Tuesday 6 January, 2009

ಮನುಭಾಷಿತ - 10

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಸುಖ ಮತ್ತು ದುಃಖ. ಇವೆರಡು ಜಿಜ್ಞಾಸುಲೋಕಕ್ಕೊಂದು ಸವಾಲು. ಶೋಧಕರ ಶೋಧನೆಯ ಆದ್ಯತೆ ಕೂಡ. ಯಾಕೆಂದರೆ ಮನುಷ್ಯನ ಇತಿಹಾಸ ಪುಟಗಳು ಸಾರುತ್ತಿರುವುದು ; ವರ್ತಮಾನ ಕ್ರಿಯಾಶೀಲವಾಗಿರುವುದು ; ಭವಿಷ್ಯದ ಆಶೋತ್ತರಗಳು ಮೂಡಿಬರುವುದು ಈ ಎರಡು ವಿಷಯಗಳನ್ನು ಆಧರಿಸಿಯೇ.

ಸುಖ - ದುಃಖಗಳ ಜಿಜ್ಞಾಸೆ ಸೃಷ್ಟಿಯಷ್ಟೇ ಪ್ರಾಚೀನ. ಸೃಷ್ಟಿಯಾರಂಭದಿಂದ ಈ ಕುರಿತ ಚರ್ಚೆ ಜೀವಂತ. ಇಂದಿಗೂ ಜಗತ್ತಿನ ಚಿಂತಕರು ಇದರ ನಿರ್ವಚನವನ್ನು ನೀಡಲು ಪ್ರಯತ್ನಿಸುತ್ತಿರುವುದು ಅದರ ಗಾಂಭೀರ್ಯಕ್ಕೆ ದ್ಯೋತಕ.

ಇದು ಚಿಂತಕ ವರ್ಗಕ್ಕೆ ಮಾತ್ರವಲ್ಲ, ಸಾಮಾನ್ಯರಿಗೂ ಜಿಜ್ಞಾಸೆಯೇ. ಯಾಕೆಂದರೆ ವಿದ್ಯಾವಂತ - ಅನಕ್ಷರಸ್ಥ, ಬಡವ - ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲರ ಬಾಳಿನ ಗುರಿಯೂ ಸುಖವೇ. ಸುಖದ ಅಪೇಕ್ಷೆ ಮನದಲ್ಲಿ ಮನೆಮಾಡಿದಾಗ ಮೊದಲು ಏಳುವ ಪ್ರಶ್ನೆಯೇ 'ಹಾಗೆಂದರೇನು?' ಎನ್ನುವುದು. ಸುಖದ ಅಭಿಲಾಷೆ ಮತ್ತು ದುಃಖದ ನಿವಾರಣೆ ಇವೆರಡು ಜೀವಿಯ ನಿರಂತರ ಕ್ರಿಯಾಶೀಲತೆಯ ಗುರಿಗಳು. ಗುರಿಯೆಡೆಗೆ ಸಾಗುವ ಪ್ರಯತ್ನದಲ್ಲಿ ಸುಖಕ್ಕೆ ಕಾರಣವಾಗುವವರ ಕುರಿತು ಪ್ರೀತಿ ; ದುಃಖವನ್ನುಂಟುಮಾಡುವವರ ಬಗ್ಗೆ ದ್ವೇಷಮೂಡುವುದು ಸಹಜವೇ ಎನ್ನಬೇಕು.

ಮನಸ್ಸಿನ ಇನ್ನೊಂದು ನಿರ್ಣಯವೆಂದರೆ ಸುಖ - ದುಃಖಗಳು ಬೇರೆಯವರಿಂದ ದೊರೆಯುತ್ತದೆನ್ನುವುದು. ಇದರಿಂದಾಗಿ ಸುಖದ ಬೆಂಬತ್ತಿ ಮರೀಚಿಕೆಯೆನ್ನುವ, ದುಃಖವನ್ನು ನಿರಾಕರಿಸಿ ಜನ್ಮಕ್ಕಂಟಿದ ಜಾಡ್ಯವೆನ್ನುವ ಪರಿಸ್ಥಿತಿಯ ನಿರ್ಮಾಣ.

ಮನು, ಅರ್ಥಮಾಡಿಕೊಂಡಷ್ಟೂ ಅರ್ಥದ ವ್ಯಾಪ್ತಿ ವಿಸ್ತಾರಗೊಳ್ಳುವ ವಿಶಿಷ್ಟ ಮಾತನ್ನಾಡುತ್ತಾನೆ-

ಸರ್ವಂ ಪರವಶಂ ದುಃಖಂ ಸರ್ವಮಾತ್ಮವಶಂ ಸುಖಮ್ |
ಏತದ್ವಿದ್ಯಾತ್ಸಮಾಸೇನ ಲಕ್ಷಣಂ ಸುಖದುಃಖಯೋಃ ||

ಎಲ್ಲ ದುಃಖವೂ ಅನ್ಯರ ಅಧೀನ. ಎಲ್ಲ ಸುಖವೂ ತನ್ನೊಳಗಿನ ನಿಧಿ. ಹೀಗಿದೆ ಸುಖ - ದುಃಖದ ಸ್ವರೂಪ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

No comments: