Sunday 19 October, 2008

ಮನುಭಾಷಿತ - 4

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)



ಜೀವನದ ಹಾದಿ ದುರ್ಗಮ. ಅದು ರಾಜವೀಥಿಯಲ್ಲ. ಅದರಲ್ಲಿ ಕಡಿದಾದ ಬೆಟ್ಟವಿದೆ ; ಆಳವಾದ ಪ್ರಪಾತವಿದೆ ; ಕೊರಕಲಿದೆ ; ಕಲ್ಲಿದೆ ; ಮುಳ್ಳಿದೆ ; ಎಲ್ಲಕ್ಕಿಂತ ಹೆಚ್ಚಾಗಿ ಗುರಿ ಮತ್ತು ಗುರಿ ತಲುಪುವ ವಿಷಯದಲ್ಲಿ ಕತ್ತಲೆಯಿದೆ.

ಇಂತಹ ಪಯಣ, ಮಾರ್ಗದರ್ಶಿ ಸಾಪೇಕ್ಷ. ಮಾರ್ಗದರ್ಶಿಯೇ 'ಗುರು'.

ಗುರು 'ಭಾರತ'ರ ಬದುಕಿನ ಪರಮೋಚ್ಚ ಸ್ಥಾನ. ಗುರುವಿಗೆ ಅಧೀನವಾಗದ ಯಾವೊಂದು ಕ್ಷಣವೂ ಬದುಕಿನಲ್ಲಿಲ್ಲ.

ಬದುಕಿನೆಲ್ಲ ಬೇಕುಗಳನ್ನು ಈಡೇರಿಸುವ ಗುರುವಿಗೆ ಸಲ್ಲಿಸಬೇಕಾದ ಕೃತಜ್ಞತೆಯೇ ಪರಮಾದರ ಸಮರ್ಪಣೆ.

ಆದರಣೀಯ ಗುರುವಿನ ನಿಂದೆ ಸಜ್ಜನಿಕೆಯಲ್ಲ. ಹಾಗೆಂದು ನಿಂದಿಸುವ ದುರ್ಜನರ ಅಸ್ತಿತ್ವವೂ ಇಲ್ಲದಿಲ್ಲ.

ಗುರುನಿಂದೆ ಮಹಾಪಾಪ. ನಿಂದಿಸುವ ಮಾತು ಹಾಗಿರಲಿ, ನಿಂದನೆಯನ್ನು ಕೇಳುವುದೂ ಪಾಪಕರ್ಮವೆನ್ನುವುದು ಮನುವಿನ ಅಭಿಮತ -

ಗುರೋರ್ಯತ್ರ ಪರೀವಾದಃ ನಿಂದಾವಾಪಿ ಪ್ರವರ್ತತೆ |
ಕರ್ಣೌ ತತ್ರ ಪಿಧಾತವ್ಯಂ ಗಂತವ್ಯಂ ವಾ ತತೋನ್ಯತಃ ||

ಎಲ್ಲಿ ಗುರುವಿಗೆ ಅವಮಾನ ನಡೆಯುತ್ತದೆಯೋ, ಎಲ್ಲಿ ಗುರುವಿನ ನಿಂದೆ ನಡೆಯುತ್ತದೆಯೋ ಅಲ್ಲಿ ಕಿವಿ ಮುಚ್ಚಿ ಕುಳಿತುಕೊಳ್ಳಬೇಕು ಅಥವಾ ಅಲ್ಲಿಂದ ಹೊರನಡೆಯಬೇಕು.

ಇದು ಮನುಭಾಷಿತ. ಈ ಮಾತಿನ ಅರ್ಥವ್ಯಾಪ್ತಿ ವಿಶಾಲ. ಗುರುನಿಂದೆಯ ಶ್ರವಣ ಮಾತ್ರದ ನಿಷೇಧ ಧ್ವನಿಸುವುದು ಅದರ ಭೀಕರತೆಯನ್ನು.

ನಿಂದ್ಯವಾದ ಅಂಶಗಳೇ ಇಲ್ಲದ ಗುರುವಿನ ನಿಂದೆ ಹೇಗೆ ಸಾಧ್ಯ? ಸಾಧ್ಯ, ಯಾಕೆಂದರೆ ನಿಂದಿಸುವ ನಾಲಿಗೆ ಅಂತಹದ್ದು. ಅದಕ್ಕೆ ಸರಿ - ತಪ್ಪುಗಳ ನಿರ್ಣಯವಿಲ್ಲ. ಆ ನಾಲಿಗೆಯ ಹಿಂದಿನ ಮನಸ್ಸು ಕಾಲುಷ್ಯಪೂರ್ಣ. ಸ್ವಯಂ ಕಲುಷಿತಗೊಂಡದ್ದು ಮಂಗಲವನ್ನು ಆಚರಿಸುವುದು ಹೇಗೆ? ಇಂತಹ ಮನಸ್ಸು ಆಡಿಸುವ ನಾಲಿಗೆಯನ್ನು ಕಂಡೇ ದಾಸರು -
ಅಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ........ಎಂದು ಹಾಡಿರುವುದು.

No comments: