Saturday 22 November, 2008

ವಿಶ್ವಮಂಗಲಕ್ಕಾಗಿ ಭಾರತದ ಗೋಯಾತ್ರೆ....

ಗೋವು ಉಳಿಯಬೇಕು. ಅದು ಭಾರತಕ್ಕೆ ಅನಿವಾರ್ಯ. ವಿಶ್ವಕ್ಕೂ ಅನಿವಾರ್ಯವೇ. ಭಾರತೀಯತೆ ಅದರ ಮಹತ್ತ್ವವನ್ನು ಹಾಗೆ ಗುರುತಿಸಿದೆ.

ಭಾರತೀಯತೆಯ ಮೊದಲ ಲಕ್ಷಣವೇ ಅನ್ವೇಷಣೆ. ಎಲ್ಲದರ ಮೂಲದ ಹುಡುಕಾಟಕ್ಕೆ ಅದು ತನ್ನನ್ನು ಕೊಟ್ಟುಕೊಂಡಿದೆ. ಈ ಹುಡುಕಾಟದಲ್ಲಿ ಅದಕ್ಕೆ ಕಾಣಸಿಕ್ಕಿದ್ದು ಗೋವು. ಇಹಕ್ಕೂ ಪರಕ್ಕೂ ಗೋವು ಬೇಕೆಂಬುದನ್ನು ಅದು ಮನಗಂಡಿತು. ಅದಕ್ಕಾದ ಆ ಸತ್ಯದರ್ಶನ, ಗೋವನ್ನು ಬದುಕಿನೊಂದಿಗೆ ಹಾಸುಹೊಕ್ಕಾಗಿ ಹೆಣೆಯಿತು. ಹಾಗಾಗಿ ಗೋವು ಅಧ್ಯಾತ್ಮದ ಸಾಧನವಾಯಿತು ; ಭೌತಿಕದ ಜೀವಿಕೆಯಾಯಿತು.

ಆಧುನಿಕದ ಬದುಕು ಇದನ್ನೆಲ್ಲ ಮರೆತಿದೆ. ಅದು ಸಹಜ. ಮುನ್ನೋಟದ ಯಾನದಲ್ಲಿ ಹಿಂದಿನದ್ದು ಕಾಣದು. ಹಾಗೆಂದು ಅನುಭವವನ್ನು ನಿರಾಕರಿಸುವಂತಿಲ್ಲ. ಆದರೂ ಮರೆತಿದೆ. ಮರೆತದ್ದನ್ನು ನೆನಪಿಸಬೇಕಿದೆ. ಅದು ಸಮಾಜ ಚಿಂತಕರ ಪರಮ ಕರ್ತವ್ಯ.

ಅಂತದ್ದೊಂದು ಕಾರ್ಯಕ್ಕೆ ಸುದೀರ್ಘ ಇತಿಹಾಸವಿದೆ. ಗೋವನ್ನು ಉಳಿಸಿಕೊಳ್ಳಬೇಕೆನ್ನುವ ಜಾಗೃತಿ ಇಂದು - ನಿನ್ನೆ ಮೂಡಿದ್ದಲ್ಲ. ಪರಕೀಯರ ಧಾಳಿ ಆರಂಭವಾದಂದಿನಿಂದಲೇ ಅದೂ ಆರಂಭಗೊಂಡಿದೆ. ಯಾಕೆಂದರೆ ಗೋವಿಗೆ ಅಪಾಯ ಆರಂಭವಾದದ್ದು ಅಂದಿನಿಂದಲೇ.

ಗೋಸಂರಕ್ಷಣೆಗಾಗಿ ಪ್ರಾಣಾಹುತಿಗಳೂ ನಡೆದಿವೆ ಎನ್ನುವುದು ಇತಿಹಾಸಪುಟಗಳು ಗುರುತಿಸಿವೆ. ಎಂಬಲ್ಲಿಗೆ ಅದರ ಮಹತ್ತ್ವ ಮತ್ತು ಅದಕ್ಕಿರುವ ಪ್ರಬಲ ಪ್ರತಿರೋಧ ಎಷ್ಟೆನ್ನುವುದು ಅರಿವಾಗುತ್ತದೆ.

ನಾವು ಬದುಕುತ್ತಿರುವ ಕಾಲಘಟ್ಟದಲ್ಲಿಯೂ ಈ ಎರಡೂ ಹಾಗೆಯೇ ಮುಂದುವರಿದಿದೆ. ಗೋವಿನ ಮಹತ್ತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದೆ, ಹಾಗೆಯೇ ಪ್ರತಿರೋಧವೂ.

ವರ್ತಮಾನದಲ್ಲಿಯೂ ಗೋವಿಗಾಗಿ ಅನೇಕ ಸಂಸ್ಥೆಗಳಿಂದ, ಅಸಂಖ್ಯ ವ್ಯಕ್ತಿಗಳಿಂದ ಕಾರ್ಯ ನಡೆಯುತ್ತಿದೆ ; ಅವರವರದ್ದೇ ಆದ ವಿಧಾನಗಳಲ್ಲಿ.

ಶ್ರೀರಾಮಚಂದ್ರಾಪುರಮಠ ಗೋಸಂರಕ್ಷಣೆಯ ಕಾರ್ಯವನ್ನು ಈ ಕಾಲಘಟ್ಟದ ತನ್ನ ಆದ್ಯತೆಯನ್ನಾಗಿ ಸ್ವೀಕರಿಸಿದೆ. ಆ ದಿಸೆಯಲ್ಲಿ ಹೆಜ್ಜೆಯಿಟ್ಟು 'ಕಾಮದುಘಾ' ಯೋಜನೆಯನ್ನು ಕೈಗೊಂಡಿದೆ. ಸಂರಕ್ಷಣೆ - ಸಂವರ್ಧನೆ - ಸಂಶೋಧನೆ - ಸಂಬೋಧನೆ ಎನ್ನುವ ನಾಲ್ಕು ಆಯಾಮಗಳನ್ನು ಗುರುತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆಯನ್ನೂ ಮಾಡಿದೆ.

ಜನಜಾಗೃತಿಯ 'ಸಂಬೋಧನೆ'ಯಲ್ಲಿ ಈಗಾಗಲೇ ಭಾರತೀಯ ಗೋಯಾತ್ರೆ - ಗೋಸಂಧ್ಯಾ - ಗೋಸಂಸತ್ - ವಿಶ್ವಗೋಸಮ್ಮೇಳನ - ಕೋಟಿನೀರಾಜನ - ದೀಪಗೋಪುರ ಮುಂತಾದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಒಂದಿಷ್ಟು ಜಾಗೃತಿ ಇದರಿಂದ ಸಾಧಿತವಾಗಿದೆ.

ಈಗ ರಾಷ್ಟ್ರದ ಮೂಲೆ -ಮೂಲೆಗೆ ತಲುಪಿಸಲು 'ವಿಶ್ವಮಂಗಲ ಗೋ ಗ್ರಾಮ ಯಾತ್ರಾ' ಸಂಘಟಿತಗೊಳ್ಳುತ್ತಿದೆ. ವಿರೋಧಿ ಸಂವತ್ಸರದ ವಿಜಯದಶಮಿಯಂದು ಆರಂಭಗೊಳ್ಳುವ ಯಾತ್ರೆ ಸಮಗ್ರ ಭಾರತದ ಆದ್ಯಂತ ಸಂಚರಿಸಲಿದೆ. ಯಾತ್ರೆ ಪೂರ್ಣಗೊಂಡಾಗ ಗೋಸಂರಕ್ಷಣೆಯ ಮೊದಲ ಹೆಜ್ಜೆ ಪೂರ್ಣಗೊಂಡಂತಾಗುತ್ತದೆ.

ಯಾತ್ರೆಯ ಕುರಿತು :
* ಯಾತ್ರೆಯ ಸಂಕಲ್ಪ, ಪರಿಕಲ್ಪನೆ ಮತ್ತು ಮಾರ್ಗದರ್ಶನ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರದ್ದು.

* ಯಾತ್ರೆ 'ಸಂತಮಂಡಲ'ದ ಬೆಂಬಲದಲ್ಲಿ ನಡೆಯಲಿದೆ.

* ಯಾತ್ರೆಯ ಪ್ರಸ್ಥಾವಕರು ; ಶ್ರೀಶ್ರೀರವಿಶಂಕರ ಗುರೂಜಿ - ಶ್ರೀರಾಮದೇವಜೀಬಾಬಾ - ಪೂಜ್ಯಾ ಅಮೃತಾನಂದಮಯೀಜೀ - ಪೂಜ್ಯ ಆಚಾರ್ಯ ವಿದ್ಯಾಸಾಗರಜೀ ಮಹಾರಾಜ್ - ಪೂಜ್ಯ ಆಚಾರ್ಯ ಮಹಾಪ್ರಾಜ್ಞಜೀ - ಪೂಜ್ಯ ರತ್ನಸುಂದರ ಸುರೇಶ್ವರಜೀ - ಪೂಜ್ಯ ದಯಾನಂದ ಸರಸ್ವತೀಜೀ.

* ಯಾತ್ರಾ ಸಮಯ 108 ದಿನಗಳು.

* 400 ಸ್ಥಳಗಳಲ್ಲಿ ಸಭಾಕಾರ್ಯಕ್ರಮಗಳು.

* ಹಳ್ಳಿಗಳಿಂದ ಮುಖ್ಯಕೇಂದ್ರಗಳಿಗೆ ಉಪಯಾತ್ರೆಗಳು.

* ಗೋಹತ್ಯಾ ನಿಷೇಧ ಕಾನೂನಿಗೆ ಸಹಿ ಸಂಗ್ರಹ.

* ಮೆರವಣಿಗೆಗಳು.

* ಗೋಪೂಜೆಗಳು.

* ಸಂತರು, ವಿಜ್ಞಾನಿಗಳಿಂದ ಗೋಸಂದೇಶ.

ಹೀಗೆ ಯಾತ್ರೆ ಭಾರತದೆಲ್ಲೆಡೆ ಸಂಚರಿಸಲಿದೆ ; ಭಾರತದ ಪ್ರತಿ ಮನೆಯನ್ನು ಗೋ 'ಅಭಯಧಾಮ'ವನ್ನಾಗಿಸಲು ಪ್ರಯತ್ನಿಸಲಿದೆ.

ನಮ್ಮ ಕಾಲಘಟ್ಟದ ಈ ಮಹತ್ತ್ವಾಕಾಂಕ್ಷಿ ಯಾತ್ರೆಗೆ ನಮ್ಮನ್ನು ನಾವೇ ತೊಡಗಿಸಿಕೊಳ್ಳೋಣ.


(ಡಿಸೆಂಬರ್ 2008ರ ಧರ್ಮಭಾರತಿಯ ಸಂಪಾದಕೀಯ)

1 comment:

Ashok Uchangi said...

ಮಾನ್ಯರೆ.
ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತಂದರೆ,ರೈತರು ಬಳಸಿ ಬಿಸಾಕುವ ಗೋವುಗಳನ್ನು ಕಡೆವರಗೆ ರಕ್ಷಿಸುವ ಬಗೆ ಹೇಗೆ?ಇದು ಸಾಧ್ಯವೇ?
ಅಶೋಕ ಉಚ್ಚಂಗಿ
http://mysoremallige01.blogspot.com/