Monday 1 November, 2010

ತಮವ ಕಳೆಯಲಿ ದೀಪಾವಳೀ

ದೀಪಾವಳಿ ಮತ್ತೆ ಬಂದಿದೆ. ಅದು ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ನಾವು ಹುಟ್ಟುವ ಮೊದಲೂ ಬರುತ್ತಿತ್ತು; ನಾವು ಇಲ್ಲವಾದರೂ ಬರುತ್ತದೆ. ನಾವಿರುವಾಗಲೂ ಬರುತ್ತಲೇ ಇದೆ. ಕಾಲಾತೀತಪುರುಷನ ಪ್ರೀತಿಯ ಹರಿವು ಅದು. ಅವನ ಪ್ರೀತಿ ಅದಮ್ಯ. ಅಂದರೆ ಅದನ್ನು ದಮನ ಮಾಡಲು ಸಾಧ್ಯವೇ ಇಲ್ಲ. ಪ್ರೀತಿಯನ್ನು ದಮನ ಮಾಡಲು ಇರುವ ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ನಿರ್ಲಕ್ಷ್ಯ. ಪ್ರೀತಿ ಎಲ್ಲವನ್ನೂ ಸಹಿಸುತ್ತದೆ, ನಿರ್ಲಕ್ಷ್ಯ್ವನ್ನು ಮಾತ್ರ ಸಹಿಸಲಾರದು. ನಿರ್ಲಕ್ಷ್ಯ ಇರುವಲ್ಲಿ ಪ್ರೀತಿ ಇರದು. ಆದರೆ ಅವನ ಪ್ರೀತಿ ಇದನ್ನು ಮೀರಿದ್ದು. ನಮ್ಮೆಲ್ಲ ನಿರ್ಲಕ್ಷ್ಯವನ್ನೂ ನಿರ್ಲಕ್ಷ್ಯೈಸಿ ಅವನ ಪ್ರೀತಿ ಹರಿಯುತ್ತಲೇ ಇರುತ್ತದೆ.

ಪ್ರತಿದಿನದ ಸಂಧ್ಯಾಕಾಲಗಳು, ವರ್ಷವಿಡೀ ನಿಯತವಾಗಿ ಬರುವ ಹಬ್ಬಗಳು-ಹರಿದಿನಗಳು ಇವೆಲ್ಲ ಪ್ರೀತಿಯ ಅಭಿಜ್ಞಾನಗಳು. ಅಷ್ಟೇ ಅಲ್ಲ ಅವು ನಮ್ಮ ಏಳ್ಗೆಯ ಸಾಧನಗಳು ಕೂಡ. ಕೊಡುವವ ಇದನ್ನು ಕೊಡುತ್ತಲೇ ಇದ್ದಾನೆ. ನಾವು ಬಳಸಿಕೊಳ್ಳುತ್ತಿಲ್ಲವೆನ್ನುವುದು ದೌರ್ಭಾಗ್ಯ.

ಮತ್ತೆ ದೀಪಾವಳಿಗೆ ಬರೋಣ. ಅದಂತೂ ಮತ್ತೆ ಬಂದಿದೆ. ನಾವು ನೋಡದಿದ್ದರೂ ಅದು ಬೆಳಗೇ ಬೆಳಗುತ್ತದೆ. ನಾವು ಕಣ್ದೆರೆದರೆ ಬೆಳಕು ಕಾಣಿಸೀತು, ಬೆಳಕಿನಲ್ಲಿ ಕಾಣಬೇಕಾದ್ದೂ ಕಾಣಿಸೀತು.

ನಾಲ್ಕು ಸಾಮಯಿಕ ಸಮಸ್ಯೆಗಳ ಕತ್ತಲೆಯನ್ನು ಈ ದೀಪಾವಳಿ ಬೆಳಗಬೇಕಿದೆ:

ಮೊದಲನೆಯದು...
ನಮ್ಮ ರಾಜ್ಯರಾಜಕೀಯ ಜಂಜಡ. ದಿನದಿಂದ ದಿನಕ್ಕೆ ಅದು ವಿಷಮಿಸುತ್ತಿದೆ. ಆರೋಪ-ಪ್ರತ್ಯಾರೋಪಗಳು, ತಂತ್ರ-ಪ್ರತಿತಂತ್ರಗಳು ಕ್ಷಣಕ್ಷಣದ ಬೆಳವಣಿಗೆಗಳಾಗಿವೆ. ಮುಂದೆ ಏನಾದೀತೆನ್ನುವ ಕಲ್ಪನೆ ಪ್ರಜೆಗಳಿಗಿರಲಿ ನಾಯಕರಿಗೇ ತಿಳಿಯದಾಗಿದೆ. ಎಲ್ಲರ ಹೃದಯದಲ್ಲಿಯೂ ಕತ್ತಲೆ ಮುಸುಕಿದೆ. ದೀಪಾವಳಿಯ ದೀಪಮಾಲೆ ನಮ್ಮ ನಾಯಕರ ಹೃದಯವನ್ನು ಬೆಳಗಲಿ; ದ್ವೇಷಾಸೂಯೆಗಳು ಅಳಿದು ಉತ್ತಮ ನಾಯಕತ್ವ ನಮಗೆ ಸಿಗಲಿ.

ಎರಡನೆಯದು...
ಕಾಮನ್ವೆಲ್ತ್ ಕ್ರೀಡಾಕೂಟ ಭಾರತಕ್ಕೆ ಸಿಕ್ಕ ಅಪೂರ್ವ ಅವಕಾಶವದು. ಜಾಗತಿಕ ಸ್ತರದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾದದ್ದು. ಕ್ರೀಡಾಕೂಟ ಆಯೋಜನೆಯ ಯಶಸ್ಸಿನಿಂದ ಚೀನಾದ ಕುರಿತಾಗಿ ವಿದೇಶಗಳಲ್ಲಿ ಮೂಡಿದ್ದಂತ ಭಾವನೆ ಭಾರತದ ಕುರಿತೂ ಮೂಡುವಂತಾಗಬೇಕಿತ್ತು. ಆದರೆ ಪೂರ್ವಸಿದ್ಧತೆಯ ಹಂತದ ದೊಂಬರಾಟ ದಿಗ್ಭ್ರಮೆ ಮೂಡಿಸಿತ್ತು. ಕ್ರೀಡಾಕೂಟ ಅಪಯಶಸ್ಸನ್ನು ಕಟ್ಟಿಕೊಳ್ಳುತದೆಯೇನೋ ಎಂದು ಅನ್ನಿಸಿಬಿಟ್ಟಿತು. ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗಳ ಆರೋಪ ವಿಜೃಂಭಿಸಿತು. ಏನೇ ಇರಲಿ ಕ್ರೀಡಾಕೂಟ ಯಶಸ್ವಿಯಾಯಿತು. ಭಾರತದ ಕ್ರೀಡಾಪಟುಗಳು ದೇಶದ ಕೀರ್ತಿಯನ್ನು ಹೆಚ್ಚಿಸಿದರು. ಈಗ ಭ್ರಷ್ಟಾಚಾರದ ತನಿಖೆಯ ಮಾತುಗಳು ಕೇಳಿಬರುತ್ತಿದೆ. ದೇಶದ ಮರ್ಯಾದೆ ಕಾಯುವವರ ಬುದ್ಧಿಯ ಕತ್ತಲೆಯಂತೂ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ದೀಪಾವಳಿ ಅದನ್ನು ಕಳೆಯಲಿ; ಬದ್ಧತೆಯ ಬೆಳಕು ಬೆಳಗಲಿ.

ಮೂರನೆಯದು...
ಅಯೋಧ್ಯಾ ವಿವಾದದ ನಿಟ್ಟುಸಿರು. ಏನೋ ಆದೀತೆಂದು ಬಗೆದಿದ್ದ ನ್ಯಾಯಾಲಯದ ತೀರ್ಪು ಏನೂ ಆಗದಂತೆ ಮಾಡಿತು. ನಾಯಕರಿಂದ ಸಾಮಾನ್ಯರವರೆಗೆ ಎಲ್ಲರೂ ಕ್ಷಣಕಾಲ ನೆಮ್ಮದಿ ಕಂಡರು. ಹಾಗೆಂದು ಉಭಯ ಪಕ್ಷದ ಎಲ್ಲರಿಗೂ ತೀರ್ಪು ಸಮಾಧಾನ ತಂದಿಲ್ಲ. ಅಸಮಾಧಾನಗೊಂಡವರು ನ್ಯಾಯಾಂಗ ಹೋರಾಟವನ್ನು ಮುಂದುವರಿಸುವ ಮಾತನಾಡುತ್ತಿದ್ದಾರೆ. ಇನ್ನು ಕೆಲವರು ಇದೇ ಅಂತಿಮ ತೀರ್ಪಾಗಲಿ ಎನ್ನುತ್ತಿದ್ದಾರೆ. ಮಾತುಕತೆಯಲ್ಲಿ ಪರಿಹಾರ ಕಂಡುಕೊಳ್ಳುವ ಮಾತೂ ಕೇಳಿಬರುತ್ತಿದೆ. ಎಲ್ಲಕ್ಕಿಂತ ಮುಖ್ಯವಾದುದು ನ್ಯಾಯ. ಜನ್ಮಭೂಮಿ ವಿಚಾರದಲ್ಲಿ ನ್ಯಾಯ ಗೆಲ್ಲಬೇಕಷ್ಟೆ. ಎಲ್ಲರ ವಿವೇಕವನ್ನು ದೀಪಾವಳಿ ಬೆಳಗಲಿ; ನ್ಯಾಯಕ್ಕೆ ಸ್ವಯಂಪ್ರೇರಿತವಾಗಿ ತಲೆಬಾಗುವಂತಾಗಲಿ.

ನಾಲ್ಕನೆಯದು...
ಗೋಹತ್ಯಾ ನಿಷೇಧ ವಿಚಾರ. ಕರ್ನಾಟಕ ರಾಜ್ಯ ಸರ್ಕಾರ ಅಂತದ್ದೊಂದು ಐತಿಹಾಸಿಕ ನಿರ್ಣಯ ಕೈಗೊಂಡಿದೆ. ನೀರೀಕ್ಷೆಯಂತೆ ಪರ-ವಿರೋಧದ ಚಟುವಟಿಕೆಗಳು ನಡೆದಿದೆ. ಹೇಳಿಕೆ-ಪ್ರತಿಹೇಳಿಕೆ, ಪ್ರತಿಭಟನೆ ಎನೆಲ್ಲ ನಡೆದಿದೆ. ಆದರೆ ಸೈದ್ಧಾಂತಿಕ ಚರ್ಚೆ-ಚರ್ಯೆಗಳಿಗಿಂತ ರಾಜಕಿಯ ಹಿತಾಸಕ್ತಿಯೇ ಪ್ರಕರಣವನ್ನು ವ್ಯಾಪಿಸಿದೆ. ಗೋಮಾತೆಯ ಜೀವ ಉಳಿಸುವಲ್ಲಿ ಸ್ವಾರ್ಥ ಮರೆಯಾಗಬೇಕಿದೆ. ತಿನ್ನುವುದೇ ಬದುಕೆನ್ನುವ ಜೀವನಸಿದ್ಧಾಂತವಂತೂ ಅಚ್ಚರಿ ಮೂಡಿಸುತ್ತಿದೆ. ಇಂತಹ ಅರೆಬೆಂದ ವಿಚಾರಗಳಿಂದ ಗೋವನ್ನು ಕೊಲ್ಲುವ ಹಕ್ಕಿನ ಪ್ರತಿಪಾದನೆ ವಿಚಿತ್ರವೇ ಸರಿ. ದೀಪಾವಳಿ ಅವರೆಲ್ಲರ ಬದುಕಿನ ಕತ್ತಲೆಯನ್ನು ಕಳೆಯಲಿ; ಗೋವಿನ ಬೆಳಕು ಅವರೆಲ್ಲರನ್ನೂ ವ್ಯಾಪಿಸಲಿ.

2 comments:

ibbani said...

....nammavarannu sari ಮಾಡಲು ಇರುವ ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ನಿರ್ಲಕ್ಷ್ಯ!!!!enanteeri...?
happy deepaavali ......

ibbani said...

nammavarannu sari ಮಾಡಲು ಇರುವ ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ನಿರ್ಲಕ್ಷ್ಯ.