Saturday 9 August, 2008

"ವಾಕ್ ಸ್ವಾತಂತ್ರ್ಯ"

ನವ ಜಗದ ನವೀನ ಪರಿಕಲ್ಪನೆಗಳಲ್ಲಿ 'ವಾಕ್ ಸ್ವಾತಂತ್ರ್ಯ'ವೂ ಒಂದು. ಹಾಗೆಂದರೆ ಪ್ರತಿವ್ಯಕ್ತಿಯೂ ತನಗನ್ನಿಸಿದ್ದನ್ನು ಹಾಗೆಯೇ ಹೇಳಬಹುದು.


ಆಧುನಿಕತೆಯ ಪರಿಷ್ಕಾರಗಳಲ್ಲಿ ಇದು ತುಂಬಾ ಒಳ್ಳೆಯದು ಅಂತ ಅನ್ನಿಸತ್ತೆ. ಯಾರನ್ನೂ ಯಾರೂ ವಿಮರ್ಶಿಸಬಹುದಾದರೆ, ಸಮಾಜದ ಪ್ರತಿಯೋರ್ವನಿಗೂ ಸಮಾನ ಸ್ಥಾನಮಾನ ಲಭ್ಯವಾಗುತ್ತದೆ. ಮೇಲು - ಕೀಳು ಎನ್ನುವ ಸ್ತರದ ಶ್ರೇಣೀಕೃತವಾದ ತಾರತಮ್ಯ ಇಲ್ಲವಾಗುತ್ತದೆ. ಎಲ್ಲರೂ ಎಲ್ಲರಿಗೂ ಸಮಾನರಾಗುತ್ತಾರೆ. ಅಸಮಾನತೆಯೇ ಇನ್ನಿಲ್ಲದಂತೆ ಕಾಣೆಯಾಗುತ್ತದೆ.



ಹೀಗೆ ಯೋಚಿಸಿದಾಗ 'ವಾಕ್ ಸ್ವಾತಂತ್ರ್ಯ' ಉತ್ತಮ ಅಂತಲೇ ಅನ್ನಿಸತ್ತೆ.


'ವಾಕ್ ಸ್ವಾತಂತ್ರ್ಯ'ದ ಇನ್ನೊಂದು ಮುಖವನ್ನೂ ಅವಲೋಕಿಸಿ ನೋಡಬೇಕಿದೆ. ಆಧುನಿಕ ಜಗತ್ತಿನಲ್ಲಿ ಎಲ್ಲರೂ ಎಲ್ಲದರ ಬಗ್ಗೆಯೂ, ಎಲ್ಲವರ ಬಗ್ಗೆಯೂ ಮಾತನಾಡುತ್ತಿದ್ದಾರೆ.


ಯಾವುದೇ ಕ್ಷೇತ್ರದ ಕುರಿತು ವಿಮರ್ಶಿಸುವಾಗ ಆ ಕ್ಷೇತ್ರದ ಮೇಲೆ ಹೋಲ್ಡ್ ಇರಬೇಕಾಗುತ್ತದೆ. ಹಿಡಿತವಿಲ್ಲದ ಕ್ಷೇತ್ರದ ಬಗ್ಗೆ ಮಾತನಾಡುವುದು ಲಗಾಮಿಲ್ಲದ ಕುದುರೆಯಂತೆ. ಸರ್ಕಾರಗಳು ವಾರ್ಷಿಕ ಬಜೆಟ್ ಗಳನ್ನು ಮಂಡಿಸಿದ ಮೇಲೆ ಮಾಧ್ಯಮಗಳು ಜನರ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುತ್ತಾರೆ ಅಥವಾ ಪ್ರಕಟಿಸುತ್ತಾರೆ. ಪ್ರತಿಪಕ್ಷದವರು,ಬಜೆಟ್ ನಲ್ಲಿ ಉಲ್ಲೇಖಗೊಂಡ ಕ್ಷೇತ್ರದ ಪ್ರಮುಖರು, ಜನಸಾಮಾನ್ಯರು ಮಾತನಾಡಿರುತ್ತಾರೆ. ಆರ್ಥಿಕ ತಜ್ಞರುಗಳ ಪ್ರತಿಕ್ರಿಯೆ ಇಲ್ಲವೇ ಇಲ್ಲವೇನೋ ಎನ್ನುವಷ್ಟು ಕಡಿಮೆ ಇರುತ್ತದೆ. ಬಜೆಟ್ ಗಳನ್ನು ಸಿದ್ಧಪಡಿಸುವವರು ಆರ್ಥಿಕ ತಜ್ಞರು. ರಾಜಕಾರಣಿಗಳಲ್ಲ. ಅವರದನ್ನು ಮಂಡಿಸುವವರಷ್ಟೇ. ಆರ್ಥಿಕತಜ್ಞರ ಕಾರ್ಯವನ್ನು ಆ ಕ್ಷೇತ್ರದ ಅರಿವಿಲ್ಲದಿರುವವರು ವಿಮರ್ಶಿಸಲು ಹೇಗೆ ಸಾಧ್ಯ? ಇದರಿಂದಾಗಿಯೇ 'ಜನಪ್ರಿಯ ಬಜೆಟ್' ಅನ್ನುವ ಕಲ್ಪನೆ ಹುಟ್ಟಿದ್ದು. ಇಂತವನ್ನು ಚುನಾವಣಾ ಬಜೆಟ್ ಎಂದು ಕೂಡ ಕರೆಯುತ್ತಾರೆ. ಒಬ್ಬ ಆರ್ಥಿಕತಜ್ಞನೇ ವಿಮರ್ಶಿಸುವುದಾದರೆ ಜನಪ್ರಿಯ ಘೋಷಣೆಗಳಿಗೆ ಬಜೆಟ್ ನಲ್ಲಿ ಜಾಗವಿರುವುದಿಲ್ಲ.


ಹೀಗೆಯೇ ಯಾವುದೇ ಕ್ಷೇತ್ರವನ್ನು ಕುರಿತು ಮಾತನಾಡುವಾಗೆಲ್ಲ ನಾಲಗೆ ಹರಿದಂತೆ ಹರಿಸಬಾರದು. ಹಾಗಾಗಿ 'ವಾಕ್ ಸ್ವಾತಂತ್ರ್ಯ' ಪರಿಕಲ್ಪನೆಗೆ ಪರಿಷ್ಕಾರ ಬೇಕು.

No comments: