಳಿಲ್ಲ. ಗೆಡ್ಡೆಗೆಣಸುಗಳನ್ನು ಆಯ್ದುಕೊಂಡು ತಿನ್ನಬೇಕು. ನದಿಯ ತಣ್ಣೀರೇ ಸ್ನಾನಕ್ಕೆ. ಹೇಳಿಕೇಳಿ ವೃದ್ಧಾಪ್ಯದ ಅವಸ್ಥೆ. ಹೀಗೆ ಸಾಯುವ ತನಕ ದೇಹವನ್ನು ಸವೆಸಿ, ಒಂದುದಿನ ದೇಹತ್ಯಾಗ ಮಾಡಬೇಕು. ರಾಜಮಾತೆ ಶೇಷಾಯುಷ್ಯಕ್ಕೆ ಆರಿಸಿಕೊಂಡಿದ್ದು ಇಂತಹ ಬದುಕನ್ನು.

ಇದು ಭಾರತೀಯ ಆದರ್ಶ ವ್ಯಕ್ತಿಗಳು ಬದುಕುವ ರೀತಿ; ಇದೇ ಭಾರತೀಯ ಆದರ್ಶ ಬದುಕಿನ ನೀತಿ.
ದುಃಖಿತರಾದ ಪಾಂಡವರನ್ನು ಸಾಂತ್ವನಪಡಿಸಿ ಹೊರಡುವಾಗ ಕುಂತಿ, ಯುಧಿಷ್ಠಿರನಿಗೆ ಜೀವನ ಸಂದೇಶವೊಂದನ್ನು ನೀಡುತ್ತಾಳೆ:

ಧರ್ಮ ತೇ ಧೀಯತಾಂ ಬುದ್ಧಿಃ ಮನಸ್ತು ಮಹದಸ್ತು ಚ
ಇದು ಕುಂತಿಯ ಜೀವನದರ್ಶನ. ಕುಂತಿ, ಒಬ್ಬ ಹೆಣ್ಣಿಗೆ ಬರಬಹುದಾದ ಎಲ್ಲ ತಲ್ಲಣಗಳನ್ನು ಅನುಭವಿಸಿಯೂ ಬದುಕಿದ್ದರೆ, ಬದುಕಿ-ಬದುಕಿನ ಕೊನೆಯಲ್ಲಿ ವಾನಪ್ರಸ್ಥದ ನಿರ್ಣಯಕ್ಕೆ ಬಂದಿದಿದ್ದರೆ ಅದು ಜೀವನಾನುಭವದ ಪರಿಪಾಕವೇ ಸರಿ.
ಬುದ್ಧಿಯು ಧರ್ಮದಲ್ಲಿ ನೆಲೆ ನಿಲ್ಲಲಿ; ಮನಸ್ಸು ದೊಡ್ಡದಾಗಲಿ"
ಇದು ಕುಂತಿ ತನ್ನ ಮಗನಿಗೆ ನೀಡಿದ ಒಂದೇ ಒಂದು ಸಂದೇಶ. ಕುಂತಿಯಲ್ಲದೆ ಯಾವ ವೀರಮಾತೆ ಹೀಗೆ ಮಾತನಾಡಬಲ್ಲಳು! ಇಂದು ಕುಂತಿ ಯುಧಿಷ್ಠಿರನಿಗೆ ನೀಡುವ ಸಂದೇಶವಷ್ಟೇ ಅಲ್ಲ. ಸಾರ್ವಕಾಲಿಕವಾಗಿ ಸಾರ್ವದೇಶಿಕವಾಗಿ ತಾಯಿ ಮಗುವಿಗೆ ನೀಡುವ ಬಾಳಬುತ್ತಿ.

ಹೌದು. ಬದುಕಿನ ಸೌಖ್ಯಕ್ಕೆ, ಸೌಂದರ್ಯಕ್ಕೆ, ಸಮೃದ್ಧಿಗೆ ಈ ಎರಡೇ ಸಾಕು. ಯಾಕೆಂದರೆ ಬದುಕಿನ ಒಳಿತು-ಕೆಡುಕುಗಳಿಗೆ ನಮ್ಮ ಬುದ್ಧಿ ಕಾರಣ. ಅದು ಸರಿ-ತಪ್ಪುಗಳನ್ನು ಯೋಗ್ಯವಾಗಿ ಗ್ರಹಿಸಿದರೆ ಬದುಕು ಗೆದ್ದಿತೆಂದೇ ಅರ್ಥ. ಹಾಗೆಯೇ ಮನಸ್ಸು. ಅದು ಸಂಕುಚಿತಗೊಂಡಷ್ಟೂ ಬದುಕು ಸಣ್ಣದಾಗುತ್ತದೆ; ಅದು ವಿಶಾಲವಾದಷ್ಟೂ ಜೀವನ ವಿಶಾಲವಾಗುತ್ತದೆ.

Wednesday 15 September, 2010

ಸುಖವೇತಕೆ? ದುಃಖವದೇತಕೆ?

ಬದುಕೆಂದರೆ ಹಾಗೆ. ಒಮ್ಮೆ ಸುಖ; ಒಮ್ಮೆ ದುಃಖ. ಗೆಲುವೊಮ್ಮೆ; ಸೋಲು ಇನ್ನೊಮ್ಮೆ. ಆಶಾವಾದವೊಂದು ಬಾರಿ; ಏನೂ ಬೇಡವೆನ್ನುವ ನಿರಾಶೆ ಮತ್ತೊಂದು ಬಾರಿ. ಹೀಗೆ ಒಂದಾದ ಮೇಲೊಂದು ಸುತ್ತುತ್ತಲೇ ಇರುತ್ತದೆ.

ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |
ಚಕ್ರವತ್ಪರಿವರ್ತಂತೇ ದುಃಖಾನಿ ಚ ಸುಖಾನಿ ಚ ||

ಸುಖ-ದುಃಖಗಳು ಚಕ್ರದಂತೆ ಸುತ್ತುತ್ತಲೇ ಇರುತ್ತವೆ ಎನ್ನುತ್ತದೆ ಈ ಅನುಭವಿಯ ಮಾತು.

ಸುಖ, ಗೆಲುವುಗಳು ನಮ್ಮನ್ನು ಬೀಗಿವಂತೆ ಮಾಡಿದರೆ ದುಃಖ, ಸೋಲುಗಳು ಕಂಗೆಡುವಂತೆ ಮಾಡುತ್ತವೆ. ಸಂತೋಷವಿದ್ದಾಗ ಎಲ್ಲವೂ ಸುಂದರವೆನಿಸಿದರೆ ದುಃಖ ಅದೆಲ್ಲವನ್ನೂ ಭೀಕರಗೊಳಿಸುತ್ತದೆ. ಸುಖದಲ್ಲಿದ್ದಾಗ ರುಚಿಯೆನಿಸಿದ ಊಟ ದುಃಖದಲ್ಲಿ ಬೇಡವೇ ಬೇಡವೆನಿಸುತ್ತದೆ. ಸುಖದಲ್ಲಿದ್ದಾಗ ಸಂಗಾತಿಯ ಮಾತು ಮಧುರ ಸಂಗೀತವೆನಿಸಿದರೆ ದುಃಖದಲ್ಲಿದ್ದಾಗ ಅದು ಕರ್ಣಕಠೋರವೆನಿಸಿಬಿಡುತ್ತದೆ. ಸುಖದಲ್ಲಿದ್ದಾಗ ಹತ್ತಿರ ಬಂದ ಮಗುವನ್ನು ಬಾಚಿ ತಬ್ಬಿಕೊಳ್ಳುತ್ತೇವಾದರೆ ದುಃಖದಲ್ಲಿದ್ದಾಗ
ಗಮನಿಸಿಯೂ ಗಮನಿಸದಂತಿದ್ದುಬಿಡುತ್ತೇವೆ. ಸುಖದಲ್ಲಿದ್ದಾಗ ಸ್ವಚ್ಛವಾದ ಗರಿಗರಿ ಬಟ್ಟೆ ಉಡುತ್ತಿದ್ದವರು ದುಃಖದಲ್ಲಿದ್ದಾಗ ಹೇಗಾದರೆ ಹಾಗೆ ಇರುತ್ತೇವೆ. ಆಗಾಗ ಬದುಕು ಹೀಗೇಕೆ ಎಂದುಕೊಳ್ಳುತ್ತಿರುತ್ತೇವೆ.

ಅವರು ನಮ್ಮಷ್ಟು ಒಳ್ಳೆಯವರಲ್ಲ; ನಮ್ಮಷ್ಟು ಬೇರೆಯವರಿಗೆ ಸಹಾಯ ಮಾಡಿಲ್ಲ; ದಾನ-ಧರ್ಮವಂತೂ ಅವರ ವಂಶದಲ್ಲೇ ಇಲ್ಲ; ದೇವರಿಂದ ಅವರು ಮಾರುದೂರು; ಆದರೂ ಅವರು ಸುಖವಾಗಿದ್ದಾರೆ; ಅವರಿಗೆ ಕಷ್ಟಗಳೇ ಬರುವುದಿಲ್ಲ; ನಮಗೆ ಮಾತ್ರ ಕಷ್ಟ ಎಂದು ಇನ್ಯಾರನ್ನೋ ನೋಡಿ ಅಂದುಕೊಳ್ಳುತ್ತೇವೆ. ನಾವು ತಪ್ಪು ಮಾಡದೆಯೂ ಕಷ್ಟ ಪಡುವುದು, ಇನ್ನೊಬ್ಬರು ತಪ್ಪು ಮಾಡಿಯೂ ಸುಖವಾಗಿರುವುದು ನಮ್ಮ ಕಷ್ಟಗಳನ್ನು ಮತ್ತಷ್ಟು ಅಸಹನೀಯಗೊಳಿಸಿಬಿಡುತ್ತದೆ. ಕೆಲವೊಮ್ಮೆ ನಮಗೆ ಕಷ್ಟ ಕೊಟ್ಟವರೇ ಸುಖವಾಗಿರುವುದನ್ನು ಕಂಡಾಗಲಂತೂ ದೈವದ ಮೇಲೆಯೇ ಮುನಿಸಿಕೊಳ್ಳುತ್ತೇವೆ.

ಆದರೆ ವಾಸ್ತವವೇ ಬೇರೆ. ಸುಖ-ದುಃಖಗಳೆರಡೂ ನಮ್ಮದೇ ಕೂಸುಗಳು. ನಾವನುಭವಿಸುತ್ತಿರುವ ಸುಖ-ದುಃಖಗಳ ಅಪ್ಪನೂ ನಾವೇ, ಅಮ್ಮನೂ ನಾವೇ. ನಾವು ಮಾಡಿದ್ದನ್ನೇ ನಾವನುಭವಿಸುತ್ತೇವೆ. ಸೃಷ್ಟಿಯ ಜೀವನಸೂತ್ರದಲ್ಲಿ ತಪ್ಪು ಮಾಡಿದವನಿಗೆ ಶಿಕ್ಷೆ ನಿಶ್ಚಿತ, ತಪ್ಪು ಮಾಡದವನಿಗೆ ರಕ್ಷೆ ನಿಶ್ಚಿತ. ಇಂದು ಅನುಭವಿಸುತ್ತಿರುವ ನೋವಿಗೆ ಈ ಜನ್ಮದಲ್ಲಿ ಕಾರಣ ಕಾಣದಿದ್ದರೆ ಪೂರ್ವಜನ್ಮದಲ್ಲಿ ಅಂತಹ ತಪ್ಪು ನಡೆದಿದೆ ಎಂದರ್ಥ. ನಾವೇ ಹಿಂದಿನ ಜನ್ಮಾಂತರದಲ್ಲಿ ಮಾಡಿದ ಕರ್ಮವನ್ನು ಈ ಜನ್ಮದಲ್ಲಿ ಅನುಭವಿಸುತ್ತಿರುತ್ತೇವೆ ಅಷ್ಟೆ. ಇನ್ನೊಬ್ಬ ಈ ಜೀವನದಲ್ಲಿ ಸುಖಿಯೆನಿಸಿದರೆ ಅದವನ ಹಿಂದಿನ ಜನ್ಮದ ಕರ್ಮಪಾಕವಷ್ಟೆ.

ಸುಖಸ್ಯ ದುಃಖಸ್ಯ ನ ಕೋಪಿ ದಾತಾ
ಪರೋ ದದಾತೀತಿ ಕುಬುದ್ಧಿರೇಷಾ |
ಅಹಂ ಕರೋಮೀತಿ ವೃಥಾಭಿಮಾನಃ
ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ ||

ನಮಗಾರೂ ಸುಖ ನೀಡರು; ದುಃಖವನ್ನೂ ನೀಡರು. ಅವರಿವರಿಂದ ಸುಖವಾಯಿತು, ದುಃಖವಾಯಿತು ಎಂಬುದು ಭ್ರಮೆ. ಹಾಗೆಯೇ ನಾನು ಯಾರಿಗಾದೂ ಸುಖ ನೀಡುತ್ತೇನೆ, ದುಃಖ ನೀಡುತ್ತೇನೆ ಎಂಬುದೂ ಭ್ರಮೆಯೇ. ಯಾಕೆಂದರೆ ಪ್ರತಿಯೊಬ್ಬನೂ ಪ್ರತಿಕ್ಷಣವೂ ತನ್ನದೇ ಕರ್ಮದ ಫಲವನ್ನು ಅನುಭವಿಸುತ್ತಿರುತ್ತಾನೆ.

Tuesday 2 March, 2010

ಅವನಿಗಿರಲಿ ಅವನದೇ ವಿಧಾನ

[ವಿಜಯಕರ್ನಾಟಕದ ಲವಲvkಯಲ್ಲಿ ಪ್ರಕಟಿತ ಬರಹ]

ನೀವು ಕಲಿಸಿದಂತೆ
ನಾನು ಕಲಿಯಲಾರೆ;
ನಾನು ಕಲಿಯುವಂತೆ
ನೀವು ಕಲಿಸಬಲ್ಲಿರಾ?
-ವಿದ್ಯಾರ್ಥಿ

ಹೀಗೊಂದು ಎಸ್.ಎಮ್.ಎಸ್. ಇನ್ ಬಾಕ್ಸ್ ನಲ್ಲಿ ಬಂದು ಕುಳಿತಿತ್ತು. ಹಿಂದೆ ಮುಂದೆ ಏನೂ ಇಲ್ಲದೆ ಹೀಗೆ ಕಳಿಸಿದ್ದು ಓರ್ವ ಶಿಕ್ಷಕರೇ ಆದ್ದರಿಂದ ಸಂದೇಶ ಚಿಂತನೆಗೆ ಹಚ್ಚಿತು. ನಿತ್ಯ ಪಾಠ ಮಾಡಿ ನಿರೀಕ್ಷಿತ ಪರಿಣಾಮವನ್ನು ವಿದ್ಯಾರ್ಥಿಯಲ್ಲಿ ಕಾಣದೆ, ಅವನ ಅಭಿಪ್ರಾಯವನ್ನು ಹೀಗೆ ಗ್ರಹಿಸಿರಬೇಕೆನ್ನಿಸಿತು. ಶಿಕ್ಷಣ ಕ್ಷೇತ್ರದ ನಿಜವಾದ ಸಮಸ್ಯೆಯಿರುವುದೇ ಇಲ್ಲಿ.

ನಾವು ನಮ್ಮಂತೆ ಕಲಿಸುತ್ತಿದ್ದೇವೆ. ಅವನಂತೆ ಕಲಿಸುತ್ತಿಲ್ಲ. ಅವನಂತೆ ಕಲಿಸಿದ್ದರೆ ಕಲಿಕೆಯಲ್ಲಿ ಹಿಂದುಳಿಯುವ ಅಥವಾ ಫೇಲ್ ಆಗುವ ಸಂಭವವಿರುತ್ತಿರಲಿಲ್ಲ. ಅಥವಾ ಪ್ರಮಾಣವಂತೂ ಕಡಿಮೆಯಿರುತ್ತಿತ್ತು. ಇದೇ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಸ ಹೊಸ ಕ್ರಮಗಳನ್ನು ಅನ್ವೇಷಿಸಿ ಕ್ರಿಯಾರೂಪಕ್ಕೆ ತರಲು ಪ್ರಯತ್ನಿಸುತ್ತಿವೆ.ಆದರೆ ಅದು ನಿರೀಕ್ಷಿತ ಪರಿಣಾಮವನ್ನು ಕೊಟ್ಟಂತಿಲ್ಲ.

ಜಗತ್ತಿನ ಪ್ರತಿವ್ಯಕ್ತಿಯೂ ಭಿನ್ನ. ಒಬ್ಬನಿದ್ದಂತೆ ಇನ್ನೊಬ್ಬನಿಲ್ಲ. ಜೀವನದ ಗುರಿ, ಶೈಲಿ, ಆಹಾರ, ಮಾತು, ನಡೆ, ನಡವಳಿಕೆ, ಬಟ್ಟೆಯ ಆಯ್ಕೆ, ಘಟನೆಗಳಿಗೆ ಪ್ರತಿಕ್ರಿಯಿಸುವ ಕ್ರಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಾಗೆಯೇ ಗ್ರಹಿಕೆಯ ವಿಧಾನ ಮತ್ತು ಸಮಯದಲ್ಲಿಯೂ ಬದಲಾವಣೆ ಇರುತ್ತದೆ. ಸ್ಥೂಲವಾಗಿ ಕೆಲವು ಗುಂಪುಗಳಲ್ಲಿ ಒಂದಿಷ್ಟು ಸಮಾನಾಂಶಗಳು ಕಂಡುಬರುತ್ತವಾದರೂ ಸೂಕ್ಷ್ಮವಾದ ವ್ಯತ್ಯಾಸಗಳಿರುತ್ತವೆ. ಒಂದು ದೇಶದ ಜನ, ಒಂದು ಪ್ರದೇಶದ ಜನ, ಒಂದು ಸಮುದಾಯದ ಜನ, ಒಂದು ವಯೋಮಾನದ ಜನ......... ಹೀಗೆ ಇಂತಹ ಗುಂಪುಗಳು ಕೆಲವಷ್ಟರ ಮಟ್ಟಿಗೆ ಏಕರೂಪವಾಗಿರುತ್ತವೆ. ಆದರೆ ಒಂದೇ ಮನೆಯಲ್ಲಿ ಹುಟ್ಟಿ ಬೆಳೆದ ಸ್ವಂತ ಅಣ್ಣ-ತಮ್ಮಂದಿರಲ್ಲೇ ಕಲಿಕೆಯಲ್ಲಿ ಮುಂದಿರುವ ಹಾಗೂ ಹಿಂದಿರುವ ಪರಿಸ್ಥಿತಿಯನ್ನು ಕಾಣುತ್ತೇವೆ. ಹಾಗಾಗಿ ಕಲಿಕಾ ವಿಧಾನವನ್ನು ಏಕರೂಪಗೊಳಿಸಲು ಸಾಧ್ಯವಿಲ್ಲ. ಸಮೂಹ ಶಿಕ್ಷಣದ ಇಂದಿನ ಬಹುವ್ಯಾಪಕ ವ್ಯವಸ್ಥೆಯಲ್ಲಿ ವಿಧಾನದ ಏಕರೂಪತೆ ಅನಿವಾರ್ಯ ಅನ್ನುವ ಅಭಿಪ್ರಾಯವೂ ಪ್ರಾಯೋಗಿಕತೆಯ ಹಿನ್ನೆಲೆಯಲ್ಲಿ ತಳ್ಳಿಹಾಕುವಂತದ್ದಲ್ಲ.

ಆದ್ದರಿಂದಲೇ ಶಿಕ್ಷಣದ ಯಶಸ್ಸು ಮತ್ತೆ ಶಿಕ್ಷಕನ ಕೈಯಲ್ಲೇ ಬಂದು ನಿಲ್ಲುತ್ತದೆ. ಶಿಕ್ಷಣವನ್ನು ರೂಪಿಸುವ ತಜ್ನರು, ಕ್ರಿಯಾರೂಪಗೊಳಿಸುವ ಅಧಿಕಾರಿಗಳು ಮಾಡಲಾಗದ್ದನ್ನು ಶಿಕ್ಷಕ ಮಾಡಬೇಕಾಗುತ್ತದೆ. ಆಣೆಕಟ್ಟೆಯಿಂದ ನೀರನ್ನು ಹರಿಸಲಾಗುತ್ತದೆ. ಆ ಕಾಲುವೆಯಿಂದ ನಮ್ಮ ಹೊಲದ ಕಿರುಗಾಲುವೆಗೂ ನೀರು ಹರಿದು ಬರುತ್ತದೆ. ಒಬ್ಬ ಯೋಗ್ಯ ಕೃಷಿಕ ಅದನ್ನು ನೋಡುತ್ತಾ ಕಾಲು ಚಾಚಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರತಿ ಗಿಡದ ಬುಡವನ್ನೂ ಗಮನಿಸುತ್ತಾನೆ; ನೀರು ಸರಿಯಾಗಿ ಸಂದಿದೆಯೇ ಎಂದು. ಹಾಗಿಲ್ಲದಿದ್ದರೆ ಅದರೆಡೆಗೆ ನೀರು ಹರಿಯುವಂತೆ ಮಾಡುತ್ತಾನೆ. ಯಾವ ಗಿಡಕ್ಕೆ, ಯಾವ ಬೆಳೆಗೆ, ಯಾವ ಮಣ್ಣಿಗೆ, ಯಾವ ಕಾಲಕ್ಕೆ ಎಷ್ಟು ನೀರು ಬಿಡಬೇಕೆನ್ನುವುದನ್ನು ತನ್ನ ಅನುಭವದಿಂದ ನಿರ್ಣಯಿಸಿಕೊಂಡಿರುತ್ತಾನೆ. ಶಿಕ್ಷಕನೂ ಹೀಗೆ ಮಾಡಿದಾಗ ಯಶಸ್ಸು ಸಾಧ್ಯ.

ಅದರ ಕುರಿತಾದ ಒಂದಷ್ಟು ಸಲಹೆಗಳು ಇಲ್ಲಿವೆ-

*** ತರಗತಿಯ ಯಾವ ವಿದ್ಯಾರ್ಥಿಗೆ ಯಾವ ವಿಷಯವನ್ನು ಯಾವ ವಿಧಾನವನ್ನು ಅವಲಂಬಿಸಿ ಹೇಗೆ ಮನದಟ್ಟು ಮಾಡಬೇಕೆಂದು ಗುರುತಿಸಿಕೊಳ್ಳಬೇಕು.

*** ಪ್ರತಿ ವಿದ್ಯಾರ್ಥಿಯ ಕೌಟುಂಬಿಕ ಹಿನ್ನೆಲೆ, ಭಾವನಾತ್ಮಕ ಸ್ಥಿತಿ, ಗ್ರಹಿಕೆಯ ಮಟ್ಟ, ಗ್ರಹಿಕೆಗೆ ತೆಗೆದುಕೊಳ್ಳುವ ಸಮಯಗಳನ್ನು ಅನುಸರಿಸಿ ಅವನಿಗೆ ಕಲಿಸಲು ಅವನದ್ದೇ ಆದ ವಿಧಾನವನ್ನು ರೂಪಿಸಿಕೊಳ್ಳಬೇಕು.

*** ಆ ವಿಧಾನವನ್ನು ನಿರಂತರ ಪ್ರಯೋಗ ಮತ್ತು ಪರಿಶೀಲನೆಗೆ ಒಳಪಡಿಸಿಕೊಳ್ಳಬೇಕು.

*** ಬಿಗುಮಾನ ಬಿಟ್ಟು ವಿದ್ಯಾರ್ಥಿಯೊಂದಿಗೆ " ನಾನು ಕಲಿಸಿದ್ದು ತಿಳಿಯಿತೇ? ಈ ವಿಧಾನ ಏನನ್ನಿಸಿತು? " ಎನ್ನುವ ಮಾತುಕತೆ ಇಟ್ಟುಕೊಳ್ಳಬೇಕು.

*** ಅದೇ ವಿದ್ಯಾರ್ಥಿಗೆ ಬೇರೆ ವಿಷಯವನ್ನು ಕಲಿಸುವ ಸಹ ಶಿಕ್ಷಕರೊಂದಿಗೆ ಚರ್ಚಿಸಿ, ಅಭಿಪ್ರಾಯ ವಿನಿಮಯ ಮಾಡಿಕೊಂಡು ವ್ಯಕ್ತಿಗತ ಕಲಿಕಾ ವಿಧಾನವನ್ನು ಪರಿಷ್ಕರಿಸಿಕೊಳ್ಳಬೇಕು.

ಹೀಗಾದಾಗ
" ನಾವು ಕಲಿಸಿದಂತೆ ಕಲಿಯಲಾಗದ ವಿದ್ಯಾರ್ಥಿಗೆ ಅವನು ಕಲಿಯುವಂತೆ ಕಲಿಸಲು ಸಾಧ್ಯ "