Monday 29 November, 2010

ಸಂಗತ


"ಯದ್ಯದಾಚರತಿ ಶ್ರೇಷ್ಠಃ
ತತ್ತದೇವೇತರೇ ಜನಾಃ|
ಸಯತ್ಪ್ರಮಾಣಂ ಕುರುತೇ
ಲೋಕಸ್ತದನುವರ್ತತೇ||
ಮಹಾತ್ಮರಾದವರನ್ನು ಜನರು ಅನುಸರಿಸುವುದು ಲೋಕರೂಢಿ. ಈ ಹಿಂದೆ ನೂರಾರು ಮಂದಿ ತಮ್ಮ ಜೀವನದ ಸಿಹಿಕಹಿಗಳನ್ನು ಬರೆದು ಹತ್ತು ಮಂದಿಗೆ ತಿಳಿಸಿ ಹಂಚಿಕೊಂಡಿದ್ದಾರೆ. ಲಿಖಿತ ರೂಪ ಕೊಡದ ಹಿರಿಯರೂ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹಿರಿಯರ ಕಥೆಗಳೊಂದಿಗೆ ತಮ್ಮ ಜೀವನಾನುಭವಗಳನ್ನೂ, ಕಲ್ಪನೆಗಳನ್ನೂ ತಿಳಿಸಿ ಅವರ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ನನ್ನ ತಂದೆ ಜೀವನದುದ್ದಕ್ಕೂ ತನ್ನ ಜೀವನದ ಏರಿಳಿತದ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರ ಪರಿಣಾಮವಾಗಿ ನಮ್ಮ ಜೀವನವಿಧಾನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಇತಿಹಾಸ ಓದುವ, ಕಲಿಸುವ ಗುರಿ ಇದೇ ತಾನೆ?

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆತ್ತವರು, ಮಕ್ಕಳು ಜೊತೆಯಲ್ಲಿದ್ದು ಅನುಭವ ಹಂಚಿಕೊಳ್ಳುವ ಕಾಲಾವಕಾಶ ಕಡಿಮೆ. ಅಪ್ಪ-ಅಮ್ಮನ ಡೈರಿನೋಡಿ ಮಕ್ಕಳು ತಿಳಿದುಕೊಳ್ಳುವ ಕಾಲವೂ ಮರೆಯಾಗಿ ಅಪ್ಪನ ಗಣಕಯಂತ್ರ-ಈ ಮೇಲ್ ಗಳ ಮೂಲಕ ಮಾಹಿತಿ ಪಡೆದುಕೊಳ್ಳುವ ಕಾಲ ಇದಿರಾಗುತ್ತಿರುವ ಈ ಕಾಲದಲ್ಲಿ ನಮ್ಮ ಜೀವನಾನುಭವಗಳನ್ನು ಹಿತೈಷಿಗಳೊಂದಿಗೆ ಹಂಚಿಕೊಳ್ಳಲು ಇಂತಹ ಜೀವನಕಥೆಗಳು ಸಹಾಯಕವಲ್ಲವೇ?"

ಇದು ಶ್ರೀ ಎಸ್. ಈಶ್ವರ ಭಟ್, ಎಳ್ಯಡ್ಕ ಅವರು ತಮ್ಮ 'ದೃಷ್ಟ-ಅದೃಷ್ಟ' ಪುಸ್ತಕದ ಮುನ್ನುಡಿಯಲ್ಲಿ ಹೇಳುವ ಮಾತು. 'ದೃಷ್ಟ-ಅದೃಷ್ಟ' ಶ್ರೀಭಟ್ಟರ ಆತ್ಮಚರಿತ್ರೆ. ಒಮ್ಮೆ ಓದಲೇಬೇಕಾದ ಪುಸ್ತಕವಿದು.

ಯಾವುದೇ ವ್ಯಕ್ತಿಯ ಆತ್ಮಚರಿತ್ರೆಯೆಂದರೆ ಸಹಜವಾಗಿಯೇ ಅದು ಆತ್ಮಸ್ತುತಿಯ ಆಗರವಾಗಿರುತ್ತದೆ. ಓದುಗ ಅಸಹನೀಯ ವೇದನೆಯನ್ನು ಅನುಭವಿಸುವಂತಿರುತ್ತದೆ. ಯಾಕೆಂದರೆ ವ್ಯಕ್ತಿ ತನ್ನನ್ನು ದೊಡ್ಡವನನ್ನಾಗಿಸಿಕೊಳ್ಳುವ ಪ್ರಯತ್ನವನ್ನು ಅಲ್ಲಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ 'ದೃಷ್ಟ-ಅದೃಷ್ಟ' ಅದಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿ ಈಶ್ವರ ಭಟ್ಟರು ತಮ್ಮನ್ನು ದೊಡ್ಡವರನ್ನಾಗಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಪ್ರಾಥಮಿಕ ಶಾಲೆಗೆ ಹೋಗುವ ಯಾವ ಸಾಧ್ಯತೆಯೂ ಇಲ್ಲದ ತಮ್ಮ ದುರ್ಭರ ಬಾಲ್ಯದ ಸಂಕಟಗಳನ್ನೆದುರಿಸಿ ಮುಖ್ಯಾಧ್ಯಾಪಕರಾಗುವವರೆಗಿನ ಅವರ ಯಶೋಗಾಥೆ ಓದುಗನ ಮನದಲ್ಲಿ ಅವರನ್ನು ದೊಡ್ಡವರನ್ನಾಗಿಸುತ್ತದೆ.

('ತ್ರಿವಿಕ್ರಮ' ಪತ್ರಿಕೆಯ ಅಂಕಣಬರಹ)

2 comments:

Anonymous said...

thank you for inform sir....
i have to read this book.....

ಜಗದೀಶಶರ್ಮಾ said...

ಖಂಡಿತಾ ಓದು...