Thursday 20 November, 2008

ಜೀವನ ಸಂಧ್ಯೆ

ಅಸ್ತಗಿರಿಯಂಚಿನಲಿ ಮುಳುಗಿದನು ರವಿತೇಜ
ಆವರಿಸುತಿದೆ ಜಗವ ತಿಮಿರ ಪಂಕ್ತಿ ;
ಬಾನಿನಂಗಳದಲ್ಲಿ ತಾರೆಗಳ ಸುಳಿವಿಲ್ಲ ;
ಮೋಡ ಮುಸುಕಿದೆ ನಭವ ಶಶಿರಹಿತ ರಾತ್ರಿ.

ಉದಯಿಸುತ ರವಿಯಾಗ ಬೆಳಗಿದ್ದ ಈ ಜಗವ ;
ಬೆಳೆಸಿದ್ದ ವನಸಿರಿಯ ತರುಲತೆಗಳ,
ಸೂರ್ಯಕಿರಣದಿ ಲೋಕ ತಿಳಿದೆದ್ದು ನಲಿದಿತ್ತು ;
ಯಾರಿಲ್ಲ ಅವನ ಜೊತೆ ಮುಳುಗುವಾಗ.

ತಂದೆ ತಾಯಿಗಳೆಂದು, ಅಣ್ಣತಮ್ಮರು ಎಂದು
ಸವೆಸಿದ್ದೆ ಬಾಲ್ಯವನು ಶ್ರಮದಿ ಬೆರೆತು
ಮತ್ತೆ ಯೌವನದಲ್ಲಿ ಪತ್ನಿಮಕ್ಕಳಿಗೆಂದು
ದುಡಿದಿದ್ದೆ ನನ್ನೆಲ್ಲ ಸುಖವ ಮರೆತು.

ಜಗದಗಲ ತುಂಬಿರುವ ನೋವು ತುಂಬಿದ ಜನರ
ಕಣ್ಣೀರ ಕರೆಗೆಂದು ಹೃದಯ ದ್ರವಿಸಿ
ಕೈನೀಡಿ ; ಮೇಲೆತ್ತಿ ; ಮೈದಡವಿ ; ಸಂತೈಸಿ
ಹೋರಾಟ ಮಾಡಿದ್ದೆ ಕಷ್ಟ ಸಹಿಸಿ.

ನನ್ನ ದೇಹದ ಶಕ್ತಿ ನೀರಾಗಿ ಹರಿದಂದು
ನನಗಿಲ್ಲವಾಯಿತು ಊರುಗೋಲು
ಊರು ಕೇರಿಯ ಜನರು ನೋಡಿ ಸಾಗುತಲಿಹರು
ಅಯ್ಯೋ! ಬಿರಿಯುತಲಿದೆ ನನ್ನ ಒಡಲು.

ವಿಗಡವಿಧಿ ಬರೆದಿರುವ ರುದ್ರನಾಟಕದಲ್ಲಿ
ಶೋಕನಾಯಕ ನಾನು ನನಗೆಲ್ಲಿ ಸೊಗಸು?
ನನ್ನ ಜೀವನ ನದಿಯು ಸಾಗರವ ಸೇರುತಿದೆ
ಬದುಕ ಸಂಧ್ಯೆಯೊಳಿಲ್ಲ ಸಾಂತ್ವನದ ಹೊಳಪು.

ಸೂರ್ಯನಿಗೆ ಬೇಳಗುಂಟು ; ನನಗಿಲ್ಲ ಬೆಳಕು
ನನ್ನ ಜೊತೆ ಯಾರಿಲ್ಲ ; ಏಕಾಂಗಿ ಬದುಕು
ಏ...ಕಾಂ....ಗಿ......
ಬ........ದು......ಕು

2 comments:

venu said...

mana miduyuvante adbuta kavana rachane madiddira sharmaji

ಜಗದೀಶಶರ್ಮಾ said...

pratikriyege dhanyavadagalu.......