Friday 26 November, 2010

ಸಾಮ್ರಾಜ್ಯದಲ್ಲಿ 'ಸಾಮ್ರಾಟ್' ಇನ್ನಿಲ್ಲ

ಸಾಮ್ರಾಟ್ ಇನ್ನಿಲ್ಲ. ಶ್ರೀಮಠದ ಗೋಲೋಕ ರಾಜನಿಲ್ಲದ ರಾಜ್ಯವಾಗಿದೆ. ಸಾಮ್ರಾಟನನ್ನು ಕಂಡವರು, ಪ್ರೀತಿಸಿದವರು ಅವನಿಲ್ಲದ ಅಮೃತಧಾರಾ ಗೋಲೋಕವನ್ನು ಕಲ್ಪಿಸಿಕೊಳ್ಳಲಾರರು. ಅವನ ಇರುವಿಕೆಯೇ ಹಾಗಿತ್ತು. ಅವನು ಮಲಗಿದರೂ, ನಿಂತರೂ, ನಡೆದಾಡಿದರೂ, ಮುಕುಟ ಧರಿಸಿದ ಮಹಾರಾಜನಂತೆ ಕಾಣುತ್ತಿದ್ದ. ಅವನನ್ನು ನೋಡುವುದೇ ಸೊಬಗು. ಗೋಲೋಕದ ವೀಕ್ಷಕರಂತೂ ಒಟ್ಟು ಗೋಲೋಕವನ್ನು ನೋಡಿದಷ್ಟು ಹೊತ್ತು ಸಾಮ್ರಾಟ್ ಮುಂದೂ ನಿಂತಿರುತ್ತಿದ್ದರು.

೨೦೦೭ ಏಪ್ರಿಲ್ ನಲ್ಲಿ ನಡೆದ ಚಾರಿತ್ರಿಕ ವಿಶ್ವಗೋಸಮ್ಮೇಳನದಲ್ಲಿ ಶ್ರೀಶ್ರೀಗಳವರ ಅನಂತರದ ಕೇಂದ್ರಬಿಂದು ಸಾಮ್ರಾಟನೇ ಆಗಿದ್ದ. ಹೆಚ್ಚಾಗಿ ಭವ್ಯ-ವಿಶಾಲ ಸಭಾಂಗಣದಲ್ಲಿ ನಿಂತಿರುತ್ತಿದ್ದ ಅವನನ್ನು ನೋಡುವುದೇ ಜನರಿಗೆ ಹಬ್ಬವಾಗಿತ್ತು. ಅಂತಹ ಅದ್ಭುತ ಆಕಾರವನ್ನು ದೂರದಿಂದ ಕಂಡು ಬೆಚ್ಚಿದವರೂ ಅವನ ಶಾಂತಗಂಭೀರ ಸ್ತಿಮಿತತೆಯನ್ನು ಕಂಡು ಅಚ್ಚರಿ ತಾಳುತಿದ್ದರು. ಭಾವುಕರಂತೂ ಸಮ್ಮೇಳನಕ್ಕೆ ಬಂದ ದೈವಪ್ರತಿನಿಧಿ, ಪ್ರತ್ಯಕ್ಷ ನಂದಿ ಎಂದು ಕೈಮುಗಿದಿದ್ದರು.

ಸಾಮ್ರಾಟ್ ಮೂಲತಃ ಗುಜರಾತಿನವನು. ಅಹಮದಾಬಾದ್‌ನ ಶ್ರೀಜಗನ್ನಾಥ ಮಂದಿರದ ಗೋಶಾಲೆಯಲ್ಲಿದ್ದವ. ಅಲ್ಲಿದ್ದಾಗ ಅವನ ಹೆಸರು ಸಾಮ್ರಾಟ್ ಎಂದೂ ಅಲ್ಲ. ಅವನಾಗ ಸಾಮ್ರಾಟನೂ ಅಲ್ಲ. ಗಾಡಿ ಎಳೆಯುವ ಸಾಮಾನ್ಯ ಎತ್ತು. ಅಲ್ಲಿಗೆ ಚಿತ್ತೈಸಿದ್ದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳವರ ಕಣ್ಣಿಗೆ ಈ ಚೆಲುವಾಂತ ಚೆನ್ನಿಗ ಕಾಣಸಿಕ್ಕಿದ. ಪಾಮರ ಕಣ್ಣು ಗುರುತಿಸದ ಅವನ ಹಿರಿಮೆಯನ್ನು ಆ ಕಣ್ಣು ಗುರುತಿಸಿತು. ಶ್ರೀಶ್ರೀಗಳ ಸೂಚನೆಯಂತೆ ಗಾಡಿ ಎಳೆಯುವ ಈ ಸಾಮಾನ್ಯ ಎತ್ತು ಶ್ರೀಮಠಕ್ಕೆ ಬಂತು.

