Sunday 25 December 2011

ಗುರುವೆ ಬದುಕಿನ ಗರಿಮೆ

ಗುರು ಬದುಕಿನ ಸರ್ವಸ್ವ.
ಅವನ ಒಲುಮೆಯಿದ್ದರೆ ಮಾತ್ರ ಜೀವನ ಸಾರ್ಥಕ. ಇಲ್ಲವಾದರೆ ಜೀವನ ನಿರರ್ಥಕ.

ಜೀವನದ ಅರ್ಥವೆಂದರೆ ಪರಮಾರ್ಥ.
ಅದಕ್ಕಾಗಿಯೇ ಬದುಕು; ಅದರಿಂದಲೇ ಬದುಕು; ಅದೇ ಬದುಕು.

ಪರಂಜ್ಯೋತಿಯೊಂದಿಗೆ ಒಂದಾಗುವುದೇ ಜೀವನಕ್ಕಿರುವ ಪ್ರಯೋಜನ.
ಯಾಕೆಂದರೆ ಇರುವುದು ಪರಂಜ್ಯೋತಿಯೊಂದೇ. ಇನ್ನೆಲ್ಲ ಇರುವಂತೆ ತೋರುವುದಷ್ಟೆ.
ಇದನ್ನೇ ಭಗವತ್ಪಾದರು 'ಬ್ರಹ್ಮ ಸತ್ಯಂ ಜಗನ್ಮಿಥ್ಯಾ' ಎಂದರು.

ಇರುವುದು ಅದೊಂದೇ ಎಂದಮೇಲೆ ಜೀವದ ಜೀವಸ್ಥಿತಿಯೂ ಅಸ್ತಿತ್ವರಹಿತವೇ ಸರಿ. ಅದು ತತ್ಕಾಲದ ಸತ್ಯ. ನಿತ್ಯಸತ್ಯ 'ತತ್' ಎಂದೆನಿಸಿಕೊಳ್ಳುವ ಅದೇ 'ಅದು'. ಅದನ್ನು ಸೇರಬೇಕು.
ಅದೇ ಅಸ್ತಿತ್ವ, ಅದೇ ಅಸ್ಮಿತೆ.

ಸರಿ, ಸೇರುವುದಾದರೂ ಹೇಗೆ? ಎಲ್ಲಿ? ಎಂತು?
ಉತ್ತರಿಸುವವ ಬೇಕು. ಮಾತ್ರವಲ್ಲ, ಆತ ಎತ್ತರಿಸುವವನೂ ಆಗಿರಲೇಬೇಕು.
ಯಾರದು? ಇನ್ನಾರು....
"ಗುರು".

ಗುರುವಿನಾಶ್ರಯ ಬದುಕಿನ ಪರಮಾರ್ಥಕ್ಕೆ ಸಾಧಕ. ಗುರುವಿನಾಶಯವೂ ಅದೇ ತಾನೇ!
ಹಾಗಾಗಿ ಗುರು ಬೇಕು, ಗುರುವನ್ನು ನಂಬಬೇಕು, ಗುರುವನ್ನು ಆಶ್ರಯಿಸಬೇಕು, ಗುರುವನ್ನು ಆರಾಧಿಸಬೇಕು.

ಗುರುವಿನ ಆರಾಧನೆಗೆ ಹತ್ತು ಮಾರ್ಗಗಳು, ಹಲವು ವಿಧಾನಗಳು.

ಯಾವುದೇ ಮಾರ್ಗ, ಯಾವುದೇ ವಿಧಾನ ನಮ್ಮೆದುರು ತೆರೆದುಕೊಂಡರೂ ಅದನ್ನು ಬಳಸಿಕೊಳ್ಳೋಣ;
ಗುರುವಿನ ಅನುಗ್ರಹ ಧಾರೆಯಲ್ಲಿ ಮಿಂದು ಪುನೀತರಾಗೋಣ;
ಪರಮಾರ್ಥಪಥಿಕರಾಗೋಣ.

Wednesday 21 December 2011

ಆಸೆ ಮತ್ತು ಬಿಡುಗಡೆ

ಒಬ್ಬ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ. ಮನೆ ಸಂಸಾರ ಆಸ್ತಿ ಪಾಸ್ತಿ ಉದ್ಯೋಗ ಅಧಿಕಾರ... ಎಲ್ಲವನ್ನೂ ಬಿಟ್ಟು ಬಂದಿದ್ದ. ಆಸೆ ಮೋಹಗಳಿಂದ ದೂರವಾಗಿ ಕಾಡು ಸೇರಿದ್ದ. ಆಹಾರಕ್ಕಾಗಿಯೂ ಪ್ರಯತ್ನಿಸುತ್ತಿರಲಿಲ್ಲ. ಆ ಕಾಡಿನಲ್ಲಿದ್ದ ವನವಾಸಿ ಹುಡುಗಿಯೊಬ್ಬಳು ಅವನ ಮುಂದೆ ಪ್ರತಿದಿನ ಗಡ್ದೆಗೆಣಸು-ಹಣ್ಣುಹಂಪಲುಗಳನ್ನು ಇಟ್ಟು ಹೋಗುತ್ತಿದ್ದಳು. ಇವನ ತಪಸ್ಸು ದಿನದಿಂದ ದಿನಕ್ಕೆ ಉಗ್ರವಾಗುತ್ತಾ ಸಾಗಿತ್ತು. ಇಂದ್ರನಿಗೆ ಭಯ ಆರಂಭವಾಯಿತು, ಇವನ ತಪಸ್ಸು ಎಲ್ಲಿಗೆ ಬಂದು ನಿಂತೀತೋ ಎಂದು. ತಪಸ್ಸನ್ನು ಭಂಗಗೊಳಿಸಲು ನಿರ್ಧರಿಸಿದ. ಎಂದಿನಂತೆ ಅಪ್ಸರೆಯನ್ನು ಕಳುಹಿಸದೆ ಕಾಡಿನ ಆ ಹುಡುಗಿಯನ್ನೇ ಸುಂದರಿಯಾಗಿಸಿದ. ತಪಸ್ವಿಯ ಮನಸ್ಸು ಅವಳತ್ತ ಆಕರ್ಷಿತವಾಯಿತು. ಅವಳಿಗೂ ಇಂದ್ರನ ಮಾಯೆಯಿಂದ ಅವನೆಡೆ ಆಕರ್ಷಣೆ ಹುಟ್ಟಿತು. ಆತ ಅವಳಲ್ಲಿ ಮದುವೆಯ ಆಸೆಯನ್ನು ವ್ಯಕ್ತಪಡಿಸಿದ, ಅವಳೂ ಒಪ್ಪಿದಳು. ಅಂದು ರಾತ್ರಿ ಅವಳಿಗೆ ತಾನು ತಪ್ಪು ಮಾಡುತ್ತಿದ್ದೇನೆಂದು ಅನ್ನಿಸತೊಡಗಿತು. ಯಾಕೆಂದರೆ ಬದಲಾದದ್ದು ಅವಳ ಹೊರರೂಪವೇ ಹೊರತು ಒಳಮನಸ್ಸಲ್ಲವಲ್ಲ! ತಪಸ್ವಿಯೂ ಚಿಂತಿಸತೊಡಗಿದ ತಾನೇಕೆ ಮತ್ತೆ ಮೋಹಕ್ಕೆ ಒಳಗಾದೆ ಎಂದು. ನಾಳೆ ಅವಳು ಬಂದಾಗ ನಿರಾಕರಿಸಬೇಕೆಂದುಕೊಂಡ. ಇತ್ತ ಹುಡುಗಿ ಆ ಕಾಡನ್ನೇ ಬಿಟ್ಟು ತೆರಳಲು ನಿರ್ಧರಿಸಿದಳು. ಬೆಳಗ್ಗೆ ತಪಸ್ವಿಯ ಸಮೀಪ ಬಂದವಳೇ ತನ್ನವರೊಂದಿಗೆ ಕಾಡಿನಿಂದ ಬೇರೆಡೆ ತೆರಳುವುದಾಗಿ ತಿಳಿಸಿದಳು. ಅವನೂ ಒಳ್ಳೆಯದಾಯಿತೆಂದುಕೊಂಡ. ತಪಸ್ಸು ಮುಂದುವರಿಯಿತು. ಅತ್ಯುಗ್ರವಾದ ತಪಸ್ಸು ಮಾಡತೊಡಗಿದ. ಎಷ್ಟೋ ಕಾಲ ಕಳೆಯಿತು. ಇಂದ್ರನಿಗೆ ಒಲಿಯುವುದರ ಹೊರತು ಬೇರೆ ದಾರಿಯೇ ಕಾಣಲಿಲ್ಲ. ಧರೆಗಿಳಿದು ಬಂದ; ತಪಸ್ವಿಯ ಮುಂದೆ ನಿಂದ; ಬೇಕಾದ ವರಕೊಡುವೆನೆಂದ; 'ನಿನ್ನ ತಪಸ್ಸಿಗೆ ಸ್ವರ್ಗ ನೀಡಲೋ? ಮೋಕ್ಷ ಕರುಣಿಸಲೋ' ಎಂದು ಕೇಳಿದ. ತಪಸ್ವಿ ಎರಡೂ ಬೇಡವೆಂದ. ಇಂದ್ರನಿಗೆ ಅಚ್ಚರಿ. 'ನಿನ್ನ ತಪಸ್ಸಿಗೆ ಇದಕ್ಕಿಂತ ದೊಡ್ದದು ಕೊಡಲೇನಿದೆ?' ಎಂದು ಪ್ರಶ್ನಿಸಿದ. ತಪಸ್ವಿ 'ಕೆಲವು ವರ್ಷಗಳ ಹಿಂದೆ ಇಲ್ಲೊಬ್ಬಳು ಹುಡುಗಿ ಇದ್ದಳಲ್ಲ, ಅವಳೀಗ ಎಲ್ಲಿದ್ದಾಳೆ?' ಎಂದು ಕೇಳಿದ.

ಓಶೋ 'ಆಸೆ'ಯ ಕುರಿತು ಹೇಳುವ ಕತೆಯಿದು.

ಆಸೆಯೇ ಹೀಗೆ. ಅದನ್ನು ನಾವು ಬಿಟ್ಟರೂ ಅದು ನಮ್ಮನ್ನು ಬಿಡದು. ನಾವು ಬಿಟ್ಟೆವೆಂದುಕೊಳ್ಳುತ್ತೇವೆ. ಅದು ಬೆನ್ನು ಹತ್ತಿರುತ್ತದೆ. ರೂಪಾಂತರ ತಾಳಿ ನಮ್ಮೊಂದಿಗೆಯೇ ಸಾಗುತ್ತಿರುತ್ತದೆ.

ಎಂದು ಅದರಿಂದ ಬಿಡುಗಡೆ ಹೊಂದುತ್ತೇವೋ ಅಂದು ಎಲ್ಲ ಬಂಧನದಿಂದಲೂ ಬಿಡುಗಡೆ ಹೊಂದಲು ಸಾಧ್ಯ.

Sunday 8 May 2011

ಒಳಿತಿನ ನುಡಿ- 2


ಮೃದುವಾಗಿರುವ, ಕೆಳಗಿರುವ, ಬಾಗಿರುವ ಹುಲ್ಲನ್ನು ಬೀಸಿ ಬರುವ ಬಿರುಗಾಳಿಯು ಬಾಧಿಸುವುದಿಲ್ಲ. ಎತ್ತರೆತ್ತರದ ಮರಗಳೇ ಅದರ ಗುರಿ.
ದೊಡ್ಡವರು ದೊಡ್ಡವರೊಂದಿಗೆಯೇ ಪರಾಕ್ರಮ ತೋರಿಸುವುದು.

ತೃಣಾನಿ ನೋನ್ಮೂಲಯತಿ ಪ್ರಭಂಜನೋ
ಮೃದೂನಿ ನೀಚೈಃ ಪ್ರಣತಾನಿ ಸರ್ವತಃ |
ಸಮುಚ್ಛ್ರಿತಾನೇವ ತರೂನ್ಪ್ರಬಾಧತೇ
ಮಹಾನ್ ಮಹತ್ಯೇವ ಕರೋತಿ ವಿಕ್ರಮಮ್ ||

Thursday 5 May 2011

ಒಳಿತಿನ ನುಡಿ - 1



ಮರಣಕ್ಕೆ ಭಯಪಡುವೆಯಾ? ಭಯಪಡುವವನನ್ನು ಯಮನೇನು ಬಿಟ್ಟಾನೆಯೇ? ಆದರೆ ಹುಟ್ಟದಿರುವವನನ್ನು ಯಮ ಹಿಡಿಯಲಾರ. ಎಂದೇ ಹುಟ್ಟದಿರುವಿಕೆಗಾಗಿ ಪ್ರಯತ್ನಿಸು...

ಮೃತ್ಯೋರ್ಬಿಭೇಷಿ ಕಿಂ ಮೂಢ! ಭೀತಂ ಮುಂಚತಿ ಕಿಂ ಯಮಃ|
ಅಜಾತಂ ನೈವ ಗೃಹ್ಣಾತಿ ಕುರು ಯತ್ನಮಜನ್ಮನಿ||

