Sunday 24 August, 2008

ಸರ್ಕಾರಕ್ಕೇಕೆ ದೇವಾಲಯಗಳು?

ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಕರ್ನಾಟಕ ಸರ್ಕಾರ ಶ್ರೀರಾಮಚಂದ್ರಾಪುರಮಠಕ್ಕೆ ವಹಿಸಿದೆ. ಈ ಘಟನೆ ಸರ್ಕಾರದ 'ಪಾಲಿಸಿ'ಯೊಂದರ ಕುರಿತು ಚರ್ಚಿಸಲು ವೇದಿಕೆಯಾಗಿಸಿದೆ.


ದೇವಸ್ಥಾನಗಳೆಂದರೆ ಧಾರ್ಮಿಕಕ್ಷೇತ್ರಗಳು. ಧರ್ಮಕ್ಕೆ ಅದರದ್ದೇ ಆದ ಪದ್ಧತಿ ಇರುತ್ತದೆ.ಪದ್ಧತಿ ಪ್ರಾಚೀನತೆಯ ನೆರಳಿನಲ್ಲಿಯೇ ಬೆಳೆಯಬೇಕಾದದ್ದು. ಹಾಗಾಗಿ ದೇವಸ್ಥಾನಗಳ ಕುರಿತಾದ ಚಿಂತನೆ ಮತ್ತು ನಿರ್ಣಯಗಳು ಪರಂಪರೆಯ ಒರೆಗಲ್ಲಿನಲ್ಲಿ ತಿದ್ದಿ - ತೀಡಿ ಹೊರಬರಬೇಕಾಗುತ್ತದೆ.


ಭಾರತದಲ್ಲಿ ರಾಜ, ಧರ್ಮದ ಸಂರಕ್ಷಕನಾಗಿದ್ದ. ತನ್ನ ರಾಜ್ಯದ ಪ್ರಜೆಗಳ ಭಕ್ತಿ - ಉಪಾಸನೆ - ಅದರ ವಿಧಿವಿಧಾನಗಳು - ಹಾಗೂ ಅದಕ್ಕೆ ಸಂಬಂಧಿಸಿದ ಸಾಮೂಹಿಕ ಕೇಂದ್ರಗಳನ್ನು ರಾಜನೇ ವ್ಯವಸ್ಥೆಗೊಳಿಸುತ್ತಿದ್ದ. ಇದಕ್ಕಾಗಿ 'ಪರಿಷತ್' ಎನ್ನುವ ಪರಿಣತರಿಂದ ಕೂಡಿದ ಸ್ವಾಯತ್ತ ಸಂಸ್ಥೆ ಇರುತ್ತಿತ್ತು. ಅದು ರಾಜನ ಆಳ್ವಿಕೆಗೆ ಒಳಪಡುತ್ತಿರಲ್ಲಿಲ್ಲ. ರಾಜನಿಗೂ - ಪ್ರಜೆಗಳಿಗೂ ಮಾರ್ಗದರ್ಶನ ಮಾಡುವುದು ಅದರ ಕರ್ತವ್ಯವಾಗಿತ್ತು.


ರಾಜಪ್ರಭುತ್ವ ಅಳಿದು ಪ್ರಜಾರಾಜ್ಯ ಅಸ್ತಿತ್ವಕ್ಕೆ ಬಂದಾಗ ಈ ವಿಷಯಗಳ ಕುರಿತು ಪೂರ್ಣ ನಿರ್ಣಯಕ್ಕೆ ಬಂದ ಹಾಗೆ ಕಾಣಿಸುವುದಿಲ್ಲ.ಭಾರತಕ್ಕೆ 'ಸೆಕ್ಯುಲರ್' ರೂಪವನ್ನು ಕೊಡಲಾಯಿತು. ಧಾರ್ಮಿಕತೆಯ ಕುರಿತು ವಿಭಿನ್ನ ಆದರೆ ಗೊಂದಲದ ತೀರ್ಮಾನಕ್ಕೆ ಬರಲಾಯಿತು ಎನಿಸುತ್ತದೆ. ವಿದೇಶೀ ಮತಗಳನ್ನು ಧರ್ಮವೆಂದು ಕರೆಯಲಾಯಿತು.ಸನಾತನ ಧರ್ಮದ ಕೆಲವು ಅಂಗಗಳನ್ನು ಪ್ರತ್ಯೇಕ ಧರ್ಮವೆಂದು ಗುರುತಿಸಲಾಯಿತು. ಇವೆರಡಕ್ಕೂ 'ಅಲ್ಪ ಸಂಖ್ಯಾತ' ಎಂದು ಹೆಸರಿಸಿ, ಅವುಗಳ ಧಾರ್ಮಿಕ ವ್ಯವಸ್ಥೆಗೆ ಸ್ವಾಯತ್ತತೆಯನ್ನು ನೀಡಲಾಯಿತು.


