Friday 16 January, 2009

ನಿಯಮ ಕೋಟೆಯೊಳ ಸಾಮ್ರಾಟ

ಬದುಕಿನ ಗತಿ ಅನೂಹ್ಯ. ಅದು ಆರಂಭವಾಗುವುದು ಹೇಗೆ? ಅದರ ಮಧ್ಯ ಹೇಗೆ? ಅದರ ಅಂತ್ಯ ಹೇಗೆ? ಬರುವ ಸವಾಲುಗಳು ಹೇಗಿರುತ್ತವೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುವುದು ಕಷ್ಟ.

ಪರಿಸರ, ಪ್ರವಾಹದಂತೆ ಬದುಕನ್ನು ತೇಲಿಸಿಕೊಂಡು ಹೋಗುವಂತದ್ದು. ಬದುಕು ತೇಲಿಹೋಗದಂತಿರಲು ದೃಢವಾದ ಆಸರೆ ಬೇಕು. ವಿವೇಕಕ್ಕಿಂತ ದೃಢವಾದ ಆಸರೆ ಬೇರಿಲ್ಲ. ವಿವೇಕ ಜೊತೆಯಿದ್ದಾಗ ಕುದಿಯುವ ಲಾವಾರಸವೂ ತಂಪಾಗುತ್ತದೆ ; ಸುರಿಯುವ ವರ್ಷಧಾರೆಯೂ ಸಿಂಚನವಾಗುತ್ತದೆ ; ಉಬ್ಬರದ ಸಾಗರವೂ ಶಾಂತಗಂಭೀರವಾಗುತ್ತದೆ ; ಬೀಸುವ ಚಂಡಮಾರುತವೂ ಅನುಕೂಲವಾತವಾಗುತ್ತದೆ.

'ವಿವೇಕ' ಜೀವನವನ್ನು ಲಯಬದ್ಧಗೊಳಿಸುತ್ತದೆ. ಲಯವಿಲ್ಲದ ಗೀತವೂ - ವಾದ್ಯವೂ ಕರ್ಕಶವೆನಿಸುತ್ತದೆ. ಕರ್ಣ ಮಾಧುರ್ಯಕ್ಕೆ ಅದು ಲಯಸಂಪನ್ನವಾಗಬೇಕು.

ಲಯಬದ್ಧ ಜೀವನಕ್ಕೆ ನಿಯಮ ಬೇಕು. ನಮ್ಮದೇ ಬದುಕನ್ನು ನಾವು ಸಜ್ಜನಿಕೆಯ ಬೇಲಿಯೊಳಗೆ ಬಂಧಿಸುವುದೇ ನಿಯಮ. ನಿಯಮ ಕೋಟೆಯೊಳಗಿನ ಬದುಕು ಸಾಮ್ರಾಟನ ಬದುಕು ; ಚಕ್ರಾಧಿಪತಿಯ ಬದುಕು. ಈ ಕೋಟೆ, ಸುತ್ತ ಇಲ್ಲದಿದ್ದರೆ ಅದು ಅನಾಥ ಬದುಕು ; ಭಿಕ್ಷುಕನ ಬದುಕು ; ಸೂತ್ರ ಹರಿದ ಗಾಳಿಪಟದಂತಹ ಬದುಕು.

1 comment:

Anonymous said...

what are you trying to say? I can;t make out clearly.

Could you explaing it in simple words..

Thanks..