Wednesday 15 September, 2010

ಸುಖವೇತಕೆ? ದುಃಖವದೇತಕೆ?

ಬದುಕೆಂದರೆ ಹಾಗೆ. ಒಮ್ಮೆ ಸುಖ; ಒಮ್ಮೆ ದುಃಖ. ಗೆಲುವೊಮ್ಮೆ; ಸೋಲು ಇನ್ನೊಮ್ಮೆ. ಆಶಾವಾದವೊಂದು ಬಾರಿ; ಏನೂ ಬೇಡವೆನ್ನುವ ನಿರಾಶೆ ಮತ್ತೊಂದು ಬಾರಿ. ಹೀಗೆ ಒಂದಾದ ಮೇಲೊಂದು ಸುತ್ತುತ್ತಲೇ ಇರುತ್ತದೆ.

ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |
ಚಕ್ರವತ್ಪರಿವರ್ತಂತೇ ದುಃಖಾನಿ ಚ ಸುಖಾನಿ ಚ ||

ಸುಖ-ದುಃಖಗಳು ಚಕ್ರದಂತೆ ಸುತ್ತುತ್ತಲೇ ಇರುತ್ತವೆ ಎನ್ನುತ್ತದೆ ಈ ಅನುಭವಿಯ ಮಾತು.

ಸುಖ, ಗೆಲುವುಗಳು ನಮ್ಮನ್ನು ಬೀಗಿವಂತೆ ಮಾಡಿದರೆ ದುಃಖ, ಸೋಲುಗಳು ಕಂಗೆಡುವಂತೆ ಮಾಡುತ್ತವೆ. ಸಂತೋಷವಿದ್ದಾಗ ಎಲ್ಲವೂ ಸುಂದರವೆನಿಸಿದರೆ ದುಃಖ ಅದೆಲ್ಲವನ್ನೂ ಭೀಕರಗೊಳಿಸುತ್ತದೆ. ಸುಖದಲ್ಲಿದ್ದಾಗ ರುಚಿಯೆನಿಸಿದ ಊಟ ದುಃಖದಲ್ಲಿ ಬೇಡವೇ ಬೇಡವೆನಿಸುತ್ತದೆ. ಸುಖದಲ್ಲಿದ್ದಾಗ ಸಂಗಾತಿಯ ಮಾತು ಮಧುರ ಸಂಗೀತವೆನಿಸಿದರೆ ದುಃಖದಲ್ಲಿದ್ದಾಗ ಅದು ಕರ್ಣಕಠೋರವೆನಿಸಿಬಿಡುತ್ತದೆ. ಸುಖದಲ್ಲಿದ್ದಾಗ ಹತ್ತಿರ ಬಂದ ಮಗುವನ್ನು ಬಾಚಿ ತಬ್ಬಿಕೊಳ್ಳುತ್ತೇವಾದರೆ ದುಃಖದಲ್ಲಿದ್ದಾಗ
ಗಮನಿಸಿಯೂ ಗಮನಿಸದಂತಿದ್ದುಬಿಡುತ್ತೇವೆ. ಸುಖದಲ್ಲಿದ್ದಾಗ ಸ್ವಚ್ಛವಾದ ಗರಿಗರಿ ಬಟ್ಟೆ ಉಡುತ್ತಿದ್ದವರು ದುಃಖದಲ್ಲಿದ್ದಾಗ ಹೇಗಾದರೆ ಹಾಗೆ ಇರುತ್ತೇವೆ. ಆಗಾಗ ಬದುಕು ಹೀಗೇಕೆ ಎಂದುಕೊಳ್ಳುತ್ತಿರುತ್ತೇವೆ.

ಅವರು ನಮ್ಮಷ್ಟು ಒಳ್ಳೆಯವರಲ್ಲ; ನಮ್ಮಷ್ಟು ಬೇರೆಯವರಿಗೆ ಸಹಾಯ ಮಾಡಿಲ್ಲ; ದಾನ-ಧರ್ಮವಂತೂ ಅವರ ವಂಶದಲ್ಲೇ ಇಲ್ಲ; ದೇವರಿಂದ ಅವರು ಮಾರುದೂರು; ಆದರೂ ಅವರು ಸುಖವಾಗಿದ್ದಾರೆ; ಅವರಿಗೆ ಕಷ್ಟಗಳೇ ಬರುವುದಿಲ್ಲ; ನಮಗೆ ಮಾತ್ರ ಕಷ್ಟ ಎಂದು ಇನ್ಯಾರನ್ನೋ ನೋಡಿ ಅಂದುಕೊಳ್ಳುತ್ತೇವೆ. ನಾವು ತಪ್ಪು ಮಾಡದೆಯೂ ಕಷ್ಟ ಪಡುವುದು, ಇನ್ನೊಬ್ಬರು ತಪ್ಪು ಮಾಡಿಯೂ ಸುಖವಾಗಿರುವುದು ನಮ್ಮ ಕಷ್ಟಗಳನ್ನು ಮತ್ತಷ್ಟು ಅಸಹನೀಯಗೊಳಿಸಿಬಿಡುತ್ತದೆ. ಕೆಲವೊಮ್ಮೆ ನಮಗೆ ಕಷ್ಟ ಕೊಟ್ಟವರೇ ಸುಖವಾಗಿರುವುದನ್ನು ಕಂಡಾಗಲಂತೂ ದೈವದ ಮೇಲೆಯೇ ಮುನಿಸಿಕೊಳ್ಳುತ್ತೇವೆ.

ಆದರೆ ವಾಸ್ತವವೇ ಬೇರೆ. ಸುಖ-ದುಃಖಗಳೆರಡೂ ನಮ್ಮದೇ ಕೂಸುಗಳು. ನಾವನುಭವಿಸುತ್ತಿರುವ ಸುಖ-ದುಃಖಗಳ ಅಪ್ಪನೂ ನಾವೇ, ಅಮ್ಮನೂ ನಾವೇ. ನಾವು ಮಾಡಿದ್ದನ್ನೇ ನಾವನುಭವಿಸುತ್ತೇವೆ. ಸೃಷ್ಟಿಯ ಜೀವನಸೂತ್ರದಲ್ಲಿ ತಪ್ಪು ಮಾಡಿದವನಿಗೆ ಶಿಕ್ಷೆ ನಿಶ್ಚಿತ, ತಪ್ಪು ಮಾಡದವನಿಗೆ ರಕ್ಷೆ ನಿಶ್ಚಿತ. ಇಂದು ಅನುಭವಿಸುತ್ತಿರುವ ನೋವಿಗೆ ಈ ಜನ್ಮದಲ್ಲಿ ಕಾರಣ ಕಾಣದಿದ್ದರೆ ಪೂರ್ವಜನ್ಮದಲ್ಲಿ ಅಂತಹ ತಪ್ಪು ನಡೆದಿದೆ ಎಂದರ್ಥ. ನಾವೇ ಹಿಂದಿನ ಜನ್ಮಾಂತರದಲ್ಲಿ ಮಾಡಿದ ಕರ್ಮವನ್ನು ಈ ಜನ್ಮದಲ್ಲಿ ಅನುಭವಿಸುತ್ತಿರುತ್ತೇವೆ ಅಷ್ಟೆ. ಇನ್ನೊಬ್ಬ ಈ ಜೀವನದಲ್ಲಿ ಸುಖಿಯೆನಿಸಿದರೆ ಅದವನ ಹಿಂದಿನ ಜನ್ಮದ ಕರ್ಮಪಾಕವಷ್ಟೆ.

ಸುಖಸ್ಯ ದುಃಖಸ್ಯ ನ ಕೋಪಿ ದಾತಾ
ಪರೋ ದದಾತೀತಿ ಕುಬುದ್ಧಿರೇಷಾ |
ಅಹಂ ಕರೋಮೀತಿ ವೃಥಾಭಿಮಾನಃ
ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ ||

ನಮಗಾರೂ ಸುಖ ನೀಡರು; ದುಃಖವನ್ನೂ ನೀಡರು. ಅವರಿವರಿಂದ ಸುಖವಾಯಿತು, ದುಃಖವಾಯಿತು ಎಂಬುದು ಭ್ರಮೆ. ಹಾಗೆಯೇ ನಾನು ಯಾರಿಗಾದೂ ಸುಖ ನೀಡುತ್ತೇನೆ, ದುಃಖ ನೀಡುತ್ತೇನೆ ಎಂಬುದೂ ಭ್ರಮೆಯೇ. ಯಾಕೆಂದರೆ ಪ್ರತಿಯೊಬ್ಬನೂ ಪ್ರತಿಕ್ಷಣವೂ ತನ್ನದೇ ಕರ್ಮದ ಫಲವನ್ನು ಅನುಭವಿಸುತ್ತಿರುತ್ತಾನೆ.

4 comments:

ಯಜ್ಞೇಶ್ (yajnesh) said...

Welcome back.

ತುಂಬಾ ಮಾರ್ಮಿಕವಾಗಿ ಬಂದಿದೆ. ಮನಸ್ಸಲ್ಲಿ ಸದ್ದಿಲ್ಲದೆ ಚಿಂತನೆಯ ಕುಡಿ ಹೊತ್ತಿದೆ.

ಧನ್ಯವಾದಗಳು.

Suresh Bhat Adagodi said...

ತುಂಬಾ ಚೆನ್ನಾಗಿದೆ.
ವಿಷಯ ಮನಕ್ಕೆ ಹೊಕ್ಕರೂ ಮರು ಕ್ಷಣದಲ್ಲಿಯೇ ಮತ್ತೆ ಅದೇ ಸುಖ-ದುಃಖದ ಗೊಂದಲದಲ್ಲಿ ಮನಸ್ಸು... ಯಾಕೆ ಹೀಗೆ?

lohith said...

'ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ'

Suresh Bhat Adagodi said...
This comment has been removed by a blog administrator.