ಬಹು ಸಂಖ್ಯಾತರ ಧರ್ಮವೆಂದು(ಭಾರತದ ಮಟ್ಟಿಗೆ) ಕರೆಸಿಕೊಂಡ ಸನಾತನ ಧರ್ಮ ಅರೆ ಬರೆಯಾಗಿ ಸರ್ಕಾರದ ಅಡಿಗೆ ಬಂತು. ಕೆಲವು ದೇವಸ್ಥಾನಗಳು ಸರ್ಕಾರಕ್ಕೆ ಸೇರಿದವು.ಅದಕ್ಕಾಗಿಯೇ ಇರುವ ಧಾರ್ಮಿಕ ದತ್ತಿ ಇಲಾಖೆ ಆ ದೇವಾಲಯಗಳನ್ನು ನಿರ್ವಹಿಸತೊಡಗಿತು.


ವಾಸ್ತವವಾಗಿ ದೇವಾಲಯಗಳು ಧಾರ್ಮಿಕವ್ಯವಸ್ಥೆಯನ್ನು ಸ್ವತಂತ್ರಗೊಳಿಸಬೇಕಿತ್ತು. ಪರಂಪರೆಯಿಂದ ಅವು ಯಾವ ವ್ಯವಸ್ಥೆಯಿಂದ ನಿರ್ವಹಿಸಲ್ಪಡುತ್ತಿತ್ತೋ ಅಲ್ಲಿಗೇ ಒಪ್ಪಿಸಬೇಕಿತ್ತು. ಮೂಲಪದ್ಧತಿಗಳಿಗೆ ಅನುಗುಣವಾಗಿ ಅವುಗಳು ನಡೆಯಬೇಕಿತ್ತು.


ಪ್ರಶ್ನೆ, ಧಾರ್ಮಿಕ ಕೇಂದ್ರಗಳ ಸ್ವಾಯತ್ತತೆ ಸಮೂಹದ ಆಶೋತ್ತರಗಳಿಗೆ ವಿರುದ್ಧವಾದರೆ ಅಂತ. ಅಷ್ಟೇ ಅಲ್ಲ, ಸ್ವಾಯತ್ತ ಧಾರ್ಮಿಕ ಕೇಂದ್ರಗಳನ್ನು
ನಿರ್ವಹಿಸುವ ವ್ಯಕ್ತಿಗಳು ಆಮಿಷಗಳಿಗೆ ಒಳಗಾಗಿ ತಪ್ಪೆಸಗಿದರೆ ಅಂತ. ಹಾಗಾಗಿ ಅದರ ನಿಯಂತ್ರಣಕ್ಕೆ ಅಂದರೆ ಸಂಪ್ರದಾಯವಿರುದ್ಧವಾಗಿ ವರ್ತಿಸದಂತಿರಲು ಮತ್ತು ಅವ್ಯವಹಾರ ನಡೆಯದಂತಿರಲು ಕಾವಲು ಸಂಸ್ಥೆಗಳಿರಬೇಕು. ಅವು ಕಾಲಕಾಲಕ್ಕೆ ಪ್ರಕ್ರಿಯೆಗಳನ್ನು ಗಮನಿಸುತ್ತಿರಬೇಕು.


ಹೀಗೊಂದು ವ್ಯವಸ್ಥೆಯನ್ನು ನಿರ್ಮಾಣಮಾಡಿ, ಸರ್ಕಾರ ಮೊದಲು ದೇವಾಲಯಗಳನ್ನು ನಿರ್ವಹಿಸುತ್ತಿದ್ದ ಮಠಮಾನ್ಯಗಳು - ವಂಶವಾಹಿ ಧರ್ಮದರ್ಶಿಗಳು - ವಂಶವಾಹಿ ಸಮೂಹಗಳಿಗೆ ಮತ್ತೆ ವಹಿಸಿಕೊಡಬೇಕಿತ್ತು.


ಈಗಲಾದರೂ ಸರ್ಕಾರ ಮರು ಚಿಂತನೆ ಮಾಡಲಿ. ದೇವಾಲಯಗಳನ್ನು ಬಿಟ್ಟುಕೊಟ್ಟು ಪ್ರವಾಸೋದ್ಯಮವನ್ನು ಸರ್ಕಾರವೇ ಉಳಿಸಿಕೊಳ್ಳಲಿ. ತೀರ್ಥಕ್ಷೇತ್ರಗಳನ್ನು ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ, ಪ್ರವಾಸೋದ್ಯಮದ ಲಾಭಗಳನ್ನು ಪಡೆದುಕೊಳ್ಳಲಿ.

1 comment:

venu said...

prabudhavada lekhana.....