Saturday 28 June, 2008

ತಿಂದ ದೋಸೇಲಿ ಭಿನ್ನರಾಶಿ ಕಲಿಸ್ಬಹುದಾ!?!

"ಶಿಕ್ಷಣ" ಇಂದು ಬಹು ಚರ್ಚಿತ ವಿಷಯ. "ಕಲಿಸುವುದು ಹೇಗೆ?" ಅನ್ನೋದನ್ನೇ ಪ್ರಧಾನ ವಿಷಯವಾಗಿಸಿಕೊಂಡು ಇಂದು ಚರ್ಚೆ ಸಾಗಿದೆ. "ಏನನ್ನು ಕಲಿಸಬೇಕು"? ಅನ್ನುವಷ್ಟೇ ಪ್ರಾಧಾನ್ಯ "ಹೇಗೆ ಕಲಿಸಬೇಕು"? ಅನ್ನೋದಕ್ಕೂ ಸಿಕ್ಕಿದೆ.

ನಾವು 'ಗುರುಕುಲ'ದ ಕನಸು ಕಟ್ಟಿದಾಗ ನಮ್ಮ ಯೋಚನೆ ಇದ್ದದ್ದು ಇದೇ. ಇವತ್ತು ನಮ್ಮ ಶಾಲೆಗಳು ಕಲಿಸುತ್ತಿರುವುದನ್ನು ಬೇರೆ ವಿಧಾನದಲ್ಲಿ, ಇನ್ನೂ ಸುಲಭವಾಗಿ, ಇನ್ನೂ ಸರಳವಾಗಿ, ಇನ್ನೂ ಬೇಗ ಕಲಿಸಬಹುದೇ ಅಂತ.

ಈ ವಿಷಯದ ಬಗ್ಗೆ ನಾವು ತುಂಬಾ ಪ್ರಯೋಗ ಮಾಡಿದೆವು. ಎಲ್ಲ ಪ್ರಯೋಗಗಳ ಕೊನೆಗೆ ಸಿಕ್ಕ ಫಲಿತಾಂಶ ಅಂದ್ರೆ, ನಾವು ಅಂದುಕೊಂಡದ್ದನ್ನು ಸಾಧಿಸಬಹುದು ಅಂತ. ಈಗ್ಲೇ ಇದೆಲ್ಲ ಆಗಿದೆ ಅಂತ ಅಲ್ಲ, ಮಾಡಬಹುದು ಅಷ್ಟೇ.

ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ಎಷ್ಟು ಸುಲಭವಾಗಿ ಪಾಠ ಮಾಡಬಹುದು ಅನ್ನುವುದರ ಬಗ್ಗೆ ನಿನ್ನೆ ಸಿಕ್ಕ ಘಟನೆಯೊಂದು ಈ ಮಾತುಗಳನ್ನು ಬರೆಯುವಂತೆ ಮಾಡಿತು.

ನಮ್ಮ ಜಟ್ಟೀಮನೆ ಗಣಪತಣ್ಣ ಹೇಳಿದ ಘಟನೆ -
ಅವರು ಮೂರನೆಯ ತರಗತಿಯಲ್ಲಿದ್ದ ಸಮಯ. ಅವರಿಗಾಗ ಗಣಿತ ಬಲು ಕಷ್ಟದ ವಿಷಯ. ಅರ್ಥವೇ ಆಗುತ್ತಿರಲಿಲ್ಲವಂತೆ. ಅದರಲ್ಲೂ 'ಭಿನ್ನರಾಶಿ' ಅಂದ್ರೆ ಏನೂ ಅಂತನೇ ಗೊತ್ತಾಗ್ತಾ ಇರಲಿಲ್ಲವಂತೆ. ಒಬ್ಬ ಹೊಸ ಮೇಷ್ಟ್ರು ಅವತ್ತು ಗಣಿತ ಕಲಿಸಲು ಬಂದ್ರು. ಇವರಿಗೆ ಭಿನ್ನರಾಶಿ ಬರಲ್ಲ ಅಂತ ಗೊತ್ತಾಯ್ತು. ಆಗ ಅವರು ಪಾಠ ಮಾಡಿದ್ದು ಹೀಗೆ -
"ನಿಮ್ಮ ಮನೇಲಿ ಇವತ್ತು ದೋಸೆ ಮಾಡಿದಾರೆ ಅಂದ್ಕೋ. ನಿನ್ನ ತಟ್ಟೇಲಿ ದೋಸೆ ಇದೆ. ನೀನದನ್ನ ನಾಲ್ಕು ಪಾಲು ಮಾಡ್ತೀಯಾ. ಅದರಲ್ಲಿ ಒಂದು ಪಾಲು ತಿಂತೀಯಾ. ಮೊದಲು ನಾಲ್ಕು ಪಾಲು ಇತ್ತು. ಈಗ ಒಂದು ಪಾಲು ತಿಂದೆ. ಎಷ್ಟು ಪಾಲು ನಿನ್ನ ತಟ್ಟೇಲಿ ಉಳೀತು? ಕೂಡಲೇ ಉತ್ತರ ಬಂತು - ಮೂರು ಪಾಲು ಅಂತ. ಅದನ್ನು ನಾಲ್ಕನೇ ಮೂರು ಭಾಗ ಅಂತ ಕರೀತಾರೆ. ಹಾಗಾದ್ರೆ ಈಗ ಹೇಳು, ನೀನು ತಿಂದ ಭಾಗ ಎಷ್ಟು? ಮತ್ತೆ ಕೂಡಲೇ ಉತ್ತರ - "ನಾಲ್ಕನೇ ಒಂದು ಭಾಗ".

ಭಿನ್ನರಾಶಿ ತನಗೆ ಬಂತು ಅನ್ನುವ ಅನಿಸಿಕೆ ತಂದ ಆತ್ಮವಿಶ್ವಾಸ, ಗಣಪತಣ್ಣ ಗಣಿತದಲ್ಲಿ ಹಿಂದಿರುಗಿ ನೋಡದಂತೆ ಮಾಡಿತು.

ಇದೇ ಶಿಕ್ಷಣ. ಇಷ್ಟೇ ಅದರ ಗುಟ್ಟು.

ಕೀರ್ತಿಶೇಷ ಡಿ.ವಿ.ಜಿ. ಇದನ್ನೇ ಸುಂದರವಾಗಿ ಹೇಳ್ತಾರೆ - ಸಾವಿರ ಶಾಸ್ತ್ರ ವಾಕ್ಯಗಳಿಗಿಂತ ಸರಿಯುದಾಹರಣೆ ಲೇಸು ಅಂತ.

1 comment:

SHILU..... said...

ಶರ್ಮಾಜಿ ಲೇಖನಗಳು ತುಂಬಾ ಚನ್ನಾಗಿ ಮುಡಿಬರುತ್ತಿವೆ .......... ಧನ್ಯವಾದಗಳು