Monday 26 January, 2009

ಮನುಭಾಷಿತ - 11

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಬಯಕೆ ಬದುಕಿನ ಜೀವಸ್ರೋತ. ಸಾಮಾನ್ಯರಲ್ಲಿ ಸಾಮಾನ್ಯನ ಕ್ಷುದ್ರಾತಿಕ್ಷುದ್ರ ಬಯಕೆಯಿಂದಾರಂಭಿಸಿ ಅಧ್ಯಾತ್ಮಸಾಧಕರ ಪರಮೋನ್ನತ ಪರಮಾತ್ಮ ಕಾಮನೆಯವರೆಗೆ ಅದರ ಹರವು.

ಆದ್ದರಿಂದಲೇ ಫಲದ ಪ್ರತೀಕ್ಷೆಯಲ್ಲಿ ಕರ್ಮ.ಎಲ್ಲ ಸಲವೂ ನಿರೀಕ್ಷೆ ಸಫಲವಾಗುತ್ತದೆಯೆಂದೇನೂ ಇಲ್ಲ. ನಿರೀಕ್ಷಿತ ಫಲ ದೊರೆಯದಿದ್ದಾಗ ನಿರಾಸೆ ಸಹಜ.

ನಿರಾಸೆ, ಕಾರ್ಯದಿಂದಲೇ ವಿಮುಖವಾಗಿಸುತ್ತದೆ. ನಿರಾಸೆಯ ಕಬಂಧಬಾಹುಗಳಲ್ಲಿ ಬಂಧಿಯಾಗುವ ಮನುಷ್ಯ ಸ್ತಬ್ಧನಾಗುತ್ತಾನೆ ; ಜೀವನೋತ್ಸಾಹವನ್ನು ಕಳೆದುಕೊಳ್ಳುತ್ತಾನೆ ; ತನ್ನನ್ನು ಅಸಮರ್ಥ, ಅಪ್ರಯೋಜಕ ಎಂದುಕೊಳ್ಳುತ್ತಾನೆ ; ಜಗತಿನೆಲ್ಲೆಡೆ ಅವನಿಗೆ ಶೂನ್ಯವೇ ಕಾಣುತ್ತದೆ.

ಹಾಗೆಂದು ಈ ನಿರಾಸೆ ವ್ಯಕ್ತಿಯನ್ನು ಆಸೆಯೇ ಇಲ್ಲದವನನ್ನಾಗಿಯೇನೂ ಮಡುವುದಿಲ್ಲ. ಆಸೆ ಮನದೊಳಗೆ ಮಡುಗಟ್ಟಿಯೇ ಇರುತ್ತದೆ. ಬಯಕೆಯ ಈಡೇರಿಕೆಯತ್ತ ಕಾರ್ಯರತನಾಗುವುದಿಲ್ಲ ಅಷ್ಟೆ.

ಮಾನವ ಸಂಪನ್ಮೂಲ ಸರ್ವಶ್ರೇಷ್ಠ ಸಂಪನ್ಮೂಲ. ಸೃಷ್ಟಿಯ ಯಾವ ಸಂಪತ್ತೂ ವ್ಯರ್ಥವಾಗಬಾರದು. ಒಂದಲ್ಲ ಒಂದು ರೀತಿಯಲ್ಲಿ ಸೃಷ್ಟಿಗೆ ಸಹಕಾರಿಯಾಗಲೇ ಬೇಕು ಅದು. ಅದರಲ್ಲೂ ಭಗವಂತನ ಅದ್ಭುತ ಸೃಷ್ಟಿಯಾದ ಮಾನವ ನಿರುಪಯೋಗಿಯಾಗಬಾರದು.

"ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಂ ಸಮಾಃ - ಕರ್ಮಗಳನ್ನು ಮಾಡುತ್ತಲೇ ಪೂರ್ಣಾಯುಷ್ಯವನ್ನು ಪೂರ್ಣಗೊಳಿಸು" ಎನ್ನುತ್ತದೆ ಉಪನಿಷತ್ತು. ನಿರಾಶಾವದಿಯಾಗಿ ಕಾರ್ಯವಿಹೀನನಾಗುವುದು ಸನಾತನ ಸಂಸ್ಕೃತಿಯ ಸದಾಚಾರವಲ್ಲ.

ಇಂತಹ ನಿರಾಶಾವದಿಗೆ ಮನು ನೀಡುವ ಮಾರ್ಗದರ್ಶನ -

ಆರಭೇತೈವ ಕರ್ಮಾಣಿ ಶ್ರಾಂತಃ ಶ್ರಾಂತಃ ಪುನಃ ಪುನಃ |
ಕರ್ಮಾಣ್ಯಾರಭಮಾಣಂ ಹಿ ಪುರುಷಂ ಶ್ರೀರ್ನಿಷೇವತೇ ||

ಕಾರ್ಯಗಳಲ್ಲಿ ಎಷ್ಟೇ ವಿಘ್ನಗಳು ಎದುರಾದರೂ, ವಿಘ್ನಗಳು ಎಷ್ಟೇ ಖಿನ್ನನನ್ನಾಗಿಸಿದರೂ ಮತ್ತೆ ಮತ್ತೆ ಪ್ರಯತ್ನಶೀಲನಾಗಬೇಕು.

ನಿರಾಶನಾಗದೆ ನಿರಂತರ ಕಾರ್ಯಶೀಲನಾಗುವ ಪುರುಷನಲ್ಲಿಗೆ ಸಂಪತ್ತು ಹರಿದುಬರುತ್ತದೆ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

1 comment:

ಸಿರಿರಮಣ said...

ಜಗದೀಶ ಭಯ್ಯಾ,
ಬಹಳ ಚಲೋ ಬಯಿನ್ದು," ಯತ್ನೇ ಕೃತೇ..ನಾನು ಅದನ್ನೇ ನಂಬಿಮುನ್ನಡೆದಿರುವುದು ನಾನಿನ್ನು ಬದುಕಿರುವುದೇ ಸಾಕ್ಷಿ.