Sunday 9 November, 2008

ಮನುಭಾಷಿತ - 7

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಸಮಾಜವೊಂದರ ಬೆಳವಣಿಗೆಯೆಂದರೆ ಅದೊಂದು ಸರಪಳಿಯಂತಹ ವ್ಯವಸ್ಥೆ. ಒಂದು ಕೊಂಡಿಯೊಳಗೆ ಇನ್ನೊಂದು ಕೊಂಡಿ ; ಇದರೊಳಗೆ ಇನ್ನೊಂದು ಕೊಂಡಿ ; ಮತ್ತದರೊಳಗೆ ಮುಂದಿನದು ; ಮುಂದಿನದರೊಳಗೆ ಹಿಂದಿನದು....ಹೀಗೆ ಹಿಂದಿನದು ಮುಂದಿನದಕ್ಕೆ ಕೊಟ್ಟುಕೊಳ್ಳುತ್ತಾ, ತಾನೂ ಪಡೆದುಕೊಳ್ಳುತ್ತಾ ಸಾಗುವಿಕೆ, ಮುಂದಿನದೂ ಕೂಡ ಹಿಂದಿನದರಿಂದ ಪಡೆದುಕೊಳ್ಳುತ್ತಾ, ತಾನೂ ಕೊಟ್ಟುಕೊಳ್ಳುತ್ತಾ ಸಾಗುವ ಕ್ರಮ - ಸರಪಳಿಯದ್ದು.

ಅಂತೆಯೇ ಸಮಾಜದ ಕ್ರಮಣವೂ. ಹಿರಿಯ ತಲೆಮಾರು ಮತ್ತು ಕಿರಿಯ ತಲೆಮಾರು ಪರಸ್ಪರ ಕೊಟ್ಟುಕೊಳ್ಳುತ್ತ ಸಾಗಬೇಕು.

ಇದರಲ್ಲಿ ಹಿರಿಯ ತಲೆಮಾರಿನ ಕೊಡುಗೆ ಅನನ್ಯ, ಅನುಪಮ. ತಾನು ತುಂಬಿಕೊಂಡದ್ದೆಲ್ಲವನ್ನೂ ಬರಿದಾಗಿಸುವ ಪ್ರಕ್ರಿಯೆ ಅದರದ್ದು. ತಮ್ಮ ಮುಂದಿನ ಜಗತ್ತಿನ ಸೌಖ್ಯಕ್ಕಾಗಿ ತಮ್ಮ ಸಾಧನೆ - ಅನುಭವಗಳನ್ನವರು ಸ್ವಾರ್ಥರಹಿತರಾಗಿ ಸಮರ್ಪಿಸುತ್ತಾರೆ ಸೃಷ್ಟಿಗೆ. ಈ ಜಗತ್ತಿನ ಸಂಬಂಧವನ್ನು ಮರಣವೆನ್ನುವ ಹೆಸರಿನಿಂದ ಕಡಿದುಕೊಳ್ಳುವ ಅವರಿಗೆ ಈ ಸಮರ್ಪಣೆಯಿಂದಾಗುವ ಲಾಭವೇನು?

ಇಂತಹ ತ್ಯಾಗಶೀಲತೆ ಗೌರವಾರ್ಹ. ಅವರ ಅನುಭವ ಸ್ವೀಕಾರಾರ್ಹ. ಯಾವ ಕಾಲ, ಯಾವ ದೇಶ, ಯಾವ ಜನಾಂಗ ಅವರನ್ನು ನಿರ್ಲಕ್ಷಿಸಿದೆಯೋ ಅದು ನಿಶ್ಚಿತವಾಗಿಯೂ ಪತನಮುಖಿ.

ಹಿರಿಯರ ಅನುಭವ ಕಿರಿಯರ ಬಾಳಬುತ್ತಿ. ಬುತ್ತಿಯೆಂದರೆ ಅದೇ, ಬೆಂಕಿ ಹತ್ತಿಸಬೇಕಿಲ್ಲ ; ನೀರು ಕುದಿಸಬೇಕಿಲ್ಲ ; ಪದಾರ್ಥಗಳ ಸಂಯೋಜನೆಯ ಕಾರ್ಯವಿಲ್ಲ. ಅದು ಸಿದ್ಡ ಆಹಾರ. ಬಾಯಿಗಿಟ್ಟುಕೊಳ್ಳುವುದು ಮಾತ್ರ ನಮ್ಮ ಕೆಲಸ. ಹಿರಿಯರ ಅನುಭವವೂ ಹಾಗೆಯೇ. ಶೂನ್ಯ ಜಗತ್ತಿನಲ್ಲಿ ನಾವು ಯೋಚಿಸಬೇಕಿಲ್ಲ. ಹೊಸದಾಗಿ ಕಾರ್ಯಾರಂಭ ಮಾಡಬೇಕಿಲ್ಲ. ಹೊಸ ಬದುಕಿಗೆ ಅದನ್ನು ಅನ್ವಯಿಸಿಕೊಳ್ಳುವುದು ಮಾತ್ರ ಕಿರಿಯ ತಲೆಮಾರಿನ ಕಾರ್ಯ.

ಇಂತಹ ಬಾಳಬುತ್ತಿಯನ್ನು ನೀಡುವ ಹಿರಿಯರನ್ನು ನಿತ್ಯವೂ ಗೌರವಿಸಬೇಕು ; ಅದರಿಂದ ದೊರೆಯುವ ನಾಲ್ಕು ಲಾಭಗಳನ್ನು ಪಡೆದುಕೊಳ್ಳಬೇಕು ಎನ್ನುವುದು ಮನುಭಾಷಿತ -

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ |
ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್ ||

ನಿತ್ಯವೂ ವೃದ್ಡರನ್ನು ಸೇವಿಸುವವನಿಗೆ, ವೃದ್ಧರಿಗೆ ತಲೆಬಾಗುವವನಿಗೆ ಆಯುಸ್ಸು ; ವಿದ್ಯೆ ; ಯಶಸ್ಸು ; ಬಲಗಳು ವೃದ್ಡಿಯಾಗುತ್ತವೆ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ

(ಧರ್ಮಭಾರತಿಯ ಅಂಕಣ ಬರಹ)

No comments: