Saturday 30 August, 2008

'ಭಾರತ'ಎಲ್ಲದಕ್ಕೂ ಪರ್ಯಾಯವೇ?

{ಸೆಪ್ಟೆಂಬರ್ ೨೦೦೮ರ ಧರ್ಮಭಾರತೀ ಮಾಸಪತ್ರಿಕೆಯ ಸಂಪಾದಕೀಯ}


'ಭಾರತ'ವೆಂದರೆ ಅದು ಅಚ್ಚರಿಗಳ ಅನೂಹ್ಯ ಲೋಕ. ಅದರ ಹೆಜ್ಜೆಯ ಕ್ರಮ ವಿಭಿನ್ನ, ವಿಶಿಷ್ಟ. ಜೀವನದ ಎಲ್ಲ ಕ್ಷೇತ್ರಗಳ ಮೇಲೂ ಅದರ ಕ್ಷ-ಕಿರಣ ಹರಿದಿದೆ. ಅದರಿಂದಾಗಿಯೇ ಎಲ್ಲದರ ಒಳ-ಹೊರಗನ್ನೂ ಸ್ಪರ್ಶಿಸಿಯೇ ಅದು ಮಾತನಾಡುವುದು. ಅದರ ಚಿಂತನೆಯ ವ್ಯಾಪಕತೆಯ ಗುಟ್ಟೂ ಅದೇ.


ಇಂತಹ 'ಭಾರತ'ವನ್ನು ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯದ ಮಾತು. ಅದೊಂದು ಬಯಲಂತೆ. ಬಯಲು ಬರಿದೋ ಬರಿದು. ಬರಿದಾದದ್ದರಲ್ಲಿ ಏನೂ ಇಲ್ಲದ ಮೇಲೆ ಇಲ್ಲದ್ದನ್ನು ಕಾಣುವುದೆಂತು? ಕಾಣದ್ದನ್ನು ಅರಿಯುವುದೆಂತು? ಅರಿಯದ್ದನ್ನು ಆಡುವುದೆಂತು? ಬಯಲ ಬಗೆಯರಿಯಲು ಬಯಲೆಲ್ಲ ಸುತ್ತಬೇಕು.ಈ ಪರಿಭ್ರಮಣ ಕೊನೆಗೊಮ್ಮೆ ಬಯಲಿನರಿವನ್ನು ಮೂಡಿಸೀತು.'ಭಾರತ' ಬಯಲು ಮಾತ್ರವಲ್ಲ; ಅದೊಂದು ಗುಹೆ. ಗುಹೆಯೆಂದರೆ ಕತ್ತಲು. ಹೊರಬೆಳಕಿಗೆ ಹೊಂದಿಕೊಂಡ ಕಣ್ಣು ಗುಹೆಯೊಳಗೆ ಕುರುಡು. ಬಹುಕಾಲ ಗುಹೆಯೊಳಗೆಯೇ ನೆಲೆ ನಿಂತರೆ, ಗುಹೆಯ ಬೆಳಕು; ಒಳ ಬೆಳಕು ಕಣ್ಣಿಗೆ ಹೊಂದಿಕೊಂಡೀತು. ಆಗ ಮಾತ್ರ ಗುಹೆ ಅರ್ಥವಾದೀತು.


ಹೀಗೆ ಭಾರತದ ಬಯಲು ಮತ್ತು ಗುಹೆಯೆನ್ನುವ ಎರಡು ಬಗೆಯನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕು; ಅವಧಾನ ಬೇಕು; ಪರಿವ್ರಾಜಕತೆ ಬೇಕು; ಏಕಾಗ್ರತೆ ಬೇಕು; ಇದೆಲ್ಲಕ್ಕೂ ಮಿಗಿಲಾಗಿ ಒಳಗಣ್ಣು ಬೇಕು. ಇದೆಲ್ಲದರಿಂದಾಗಿ ಭಾರತದರ್ಶನ ಸಾಧ್ಯ. ಹಾಗಾದಾಗ ಭಾರತ ಅನುಭವಸಿದ್ಧ.

ಇಂತಹ ಭಾರತದ ಜೀವನದರ್ಶನ ಆಧುನಿಕದ ಆದ್ಯತೆ. ಏಕೆಂದರೆ ಆಧುನಿಕಕ್ಕೆ ಒಂದಿಷ್ಟು ಕೊರತೆಯಿದೆ. ಅದನ್ನು ಆಧುನಿಕ ಒಪ್ಪಿಕೊಳ್ಳದಿದ್ದರೂ ಅದು ವಾಸ್ತವ.


ಪ್ರಕೃತ ಇಂದಿನ ಶಿಕ್ಷಣಕ್ಷೇತ್ರದ ಬಗ್ಗೆ ವ್ಯಾಪಕ ಚಿಂತನೆ ನಡೆಯುತ್ತಿದೆ. ಇದು ಪರಿಷ್ಕಾರಗಳ ಯುಗ. ದಿನದಿಂದ ದಿನಕ್ಕೆ ಶಿಕ್ಷಣದ ಪಠ್ಯ ಮತ್ತು ವಿಧಾನಗಳಲ್ಲಿ ಬದಲಾವಣೆಗಳು ನಡೆಯುತ್ತಲೇ ಇವೆ. ಆದರೆ ಈ ಎಲ್ಲ ಬದಲಾವಣೆಗಳೂ ಶಿಕ್ಷಣತಜ್ಞರಿಗೆ ಸಂತೃಪ್ತಿ - ಸಮಾಧಾನಗಳನ್ನು ತಂದೊಡ್ಡುತ್ತಿಲ್ಲ ಎನ್ನುವುದೂ ಕೂಡ ಸತ್ಯದ ಮಾತು.


ಶಿಕ್ಷಣಕ್ಷೇತ್ರದ ಸಮಸ್ಯೆಗಳಿಗೆ ಭಾರತೀಯ ಶಿಕ್ಷಣಪರಿಕಲ್ಪನೆಯಲ್ಲಿ ಪರಿಹಾರವಿದೆಯೇ? ಎನ್ನುವ ಜಿಜ್ಞಾಸೆ ಹುಟ್ಟಿಕೊಡಿದೆ. 'ಪರಿಹಾರವಿದೆ' ಎನ್ನುವ ಮಾತನ್ನು ಭಾರತೀಯ ಶಿಕ್ಷಣತಜ್ಞರು ಹೇಳಿಕೊಂಡು ಬರುತ್ತಿದ್ದಾರೆ.


ಭಾರತೀಯ ಶಿಕ್ಷಣಕ್ರಮ ಇಂದಿನ ಶಿಕ್ಷಣಲೋಕಕ್ಕೆ ಪರ್ಯಾಯ ಹೇಗೆ? ಇಂದಿನ ಶೈಕ್ಷಣಿಕ ಸಮಸ್ಯೆಗಳಿಗೆ ಅದರಲ್ಲಿ ಪರಿಹಾರವೇನಿದೆ? ಎನ್ನುವ ಕುರಿತು ವ್ಯಾಪಕ ಶೋಧ ನಡೆಯಬೇಕಿದೆ.

ವಿದ್ವಾಂಸರುಗಳ ಅಧ್ಯಯನ - ಅನುಭವಗಳಲ್ಲಿ ಅಲ್ಲಲ್ಲಿ ಈ ಅಂಶಗಳೆಲ್ಲ ಇವೆಯಾದರೂ, ಒಂದೆಡೆಯಲ್ಲಿ; ಒಂದು ವ್ಯವಸ್ಥಿತರೂಪದಲ್ಲಿ ಅವು ಸಂಕಲನಗೊಂಡಿಲ್ಲ. ಅಥವಾ ವ್ಯವಸ್ಥೆಗೊಂಡಿಲ್ಲ.


ಭಾರತೀಯ ವಿದ್ವಾಂಸರು ಆ ಕಾರ್ಯಕ್ಕೆ ಮುಂದಾಗಬೇಕಿದೆ. ಪ್ರಾಚೀನ ಶಿಕ್ಷಣ ಸಂಸ್ಥೆ, ಸಂಸ್ಥೆಯ ಸ್ವರೂಪ, ಕಲಿಕಾ ವಿಷಯಗಳು, ಬೋಧನಾ ತಂತ್ರಗಳು ಮುಂತಾದ ವಿಚಾರಗಳ ಸಮಗ್ರತೆಯನ್ನು ಶೋಧಿಸಬೇಕಿದೆ.


ಅಷ್ಟೇ ಅಲ್ಲದೆ, ಇಂದಿನ ವೃತ್ತಿಯ ಅವಶ್ಯಕತೆಗಳನ್ನು ಅದರೊಂದಿಗೆ ಜೋಡಿಸುವ ಕುರಿತೂ ಚಿಂತಿಸುವುದಿದೆ.


ಒಟ್ಟಿನಲ್ಲಿ ಭಾರತೀಯ ಶಿಕ್ಷಣಲೋಕವನ್ನು ಪುನಾರೂಪಿಸಬೇಕಿದೆ. ರೂಪಿಸುವ ಮುನ್ನ ವ್ಯಾಪಕ ಚಿಂತನ - ಮಂಥನಗಳು ನಡೆಯಬೇಕಿದೆ.

1 comment:

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

indige tumba prastuta enisuva arthapurna bharaha tumba chintana mantanagalu nadeyabekada vishaya .neevu e kuritu dani ettiddu tumba uchita.

e kurita shodane chintanege nandiyagali