Wednesday 15 December 2010

ವಿವೇಕ-ವಿಚಾರ : ಸೋಲು

ಇದನ್ನಂತೂ ಯಾರೂ ಬಯಸರು, ಯಾರಿಗೂ ಇಷ್ಟವಾಗದು ಸೋಲು.
ಗೆಲುವಿಗಾಗಿ ತಾನೇ ನಮ್ಮ ಹಂಬಲ.
ನಮೆಲ್ಲ ಕಾಯಕವೂ ಗೆಲುವಿಗಾಗೇ ಇರುವಾಗ ಸೋಲು ಯಾರಿಗೆ ಬೇಕು..?
ವಸ್ತು ಸ್ಥಿತಿ ಎಂದರೆ ಬದುಕಿಗೆ ಸಣ್ಣ ಸೋಲುಗಳು ಬೇಕು.
ಬೇಕೆಂಬುದಷ್ಟೇ ಅಲ್ಲ ; ಅವು ಜೀವನದ ಜೊತೆ ಜೊತೆಗೆಯೇ ಸಾಗಿಬರಬೇಕು..
ಏಕೆಂದರೆ ಸೋಲಿಲ್ಲದೇ ಗೆಲುವಿಲ್ಲ.
ವಾಸ್ತವವಾಗಿ ಸಣ್ಣಸೋಲುಗಳೇ ನಮ್ಮಲ್ಲಿ ಗೆಲುವಿನ ಆಕಾಂಕ್ಷೆಯನ್ನು ಗಟ್ಟಿಗೊಳಿಸುವಂಥವುಗಳು;
ಗೆಲ್ಲಲೇ ಬೇಕೆನ್ನುವ ಛಲವನ್ನು ತುಂಬಿಸುವಂಥವುಗಳು.
ಸೋಲಿನ ನೋವು ಮನವನ್ನು ಕಾಡದಿದ್ದರೆ ಗೆಲುವಿನ ಆಸೆಯೇ ಹುಟ್ಟಲಾರದು..!
ನಾವಾಗ ಎಲ್ಲದರಲ್ಲೂ ನಿರಾಸಕ್ತರಾಗಿ ಇದ್ದುಬಿಡುತ್ತೇವೆ.
ಹಾಗಾಗಿ ಆಗಾಗ ಸೋಲುತ್ತಿರಬೇಕು.
ಆ ಸೋಲು ಸಣ್ಣದಾದರೂ ಮನಸ್ಸು ಸ್ವಲ್ಪ ಕಾಲವಾದರೂ ನರಳುವಂತಿರಬೇಕು;
ನಮ್ಮ ಸಾಮಥ್ಯ೯ವನ್ನು ತಟ್ಟಿ ಹಂಗಿಸಬೇಕು; ಆಂತರ್ಯದ ಆತ್ಮವಿಶ್ವಾಸ ಕದಲಬೇಕು; ಸಮಾನರೊಂದು
ನಿರ್ಲಕ್ಷ್ಯದ ನಗುವನ್ನು ಎಸೆಯಬೇಕು. ಆಗ ಹುಟ್ಟುವ ಗೆಲುವಿನ ಬಯಕೆ ಗಾಳಿಯಾಗುತ್ತದೆ, ಬಿರುಗಾಳಿಯಾಗುತ್ತದೆ.
ಅದು ಅಂತಿಮ ಗೆಲುವಿನ ಅತ್ಯುಪಯುಕ್ತ ಸಾಧನವಾಗುತ್ತದೆ. ಆಗ ಸಹಜವಾಗಿಯೇ ಗೆಲುವು ನಮ್ಮದಾಗುತ್ತದೆ.

('ಬ್ರಹ್ಮ' ಪತ್ರಿಕೆಯ ಅಂಕಣಬರಹ.)

Wednesday 8 December 2010

ಒಂದನೇ ತರಗತಿಯ ಮಕ್ಕಳೊಂದಿಗೊಂದು ದಿನ...

ತರಗತಿಯನ್ನು ಪ್ರವೇಶಿಸಿದೆ.

"ಅಭಿವಾದಯೇ" ಸಮೂಹದ ಧ್ವನಿ ಮೊಳಗಿತು.

ಏನೆನ್ನಬೇಕೆಂದೇ ತಿಳಿಯಲಿಲ್ಲ.

"ನಾನೇನು ಹೇಳಬೇಕು" ಎಂದೆ.

"ಶ್ರೇಯೋಸ್ತು" ಹೇಳಿ. ಮತ್ತೆ ಮೊಳಗಿತು ಸಮೂಹದ ಧ್ವನಿ.

ಅದು ಸಂಸ್ಕೃತಪಾಠಶಾಲೆಯಲ್ಲ, ಗುರುಕುಲವೂ ಅಲ್ಲ, ಅದಿರುವುದು ಗ್ರಾಮೀಣಭಾಗದಲ್ಲೂ ಅಲ್ಲ, ಅದು ಹಿರಿಯ ತರಗತಿಯೂ ಅಲ್ಲ.

ಬೆಂಗಳೂರು ಮಹಾನಗರಿಯ ಆಧುನಿಕ ಶಿಕ್ಷಣದ ಶಾಲೆಯೊಂದರ ಒಂದನೇ ತರಗತಿಯದು. ಅಚ್ಚರಿಯಲ್ಲಿ ಮುಳುಗಿಹೋದೆ.

ಬೇರೆ ಶಾಲೆಗಳಿಗಿಂತ ಶಾಲೆ ವಿಭಿನ್ನ ಅಂತ ಗೊತ್ತಿತ್ತು, ಸಂಸ್ಕೃತಿಗೆ ಇಲ್ಲಿ ಹೆಚ್ಚು ಒತ್ತು ಅಂತಲೂ ಗೊತ್ತಿತ್ತು. ಆದರೆ ಇಷ್ಟು ನಿರೀಕ್ಷೆಯಿರಲಿಲ್ಲ.

"ಸಂಸ್ಕೃತ ಬರತ್ತಾ?" ನನ್ನ ಪ್ರಶ್ನೆ. "ಆಮ್" ಸಂಸ್ಕೃತದಲ್ಲೇ ಪ್ರತ್ಯುತ್ತರ ಬಂತು. ಆದರೂ ಸಂಸ್ಕೃತದಲ್ಲಿ ಮಾತುಕತೆ ಮುಂದುವರಿಸುವ ಧೈರ್ಯವಾಗಲಿಲ್ಲ. ಎಷ್ಟೆಂದರೂ ಪುಟ್ಟ ಮಕ್ಕಳಲ್ವ. ಕನ್ನಡದಲ್ಲೇ "ಒಬ್ಬಬ್ಬರಾಗಿ ನಿಮ್ಮ ಹೆಸರು ಹೇಳಿ" ಎಂದೆ. "ಮಮ ನಾಮ ಸುರಭಿ ಇತಿ" ಉಲಿಯಿತೊಂದು ಪುಟ್ಟ ಕೋಗಿಲೆ.

............

"ನಾವೊಂದು ಶಾಲೆ ಮಾಡಿದ್ದೇವೆ, ಸೃಷ್ಟಿಶೀಲ ಕಲಿಕೆಗೆ ಒತ್ತು, ಸಂಸ್ಕೃತಿಯನ್ನು ಪ್ರಧಾನವಾಗಿ ಗಮನದಲ್ಲಿಟ್ಟಿಕೊಂಡಿದ್ದೇವೆ. ನೀವೊಮ್ಮೆ ಬಂದು ನಮ್ಮ ಮಕ್ಕಳಿಗೆ ಪಾಠ ಮಾಡಬೇಕು, ನಾವು ಶಿಕ್ಷಕರೂ ಕುಳಿತಿರುತ್ತೇವೆ" ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿರೇಖಾ ಮೇಡಮ್ ಹೀಗೆಂದಿದ್ದರು. ಕೊಟ್ಟ ಮೊದಲ ಡೇಟಿಗೆ ಹೋಗಲಾಗದೆ ಎರಡನೆಯ ಅವಕಾಶ ಬಳಸಿಕೊಂಡೆ. ಶಾಲೆಯ ಹೊರನೋಟವೇ ಆಕರ್ಷಕವಾಗಿತ್ತು. ಹಸೆಚಿತ್ರಗಳು ಶಾಲೆಯ ಹೆಸರನ್ನೂ ಮೀರಿ ನಿಂತಿದ್ದವು. ಶಾಲೆಯ ಸಂಸ್ಥಾಪಕರಾದ ಉತ್ಸಾಹಿ ಕ್ರಿಯಾಶೀಲ ಯುವಕರು ಶಶಿರೇಖಾರೊಂದಿಗೆ ಸ್ವಾಗತಿಸಿದರು. ಉಭಯ ಕುಶಲೋಪರಿ ಮುಗಿದ ಮೇಲೆ ತರಗತಿಯೆಡೆಗೆ ಸಾಗಿದೆವು. ನಮ್ಮನ್ನಲ್ಲಿ ಗುಬ್ಬಚ್ಚಿ ಮರಿಗಳ ಗುಂಪು ಕಾಯುತ್ತಿತ್ತು.

..........

'ವಿಷಯಗಳನ್ನು ಹೇರದೇ, ಅದು ಪಠ್ಯವೆಂದೆನಿಸದೇ, ಆಸಕ್ತಿಯಿಂದ, ಲವಲವಿಕೆಯಿಂದ ಮಕ್ಕಳು ಕಲಿಯುವಂತೆ ಕಲಿಸಬೇಕು' ಎನ್ನುವ ಹತ್ತು ವರ್ಷದ ಪ್ರಯೋಗ-ಪರಿಶ್ರಮದ ಹಿನ್ನೆಲೆಯಲ್ಲಿ ಒಂದಷ್ಟು ಯೋಜನೆ ಮಾಡಿಕೊಂಡಿದ್ದೆ. 'ದೇವರು ಮತ್ತು ರಾಕ್ಷಸರು' ಎನ್ನುವ ವಿಷಯ ಹೇಳಬೇಕು, 'ನಾವೇ ದೇವರು' ಅನ್ನುವುದನ್ನು ಅರ್ಥ ಮಾಡಿಸಬೇಕು ಎನ್ನುವುದು ನನ್ನ ಯೋಚನೆಯಾಗಿತ್ತು. ಹೀಗೆ ಮಾಡಬೇಕೆಂದಿದ್ದೇನೆ ಎಂದು ತಮ್ಮನಂತಿರುವ ಗೆಳೆಯ ಮಧು ದೊಡ್ಡೇರಿಗೆ ಹೇಳಿದ್ದೆ. ಮಧು ನಗುತ್ತಾ "ನಾವೇ ದೇವರು ಅನ್ನೋ ಕಾನ್ಸೆಪ್ಟ್ ನಮಗೇ ಅರ್ಥ ಆಗೋದಿಲ್ಲ, ಸಣ್ಣ ಮಕ್ಕಳಿಗೆ ಹೇಗೆ ಗೊತ್ತಾಗತ್ತೆ" ಎಂದಿದ್ದ. ಅವನ ಮಾತು ಸರಿಯೆನಿಸಿದ್ದರೂ ಒಳಗಿರುವ ಶಿಕ್ಷಕ ಪ್ರಯತ್ನಕ್ಕೆ ಮುಂದಾಗಿದ್ದ.

..........

"ಮಕ್ಕಳೇ, ನಿಮಗೆ ಇವತ್ತು ಬೇರೆ ಹೆಸರಿಡೋಣ್ವಾ?" ಕೇಳಿದೆ. "ಹೋ" ಎಂದವು ಖುಷಿಯಿಂದ. ವಿಷ್ಣುವಿನ ದಶಾವತಾರಗಳನ್ನು ಅದು ಅದೆಂದು ಹೇಳದೆ ಮಕ್ಕಳಿಗೆ ಹೆಸರಿಟ್ಟು ಕಲಿಸಬೇಕೆಂದು ಯೋಜನೆ ಹಾಕಿದ್ದೆ. ಹೆಸರಿಡಲು ಪ್ರಾರಂಭಿಸುತ್ತಿದ್ದಂತೆಯೇ ಯೋಜನೆ ಮುರಿದುಬಿತ್ತು. ಹತ್ತು ಅವತಾರಗಳ ಹೆಸರನ್ನು ಮಕ್ಕಳು ಹೇಳಿ ಮುಗಿಸಿದರು. ಸಾವರಿಸಿಕೊಂಡು ತಕ್ಷಣ ಅಲ್ಲೇ ಮತ್ತೊಂದು ಯೋಜನೆ ರೂಪಿಸಿಕೊಂಡೆ. ಮಕ್ಕಳಿಗೆ ಮಾಹೇಶ್ವರ ಸೂತ್ರಗಳನ್ನು ಹೆಸರಿಟ್ಟರೆ ಹೇಗೆ? ಎನಿಸಿತು. ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ವೈಜ್ಣಾನಿಕವಾದ ಸಂಸ್ಕೃತವ್ಯಾಕರಣದ ಬೇಸ್ ಅದು. ಹದಿನಾಲ್ಕು ಸೂತ್ರಗಳ ಅಡಿಪಾಯದ ಮೇಲೆಯೇ ಮಹರ್ಷಿ ಪಾಣಿನಿ ತಮ್ಮ ಅಷ್ಟಾಧ್ಯಾಯೀ ಗ್ರಂಥ ರಚಿಸಿದ್ದು. ಸಂಸ್ಕೃತವಿದ್ಯಾರ್ಥಿಗಳು ಮೊದಲು ಕಲಿಯಲು ತಿಣುಕಾಡುವುದು ಅದನ್ನೇ. ನಾಮಕರಣ ಆರಂಭವಾಯಿತು, "ಸುರಭಿಯ ಹೆಸರು ಅಇಉಣ್, ಶ್ರೀಲಕ್ಷ್ಮಿಯ ಹೆಸರು ಋಲೃಕ್, ವಾಸುಕಿಯ ಹೆಸರು ಏಓ, ಸುಶ್ರುತನ ಹೆಸರು ಐಔಚ್, ಗೋಪಾಲನ ಹೆಸರು ಹಯವರಟ್,.... ಲಣ್, ಝಭಯ್.... ಹೀಗೆ ಸಾಗಿತು. ವ್ಯರ್ಥಪ್ರಯತ್ನವೆಂದು ಅಂದುಕೊಂಡೇ ಸಾಗುತ್ತಿದ್ದೆ. ಆದರೆ ಮಕ್ಕಳು ಅದನ್ನು ವ್ಯರ್ಥಗೊಳಿಸಲೇ ಇಲ್ಲ. ಪಾಠ ಮುಗಿಯುವವರೆಗೂ ತಮ್ಮ ಹೆಸರನ್ನು ನೆನಪಿಸುತ್ತಲೇ ಇದ್ದರು. ನಾನು ಮಧ್ಯದಲ್ಲಿ "ಗೋಪಾಲ, ನೀನು ಹೇಳು" ಎಂದರೆ ಸಾಕು, "ಅವನ ಹೆಸರು ಹಯವರಟ್" ಎನ್ನುತ್ತಿದ್ದರು.

ಒಂದಷ್ಟು ಒಳ್ಳೆಯ ಗುಣಗಳನ್ನೂ ಕೆಟ್ಟಗುಣಗಳನ್ನೂ ಮಕ್ಕಳಿಂದಲೇ ಹೇಳಿಸಿದೆ. ಪಟ್ಟಿಯನ್ನೇ ಇಟ್ಟುಕೊಂಡು ಒಳ್ಳೆಯದೆಲ್ಲ ದೇವರಗುಣ, ಕೆಟ್ಟದ್ದೆಲ್ಲ ರಾಕ್ಷಸರ ಗುಣ ಎಂದು ಮನವರಿಕೆ ಮಾಡಿದೆ. "ದೇವರು ಕಷ್ಟದಲ್ಲಿದ್ದವರಿಗೆ ಹೆಲ್ಪ್ ಮಾಡ್ತಾನೆ, ನಾವೂ ಹಾಗೇ ಮಾಡಬೇಕು" ಎನ್ನುತ್ತಾ "ಕರಿ ಮಕರಿಗೆ ಸಿಕ್ಕಿ" ಕಥೆ ಹೇಳಲಾರಂಭಿಸಿದೆ. ಮತ್ತೆ ನನಗೇ ಸೋಲು. ಸುರಭಿ ಅಲಿಯಾಸ್ ಅಇಉಣ್ ಕಥೆ ಹೇಳಿ ಮುಗಿಸಿದಳು.

'ಗಲಾಟೆ ಇಲ್ಲದ ತರಗತಿ ನಿರ್ಜೀವ' ಅನ್ನುವುದು ನನ್ನ ಅಭಿಪ್ರಾಯ. ಪೂರ್ಣಪ್ರಮತಿಯ ಅಭಿಪ್ರಾಯವೂ ಅದೇ. ಹಾಗಾಗಿ ಮಕ್ಕಳು ಅವಧಿ ಪೂರ್ಣ ಮಾತನಾಡುತ್ತಲೇ ಇದ್ದರು. ಅದರಲ್ಲಿ ನಮ್ಮ ಅಇಉಣ್ ಹೆಚ್ಚು ಮಾತನಾಡುತ್ತಿದ್ದಳು. ಸ್ವಲ್ಪ ಸುಮ್ಮನಾಗಿಸಲು "ದೇವರು ಹೆಚ್ಚು ಮಾತನಾಡುವುದಿಲ್ಲ" ಎಂದೆ. ಬಾಣದಂತೆ ಪ್ರಶ್ನೆ ತೂರಿಬಂತು "ದೇವರು ಮಾತಾಡ್ತಾನಾ?" "ಹೌದು" ಎಂದೆ. "ನಮಗೆ ಕೇಳಲ್ವಲ್ಲಾ?" ಪಾಟೀಸವಾಲು. "ಧ್ಯಾನ ಮಾಡಿದ್ರೆ ಕೇಳ್ಸತ್ತೆ" ಎಂದೆ. ನನ್ನ ಮಾತಿನ್ನೂ ಪೂರ್ಣ ಆಗುವ ಮೊದಲೇ ಎಲ್ಲಮಕ್ಕಳೂ ಕೈಯನ್ನು ಚಿನ್ಮುದ್ರೆಯಾಗಿಸಿ, ಕಣ್ಮುಚ್ಚಿ, ಮಾತು ನಿಲ್ಲಿಸಿ ಧ್ಯಾನ ಆರಂಭಿಸಿಯೇ ಬಿಟ್ಟರು. ನಾನಂತೂ ತಬ್ಬಿಬ್ಬಾಗೋದೆ. ನನ್ನೊಂದಿಗೆ ಬಂದಿದ್ದ ಸುರೇಶ, ಲೋಹಿತರಂತೂ ಕಣ್ಣರಳಿಸಿ ನೋಡುತ್ತಿದ್ದರು.

ಅಂತೂ ಅಚ್ಚರಿಯ ಸಾಗರದಲ್ಲಿ ಮುಳುಗಿಹೋಗಿ ಅವಧಿ ಮುಗಿಸಿದೆ. ಹೊರಬರುವಾಗ "ಇನ್ನ್ಯಾವಾಗ ಬರ್ತೀರಾ?" ಎನ್ನುವ ಪ್ರಶ್ನೆ ಕಿವಿಯನ್ನು ತುಂಬಿತ್ತು.

........

'ಪೂರ್ಣಪ್ರಮತಿ' ಕೆಲವು ಯುವಮನಸ್ಸುಗಳ ಸೃಷ್ಟಿ. ಇಂದಿನ ಶಿಕ್ಷಣಕ್ಷೇತ್ರದ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರ ಕನಸು ದೊಡ್ಡದಿದೆ. ಸಮಾಜ ಸಹಕರಿಸಬೇಕಷ್ಟೆ.

ಸಂಸ್ಥೆಯ ಹೆಚ್ಚಿನ ಪರಿಚಯಕ್ಕೆ..

http://purnapramati.in/

Monday 29 November 2010

ಸಂಗತ


"ಯದ್ಯದಾಚರತಿ ಶ್ರೇಷ್ಠಃ
ತತ್ತದೇವೇತರೇ ಜನಾಃ|
ಸಯತ್ಪ್ರಮಾಣಂ ಕುರುತೇ
ಲೋಕಸ್ತದನುವರ್ತತೇ||
ಮಹಾತ್ಮರಾದವರನ್ನು ಜನರು ಅನುಸರಿಸುವುದು ಲೋಕರೂಢಿ. ಈ ಹಿಂದೆ ನೂರಾರು ಮಂದಿ ತಮ್ಮ ಜೀವನದ ಸಿಹಿಕಹಿಗಳನ್ನು ಬರೆದು ಹತ್ತು ಮಂದಿಗೆ ತಿಳಿಸಿ ಹಂಚಿಕೊಂಡಿದ್ದಾರೆ. ಲಿಖಿತ ರೂಪ ಕೊಡದ ಹಿರಿಯರೂ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹಿರಿಯರ ಕಥೆಗಳೊಂದಿಗೆ ತಮ್ಮ ಜೀವನಾನುಭವಗಳನ್ನೂ, ಕಲ್ಪನೆಗಳನ್ನೂ ತಿಳಿಸಿ ಅವರ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ನನ್ನ ತಂದೆ ಜೀವನದುದ್ದಕ್ಕೂ ತನ್ನ ಜೀವನದ ಏರಿಳಿತದ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರ ಪರಿಣಾಮವಾಗಿ ನಮ್ಮ ಜೀವನವಿಧಾನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಇತಿಹಾಸ ಓದುವ, ಕಲಿಸುವ ಗುರಿ ಇದೇ ತಾನೆ?

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆತ್ತವರು, ಮಕ್ಕಳು ಜೊತೆಯಲ್ಲಿದ್ದು ಅನುಭವ ಹಂಚಿಕೊಳ್ಳುವ ಕಾಲಾವಕಾಶ ಕಡಿಮೆ. ಅಪ್ಪ-ಅಮ್ಮನ ಡೈರಿನೋಡಿ ಮಕ್ಕಳು ತಿಳಿದುಕೊಳ್ಳುವ ಕಾಲವೂ ಮರೆಯಾಗಿ ಅಪ್ಪನ ಗಣಕಯಂತ್ರ-ಈ ಮೇಲ್ ಗಳ ಮೂಲಕ ಮಾಹಿತಿ ಪಡೆದುಕೊಳ್ಳುವ ಕಾಲ ಇದಿರಾಗುತ್ತಿರುವ ಈ ಕಾಲದಲ್ಲಿ ನಮ್ಮ ಜೀವನಾನುಭವಗಳನ್ನು ಹಿತೈಷಿಗಳೊಂದಿಗೆ ಹಂಚಿಕೊಳ್ಳಲು ಇಂತಹ ಜೀವನಕಥೆಗಳು ಸಹಾಯಕವಲ್ಲವೇ?"

ಇದು ಶ್ರೀ ಎಸ್. ಈಶ್ವರ ಭಟ್, ಎಳ್ಯಡ್ಕ ಅವರು ತಮ್ಮ 'ದೃಷ್ಟ-ಅದೃಷ್ಟ' ಪುಸ್ತಕದ ಮುನ್ನುಡಿಯಲ್ಲಿ ಹೇಳುವ ಮಾತು. 'ದೃಷ್ಟ-ಅದೃಷ್ಟ' ಶ್ರೀಭಟ್ಟರ ಆತ್ಮಚರಿತ್ರೆ. ಒಮ್ಮೆ ಓದಲೇಬೇಕಾದ ಪುಸ್ತಕವಿದು.

ಯಾವುದೇ ವ್ಯಕ್ತಿಯ ಆತ್ಮಚರಿತ್ರೆಯೆಂದರೆ ಸಹಜವಾಗಿಯೇ ಅದು ಆತ್ಮಸ್ತುತಿಯ ಆಗರವಾಗಿರುತ್ತದೆ. ಓದುಗ ಅಸಹನೀಯ ವೇದನೆಯನ್ನು ಅನುಭವಿಸುವಂತಿರುತ್ತದೆ. ಯಾಕೆಂದರೆ ವ್ಯಕ್ತಿ ತನ್ನನ್ನು ದೊಡ್ಡವನನ್ನಾಗಿಸಿಕೊಳ್ಳುವ ಪ್ರಯತ್ನವನ್ನು ಅಲ್ಲಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ 'ದೃಷ್ಟ-ಅದೃಷ್ಟ' ಅದಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿ ಈಶ್ವರ ಭಟ್ಟರು ತಮ್ಮನ್ನು ದೊಡ್ಡವರನ್ನಾಗಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಪ್ರಾಥಮಿಕ ಶಾಲೆಗೆ ಹೋಗುವ ಯಾವ ಸಾಧ್ಯತೆಯೂ ಇಲ್ಲದ ತಮ್ಮ ದುರ್ಭರ ಬಾಲ್ಯದ ಸಂಕಟಗಳನ್ನೆದುರಿಸಿ ಮುಖ್ಯಾಧ್ಯಾಪಕರಾಗುವವರೆಗಿನ ಅವರ ಯಶೋಗಾಥೆ ಓದುಗನ ಮನದಲ್ಲಿ ಅವರನ್ನು ದೊಡ್ಡವರನ್ನಾಗಿಸುತ್ತದೆ.

('ತ್ರಿವಿಕ್ರಮ' ಪತ್ರಿಕೆಯ ಅಂಕಣಬರಹ)