ಪರಮಪೂಜ್ಯರು ಅವನನ್ನು ಸಾಮ್ರಾಟ್ ಎಂದರು. ಅವನ ಹೆಸರಷ್ಟೇ ಅಲ್ಲ, ಅವನು ಸಾಮ್ರಾಟನೇ ಆದ ಗೋಪ್ರೇಮಿಗಳ ಹೃದಯದಲ್ಲಿ. ಸಾಮ್ರಾಟ್ ಬಂದ ಕೆಲವೇ ದಿನಕ್ಕೆ ವಿಶ್ವಗೋಸಮ್ಮೇಳನ. ಅದರ ಮೌಲ್ಯವನ್ನೇ ಸಾಮ್ರಾಟ್ ಹೆಚ್ಚಿಸಿಬಿಟ್ಟ. ಅನಂತರದ್ದು ಅವನ ವಿಜೃಂಭಣೆಯ ಇತಿಹಾಸ. ಶ್ರೀಮಠದ ಕಾಮದುಘಾದ ಮೂಲಪುರುಷ ಗಾಂಭೀರ್ಯವೇ ಮೈವೆತ್ತ ಮಹಾನಂದಿಯನ್ನೂ ಮೀರಿಸುವ ಜನಪ್ರಿಯತೆ ಅವನದಾಗಿಬಿಟ್ಟಿತ್ತು. ಎತ್ತರದ ಅವನ ಕೋಡುಗಳ ವಿನ್ಯಾಸ, ಅದನ್ನು ಹೊತ್ತ ಅವನ ನೋಟ, ನಡೆ ಎಲ್ಲವೂ ಎಲ್ಲರ ಮನಸ್ಸನ್ನು ಸೆರೆಹಿಡಿದವು.

ಅಂತಹ ಸಾಮ್ರಾಟ್ ಇನ್ನಿಲ್ಲವಾದ. ಕೆಲ ದಿನಗಳ ಹಿಂದೆಯಷ್ಟೇ ಆಕಸ್ಮಿಕವಾಗಿ ಬಿದ್ದು ಒಂದು ಕೋಡನ್ನು ಮುರಿದುಕೊಂಡಿದ್ದೇ ನೆವವಾಯಿತು. ಅಲ್ಲಿಂದಲೇ ಸ್ವಲ್ಪ ಅನಾರೋಗ್ಯ ಅವನನ್ನು ಕಾಡುತ್ತಲೇ ಇತ್ತು. ಅಂತೂ ೨೨ರ ಹರೆಯದಲ್ಲಿ ಈ ಜನ್ಮ ಮುಗಿಸಿದ. ಇನ್ನು ಅವನ ನೆನಪಷ್ಟೇ...

"ಪ್ರಿಯ ಸಾಮ್ರಾಟ್, ಉನ್ನತ ಲೋಕದಲ್ಲಿ ನೀನಿರುವಿ. ಮತ್ತೆ ಬಾ ಈ ಕರಾಳ ಲೋಕಕ್ಕೆ ಎಂದು ಕರೆಯಲಾರೆವು. ಏಕೆಂದರೆ ನಾವು ಆಳುತ್ತಿರುವ ಈ ಪ್ರಪಂಚ ನಿನ್ನ ವಂಶಕ್ಕೆ ನಿರ್ಭೀತಿಯಿಂದ ಬದುಕಲು ಯೋಗ್ಯವಾಗಿಲ್ಲ. ಆದರೆ ನಿನ್ನಲ್ಲಿ ನಮ್ಮ ಪ್ರಾರ್ಥನೆ ಇಷ್ಟೇ....

ಅಲ್ಲಿಂದಲೇ ನಮ್ಮನ್ನು ಹರಸು. ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ನಮಗಾಗಿ ವರ ಕೇಳಿಕೊಳ್ಳಲು ನಾವು ಸಮರ್ಥರು. ವರ ಬೇಡ. ನಿನ್ನ ವಂಶದ ರಕ್ಷಣೆಯ ಮನಸ್ಸು ನಮ್ಮದಾಗಲಿ; ಅದಕ್ಕೆ ಬೇಕಾದ ಬುದ್ಧಿಬಲ-ಬಾಹುಬಲಗಳು ನಮ್ಮದಾಗಲಿ; ಮನುಷ್ಯರಲ್ಲಿ ಮನುಷ್ಯತ್ವವಾದರೂ ಉಳಿಯಲಿ"

('ಧರ್ಮಭಾರತಿ'ಮಾಸ ಪತ್ರಿಕೆಯ ಸಂಪಾದಕ ಬರಹ.)

4 comments:

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

athyanta samayochita mattu barayale bekada baraha nijakku enannu kaledukondiddu anta iga arthavaaguttide.. samratana samtati saviravaagali shrigala karune gou vamshakke nirantaravaagali . navu sadaa avaromdige.

ಜಗದೀಶಶರ್ಮಾ said...

ಹೌದು, ಸಾವಿರ ಸಾಮ್ರಾಟರು ಬೇಕು.


ಸ್ಪಂದನಕ್ಕೆ ಧನ್ಯತೆ.

kavitha said...

ನಮ್ಮ ಪ್ರಾರ್ಥನೆಗೆ ಸಾಮ್ರಾಟ ಅಲ್ಲಿಂದಲೇ ಹರಸಿದರೆ,ಮನು ಕುಲ ಮತ್ತು ಗೋ ಕುಲ ಎರಡು ಉಳಿದೀತು.....

ಜಗದೀಶಶರ್ಮಾ said...

ಹೌದು ಕವಿತಾ... ಹಾಗಾಗಲಿ... ಮನದ ದನಿಗೆ ದನಿಗೂಡಿಸಿದ್ದಕ್ಕೆ ವಂದನೆ...