Wednesday 4 February, 2009

ಮನುಭಾಷಿತ - 14

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಆಸೆ"-

ಜಗದ ಅಸ್ತಿತ್ವಕ್ಕೆ ಇದೇ ಕಾರಣ. ಈಗಿನ್ನೂ ಕಣ್ಬಿಟ್ಟ ಹಸುಗೂಸಿನಿಂದಾರಂಭಿಸಿ ಜೀರ್ಣಗೊಂಡ ಹಿರಿಯಜ್ಜನವರೆಗೂ ಆಸೆ ಸಾಮಾನ್ಯವೇ. ಬಣ್ಣ ಬೇರೆ, ಒಳ ಆಕೃತಿ ಒಂದೇ.

ಜಗತಿನ ಇತಿಹಾಸ - ವರ್ತಮಾನ - ಭವಿಷ್ಯತ್ತುಗಳನ್ನು ತುಂಬಿ ನಿಂತ ಮಹಿಮೆ ಅದರದ್ದು.

ಅದರಿಂದಾಗಿಯೇ ಎಲ್ಲ ; ಅದಿಲ್ಲದೆ ಏನೂ ಇಲ್ಲ.

ಕವಿಯೊಬ್ಬ ಹೃದ್ಯವಾಗಿ ಅದರ ದೊಡ್ಡತನವನ್ನು ತಿಳಿಸುತ್ತಾನೆ -
"ಪರ್ವತ ದೊಡ್ಡದು ; ಅದಕ್ಕಿಂತ ಸಮುದ್ರ ; ಸಮುದ್ರವನ್ನು ಮೀರಿದ್ದು ಆಗಸ ; ಆಗಸ ಬ್ರಹ್ಮನಷ್ಟಲ್ಲ ; ಆಸೆ ಬ್ರಹ್ಮನಿಗಿಂತಲೂ ದೊಡ್ಡದು".

ಭಗವಂತನ ಜಗತಿನ ರಚನೆಯನ್ನೇ "ಹಾಗಿರಬೇಕಿತ್ತು - ಹೀಗಿರಬೇಕಿತ್ತು" ಎಂದು ಕಲ್ಪಿಸಬಲ್ಲದು ಆಸೆ.

ಸೃಷ್ಟಿಯಾರಂಭವೇ ಆಸೆಯಿಂದ ಎನ್ನುತ್ತದೆ ಉಪನಿಷತ್ತು - "ಸೋಕಾಮಯತ" ಎಂದು.

ಮನುವೂ
"ಪ್ರಜೆಗಳನ್ನು ಸೃಷ್ಟಿಸಲು ಹೊರಟ ಭಗವಂತ ಮೊದಲು ಇಚ್ಛೆಯನ್ನು ಸೃಷ್ಟಿಸಿದ" ಎನುತ್ತಾನೆ.

ಹೀಗೆ ಸೃಷ್ಟಿಯನ್ನು ಆಮೂಲಾಗ್ರ ವ್ಯಾಪಿಸಿದ ಆಸೆಯ ಸ್ಥಾನ ಜೀವನದಲ್ಲೇನು? ಎನುವ ಜಿಜ್ಞಾಸೆಗಿಳಿದರೆ "ಆಸೆ ನಿಯಂತ್ರಿತವಾಗಬೇಕು" ಎನ್ನುವುದೇ ಹಲವರ ಅಭಿಮತ.

ಯಾರು ಆಸೆಗೆ ದಾಸರೋ ಅವರು ಲೋಕಕ್ಕೇ ಅಡುಯಾಳು ;
ಯಾರಿಗೆ ಆಸೆಯೇ ಅಡಿಯಾಳೋ ಅವರು ಲೋಕದ ಒಡೆಯರು-

ಆಶಾಯಾ ಯೇ ದಾಸಾಃ ತೇ ದಾಸಾಃ ಸರ್ವಲೋಕಸ್ಯ |
ಅಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ||ಎನ್ನುತ್ತಾನೆ ಅನುಭವಿ.

ಮನು ಆಸೆಯ ಕುರಿತಾಗಿ ಜೀವಲೋಕಕ್ಕೆ ಅಮರಸಂದೇಶ ನೀಡುತ್ತಾನೆ. ಆ ಸಂದೇಶ ಪ್ರತಿ ವ್ಯಕ್ತಿಯ ಪ್ರಾತಃ ಸ್ಮರಣೀಯವಾಗಬೇಕು ; ಶಯನ ಪ್ರತಿಜ್ಞೆಯೂ ಆಗಬೇಕು.

ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ |
ಹವಿಷಾ ಕೃಷ್ಣವರ್ತ್ಮೇನ ಭೂಯ ಏವಾಭಿವರ್ಧತೇ ||

ಆಸೆ, ಅದರ ಅನುಭವದಿಂದ ಉಪಶಮನಗೊಳ್ಳುವುದಿಲ್ಲ ; ಆಸೆಯನ್ನು ಈಡೇರಿಸಿದಷ್ಟೂ ಅದು ವಿಜೃಂಭಿಸುತ್ತದೆ - ಅಗ್ನಿಗೆ ನೀಡುವ ಹವಿಸ್ಸಿನಿಂದ ಅಗ್ನಿಯ ಜ್ವಾಲೆ ಹೆಚ್ಚಾದಂತೆ.

ಆಸೆಯ ನಿಯಂತ್ರಣವೇ ಜೀವನ ಯಶಸ್ಸಿನ ಮಹಾಮಂತ್ರ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ

(ಧರ್ಮಭಾರತೀ ಅಂಕಣ ಬರಹ)

No comments: