Monday 2 February, 2009

ಮನುಭಾಷಿತ - 13

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ನಾವಿಷ್ಣುಃ ಪೃಥಿವೀಪತಿಃ - ವಿಷ್ಣುವಾಗದವ ಭೂಮಿಯಾಳಲಾರ".
ಸನಾತನ ಸಂಸ್ಕೃತಿ ಪ್ರಭುತ್ವಕ್ಕೆ ಕೊಡುವ ಅದ್ಭುತ ವಿವರಣೆ.

ಜೀವಜಗತ್ತು ಸುಖಮಯವಾಗಿ ಬದುಕಲು ಪ್ರಭುತ್ವ ಬೇಕು, ಪ್ರಭು ಬೇಕು. ರಾಜನಿಲ್ಲದೆ ಅರಾಜಕಸ್ಥಿತಿಯ ದೇಶ ವಾಸಕ್ಕೆ ಅನರ್ಹ. ಅರಾಜಕತ್ವ ಸೃಷ್ಟಿಗೆ ಭಯಕಾರಕ. ಆದ್ದರಿಂದಲೇ ಭಗವಂತನಿಂದ ರಾಜತ್ವದ ಸೃಷ್ಟಿ.

ಆದರೆ ರಾಜ ಹೇಗಿರಬೇಕು? ರಾಜನ ಗುಣ - ಸ್ವಭಾವ ಎಂತಿರಬೇಕು? ಎಂತಹ ವ್ಯಕ್ತಿತ್ವವುಳ್ಳವ ರಾಜನಾಗಬೇಕು?

ಚರ್ಚೆ ಇಂದಿನದು ಮಾತ್ರವಲ್ಲ ; ಹಿಂದಿನದೂ ಹೌದು. ನಾಳೆಯದು ಅಲ್ಲವೆನ್ನುವಂತೆಯೂ ಇಲ್ಲ. ಅಂದರೆ ಚರ್ಚೆ ಸಾರ್ವಕಾಲಿಕ.

ಚರ್ಚೆಯೇ ಸಾರ್ವಕಾಲಿಕವೆಂದಾದರೆ ವಿಷಯಕ್ಕೊಂದು ನಿರ್ಣಯವಿಲ್ಲ ಎಂದಾಯಿತು. ವಾಸ್ತವ ಹಾಗಿಲ್ಲ. ಎಂದೋ ಇದು ನಿರ್ಣೀತವಾದ ವಿಷಯ. ಹಾಗಿದ್ದರೆ ಚರ್ಚೆಯೇಕೆ? ಅದು ಅರ್ಥಮಾಡಿಕೊಳ್ಳದವರ ಕಾರ್ಯ. ಅರ್ಥಮಾಡಿಕೊಳ್ಳುವ ಮನಸ್ಸು ಮಾಡಿದರೆ...ಸಿದ್ಧವಿದೆ ಸಾನಾತನ ಸಾಹಿತ್ಯ.

ಮೂರ್ಧನ್ಯ ಸಾಹಿತ್ಯ ಮನುಸ್ಮೃತಿ ರಾಜಧರ್ಮವನ್ನು ವಿಸ್ತಾರವಾಗಿ ವಿವರಿಸುತ್ತದೆ. ವರ್ತಮಾನದ ರಾಜತ್ವದ ಸಮಸ್ಯೆಯಲ್ಲಿ ಪ್ರಧಾನವಾದುದು ಭ್ರಷ್ಟಾಚಾರ. ಭ್ರಷ್ಟಾಚಾರಕ್ಕೆ ಕಾರಣ ಭೋಗಲಾಲಸೆ.

ಪರಿಹಾರ?

ಮನುಭಾಷಿತ ಹೀಗಿದೆ -

ಇಂದ್ರಿಯಾಣಾಂ ಜಯೇ ಯೋಗಂ ಸಮಾತಿಷ್ಠೇದ್ದಿವಾನಿಶಮ್ |
ಜಿತೇಂದ್ರಿಯೋ ಹಿ ಶಕ್ನೋತಿ ವಶೇ ಸ್ಥಾಪಯಿತುಂ ಪ್ರಜಾಃ ||

ರಾಜನಾದವನು ರಾತ್ರಿ - ಹಗಲು ಇಂದ್ರಿಯ ಜಯಕ್ಕಾಗಿ ಪ್ರಯತ್ನಶೀಲನಾಗಬೇಕು. ಜಿತೇಂದ್ರಿಯನಾದವನೇ ಪ್ರಜಾಪಾಲನೆಗೆ ಅರ್ಹ.

ದೇಶದ ಸಂಪತ್ತೂ ರಾಜನ ಅಧೀನ. ಅಧೀನವಾಗಿಸದಿದ್ದರೆ ಆಳುವುದು ಅಸಾಧ್ಯ. ಅಧೀನವಾಗಿಸಿದರೆ ದುರುಪಯೋಗ ಸಾಧ್ಯ.

ರಾಜವ್ಯವಸ್ಥೆಯ ಆರಂಭಿಕ ಹಂತದಲ್ಲಿಯೇ ಇದನ್ನು ಚಿಂತಿಸಿದ ಮನು ಸೂಚಿಸಿದ ಪರಿಹಾರ "ಇಂದ್ರಿಯಜಯ".

ಇದನ್ನೇ ಕೌಟಿಲ್ಯ ಪುನರುಚ್ಚರಿಸಿದ -

"ಅರಿಷಡ್ವರ್ಗತ್ಯಾಗೇನೇಂದ್ರಿಯಜಯಂ ಕುರ್ವೀತ - ರಾಜನು ಅರಿಷಡ್ವರ್ಗವನ್ನು ತ್ಯಜಿಸಿ ಜಿತೇಂದ್ರಿಯನಾಗಬೇಕು" ಎಂದು.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

No comments: