Wednesday 16 July, 2008

"ಶಿಕ್ಷಣ ಕ್ರಾಂತಿ"! ಭ್ರಾಂತಿಯೇ?

ಓಶೋ ವಿಚಾರಧಾರೆಯೇ ಹಾಗೆ. ಯಾವ ವಿಷಯದ ಕುರಿತು ಅವರು ಮಾತನಾಡಿದರೂ ಅದು ಅದೇ ವಿಷಯದ ಉಳಿದೆಲ್ಲರ ವಿಚಾರಕ್ಕಿಂತ ಭಿನ್ನವಾಗಿರುತ್ತದೆ.


ಓಶೋ ನುಡಿಯುವ ಅಸಂಖ್ಯ ವಿಚಾರಗಳು ಭಾರತೀಯ ನೈಜ ವಿಚಾರಧಾರೆಗೆ ನೇರವಾಗಿ ಸಮನ್ವಿತವಾಗಿರುತ್ತದೆ. ಹಾಗಾಗಿಯೇ ಓಶೋ ಪುಸ್ತಕ ಆಪ್ಯಾಯಮಾನವೆನಿಸುವುದು.


ಶಿಕ್ಷಣದ ಹೊಸ ಪ್ರಣಾಳಿಕೆಗಾಗಿ ಪ್ರಯತ್ನಿಸುತ್ತಾ ಗುರುಕುಲದ ಕನಸು ಹೊತ್ತ ನನಗೆ ಓಶೋರ "ಶಿಕ್ಷಣ ಕ್ರಾಂತಿ"ಯ ಈ ವಿಚಾರಧಾರೆ ನಮ್ಮ ಚಿಂತನೆಗೆ ಸಂವಾದಿ ಎನಿಸಿತು.

ಒಂದಿಷ್ಟು ವಿಚಾರಗಳು ಇಲ್ಲಿವೆ ನೋಡಿ -


* ಮನುಷ್ಯನಲ್ಲಿರುವ ಮೊಗ್ಗು ಸಂಪೂರ್ಣವಾಗಿ ಅರಳುತ್ತಿಲ್ಲ. ಮನುಷ್ಯನಲ್ಲಿಯ ಹೂ ಪೂರ್ಣವಾಗಿ ಅರಳಿದಾಗ - ಕೃಷ್ಣ, ಬುದ್ಧ, ಕ್ರಿಸ್ತನಂತವರ ಆನಂದ, ಕಣ ಕಣದಲ್ಲೂ ತುಂಬಿ ತುಳುಕಾಡುತ್ತದೆ. ನಮಗೆ ಹೀಗೆ ಅರಳಲಾಗುತ್ತಿಲ್ಲ.ನನ್ನ ದೃಷ್ಟಿಯಲ್ಲಿ ಎಷ್ಟೇ ಕಷ್ಟ ಬಂದರೂ ಸರಿಯೇ, ಪ್ರತಿವ್ಯಕ್ತಿಯ ಒಳಗಿರುವ ಹೂ ಅರಳುವಂತೆ ಸಹಕರಿಸುವ ಶಿಕ್ಷಣದ ಪ್ರಯೋಗಗಳನ್ನು, ಪ್ರಕ್ರಿಯೆಗಳನ್ನು ಕಂಡುಹಿಡಿಯಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಾಗಬಾರದು, ಶಿಕ್ಷಣ ಸಂಸ್ಥೆಗಳು ಪ್ರತಿ ವ್ಯಕ್ತಿಗೂ ತನ್ನ ಆತ್ಮಾನ್ವೇಷಣೆಯ ಶಾಲೆಯಾಗಬೇಕು.ಆಗವರು ತಮ್ಮ ಆತ್ಮಾನ್ವೇಷಣೆಯ ಯಾತ್ರೆಯಲ್ಲಿ ಮುಂದೆ ಸಾಗುವರು. ಆಗವರು ತಾವ್ಯಾರು, ತಾವೇನಾಗಬಹುದು ಎಂಬುದನ್ನು ಕಂಡುಕೊಳ್ಳುವರು.


* ಪ್ರತಿವ್ಯಕ್ತಿಯೊಳಗೆ ಹುದುಗಿರುವ ಹೂವನ್ನು ಅರಳಿಸುವ, ಸಹಜ ಸ್ಫೂರ್ತಿ ಬರುವಂತೆ ನಾವೇನು ಮಾಡಬೇಕೆಂಬ ವಿಚಾರ ಬಲು ವಿಸ್ತಾರವಾದ ವಿಚಾರ. ನಾವಿಷ್ಟಾದರೂ ಮಾಡಬಹುದು. ಪ್ರತಿ ವ್ಯಕ್ತಿಯೂ ಬೇರೆಬೇರೆ. ಎಲ್ಲರನ್ನೂ ಒಂದೇ ತರಹ ಮಾಡಲಾಗದು, ಮಾಡಲೂಬಾರದು ಎಂಬ ತಿಳುವಳಿಕೆ ನಮಗೆ ಬಂದರೆ ಸಾಕು, ನಮಗಿದು ಸ್ವೀಕೃತಿ ಆದರೆ ಸಾಕು, ಬಲು ಗಹನವಾದ , ಆಳವಾದ ಪರಿಣಾಮವನ್ನು ತರಬಹುದು. ಉದಾಹರಣೆಗೆ - ಒಬ್ಬ ವಿದ್ಯಾರ್ಥಿ ಗಣಿತದಲ್ಲಿನ ಹಿಂದೆ ಇದ್ದರೆ, ಆತ ಗಣಿತದಲ್ಲಿ ಸುಧಾರಿಸಿದರೆ ಮಾತ್ರ ಆತನನ್ನು ಮುಂದಿನ ತರಗತಿಗೆ ಹೋಗಲು ಅವಕಾಶ ಕೊಡುತ್ತೇವೆ ಎಂದು ಶಿಕ್ಷಣ ಸಂಸ್ಥೆ ಒತ್ತಾಯಿಸಬಾರದು. ಗಣಿತವೇನು ಅಂತಹ ದೊಡ್ಡ ವಿಷಯವೇನಲ್ಲ, ಇದಿಲ್ಲದಿದ್ದರೆ ಆತ ಜೀವನ ನಡೆಸಲಿಕ್ಕಾಗದು ಎಂದೇನಿಲ್ಲ. ನಮ್ಮ ಈ ಒತ್ತಾಯದಿಂದ ಆಗುವುದೇನೆಂದರೆ, ಆ ವಿದ್ಯಾರ್ಥಿ ಒಂದು ಕೀಳರಿಮೆಯಿಂದ , ತನ್ನ ಬಗ್ಗೆ ಹೀನತಾಭಾವದಿಂದ ಪ್ರಪಂಚಕ್ಕೆ ಪ್ರವೇಶಿಸುತ್ತಾನೆ. ನಾನು ಗಣಿತದಲ್ಲಿ ದಡ್ಡ ಎಂಬೀತನ ಭಾವನೆ ಜೀವನದ ಎಲ್ಲ ಆಯಾಮಗಳಲ್ಲೂ ಸಹ ಸೋಲಿನ ಭಾವನೆಯನ್ನು ನಿರ್ಮಿಸುತ್ತದೆ.ಎಲ್ಲೇ ಹೋದರೂ ತಾನು ಸೋಲುವೆನೆಂಬುದು ಈತನ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ.

* * *

ನಮ್ಮ ಪೋಷಕರು ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಎಂದಿಗೇನೋ?

No comments: