Tuesday 1 July, 2008

ಹೇಳೋದೊಂದು; ಮಾಡೋದೊಂದು. ಸರೀನಾ ಸ್ವಾಮಿ!?!

ಕನ್ನಡದ ವಿಷಯದಲ್ಲಿ ಹೊಸ ಚರ್ಚೆಗೆ ಉಪಕ್ರಮ ದೊರೆತಿದೆ. ಮಾತನಾಡುವ ಕನ್ನಡಕ್ಕೂ ಮತ್ತು ಬರೆಯುವ ಕನ್ನಡಕ್ಕೂ ಭಿನ್ನತೆ ಬೇಕೇ? ಬೇಡವೇ? ಅಂತ. ಶ್ರೀ ಕೆ. ವಿ. ತಿರುಮಲೇಶ್ ಸುಂದರವಾಗಿ ತಮ್ಮ ಅಭಿಪ್ರಾಯ ನಿರೂಪಿಸಿದ್ದಾರೆ- "ನುಡಿದಂತೆ ನಡೆಯಬೇಕು; ಆದರೆ ಬರೆಯಬಾರದು" ಅಂತ.


ಅವರು ಆ ಅಭಿಪ್ರಾಯಕ್ಕೆ ಬರುವ ಮುನ್ನ ಹುಟ್ಟಿಕೊಂಡ ಚರ್ಚೆ, ಗ್ರಾಂಥಿಕ ಕನ್ನಡದ ಬಗ್ಗೆ. ನಾವು ಮಾತನಾಡುವುದೇ ಬೇರೆ ರೀತಿ, ಬರೆಯುವುದೇ ಬೇರೆ ರೀತಿ. "ಈ ಭೇದ ಬೇಡ" ಅಂತ ಕೆಲವರ ನಿಲುವು. "ಹೇಗೆ ಮಾತನಾಡುತ್ತೇವೆಯೋ ಹಾಗೆಯೇ ಬರೆಯೋಣ" ಎನ್ನುತ್ತಾರವರು. ಇದರಿಂದ ಭಾಷೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆನ್ನುವುದು ಅವರ ಆಶಯ.


ಶ, ಷಗಳನ್ನು ತೆಗೆಯಬಹುದು, ಸ ಒಂದೇ ಸಾಕಾಗುತ್ತದೆ; ಮಹಾಪ್ರಾಣಗಳೇ ಬೇಡ; ದೀರ್ಘವನ್ನು ಬಿಟ್ಟುಬಿಡೋಣ; ಮುಂತಾದ ಅಭಿಪ್ರಾಯಗಳಿಗೆ ಅವರು ಬಂದಿದ್ದಾರೆ. ಇಷ್ಟೇ ಆದಾಗ 'ತುಂಬ ಸರಳ ಆಯ್ತಲ್ಲ' ಅಂತ ಅನ್ನಿಸತ್ತೆ.


ಭಾಷೆಯೊಂದರ ವ್ಯಾಕರಣಬದ್ಧತೆಯನ್ನು ಕಳಚಿ ಬಿಟ್ಟರೆ, ಭಾಷೆಯ ಭಾವವಿನಿಮಯದ ಉದ್ದೇಶ ವಿಫಲವಾಗತ್ತೆ. ಒಂದು ಪ್ರದೇಶದಲ್ಲಿ ವಾಸಿಸುವವರು ತಮ್ಮ ಭಾವ ವಿನಿಮಯಕ್ಕೆ ಸಂಕೇತಿಸಿಕೊಂಡದ್ದು ಈ ಕನ್ನಡ ಭಾಷೆ. ಕನ್ನಡದಲ್ಲಿ ಇಂದು ಮಾತನಾಡುವ ಭಾಷೆಯಲ್ಲಿ ಸಹಸ್ರ ಬಗೆಗಳುಂಟಾಗಿವೆ. ಜಾತಿಯ ಭಾಷೆಗಳು - ವರ್ಗದ ಭಾಷೆಗಳು - ಪ್ರದೇಶದ ಭಾಷೆಗಳು - ವೃತ್ತಿಯ ಭಾಷೆಗಳು . . . ಹೀಗೆ. ಇದರಲ್ಲೂ ಸಹ ಒಳಭೇದಗಳಿವೆ. ಉದಾಹರಣೆಗೆ ನಾನು ಮನೆಯಲ್ಲಿ ಮಾತನಾಡುವ ಹವ್ಯಕ ಕನ್ನಡ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡದ ಹವ್ಯಕರ ಭಾಷೆ ಬೇರೆ ಬೇರೆ. ಅಷ್ಟೇ ಅಲ್ಲದೆ, ಹವ್ಯಕರು ವಾಸಿಸುವ ಪ್ರದೇಶಗಳಲ್ಲಿನ ಸೀಮಾ ವ್ಯವಸ್ಥೆಗಳಲ್ಲಿ ಇದು ಬೇರೆ ಬೇರೆ.


ಹೀಗಿರುವಾಗ ಮಾತನಾಡಿದಂತೆಯೇ ಬರೆಯಹೊರಟರೆ, ಬರೆದದ್ದು ಸಮಸ್ತ ಕನ್ನಡಿಗರಿಗೆ ಅರ್ಥವಾದೀತೇ? ಖಂಡಿತ ಅರ್ಥವಾಗದು.

ಹಾಗಾಗಿಯೇ ಸಾಹಿತ್ಯಕವಾಗಿ, ಗ್ರಾಂಥಿಕವಾಗಿ ಕನ್ನಡದ ಬೇರೆಯದೇ ರೂಪದ ಅಸ್ತಿತ್ವ ಅನಿವಾರ್ಯ.

2 comments:

Gowtham said...

ತಮ್ಮ ಮಾತು 100ಕ್ಕೆ 100ರಷ್ಟು ಸತ್ಯ, ನನ್ನ ಅಭಿಪ್ರಾಯವೂ ಇದೆ ಆಗಿದೆ, ತಮ್ಮ ಈ ಎಲ್ಲಾ ಲೇಖನ ಮನಮುದಗೊಳಿಸುತ್ತಿದೆ, ಬ್ಲಾಗ್ ಗಳೆಂಬ ತಾಣ ಸದೃಢಗೊಂಡಿದೆ

Unknown said...

ತುಂಬಾ ಒಳ್ಳೆಯ ಅಭಿಪ್ರಾಯ.



ಆರ್.ಶರ್ಮಾ