
Wednesday, 15 December 2010
ವಿವೇಕ-ವಿಚಾರ : ಸೋಲು

Wednesday, 8 December 2010
ಒಂದನೇ ತರಗತಿಯ ಮಕ್ಕಳೊಂದಿಗೊಂದು ದಿನ...

"ಅಭಿವಾದಯೇ" ಸಮೂಹದ ಧ್ವನಿ ಮೊಳಗಿತು.
ಏನೆನ್ನಬೇಕೆಂದೇ ತಿಳಿಯಲಿಲ್ಲ.
"ನಾನೇನು ಹೇಳಬೇಕು" ಎಂದೆ.
"ಶ್ರೇಯೋಸ್ತು" ಹೇಳಿ. ಮತ್ತೆ ಮೊಳಗಿತು ಸಮೂಹದ ಧ್ವನಿ.
ಅದು ಸಂಸ್ಕೃತಪಾಠಶಾಲೆಯಲ್ಲ, ಗುರುಕುಲವೂ ಅಲ್ಲ, ಅದಿರುವುದು ಗ್ರಾಮೀಣಭಾಗದಲ್ಲೂ ಅಲ್ಲ, ಅದು ಹಿರಿಯ ತರಗತಿಯೂ ಅಲ್ಲ.
ಬೆಂಗಳೂರು ಮಹಾನಗರಿಯ ಆಧುನಿಕ ಶಿಕ್ಷಣದ ಶಾಲೆಯೊಂದರ ಒಂದನೇ ತರಗತಿಯದು. ಅಚ್ಚರಿಯಲ್ಲಿ ಮುಳುಗಿಹೋದೆ.
ಬೇರೆ ಶಾಲೆಗಳಿಗಿಂತ ಈ ಶಾಲೆ ವಿಭಿನ್ನ ಅಂತ ಗೊತ್ತಿತ್ತು, ಸಂಸ್ಕೃತಿಗೆ ಇಲ್ಲಿ ಹೆಚ್ಚು ಒತ್ತು ಅಂತಲೂ ಗೊತ್ತಿತ್ತು. ಆದರೆ ಇಷ್ಟು ನಿರೀಕ್ಷೆಯಿರಲಿಲ್ಲ.
"ಸಂಸ್ಕೃತ ಬರತ್ತಾ?" ನನ್ನ ಪ್ರಶ್ನೆ. "ಆಮ್" ಸಂಸ್ಕೃತದಲ್ಲೇ ಪ್ರತ್ಯುತ್ತರ ಬಂತು. ಆದರೂ ಸಂಸ್ಕೃತದಲ್ಲಿ ಮಾತುಕತೆ ಮುಂದುವರಿಸುವ ಧೈರ್ಯವಾಗಲಿಲ್ಲ. ಎಷ್ಟೆಂದರೂ ಪುಟ್ಟ ಮಕ್ಕಳಲ್ವ. ಕನ್ನಡದಲ್ಲೇ "ಒಬ್ಬಬ್ಬರಾಗಿ ನಿಮ್ಮ ಹೆಸರು ಹೇಳಿ" ಎಂದೆ. "ಮಮ ನಾಮ ಸುರಭಿ ಇತಿ" ಉಲಿಯಿತೊಂದು ಪುಟ್ಟ ಕೋಗಿಲೆ.
............
"ನಾವೊಂದು ಶಾಲೆ ಮಾಡಿದ್ದೇವೆ, ಸೃಷ್ಟಿಶೀಲ ಕಲಿಕೆಗೆ ಒತ್ತು, ಸಂಸ್ಕೃತಿಯನ್ನು ಪ್ರಧಾನವಾಗಿ ಗಮನದಲ್ಲಿಟ್ಟಿಕೊಂಡಿದ್ದೇವೆ. ನೀವೊಮ್ಮೆ ಬಂದು ನಮ್ಮ ಮಕ್ಕಳಿಗೆ ಪಾಠ ಮಾಡಬೇಕು, ನಾವು ಶಿಕ್ಷಕರೂ ಕುಳಿತಿರುತ್ತೇವೆ" ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿರೇಖಾ ಮೇಡಮ್ ಹೀಗೆಂದಿದ್ದರು. ಕೊಟ್ಟ ಮೊದಲ ಡೇಟಿಗೆ ಹೋಗಲಾಗದೆ ಎರಡನೆಯ ಅವಕಾಶ ಬಳಸಿಕೊಂಡೆ. ಶಾಲೆಯ ಹೊರನೋಟವೇ ಆಕರ್ಷಕವಾಗಿತ್ತು. ಹಸೆಚಿತ್ರಗಳು ಶಾಲೆಯ ಹೆಸರನ್ನೂ ಮೀರಿ ನಿಂತಿದ್ದವು. ಶಾಲೆಯ ಸಂಸ್ಥಾಪಕರಾದ ಉತ್ಸಾಹಿ ಕ್ರಿಯಾಶೀಲ ಯುವಕರು ಶಶಿರೇಖಾರೊಂದಿಗೆ ಸ್ವಾಗತಿಸಿದರು. ಉಭಯ ಕುಶಲೋಪರಿ ಮುಗಿದ ಮೇಲೆ ತರಗತಿಯೆಡೆಗೆ ಸಾಗಿದೆವು. ನಮ್ಮನ್ನಲ್ಲಿ ಗುಬ್ಬಚ್ಚಿ ಮರಿಗಳ ಗುಂಪು ಕಾಯುತ್ತಿತ್ತು.
..........
'ವಿಷಯಗಳನ್ನು ಹೇರದೇ, ಅದು ಪಠ್ಯವೆಂದೆನಿಸದೇ, ಆಸಕ್ತಿಯಿಂದ, ಲವಲವಿಕೆಯಿಂದ ಮಕ್ಕಳು ಕಲಿಯುವಂತೆ ಕಲಿಸಬೇಕು' ಎನ್ನುವ ಹತ್ತು ವರ್ಷದ ಪ್ರಯೋಗ-ಪರಿಶ್ರಮದ ಹಿನ್ನೆಲೆಯಲ್ಲಿ ಒಂದಷ್ಟು ಯೋಜನೆ ಮಾಡಿಕೊಂಡಿದ್ದೆ. 'ದೇವರು ಮತ್ತು ರಾಕ್ಷಸರು' ಎನ್ನುವ ವಿಷಯ ಹೇಳಬೇಕು, 'ನಾವೇ ದೇವರು' ಅನ್ನುವುದನ್ನು ಅರ್ಥ ಮಾಡಿಸಬೇಕು ಎನ್ನುವುದು ನನ್ನ ಯೋಚನೆಯಾಗಿತ್ತು. ಹೀಗೆ ಮಾಡಬೇಕೆಂದಿದ್ದೇನೆ ಎಂದು ತಮ್ಮನಂತಿರುವ ಗೆಳೆಯ ಮಧು ದೊಡ್ಡೇರಿಗೆ ಹೇಳಿದ್ದೆ. ಮಧು ನಗುತ್ತಾ "ನಾವೇ ದೇವರು ಅನ್ನೋ ಕಾನ್ಸೆಪ್ಟ್ ನಮಗೇ ಅರ್ಥ ಆಗೋದಿಲ್ಲ, ಸಣ್ಣ ಮಕ್ಕಳಿಗೆ ಹೇಗೆ ಗೊತ್ತಾಗತ್ತೆ" ಎಂದಿದ್ದ. ಅವನ ಮಾತು ಸರಿಯೆನಿಸಿದ್ದರೂ ಒಳಗಿರುವ ಶಿಕ್ಷಕ ಪ್ರಯತ್ನಕ್ಕೆ ಮುಂದಾಗಿದ್ದ.
..........
"ಮಕ್ಕಳೇ, ನಿಮಗೆ ಇವತ್ತು ಬೇರೆ ಹೆಸರಿಡೋಣ್ವಾ?" ಕೇಳಿದೆ. "ಹೋ" ಎಂದವು ಖುಷಿಯಿಂದ. ವಿಷ್ಣುವಿನ ದಶಾವತಾರಗಳನ್ನು ಅದು ಅದೆಂದು ಹೇಳದೆ ಮಕ್ಕಳಿಗೆ ಹೆಸರಿಟ್ಟು ಕಲಿಸಬೇಕೆಂದು ಯೋಜನೆ ಹಾಕಿದ್ದೆ. ಹೆಸರಿಡಲು ಪ್ರಾರಂಭಿಸುತ್ತಿದ್ದಂತೆಯೇ ಯೋಜನೆ ಮುರಿದುಬಿತ್ತು. ಹತ್ತು ಅವತಾರಗಳ ಹೆಸರನ್ನು ಮಕ್ಕಳು ಹೇಳಿ ಮುಗಿಸಿದರು. ಸಾವರಿಸಿಕೊಂಡು ತಕ್ಷಣ ಅಲ್ಲೇ ಮತ್ತೊಂದು ಯೋಜನೆ ರೂಪಿಸಿಕೊಂಡೆ. ಮಕ್ಕಳಿಗೆ ಮಾಹೇಶ್ವರ ಸೂತ್ರಗಳನ್ನು ಹೆಸರಿಟ್ಟರೆ ಹೇಗೆ? ಎನಿಸಿತು. ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ವೈಜ್ಣಾನಿಕವಾದ ಸಂಸ್ಕೃತವ್ಯಾಕರಣದ ಬೇಸ್ ಅದು. ಆ ಹದಿನಾಲ್ಕು ಸೂತ್ರಗಳ ಅಡಿಪಾಯದ ಮೇಲೆಯೇ ಮಹರ್ಷಿ ಪಾಣಿನಿ ತಮ್ಮ ಅಷ್ಟಾಧ್ಯಾಯೀ ಗ್ರಂಥ ರಚಿಸಿದ್ದು. ಸಂಸ್ಕೃತವಿದ್ಯಾರ್ಥಿಗಳು ಮೊದಲು ಕಲಿಯಲು ತಿಣುಕಾಡುವುದು ಅದನ್ನೇ. ನಾಮಕರಣ ಆರಂಭವಾಯಿತು, "ಸುರಭಿಯ ಹೆಸರು ಅಇಉಣ್, ಶ್ರೀಲಕ್ಷ್ಮಿಯ ಹೆಸರು ಋಲೃಕ್, ವಾಸುಕಿಯ ಹೆಸರು ಏಓ, ಸುಶ್ರುತನ ಹೆಸರು ಐಔಚ್, ಗೋಪಾಲನ ಹೆಸರು ಹಯವರಟ್,.... ಲಣ್, ಝಭಯ್.... ಹೀಗೆ ಸಾಗಿತು. ವ್ಯರ್ಥಪ್ರಯತ್ನವೆಂದು ಅಂದುಕೊಂಡೇ ಸಾಗುತ್ತಿದ್ದೆ. ಆದರೆ ಮಕ್ಕಳು ಅದನ್ನು ವ್ಯರ್ಥಗೊಳಿಸಲೇ ಇಲ್ಲ. ಪಾಠ ಮುಗಿಯುವವರೆಗೂ ತಮ್ಮ ಹೆಸರನ್ನು ನೆನಪಿಸುತ್ತಲೇ ಇದ್ದರು. ನಾನು ಮಧ್ಯದಲ್ಲಿ "ಗೋಪಾಲ, ನೀನು ಹೇಳು" ಎಂದರೆ ಸಾಕು, "ಅವನ ಹೆಸರು ಹಯವರಟ್" ಎನ್ನುತ್ತಿದ್ದರು.
ಒಂದಷ್ಟು ಒಳ್ಳೆಯ ಗುಣಗಳನ್ನೂ ಕೆಟ್ಟಗುಣಗಳನ್ನೂ ಮಕ್ಕಳಿಂದಲೇ ಹೇಳಿಸಿದೆ. ಆ ಪಟ್ಟಿಯನ್ನೇ ಇಟ್ಟುಕೊಂಡು ಒಳ್ಳೆಯದೆಲ್ಲ ದೇವರಗುಣ, ಕೆಟ್ಟದ್ದೆಲ್ಲ ರಾಕ್ಷಸರ ಗುಣ ಎಂದು ಮನವರಿಕೆ ಮಾಡಿದೆ. "ದೇವರು ಕಷ್ಟದಲ್ಲಿದ್ದವರಿಗೆ ಹೆಲ್ಪ್ ಮಾಡ್ತಾನೆ, ನಾವೂ ಹಾಗೇ ಮಾಡಬೇಕು" ಎನ್ನುತ್ತಾ "ಕರಿ ಮಕರಿಗೆ ಸಿಕ್ಕಿ" ಕಥೆ ಹೇಳಲಾರಂಭಿಸಿದೆ. ಮತ್ತೆ ನನಗೇ ಸೋಲು. ಸುರಭಿ ಅಲಿಯಾಸ್ ಅಇಉಣ್ ಕಥೆ ಹೇಳಿ ಮುಗಿಸಿದಳು.
'ಗಲಾಟೆ ಇಲ್ಲದ ತರಗತಿ ನಿರ್ಜೀವ' ಅನ್ನುವುದು ನನ್ನ ಅಭಿಪ್ರಾಯ. ಪೂರ್ಣಪ್ರಮತಿಯ ಅಭಿಪ್ರಾಯವೂ ಅದೇ. ಹಾಗಾಗಿ ಮಕ್ಕಳು ಅವಧಿ ಪೂರ್ಣ ಮಾತನಾಡುತ್ತಲೇ ಇದ್ದರು. ಅದರಲ್ಲಿ ನಮ್ಮ ಅಇಉಣ್ ಹೆಚ್ಚು ಮಾತನಾಡುತ್ತಿದ್ದಳು. ಸ್ವಲ್ಪ ಸುಮ್ಮನಾಗಿಸಲು "ದೇವರು ಹೆಚ್ಚು ಮಾತನಾಡುವುದಿಲ್ಲ" ಎಂದೆ. ಬಾಣದಂತೆ ಪ್ರಶ್ನೆ ತೂರಿಬಂತು "ದೇವರು ಮಾತಾಡ್ತಾನಾ?" "ಹೌದು" ಎಂದೆ. "ನಮಗೆ ಕೇಳಲ್ವಲ್ಲಾ?" ಪಾಟೀಸವಾಲು. "ಧ್ಯಾನ ಮಾಡಿದ್ರೆ ಕೇಳ್ಸತ್ತೆ" ಎಂದೆ. ನನ್ನ ಮಾತಿನ್ನೂ ಪೂರ್ಣ ಆಗುವ ಮೊದಲೇ ಎಲ್ಲಮಕ್ಕಳೂ ಕೈಯನ್ನು ಚಿನ್ಮುದ್ರೆಯಾಗಿಸಿ, ಕಣ್ಮುಚ್ಚಿ, ಮಾತು ನಿಲ್ಲಿಸಿ ಧ್ಯಾನ ಆರಂಭಿಸಿಯೇ ಬಿಟ್ಟರು. ನಾನಂತೂ ತಬ್ಬಿಬ್ಬಾಗೋದೆ. ನನ್ನೊಂದಿಗೆ ಬಂದಿದ್ದ ಸುರೇಶ, ಲೋಹಿತರಂತೂ ಕಣ್ಣರಳಿಸಿ ನೋಡುತ್ತಿದ್ದರು.
ಅಂತೂ ಅಚ್ಚರಿಯ ಸಾಗರದಲ್ಲಿ ಮುಳುಗಿಹೋಗಿ ಅವಧಿ ಮುಗಿಸಿದೆ. ಹೊರಬರುವಾಗ "ಇನ್ನ್ಯಾವಾಗ ಬರ್ತೀರಾ?" ಎನ್ನುವ ಪ್ರಶ್ನೆ ಕಿವಿಯನ್ನು ತುಂಬಿತ್ತು.
........
'ಪೂರ್ಣಪ್ರಮತಿ' ಕೆಲವು ಯುವಮನಸ್ಸುಗಳ ಸೃಷ್ಟಿ. ಇಂದಿನ ಶಿಕ್ಷಣಕ್ಷೇತ್ರದ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರ ಕನಸು ದೊಡ್ಡದಿದೆ. ಸಮಾಜ ಸಹಕರಿಸಬೇಕಷ್ಟೆ.
ಸಂಸ್ಥೆಯ ಹೆಚ್ಚಿನ ಪರಿಚಯಕ್ಕೆ..
Monday, 29 November 2010
ಸಂಗತ

Friday, 26 November 2010
ಸಾಮ್ರಾಜ್ಯದಲ್ಲಿ 'ಸಾಮ್ರಾಟ್' ಇನ್ನಿಲ್ಲ
೨೦೦೭ ಏಪ್ರಿಲ್ ನಲ್ಲಿ ನಡೆದ ಚಾರಿತ್ರಿಕ ವಿಶ್ವಗೋಸಮ್ಮೇಳನದಲ್ಲಿ ಶ್ರೀಶ್ರೀಗಳವರ ಅನಂತರದ ಕೇಂದ್ರಬಿಂದು ಸಾಮ್ರಾಟನೇ ಆಗಿದ್ದ. ಹೆಚ್ಚಾಗಿ ಭವ್ಯ-ವಿಶಾಲ ಸಭಾಂಗಣದಲ್ಲಿ ನಿಂತಿರುತ್ತಿದ್ದ ಅವನನ್ನು ನೋಡುವುದೇ ಜನರಿಗೆ ಹಬ್ಬವಾಗಿತ್ತು. ಅಂತಹ ಅದ್ಭುತ ಆಕಾರವನ್ನು ದೂರದಿಂದ ಕಂಡು ಬೆಚ್ಚಿದವರೂ ಅವನ ಶಾಂತಗಂಭೀರ ಸ್ತಿಮಿತತೆಯನ್ನು ಕಂಡು ಅಚ್ಚರಿ ತಾಳುತಿದ್ದರು. ಭಾವುಕರಂತೂ ಸಮ್ಮೇಳನಕ್ಕೆ ಬಂದ ದೈವಪ್ರತಿನಿಧಿ, ಪ್ರತ್ಯಕ್ಷ ನಂದಿ ಎಂದು ಕೈಮುಗಿದಿದ್ದರು.
ಪರಮಪೂಜ್ಯರು ಅವನನ್ನು ಸಾಮ್ರಾಟ್ ಎಂದರು. ಅವನ ಹೆಸರಷ್ಟೇ ಅಲ್ಲ, ಅವನು ಸಾಮ್ರಾಟನೇ ಆದ ಗೋಪ್ರೇಮಿಗಳ ಹೃದಯದಲ್ಲಿ. ಸಾಮ್ರಾಟ್ ಬಂದ ಕೆಲವೇ ದಿನಕ್ಕೆ ವಿಶ್ವಗೋಸಮ್ಮೇಳನ. ಅದರ ಮೌಲ್ಯವನ್ನೇ ಸಾಮ್ರಾಟ್ ಹೆಚ್ಚಿಸಿಬಿಟ್ಟ. ಅನಂತರದ್ದು ಅವನ ವಿಜೃಂಭಣೆಯ ಇತಿಹಾಸ. ಶ್ರೀಮಠದ ಕಾಮದುಘಾದ ಮೂಲಪುರುಷ ಗಾಂಭೀರ್ಯವೇ ಮೈವೆತ್ತ ಮಹಾನಂದಿಯನ್ನೂ ಮೀರಿಸುವ ಜನಪ್ರಿಯತೆ ಅವನದಾಗಿಬಿಟ್ಟಿತ್ತು. ಎತ್ತರದ ಅವನ ಕೋಡುಗಳ ವಿನ್ಯಾಸ, ಅದನ್ನು ಹೊತ್ತ ಅವನ ನೋಟ, ನಡೆ ಎಲ್ಲವೂ ಎಲ್ಲರ ಮನಸ್ಸನ್ನು ಸೆರೆಹಿಡಿದವು.
ಅಂತಹ ಸಾಮ್ರಾಟ್ ಇನ್ನಿಲ್ಲವಾದ. ಕೆಲ ದಿನಗಳ ಹಿಂದೆಯಷ್ಟೇ ಆಕಸ್ಮಿಕವಾಗಿ ಬಿದ್ದು ಒಂದು ಕೋಡನ್ನು ಮುರಿದುಕೊಂಡಿದ್ದೇ ನೆವವಾಯಿತು. ಅಲ್ಲಿಂದಲೇ ಸ್ವಲ್ಪ ಅನಾರೋಗ್ಯ ಅವನನ್ನು ಕಾಡುತ್ತಲೇ ಇತ್ತು. ಅಂತೂ ೨೨ರ ಹರೆಯದಲ್ಲಿ ಈ ಜನ್ಮ ಮುಗಿಸಿದ. ಇನ್ನು ಅವನ ನೆನಪಷ್ಟೇ...
"ಪ್ರಿಯ ಸಾಮ್ರಾಟ್, ಉನ್ನತ ಲೋಕದಲ್ಲಿ ನೀನಿರುವಿ. ಮತ್ತೆ ಬಾ ಈ ಕರಾಳ ಲೋಕಕ್ಕೆ ಎಂದು ಕರೆಯಲಾರೆವು. ಏಕೆಂದರೆ ನಾವು ಆಳುತ್ತಿರುವ ಈ ಪ್ರಪಂಚ ನಿನ್ನ ವಂಶಕ್ಕೆ ನಿರ್ಭೀತಿಯಿಂದ ಬದುಕಲು ಯೋಗ್ಯವಾಗಿಲ್ಲ. ಆದರೆ ನಿನ್ನಲ್ಲಿ ನಮ್ಮ ಪ್ರಾರ್ಥನೆ ಇಷ್ಟೇ....
ಅಲ್ಲಿಂದಲೇ ನಮ್ಮನ್ನು ಹರಸು. ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ನಮಗಾಗಿ ವರ ಕೇಳಿಕೊಳ್ಳಲು ನಾವು ಸಮರ್ಥರು. ವರ ಬೇಡ. ನಿನ್ನ ವಂಶದ ರಕ್ಷಣೆಯ ಮನಸ್ಸು ನಮ್ಮದಾಗಲಿ; ಅದಕ್ಕೆ ಬೇಕಾದ ಬುದ್ಧಿಬಲ-ಬಾಹುಬಲಗಳು ನಮ್ಮದಾಗಲಿ; ಮನುಷ್ಯರಲ್ಲಿ ಮನುಷ್ಯತ್ವವಾದರೂ ಉಳಿಯಲಿ"
('ಧರ್ಮಭಾರತಿ'ಮಾಸ ಪತ್ರಿಕೆಯ ಸಂಪಾದಕ ಬರಹ.)
Wednesday, 24 November 2010
ನೃತ್ಯವೋ ಜಗವೆಲ್ಲ...
Tuesday, 16 November 2010
ಬಾಯಿಂದ ಹೊರಬಾರದಿರಲಿ; ಹೃದಯಕ್ಕೂ ಇಳಿಯದಿರಲಿ; ಜೀರ್ಣವಾಗಲದು ಕಂಠದಲಿ;
ಮಾತು ಹೀಗಿಲ್ಲದಿರುವುದು ಒಳಿತು. ಅಂತಹ ಮಾತು ಸೊಗಸು ಕೂಡ. ಯಾರದೋ ಕುರಿತು ಮಾತನಾಡುವುದು ಸರಿಯಲ್ಲ. ಅದರಲ್ಲೂ ನಕಾರಾತ್ಮಕ ಮಾತುಗಳಂತೂ ಎಷ್ಟಕ್ಕೂ ಸರಿಯಲ್ಲ. ನಮ್ಮ ಪ್ರತಿಚರ್ಯೆಯೂ ಉಳಿದವರಿಗೆ ಒಳಿತಾಗುವಂತಿರಬೇಕು. ಕೊನೆಯ ಪಕ್ಷ ಕೆಡುಕಂತೂ ಆಗಬಾರದಲ್ಲ. ಅಲ್ಲದೆ ನಮ್ಮ ಹೃದಯದಲ್ಲಿ ಇಂತಹ ಮಾತನಾಡುತ್ತಾ ಎಲ್ಲರ ಕುರಿತು ದುರ್ಭಾವನೆಗಳೇ ತುಂಬಿಹೋಗಿಬಿಡಬಹುದು. ಅದು ಅತ್ಯಂತ ಅಪಾಯಕಾರಿ. ಹೃದಯದ ಮೃದುತ್ವ ನಾಶವಾಗಿಬಿಡಬಹುದು. ಮಾನವಕುಲದ ಮೇಲಿನ ನಂಬಿಕೆ ಕುಸಿಯಬಹುದು. ಸುತ್ತಲಿನವರ ಕುರಿತಾದ ವಿಶ್ವಾಸವೇ ನಶಿಸಿದ ಮೇಲೆ ಬದುಕು ಮಾಡುವುದು ಕಷ್ಟವಾದೀತು. ಅಲ್ಲದೆ ಹಾಗೆ ಮಾತನಾಡುವವರ ಕುರಿತು ಜನರಿಗೂ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ. ಎದುರಿಗೆ ಸಹಜವಾಗಿಯೇ ಇದ್ದರೂ ಹಿಂದಿನಿಂದ ಅವರನ್ನೂ ಟೀಕಿಸುತ್ತಾರೆ. ಎಂಬಲ್ಲಿಗೆ ಅಂತಹ ಮಾತು ಮಾತನಾಡುವವರಿಗೂ ಒಳಿತಲ್ಲ.
ಶಿವನಂತಿರಬೇಕು ಈ ವಿಷಯದಲ್ಲಿ. ಅದು ಸಮುದ್ರಮಥನದ ಸಂದರ್ಭ. ಅಮೃತಕ್ಕಾಗಿ ದೇವಾಸುರರು ಪ್ರಯತ್ನಿಸುತ್ತಿದ್ದರು. ಕಡೆದು ಕಡೆದು ಇನ್ನೇನು ಅಮೃತ ಬಂದೀತೆಂದು ಕಾಯುತ್ತಿರುವಾಗ ಹೊರಬಂದಿದ್ದು ಹಾಲಾಹಲವಿಷ.
ಅದೆಷ್ಟು ಭಯಂಕರವೆಂದರೆ, ಕುಡಿದವರು ಮಾತ್ರ ಸಾಯುವುದಲ್ಲ; ಅದು ತಾನಾಗಿಯೇ ಜಗತ್ತನ್ನು ಸುಡತೊಡಗಿತು. ಆಗಲ್ಲಿಗೆ ಪರಶಿವನ ಆವಿರ್ಭಾವವಾಯಿತು. ಆ ವಿಷವನ್ನು ಶಿವ ಕುಡಿದ. ಒಳಗಿಳಿದರೆ ಶಿವನ ಹೃದಯದ ಅಮೃತಸಮುದ್ರ ಕಲಕೀತು. ಹೊರಹಾಕಿದರೆ ಸೃಷ್ಟಿ ಸುಟ್ಟೀತು. ಹಾಗಾಗಿ ತನ್ನ ಕಂಠದಲ್ಲೇ ಅದನ್ನವ ನಿಲ್ಲಿಸಿಕೊಂಡ. ಬೇರೆಯವರ ದೋಷವನ್ನು ಹೀಗೆ ಗ್ರಹಿಸಬೇಕು. ಹೃದಯಕ್ಕೆ ಅದನ್ನು ಇಳಿಸಿಕೊಳ್ಳಬಾರದು. ಹೊರಗೂ ಉಗುಳಬಾರದು. ಕಂಠದಲ್ಲಿಯೇ ಜೀರ್ಣಗೊಳಿಸಿಬಿಡಬೇಕು. ಅಂದರೆ ಆ ವ್ಯಕ್ತಿಯ ಕುರಿತಾಗಿ ದುರ್ಭಾವ ತಾಳಬಾರದು. ದೋಷ-ದೌರ್ಬಲ್ಯಗಳು ಅವನಿಗೆ ಸೇರಿದ್ದು. ಅದವನ ಪುರ್ವಾರ್ಜಿತ ಕರ್ಮ. ನಮಗೇಕೆ ಅದರ ಉಸಾಬರಿ. ಹಾಗೆಯೇ ಅದರ ಕುರಿತು ಆಡಲೂಬಾರದು. ಅದು ಆಡುವವರಿಗೂ, ಆಡಿಸಿಕೊಂಡವರಿಗೂ, ಸಮಾಜಕ್ಕೂ ಮಾರಕ.
ಮುಖೇನ ನೋದ್ಗಿರತ್ಯೂರ್ಧ್ವಂ ಹೃದಯೇನ ನಯತ್ಯಧಃ|
ಜರಯತ್ಯಂತರೇ ಸಾಧುರ್ದೋಷಂ ವಿಷಮಿವೇಶ್ವರಃ||
'ತ್ರಿವಿಕ್ರಮ' ಮಾಸಪತ್ರಿಕೆಯ ಸಂಪಾದಕ ಬರಹ.
Friday, 5 November 2010
ಟಿ.ವಿ. ಬೇಕೇ?
ಅನ್ನುವುದು ವಾಸ್ತವ ಪ್ರಶ್ನೆ. ಯಾಕೆಂದರೆ - ಬದುಕಿನ ಎಲ್ಲದರೊಂದಿಗೆ ಹೆಣೆದುಕೊಂಡಿರುವುದನ್ನು ಬೇಕು ಬೇಡದ ಜಿಜ್ಞಾಸೆಗೆ ಒಳಪಡಿಸುವುದು ಹೇಗೆ?
ಟಿ.ವಿ.ಯ ಆವಶ್ಯಕತೆಯನ್ನು ವಿಮರ್ಶೆಗೆ ಒಳಪಡಿಸುವ ಮೊದಲು ಮನೋರಂಜನೆಯ ಸ್ವರೂಪ ನಿಷ್ಕರ್ಷೆಯಾಗಬೇಕು.
ದಿನವಿಡಿಯ ಮನೋರಂಜನೆ ನಮ್ಮ ಸಂಸ್ಕೃತಿಗೆ ಪಥ್ಯವಾದದ್ದಂತೂ ಅಲ್ಲ. ಯಾವ ಜೀವನವಿಧಾನವೂ ಇದನ್ನು ಒಪ್ಪಿಕೊಳ್ಳಲಾರದು. ಹೇಗೆ ಒಪ್ಪಲು ಸಾಧ್ಯ ? ಅದು ಜೀವನದ ಒಂದು ಅಂಗ ಮಾತ್ರ ಆಗಿರಬೇಕಷ್ಟೇ.
ಮನೋರಂಜನೆಯನ್ನೇ ವೃತ್ತಿಯಾಗಿ ಸ್ವೀಕರಿಸುವವರ ವಿಷಯ ಬೇರೆ ; ಆದರೆ ಕೇಳುಗ ಅಥವಾ ನೋಡುಗ ಮನೋರಂಜನೆಯನ್ನೇ ನಿತ್ಯಕಾಯಕವಾಗಿಸಿಕೊಳ್ಳುವುದು ಸರಿಯಲ್ಲ. ಬದಲಾದ ಜೀವನಶೈಲಿ ಮನೋರಂಜನೆಯನ್ನೇ ಬದುಕಿನಲ್ಲಿ ಪ್ರಧಾನವಾಗಿಸಿಕೊಂಡಿದೆ. ಇದರಿಂದಾಗಿ ಊಟಕ್ಕೆ ಉಪ್ಪಿನಕಾಯಿಯ ಬದಲು ಉಪ್ಪಿನಕಾಯಿಯೇ ಊಟವಾಗಿದೆ.
ಮನಸ್ಸಿಗೆ ವೃತ್ತಿ ಅಥವಾ ಪ್ರವೃತ್ತಿಯ ಕಾರ್ಯಗಳಿಂದ ಏಕತಾನತೆ ಒದಗಿದಾಗ, ಅನ್ಯಾನ್ಯ ಕಾರಣಗಳಿಂದಾಗಿ ಬೇಸರ-ನೋವು-ನಿರಾಸೆಗಳು ಮನಸ್ಸನ್ನು ಆಕ್ರಮಿಸಿದಾಗ, ಮತ್ತೊಮ್ಮೆ ಹೊಸತನ ತುಂಬಿಕೊಳ್ಳಲು ಮನೋರಂಜನೆ ಅತ್ಯವಶ್ಯ. ಹಾಗಾಗದೆ ವೃತ್ತಿಯಷ್ಟೇ ಟಿ.ವಿ. ವೀಕ್ಷಣೆಯು ಪ್ರಮುಖವಾದರೆ ?

ಹಾಗಾಗಿ ಮನೋರಂಜನೆಯ ಈ ಸಿದ್ಧಾಂತ ಬದಲಾಗದೆ ಟಿ.ವಿ. ಉತ್ತಮಗೊಳ್ಳುವುದು ಅಸಾಧ್ಯ. ಟಿ.ವಿ.ಯ ಪ್ರಯೋಜನ ಖಂಡಿತವಾಗಿ ಮನೋರಂಜನೆ ಮಾತ್ರವಲ್ಲ, ಶಿಕ್ಷಣ-ಮಾಹಿತಿ ಸಂವಹನ-ಕಲಾಪ್ರದರ್ಶನ-ಸುದ್ದಿಪ್ರಸಾರ-ಸಾರ್ವಜನಿಕರ ಅಭಿಪ್ರಾಯ ಪ್ರಕಟಣೆಯ ಸಾಧ್ಯತೆ.... ಹೀಗೆ ಅದು ಬಹುವಿಧ ಪ್ರಯೋಜನಕಾರಿ.
ಆದರೆ ಇದೆಲ್ಲದರ ಉಪಯೋಗವನ್ನು ಬಹುಜನತೆ ಹೇಗೆ ಪಡೆದುಕೊಳ್ಳುತ್ತಿದೆ ? ಮನೆ-ಮನೆಗಳ ಟಿ.ವಿ. ಇವೆಲ್ಲದಕ್ಕಿಂತ ಧಾರಾವಾಹಿ-ಸಿನಿಮಾ-ಸಿನಿಮಾಧಾರಿತ ಕಾರ್ಯಕ್ರಮಗಳಿಗೆ ತನ್ನನ್ನು ತೆರೆದುಕೊಂಡಿರುತ್ತದೆ.
ಜೀವನಕ್ಕೊಂದು ಆದರ್ಶದ ಚೌಕಟ್ಟು ನಿರ್ಮಿಸುವ ಇರಾದೆಯೇ ಇಲ್ಲದ ಈ ಕಾರ್ಯಕ್ರಮಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿವೆ. ಕೌಟುಂಬಿಕಪರಿಸರ ಪ್ರಧಾನವಾಗಿ ಟಿ.ವಿ.ಯಿಂದಾಗಿ ಛಿದ್ರಗೊಳ್ಳುತ್ತಿದೆ. ಕುಟುಂಬ ಸದಸ್ಯರ ಪರಸ್ಪರ ಮಾತುಕತೆಗಾಗಲೀ, ಮನೆಗೆ ಬಂದವರೊಂದಿಗೆ ಮಾತನಾಡುವುದಕ್ಕಾಗಲೀ ಅವಕಾಶವಿಲ್ಲದಂತೆ ಟಿ.ವಿ.ಯ ದೃಶ್ಯ ಮತ್ತು ಶಬ್ದಗಳು ಮನೆಯನ್ನು ತುಂಬಿಕೊಳ್ಳುತ್ತಿವೆ.
ಹಾಗಾಗಿ ಮರುಚಿಂತನೆ ಇಂದಿನ ತುರ್ತು ಆವಶ್ಯಕತೆ-
Monday, 1 November 2010
ತಮವ ಕಳೆಯಲಿ ದೀಪಾವಳೀ
ಪ್ರತಿದಿನದ ಸಂಧ್ಯಾಕಾಲಗಳು, ವರ್ಷವಿಡೀ ನಿಯತವಾಗಿ ಬರುವ ಹಬ್ಬಗಳು-ಹರಿದಿನಗಳು ಇವೆಲ್ಲ ಪ್ರೀತಿಯ ಅಭಿಜ್ಞಾನಗಳು. ಅಷ್ಟೇ ಅಲ್ಲ ಅವು ನಮ್ಮ ಏಳ್ಗೆಯ ಸಾಧನಗಳು ಕೂಡ. ಕೊಡುವವ ಇದನ್ನು ಕೊಡುತ್ತಲೇ ಇದ್ದಾನೆ. ನಾವು ಬಳಸಿಕೊಳ್ಳುತ್ತಿಲ್ಲವೆನ್ನುವುದು ದೌರ್ಭಾಗ್ಯ.
ಮತ್ತೆ ದೀಪಾವಳಿಗೆ ಬರೋಣ. ಅದಂತೂ ಮತ್ತೆ ಬಂದಿದೆ. ನಾವು ನೋಡದಿದ್ದರೂ ಅದು ಬೆಳಗೇ ಬೆಳಗುತ್ತದೆ. ನಾವು ಕಣ್ದೆರೆದರೆ ಬೆಳಕು ಕಾಣಿಸೀತು, ಬೆಳಕಿನಲ್ಲಿ ಕಾಣಬೇಕಾದ್ದೂ ಕಾಣಿಸೀತು.
ನಾಲ್ಕು ಸಾಮಯಿಕ ಸಮಸ್ಯೆಗಳ ಕತ್ತಲೆಯನ್ನು ಈ ದೀಪಾವಳಿ ಬೆಳಗಬೇಕಿದೆ:
ಮೊದಲನೆಯದು...
ನಮ್ಮ ರಾಜ್ಯರಾಜಕೀಯ ಜಂಜಡ. ದಿನದಿಂದ ದಿನಕ್ಕೆ ಅದು ವಿಷಮಿಸುತ್ತಿದೆ. ಆರೋಪ-ಪ್ರತ್ಯಾರೋಪಗಳು, ತಂತ್ರ-ಪ್ರತಿತಂತ್ರಗಳು ಕ್ಷಣಕ್ಷಣದ ಬೆಳವಣಿಗೆಗಳಾಗಿವೆ. ಮುಂದೆ ಏನಾದೀತೆನ್ನುವ ಕಲ್ಪನೆ ಪ್ರಜೆಗಳಿಗಿರಲಿ ನಾಯಕರಿಗೇ ತಿಳಿಯದಾಗಿದೆ. ಎಲ್ಲರ ಹೃದಯದಲ್ಲಿಯೂ ಕತ್ತಲೆ ಮುಸುಕಿದೆ. ದೀಪಾವಳಿಯ ದೀಪಮಾಲೆ ನಮ್ಮ ನಾಯಕರ ಹೃದಯವನ್ನು ಬೆಳಗಲಿ; ದ್ವೇಷಾಸೂಯೆಗಳು ಅಳಿದು ಉತ್ತಮ ನಾಯಕತ್ವ ನಮಗೆ ಸಿಗಲಿ.

ಕಾಮನ್ವೆಲ್ತ್ ಕ್ರೀಡಾಕೂಟ ಭಾರತಕ್ಕೆ ಸಿಕ್ಕ ಅಪೂರ್ವ ಅವಕಾಶವದು. ಜಾಗತಿಕ ಸ್ತರದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾದದ್ದು. ಕ್ರೀಡಾಕೂಟ ಆಯೋಜನೆಯ ಯಶಸ್ಸಿನಿಂದ ಚೀನಾದ ಕುರಿತಾಗಿ ವಿದೇಶಗಳಲ್ಲಿ ಮೂಡಿದ್ದಂತ ಭಾವನೆ ಭಾರತದ ಕುರಿತೂ ಮೂಡುವಂತಾಗಬೇಕಿತ್ತು. ಆದರೆ ಪೂರ್ವಸಿದ್ಧತೆಯ ಹಂತದ ದೊಂಬರಾಟ ದಿಗ್ಭ್ರಮೆ ಮೂಡಿಸಿತ್ತು. ಕ್ರೀಡಾಕೂಟ ಅಪಯಶಸ್ಸನ್ನು ಕಟ್ಟಿಕೊಳ್ಳುತದೆಯೇನೋ ಎಂದು ಅನ್ನಿಸಿಬಿಟ್ಟಿತು. ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗಳ ಆರೋಪ ವಿಜೃಂಭಿಸಿತು. ಏನೇ ಇರಲಿ ಕ್ರೀಡಾಕೂಟ ಯಶಸ್ವಿಯಾಯಿತು. ಭಾರತದ ಕ್ರೀಡಾಪಟುಗಳು ದೇಶದ ಕೀರ್ತಿಯನ್ನು ಹೆಚ್ಚಿಸಿದರು. ಈಗ ಭ್ರಷ್ಟಾಚಾರದ ತನಿಖೆಯ ಮಾತುಗಳು ಕೇಳಿಬರುತ್ತಿದೆ. ದೇಶದ ಮರ್ಯಾದೆ ಕಾಯುವವರ ಬುದ್ಧಿಯ ಕತ್ತಲೆಯಂತೂ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ದೀಪಾವಳಿ ಅದನ್ನು ಕಳೆಯಲಿ; ಬದ್ಧತೆಯ ಬೆಳಕು ಬೆಳಗಲಿ.
ಮೂರನೆಯದು...
ಅಯೋಧ್ಯಾ ವಿವಾದದ ನಿಟ್ಟುಸಿರು. ಏನೋ ಆದೀತೆಂದು ಬಗೆದಿದ್ದ ನ್ಯಾಯಾಲಯದ ತೀರ್ಪು ಏನೂ ಆಗದಂತೆ ಮಾಡಿತು. ನಾಯಕರಿಂದ ಸಾಮಾನ್ಯರವರೆಗೆ ಎಲ್ಲರೂ ಕ್ಷಣಕಾಲ ನೆಮ್ಮದಿ ಕಂಡರು. ಹಾಗೆಂದು ಉಭಯ ಪಕ್ಷದ ಎಲ್ಲರಿಗೂ ತೀರ್ಪು ಸಮಾಧಾನ ತಂದಿಲ್ಲ. ಅಸಮಾಧಾನಗೊಂಡವರು ನ್ಯಾಯಾಂಗ ಹೋರಾಟವನ್ನು ಮುಂದುವರಿಸುವ ಮಾತನಾಡುತ್ತಿದ್ದಾರೆ. ಇನ್ನು ಕೆಲವರು ಇದೇ ಅಂತಿಮ ತೀರ್ಪಾಗಲಿ ಎನ್ನುತ್ತಿದ್ದಾರೆ. ಮಾತುಕತೆಯಲ್ಲಿ ಪರಿಹಾರ ಕಂಡುಕೊಳ್ಳುವ ಮಾತೂ ಕೇಳಿಬರುತ್ತಿದೆ. ಎಲ್ಲಕ್ಕಿಂತ ಮುಖ್ಯವಾದುದು ನ್ಯಾಯ. ಜನ್ಮಭೂಮಿ ವಿಚಾರದಲ್ಲಿ ನ್ಯಾಯ ಗೆಲ್ಲಬೇಕಷ್ಟೆ. ಎಲ್ಲರ ವಿವೇಕವನ್ನು ದೀಪಾವಳಿ ಬೆಳಗಲಿ; ನ್ಯಾಯಕ್ಕೆ ಸ್ವಯಂಪ್ರೇರಿತವಾಗಿ ತಲೆಬಾಗುವಂತಾಗಲಿ.
ನಾಲ್ಕನೆಯದು...
ಗೋಹತ್ಯಾ ನಿಷೇಧ ವಿಚಾರ. ಕರ್ನಾಟಕ ರಾಜ್ಯ ಸರ್ಕಾರ ಅಂತದ್ದೊಂದು ಐತಿಹಾಸಿಕ ನಿರ್ಣಯ ಕೈಗೊಂಡಿದೆ. ನೀರೀಕ್ಷೆಯಂತೆ ಪರ-ವಿರೋಧದ ಚಟುವಟಿಕೆಗಳು ನಡೆದಿದೆ. ಹೇಳಿಕೆ-ಪ್ರತಿಹೇಳಿಕೆ, ಪ್ರತಿಭಟನೆ ಎನೆಲ್ಲ ನಡೆದಿದೆ. ಆದರೆ ಸೈದ್ಧಾಂತಿಕ ಚರ್ಚೆ-ಚರ್ಯೆಗಳಿಗಿಂತ ರಾಜಕಿಯ ಹಿತಾಸಕ್ತಿಯೇ ಪ್ರಕರಣವನ್ನು ವ್ಯಾಪಿಸಿದೆ. ಗೋಮಾತೆಯ ಜೀವ ಉಳಿಸುವಲ್ಲಿ ಸ್ವಾರ್ಥ ಮರೆಯಾಗಬೇಕಿದೆ. ತಿನ್ನುವುದೇ ಬದುಕೆನ್ನುವ ಜೀವನಸಿದ್ಧಾಂತವಂತೂ ಅಚ್ಚರಿ ಮೂಡಿಸುತ್ತಿದೆ. ಇಂತಹ ಅರೆಬೆಂದ ವಿಚಾರಗಳಿಂದ ಗೋವನ್ನು ಕೊಲ್ಲುವ ಹಕ್ಕಿನ ಪ್ರತಿಪಾದನೆ ವಿಚಿತ್ರವೇ ಸರಿ. ದೀಪಾವಳಿ ಅವರೆಲ್ಲರ ಬದುಕಿನ ಕತ್ತಲೆಯನ್ನು ಕಳೆಯಲಿ; ಗೋವಿನ ಬೆಳಕು ಅವರೆಲ್ಲರನ್ನೂ ವ್ಯಾಪಿಸಲಿ.
Friday, 1 October 2010
ಕೆರೆ ಕಟ್ಟುವ ಕರುಣೆಯ ಕಾಯಕ
ತನ್ನ ಬದುಕು ಸುಖಮಯವಾಗಬೇಕೆಂದು ಬಯಸುವ ಪ್ರತಿಯೊಬ್ಬನೂ ಜೀವಲೋಕಕ್ಕೆ ಸುಖ ನೀಡಬೇಕೆಂಬುದು ಅದರ ಪ್ರತಿಪಾದನೆ. ಇನ್ನೊಬ್ಬರದನ್ನು ಕಿತ್ತುಕೊಂಡಾಗಲಷ್ಟೆ ತಾನು ಸುಖಿಯಾಗಬಹುದೆನ್ನುವ ವಿಚಾರಧಾರೆಯಿಂದ ಅದು ವಿಭಿನ್ನ. ಎಷ್ಟೆಷ್ಟು ಸಂತೋಷ-ನೆಮ್ಮದಿಗಳನ್ನು ಸೃಷ್ಟಿಗೆ ಹಂಚುತ್ತೇವೆಯೋ ಅಷ್ಟಷ್ಟು ನಮ್ಮದಾಗುತ್ತದೆ.
ಇಂತಹ ಉದಾತ್ತ ಸಿದ್ಧಾಂತದ ಹಿನ್ನೆಲೆಯಲ್ಲಿ ಸೃಷ್ಟಿಸೇವೆಯನ್ನು ಧರ್ಮಾಚರಣೆಯ ಅಂಗವಾಗಿಸಿದೆ ನಮ್ಮ ಪರಂಪರೆ. ಭೀಷ್ಮ ಯುಧಿಷ್ಠಿರನಿಗೆ ಕೆರೆಗಳ ನಿರ್ಮಾಣದ ಕುರಿತು ಹೇಳುವ ಮಾತುಗಳು ಧರ್ಮದ ಈ ವೈಶಿಷ್ಟ್ಯವನ್ನು ಸ್ಪಷ್ಟಪಡಿಸುತ್ತವೆ.

"ಕೆರೆಗಳನ್ನು ಕಟ್ಟಿಸುವವನು ಮೂರುಲೋಕಗಳ ಗೌರವಕ್ಕೆ ಪಾತ್ರನಾಗುತ್ತಾನೆ. ಕೆರೆಗಳನ್ನು ನಿರ್ಮಿಸುವುದು ವಿಶ್ವಮೈತ್ರಿಯಂತೆ. ಏಕೆಂದರೆ ಅದು ಎಲ್ಲ ಪ್ರಾಣಿಗಳಿಗೂ ಬದುಕು ನೀಡುತ್ತವೆ. ಕಟ್ಟಿಸಿದ ಕೆರೆಯಲ್ಲಿ ವರ್ಷಕಾಲದಲ್ಲಿ ನೀರು ತುಂಬಿದ್ದರೆ ಸಾವಿರ ಗೋದಾನ ಮಾಡಿದ ಪುಣ್ಯ; ಹೇಮಂತ ಋತುವಿನಲ್ಲಿ ಜಲಸಮೃದ್ಧಿಯಿದ್ದರೆ ಬಂಗಾರವನ್ನೇ ದಕ್ಷಿಣೆಯಾಗಿ ನೀಡುವ ಯಜ್ಞವನ್ನು ಮಾಡಿದ ಪ್ರಯೋಜನ; ಶಿಶಿರ ಋತುವಿನಲ್ಲಿ ಕೆರೆ ತುಂಬಿದ್ದರೆ ಅಗ್ನಿಷ್ಟೋಮ ಯಜ್ಞ ಮಾಡಿದ ಲಾಭ; ವಸಂತ ಋತುವಿನಲ್ಲಿ ಜಲಭರಿತವಾಗಿದ್ದರೆ ಅತಿರಾತ್ರ ಯಾಗ ಮಾಡಿದ ಪುಣ್ಯ; ಬಿರು ಬೇಸಿಗೆಯಲ್ಲಿ ಕೆರೆ ದಾಹವನ್ನು ತಣಿಸಿದರೆ ಅಶ್ವಮೇಧ ಯಾಗ ಮಾಡಿದ ಮಹಾಫಲ. ಕೆರೆಯ ನೀರನ್ನು ಗೋವುಗಳು, ಮೃಗಗಳು, ಪಕ್ಷಿಗಳು ಮತ್ತು ಸಜ್ಜನರು ಕುಡಿದರೆ ಕಟ್ಟಿಸಿದವನ ಸಮಗ್ರ ವಂಶವೇ ಉದ್ಧಾರವಾಗುತ್ತದೆ."
ಇವು ಭೀಷ್ಮನ ಮಾತುಗಳು. ಸಾಮಾನ್ಯರ ಸಾಮರ್ಥ್ಯವನ್ನು ಮೀರಿದ ಮಹಾಯಾಗಗಳ ಪ್ರಯೋಜನ ಕೆರೆ ಕಟ್ಟಿಸುವುದರಿಲ್ಲಿದೆ ಎನ್ನುತ್ತಾ ಭೀಷ್ಮ ಅದರ ಹಿರಿತನವನ್ನು ಆಗಸದೆತ್ತರಕ್ಕೆ ಎರಿಸುತ್ತಾನೆ. ಎಂತಹ ಅದ್ಭುತವಲ್ಲವೇ?
ನಾವು ಕಟ್ಟಿಸಿದ ಕೆರೆಯಲ್ಲಿ, ಹಾರಿಹಾರಿ ಬಾಯಾರಿದ ಪುಟ್ಟಹಕ್ಕಿ ನೀರು ಕುಡಿದು ತಂಪಾದರೆ; ತಿರುತಿರುಗಿ ಬೆಂಡಾದ ಗೋವಿನ ಕರುವೊಂದು ನೀರು ಕುಡಿದು ದಣಿವಾರಿಸಿಕೊಂಡರೆ;
ನಡೆನಡೆದು ದಣಿದ ದಾರಿಹೋಕನೊಬ್ಬನ ಬಾಯಾರಿಕೆ ಇಂಗಿದರೆ; ಬಡರೈತನೊಬ್ಬ ತನ್ನ ಗದ್ದೆಗೆ ನೀರುಣಿಸಿ ಸಮೃದ್ಧ ಬೆಳೆಬೆಳೆದು ಕಣ್ಣಲ್ಲಿ ಜಿನುಗಿದ ನೆಮ್ಮದಿಯ ನೀರನ್ನು ಒರೆಸಿಕೊಂಡರೆ;........
ಅಹಾ, ಎಂಥ ಮಧುರ ಭಾವಗಳು!
Tuesday, 21 September 2010
ಬುದ್ಧಿ-ಮನಸ್ಸುಗಳ ನಿಲುಗಡೆ
ಕೆಲಕಾಲ ಕಳೆದಿದೆ. ಧೃತರಾಷ್ಟ್ರ ವಾನಪ್ರಸ್ಥಕ್ಕೆ ತೆರಳುವ ಮನಸ್ಸು ಮಾಡಿದ್ದಾನೆ. ಅವನೊಂದಿಗೆ ಗಾಂಧಾರಿ, ವಿದುರರೂ ಹೊರಟು ನಿಂತಿದ್ದಾರೆ. ಅಚ್ಚರಿಯೆಂದರೆ ರಾಜಮಾತೆ ಕುಂತಿ ಕೂಡ ವಾನಪ್ರಸ್ಥದ ನಿರ್ಣಯ ಮಾಡಿದ್ದಾಳೆ. ಕುಂತಿಗೆ ಮಾತ್ರ ಸಾಧ್ಯವಾಗುವ ಕಾರ್ಯವಿದು.
ವಾಸ್ತವವಾಗಿ ಕುಂತಿಗಿದು ನೆಮ್ಮದಿಯ ಕಾಲ. ಅಸಂಖ್ಯ ವರ್ಷಗಳ ಕಷ್ಟವಳಿದು ಸೌಖ್ಯ ಬದುಕನ್ನಾವರಿಸಿದೆ. ಅಕಾಲದಲ್ಲಿ ಪತಿಯ ಮರಣ. ಅದಿನ್ನೂ ಕುಂತಿಯ ಯೌವನದ ಕಾಲ. ಮಕ್ಕಳನ್ನು ಬೆಳೆಸುವುದಷ್ಟೇ ಅಲ್ಲ, ಅವರನ್ನು ಉಳಿಸಿಕೊಳ್ಳುವ ಸಂಕಷ್ಟ ಬೇರೆ. ಅರಗಿನ ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕುವಷ್ಟು ಭೀಭತ್ಸಕರ ಕ್ರೌರ್ಯ, ಅದೂ ಸ್ವಕೀಯರಿಂದಲೇ. ಕಾಡುಮೇಡಿನಲ್ಲಿ ಅಲೆದಾಟ. ಕೊನೆಗೊಮ್ಮೆ ಇಂದ್ರಪ್ರಸ್ಥ ಪಾಂಡವರದ್ದಾಯಿತು ಎಂದುಕೊಳ್ಳುತ್ತಿರುವಾಗಲೇ ಜೂಜಿನ ದೌರ್ಭಾಗ್ಯ. 'ಅಂತೂ ಇಂತೂ ಕುಂತಿಮಕ್ಕಳಿಗೆ ವನವಾಸ' ಎನ್ನುವ ಗಾದೆಮಾತಿಗೆ ಎಣೆಯಾಗುವಂತಹ ಬದುಕು ಮಕ್ಕಳದ್ದು. ಮತ್ತೊಂದು ಯುದ್ಧ.
ಈಗಿನದ್ದು ಸಮೃದ್ಧ ತಂಪಿನ ಕಾಲ. ಶೇಷವೂ ಇಲ್ಲದಂತೆ ಶತ್ರುನಾಶವಾಗಿದೆ. ಮಗ ಯುಧಿಷ್ಠಿರ ರಾಜನಾಗಿದ್ದಾನೆ. ಕುಂತಿ ಈಗ ರಾಜಮಾತೆ. ಬೇರೆ ಯಾರೇ ಆಗಿದ್ದರೂ ಅರಮನೆಯಲ್ಲಿ ಉಂಡುಟ್ಟು ಸುಖವಾಗಿರುತ್ತಿದ್ದರು. ಕುಂತಿ ಮತ್ತೆ ಕಾಡಿನ ದಾರಿ ಹಿಡಿದಿದ್ದಾಳೆ. ಅದೂ ವಾನಪ್ರಸ್ಥಕ್ಕೆ. ವಾನಪ್ರಸ್ಥವೆಂದರೆ ಬಹು ಕಷ್ಟದ ಬದುಕು. ಅದು ವನವಿಹಾರವಲ್ಲ. ಕಾಡಿನ ನಡುವೆ ಪುಟ್ಟದೊಂದು ಅರಮನೆ ಕಟ್ಟಿಕೊಂಡು ಆಳುಕಾಳುಗಳನ್ನು ಇಟ್ಟುಕೊಂಡು ಬದುಕುವುದೂ ಅಲ್ಲ. ಕುಟೀರದಲ್ಲಿ ವಾಸ. ನೆಲದ ಮೇಲೆ ಮಲಗುವುದು. ಊಟಕ್ಕೆ ಪಂಚಭಕ್ಷ್ಯ ಪರಮಾನ್ನಗಳಿಲ್ಲ. ಗೆಡ್ಡೆಗೆಣಸುಗಳನ್ನು ಆಯ್ದುಕೊಂಡು ತಿನ್ನಬೇಕು. ನದಿಯ ತಣ್ಣೀರೇ ಸ್ನಾನಕ್ಕೆ. ಹೇಳಿಕೇಳಿ ವೃದ್ಧಾಪ್ಯದ ಅವಸ್ಥೆ. ಹೀಗೆ ಸಾಯುವ ತನಕ ದೇಹವನ್ನು ಸವೆಸಿ, ಒಂದುದಿನ ದೇಹತ್ಯಾಗ ಮಾಡಬೇಕು. ರಾಜಮಾತೆ ಶೇಷಾಯುಷ್ಯಕ್ಕೆ ಆರಿಸಿಕೊಂಡಿದ್ದು ಇಂತಹ ಬದುಕನ್ನು.
ಧರ್ಮ ತೇ ಧೀಯತಾಂ ಬುದ್ಧಿಃ ಮನಸ್ತು ಮಹದಸ್ತು ಚ

ಹೌದು. ಬದುಕಿನ ಸೌಖ್ಯಕ್ಕೆ, ಸೌಂದರ್ಯಕ್ಕೆ, ಸಮೃದ್ಧಿಗೆ ಈ ಎರಡೇ ಸಾಕು. ಯಾಕೆಂದರೆ ಬದುಕಿನ ಒಳಿತು-ಕೆಡುಕುಗಳಿಗೆ ನಮ್ಮ ಬುದ್ಧಿ ಕಾರಣ. ಅದು ಸರಿ-ತಪ್ಪುಗಳನ್ನು ಯೋಗ್ಯವಾಗಿ ಗ್ರಹಿಸಿದರೆ ಬದುಕು ಗೆದ್ದಿತೆಂದೇ ಅರ್ಥ. ಹಾಗೆಯೇ ಮನಸ್ಸು. ಅದು ಸಂಕುಚಿತಗೊಂಡಷ್ಟೂ ಬದುಕು ಸಣ್ಣದಾಗುತ್ತದೆ; ಅದು ವಿಶಾಲವಾದಷ್ಟೂ ಜೀವನ ವಿಶಾಲವಾಗುತ್ತದೆ.
Wednesday, 15 September 2010
ಸುಖವೇತಕೆ? ದುಃಖವದೇತಕೆ?
ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |
ಚಕ್ರವತ್ಪರಿವರ್ತಂತೇ ದುಃಖಾನಿ ಚ ಸುಖಾನಿ ಚ ||
ಸುಖ-ದುಃಖಗಳು ಚಕ್ರದಂತೆ ಸುತ್ತುತ್ತಲೇ ಇರುತ್ತವೆ ಎನ್ನುತ್ತದೆ ಈ ಅನುಭವಿಯ ಮಾತು.
ಸುಖ, ಗೆಲುವುಗಳು ನಮ್ಮನ್ನು ಬೀಗಿವಂತೆ ಮಾಡಿದರೆ ದುಃಖ, ಸೋಲುಗಳು ಕಂಗೆಡುವಂತೆ ಮಾಡುತ್ತವೆ. ಸಂತೋಷವಿದ್ದಾಗ ಎಲ್ಲವೂ ಸುಂದರವೆನಿಸಿದರೆ ದುಃಖ ಅದೆಲ್ಲವನ್ನೂ ಭೀಕರಗೊಳಿಸುತ್ತದೆ. ಸುಖದಲ್ಲಿದ್ದಾಗ ರುಚಿಯೆನಿಸಿದ ಊಟ ದುಃಖದಲ್ಲಿ ಬೇಡವೇ ಬೇಡವೆನಿಸುತ್ತದೆ. ಸುಖದಲ್ಲಿದ್ದಾಗ ಸಂಗಾತಿಯ ಮಾತು ಮಧುರ ಸಂಗೀತವೆನಿಸಿದರೆ ದುಃಖದಲ್ಲಿದ್ದಾಗ ಅದು ಕರ್ಣಕಠೋರವೆನಿಸಿಬಿಡುತ್ತದೆ. ಸುಖದಲ್ಲಿದ್ದಾಗ ಹತ್ತಿರ ಬಂದ ಮಗುವನ್ನು ಬಾಚಿ ತಬ್ಬಿಕೊಳ್ಳುತ್ತೇವಾದರೆ ದುಃಖದಲ್ಲಿದ್ದಾಗ
ಗಮನಿಸಿಯೂ ಗಮನಿಸದಂತಿದ್ದುಬಿಡುತ್ತೇವೆ. ಸುಖದಲ್ಲಿದ್ದಾಗ ಸ್ವಚ್ಛವಾದ ಗರಿಗರಿ ಬಟ್ಟೆ ಉಡುತ್ತಿದ್ದವರು ದುಃಖದಲ್ಲಿದ್ದಾಗ ಹೇಗಾದರೆ ಹಾಗೆ ಇರುತ್ತೇವೆ. ಆಗಾಗ ಬದುಕು ಹೀಗೇಕೆ ಎಂದುಕೊಳ್ಳುತ್ತಿರುತ್ತೇವೆ.
ಅವರು ನಮ್ಮಷ್ಟು ಒಳ್ಳೆಯವರಲ್ಲ; ನಮ್ಮಷ್ಟು ಬೇರೆಯವರಿಗೆ ಸಹಾಯ ಮಾಡಿಲ್ಲ; ದಾನ-ಧರ್ಮವಂತೂ ಅವರ ವಂಶದಲ್ಲೇ ಇಲ್ಲ; ದೇವರಿಂದ ಅವರು ಮಾರುದೂರು; ಆದರೂ ಅವರು ಸುಖವಾಗಿದ್ದಾರೆ; ಅವರಿಗೆ ಕಷ್ಟಗಳೇ ಬರುವುದಿಲ್ಲ; ನಮಗೆ ಮಾತ್ರ ಕಷ್ಟ ಎಂದು ಇನ್ಯಾರನ್ನೋ ನೋಡಿ ಅಂದುಕೊಳ್ಳುತ್ತೇವೆ. ನಾವು ತಪ್ಪು ಮಾಡದೆಯೂ ಕಷ್ಟ ಪಡುವುದು, ಇನ್ನೊಬ್ಬರು ತಪ್ಪು ಮಾಡಿಯೂ ಸುಖವಾಗಿರುವುದು ನಮ್ಮ ಕಷ್ಟಗಳನ್ನು ಮತ್ತಷ್ಟು ಅಸಹನೀಯಗೊಳಿಸಿಬಿಡುತ್ತದೆ. ಕೆಲವೊಮ್ಮೆ ನಮಗೆ ಕಷ್ಟ ಕೊಟ್ಟವರೇ ಸುಖವಾಗಿರುವುದನ್ನು ಕಂಡಾಗಲಂತೂ ದೈವದ ಮೇಲೆಯೇ ಮುನಿಸಿಕೊಳ್ಳುತ್ತೇವೆ.
ಆದರೆ ವಾಸ್ತವವೇ ಬೇರೆ. ಸುಖ-ದುಃಖಗಳೆರಡೂ ನಮ್ಮದೇ ಕೂಸುಗಳು. ನಾವನುಭವಿಸುತ್ತಿರುವ ಸುಖ-ದುಃಖಗಳ ಅಪ್ಪನೂ ನಾವೇ, ಅಮ್ಮನೂ ನಾವೇ. ನಾವು ಮಾಡಿದ್ದನ್ನೇ ನಾವನುಭವಿಸುತ್ತೇವೆ. ಸೃಷ್ಟಿಯ ಜೀವನಸೂತ್ರದಲ್ಲಿ ತಪ್ಪು ಮಾಡಿದವನಿಗೆ ಶಿಕ್ಷೆ ನಿಶ್ಚಿತ, ತಪ್ಪು ಮಾಡದವನಿಗೆ ರಕ್ಷೆ ನಿಶ್ಚಿತ. ಇಂದು ಅನುಭವಿಸುತ್ತಿರುವ ನೋವಿಗೆ ಈ ಜನ್ಮದಲ್ಲಿ ಕಾರಣ ಕಾಣದಿದ್ದರೆ ಪೂರ್ವಜನ್ಮದಲ್ಲಿ ಅಂತಹ ತಪ್ಪು ನಡೆದಿದೆ ಎಂದರ್ಥ. ನಾವೇ ಹಿಂದಿನ ಜನ್ಮಾಂತರದಲ್ಲಿ ಮಾಡಿದ ಕರ್ಮವನ್ನು ಈ ಜನ್ಮದಲ್ಲಿ ಅನುಭವಿಸುತ್ತಿರುತ್ತೇವೆ ಅಷ್ಟೆ. ಇನ್ನೊಬ್ಬ ಈ ಜೀವನದಲ್ಲಿ ಸುಖಿಯೆನಿಸಿದರೆ ಅದವನ ಹಿಂದಿನ ಜನ್ಮದ ಕರ್ಮಪಾಕವಷ್ಟೆ.
ಪರೋ ದದಾತೀತಿ ಕುಬುದ್ಧಿರೇಷಾ |
ಅಹಂ ಕರೋಮೀತಿ ವೃಥಾಭಿಮಾನಃ
ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ ||
Tuesday, 2 March 2010
ಅವನಿಗಿರಲಿ ಅವನದೇ ವಿಧಾನ
ನಾನು ಕಲಿಯುವಂತೆ
ನೀವು ಕಲಿಸಬಲ್ಲಿರಾ?
-ವಿದ್ಯಾರ್ಥಿ
ಹೀಗೊಂದು ಎಸ್.ಎಮ್.ಎಸ್. ಇನ್ ಬಾಕ್ಸ್ ನಲ್ಲಿ ಬಂದು ಕುಳಿತಿತ್ತು. ಹಿಂದೆ ಮುಂದೆ ಏನೂ ಇಲ್ಲದೆ ಹೀಗೆ ಕಳಿಸಿದ್ದು ಓರ್ವ ಶಿಕ್ಷಕರೇ ಆದ್ದರಿಂದ ಸಂದೇಶ ಚಿಂತನೆಗೆ ಹಚ್ಚಿತು. ನಿತ್ಯ ಪಾಠ ಮಾಡಿ ನಿರೀಕ್ಷಿತ ಪರಿಣಾಮವನ್ನು ವಿದ್ಯಾರ್ಥಿಯಲ್ಲಿ ಕಾಣದೆ, ಅವನ ಅಭಿಪ್ರಾಯವನ್ನು ಹೀಗೆ ಗ್ರಹಿಸಿರಬೇಕೆನ್ನಿಸಿತು. ಶಿಕ್ಷಣ ಕ್ಷೇತ್ರದ ನಿಜವಾದ ಸಮಸ್ಯೆಯಿರುವುದೇ ಇಲ್ಲಿ.
ನಾವು ನಮ್ಮಂತೆ ಕಲಿಸುತ್ತಿದ್ದೇವೆ. ಅವನಂತೆ ಕಲಿಸುತ್ತಿಲ್ಲ. ಅವನಂತೆ ಕಲಿಸಿದ್ದರೆ ಕಲಿಕೆಯಲ್ಲಿ ಹಿಂದುಳಿಯುವ ಅಥವಾ ಫೇಲ್ ಆಗುವ ಸಂಭವವಿರುತ್ತಿರಲಿಲ್ಲ. ಅಥವಾ ಪ್ರಮಾಣವಂತೂ ಕಡಿಮೆಯಿರುತ್ತಿತ್ತು. ಇದೇ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಸ ಹೊಸ ಕ್ರಮಗಳನ್ನು ಅನ್ವೇಷಿಸಿ ಕ್ರಿಯಾರೂಪಕ್ಕೆ ತರಲು ಪ್ರಯತ್ನಿಸುತ್ತಿವೆ.ಆದರೆ ಅದು ನಿರೀಕ್ಷಿತ ಪರಿಣಾಮವನ್ನು ಕೊಟ್ಟಂತಿಲ್ಲ.
ಜಗತ್ತಿನ ಪ್ರತಿವ್ಯಕ್ತಿಯೂ ಭಿನ್ನ. ಒಬ್ಬನಿದ್ದಂತೆ ಇನ್ನೊಬ್ಬನಿಲ್ಲ. ಜೀವನದ ಗುರಿ, ಶೈಲಿ, ಆಹಾರ, ಮಾತು, ನಡೆ, ನಡವಳಿಕೆ, ಬಟ್ಟೆಯ ಆಯ್ಕೆ, ಘಟನೆಗಳಿಗೆ ಪ್ರತಿಕ್ರಿಯಿಸುವ ಕ್ರಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಾಗೆಯೇ ಗ್ರಹಿಕೆಯ ವಿಧಾನ ಮತ್ತು ಸಮಯದಲ್ಲಿಯೂ ಬದಲಾವಣೆ ಇರುತ್ತದೆ. ಸ್ಥೂಲವಾಗಿ ಕೆಲವು ಗುಂಪುಗಳಲ್ಲಿ ಒಂದಿಷ್ಟು ಸಮಾನಾಂಶಗಳು ಕಂಡುಬರುತ್ತವಾದರೂ ಸೂಕ್ಷ್ಮವಾದ ವ್ಯತ್ಯಾಸಗಳಿರುತ್ತವೆ. ಒಂದು ದೇಶದ ಜನ, ಒಂದು ಪ್ರದೇಶದ ಜನ, ಒಂದು ಸಮುದಾಯದ ಜನ, ಒಂದು ವಯೋಮಾನದ ಜನ......... ಹೀಗೆ ಇಂತಹ ಗುಂಪುಗಳು ಕೆಲವಷ್ಟರ ಮಟ್ಟಿಗೆ ಏಕರೂಪವಾಗಿರುತ್ತವೆ. ಆದರೆ ಒಂದೇ ಮನೆಯಲ್ಲಿ ಹುಟ್ಟಿ ಬೆಳೆದ ಸ್ವಂತ ಅಣ್ಣ-ತಮ್ಮಂದಿರಲ್ಲೇ ಕಲಿಕೆಯಲ್ಲಿ ಮುಂದಿರುವ ಹಾಗೂ ಹಿಂದಿರುವ ಪರಿಸ್ಥಿತಿಯನ್ನು ಕಾಣುತ್ತೇವೆ. ಹಾಗಾಗಿ ಕಲಿಕಾ ವಿಧಾನವನ್ನು ಏಕರೂಪಗೊಳಿಸಲು ಸಾಧ್ಯವಿಲ್ಲ. ಸಮೂಹ ಶಿಕ್ಷಣದ ಇಂದಿನ ಬಹುವ್ಯಾಪಕ ವ್ಯವಸ್ಥೆಯಲ್ಲಿ ವಿಧಾನದ ಏಕರೂಪತೆ ಅನಿವಾರ್ಯ ಅನ್ನುವ ಅಭಿಪ್ರಾಯವೂ ಪ್ರಾಯೋಗಿಕತೆಯ ಹಿನ್ನೆಲೆಯಲ್ಲಿ ತಳ್ಳಿಹಾಕುವಂತದ್ದಲ್ಲ.
ಆದ್ದರಿಂದಲೇ ಶಿಕ್ಷಣದ ಯಶಸ್ಸು ಮತ್ತೆ ಶಿಕ್ಷಕನ ಕೈಯಲ್ಲೇ ಬಂದು ನಿಲ್ಲುತ್ತದೆ. ಶಿಕ್ಷಣವನ್ನು ರೂಪಿಸುವ ತಜ್ನರು, ಕ್ರಿಯಾರೂಪಗೊಳಿಸುವ ಅಧಿಕಾರಿಗಳು ಮಾಡಲಾಗದ್ದನ್ನು ಶಿಕ್ಷಕ ಮಾಡಬೇಕಾಗುತ್ತದೆ. ಆಣೆಕಟ್ಟೆಯಿಂದ ನೀರನ್ನು ಹರಿಸಲಾಗುತ್ತದೆ. ಆ ಕಾಲುವೆಯಿಂದ ನಮ್ಮ ಹೊಲದ ಕಿರುಗಾಲುವೆಗೂ ನೀರು ಹರಿದು ಬರುತ್ತದೆ. ಒಬ್ಬ ಯೋಗ್ಯ ಕೃಷಿಕ ಅದನ್ನು ನೋಡುತ್ತಾ ಕಾಲು ಚಾಚಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರತಿ ಗಿಡದ ಬುಡವನ್ನೂ ಗಮನಿಸುತ್ತಾನೆ; ನೀರು ಸರಿಯಾಗಿ ಸಂದಿದೆಯೇ ಎಂದು. ಹಾಗಿಲ್ಲದಿದ್ದರೆ ಅದರೆಡೆಗೆ ನೀರು ಹರಿಯುವಂತೆ ಮಾಡುತ್ತಾನೆ. ಯಾವ ಗಿಡಕ್ಕೆ, ಯಾವ ಬೆಳೆಗೆ, ಯಾವ ಮಣ್ಣಿಗೆ, ಯಾವ ಕಾಲಕ್ಕೆ ಎಷ್ಟು ನೀರು ಬಿಡಬೇಕೆನ್ನುವುದನ್ನು ತನ್ನ ಅನುಭವದಿಂದ ನಿರ್ಣಯಿಸಿಕೊಂಡಿರುತ್ತಾನೆ. ಶಿಕ್ಷಕನೂ ಹೀಗೆ ಮಾಡಿದಾಗ ಯಶಸ್ಸು ಸಾಧ್ಯ.
ಅದರ ಕುರಿತಾದ ಒಂದಷ್ಟು ಸಲಹೆಗಳು ಇಲ್ಲಿವೆ-
*** ತರಗತಿಯ ಯಾವ ವಿದ್ಯಾರ್ಥಿಗೆ ಯಾವ ವಿಷಯವನ್ನು ಯಾವ ವಿಧಾನವನ್ನು ಅವಲಂಬಿಸಿ ಹೇಗೆ ಮನದಟ್ಟು ಮಾಡಬೇಕೆಂದು ಗುರುತಿಸಿಕೊಳ್ಳಬೇಕು.
*** ಪ್ರತಿ ವಿದ್ಯಾರ್ಥಿಯ ಕೌಟುಂಬಿಕ ಹಿನ್ನೆಲೆ, ಭಾವನಾತ್ಮಕ ಸ್ಥಿತಿ, ಗ್ರಹಿಕೆಯ ಮಟ್ಟ, ಗ್ರಹಿಕೆಗೆ ತೆಗೆದುಕೊಳ್ಳುವ ಸಮಯಗಳನ್ನು ಅನುಸರಿಸಿ ಅವನಿಗೆ ಕಲಿಸಲು ಅವನದ್ದೇ ಆದ ವಿಧಾನವನ್ನು ರೂಪಿಸಿಕೊಳ್ಳಬೇಕು.
*** ಆ ವಿಧಾನವನ್ನು ನಿರಂತರ ಪ್ರಯೋಗ ಮತ್ತು ಪರಿಶೀಲನೆಗೆ ಒಳಪಡಿಸಿಕೊಳ್ಳಬೇಕು.
*** ಬಿಗುಮಾನ ಬಿಟ್ಟು ವಿದ್ಯಾರ್ಥಿಯೊಂದಿಗೆ " ನಾನು ಕಲಿಸಿದ್ದು ತಿಳಿಯಿತೇ? ಈ ವಿಧಾನ ಏನನ್ನಿಸಿತು? " ಎನ್ನುವ ಮಾತುಕತೆ ಇಟ್ಟುಕೊಳ್ಳಬೇಕು.
*** ಅದೇ ವಿದ್ಯಾರ್ಥಿಗೆ ಬೇರೆ ವಿಷಯವನ್ನು ಕಲಿಸುವ ಸಹ ಶಿಕ್ಷಕರೊಂದಿಗೆ ಚರ್ಚಿಸಿ, ಅಭಿಪ್ರಾಯ ವಿನಿಮಯ ಮಾಡಿಕೊಂಡು ವ್ಯಕ್ತಿಗತ ಕಲಿಕಾ ವಿಧಾನವನ್ನು ಪರಿಷ್ಕರಿಸಿಕೊಳ್ಳಬೇಕು.
ಹೀಗಾದಾಗ
" ನಾವು ಕಲಿಸಿದಂತೆ ಕಲಿಯಲಾಗದ ವಿದ್ಯಾರ್ಥಿಗೆ ಅವನು ಕಲಿಯುವಂತೆ ಕಲಿಸಲು ಸಾಧ್ಯ "