Monday 29 September, 2008

ಮನುಭಾಷಿತ 2

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

(ಧರ್ಮ ಭಾರತಿಯ ಅಂಕಣ ಬರಹ)

ಜೀವಿಗೆ ಬದುಕುವುದು ಗುರಿ. ಮರಣ ಯಾರಿಗೆ ತಾನೇ ಅಪೇಕ್ಷಿತ? ಬದುಕಲು ಆಹಾರ ಅನಿವಾರ್ಯ. ಆಹಾರದಿಂದ ದೇಹಕ್ಕೆ ಪುಷ್ಟಿ; ಮನಕ್ಕೆ ತುಷ್ಟಿ.

"ಹೊಟ್ಟೆಯೆನ್ನುವ ಚೀಲವನ್ನು ತುಂಬಿಸುವುದು ಆಹಾರ." ಹೀಗೆಂಬ ನಂಬಿಕೆ ಇಂದಿನದ್ದು.

"ಆಹಾರದ ವ್ಯಾಪ್ತಿ ಅಧ್ಯಾತ್ಮದ ತುದಿ" ಹೇಗೆಂದು ಅರಿತವರು ಪ್ರಾಚೀನರು. ಪ್ರಾಚೀನರ ಈ ಶೋಧನೆಯೇ ಆಹಾರದ ನಿಯಮಾವಳಿಗೆ ಕಾರಣ.

ಇದು ಬೇಕೆಂದರು; ಅದು ಬೇಡವೆಂದರು. ಹೇಗೆ ಮಾಡೆಂದರು; ಹಾಗೆ ಮಾಡಲಾಗದೆಂದರು.

ನವೀನರಿಗಿದು ಮೈಯುರಿಸುವ ವಿಷಯ. ದೇಹ ಪುಷ್ಟಿ; ಮನಸ್ತುಷ್ಟಿ; ಇದಕ್ಕೇಕೆ ನಿಯಮಬದ್ಧತೆ?

ಇದು ಕಂಡವರಿಗೂ - ಕಾಣದವರಿಗೂ ಇರುವ ವ್ಯತ್ಯಾಸ. ಕಂಡವರು ಎಂದರು. ಕಾಣದವರು? ನೊಂದರು.

ಆಹಾರದಿಂದ ಸತ್ತ್ವ ಶುದ್ಧಿ; ಸತ್ತ್ವಶುದ್ಧಿಯಿಂದ ಭದ್ರವಾದ ನೆನಹು. ನೆನಹಿನ ಗಟ್ಟಿತನವೇ ಬದುಕಿನೆಲ್ಲ ನೋವುಗಳಿಂದ ಬಿಡುಗಡೆ. ಇದು ಕಂಡವರ ಊಟ. ನಮಗೆ? ಈ ನೋಟವೇ ಇಲ್ಲದಿರುವಾಗ ಆ ಊಟವೆಲ್ಲಿ?

ಆಹಾರದ ವ್ಯಾಪ್ತಿ ವಿಸ್ತಾರವಾದಂತೆ ಅದರ ಹಿರಿತನವೂ ಹೆಚ್ಚುತ್ತದೆ.

ಹಿರಿತನದ ಮಹಿಮೆಯೇ ಅಂತಹದ್ದು. ಅದು ಜೀವನಕ್ಕೆ ಬೇಕಾದ್ದನೆಲ್ಲ ಕೊಡುತ್ತದೆ. ಹಿಂಡಿದಷ್ಟೂ ರಸ ಸುರಿಸುವ ಕಬ್ಬಿನ ಜಲ್ಲೆಯಂತೆ.

ಹತ್ತಿರ ಸರಿದಷ್ಟೂ ಅದು ಎತ್ತರಕ್ಕೆ ಏರಿಸುತ್ತದೆ. ಎತ್ತರ ಪಡೆದಷ್ಟೂ ಉತ್ತಮಗೊಳಿಸುತ್ತದೆ.

ಇಂತಹ ಹಿರಿತನದ ಆಹಾರ, ಮನುವಿನ ಕಣ್ಣಿಗೆ ಕಾಣಿಸುವುದು ಹೀಗೆ -

ಪೂಜಯೇದಶನಂ ನಿತ್ಯಮದ್ಯಾಚ್ಚೈತದಕುತ್ಸಯನ್ |
ದೃಷ್ಟ್ವಾ ಹೃಷ್ಯೇತ್ಪ್ರಸೀದೇಚ್ಚ ಪ್ರತಿನಂದೇಚ್ಚ ಸರ್ವಶಃ ||

ನಿತ್ಯವೂ ಆಹಾರವನ್ನು ಪೂಜಿಸಬೇಕು; ನಿಂದಿಸಬಾರದು; ಕಂಡಮಾತ್ರಕ್ಕೆಯೇ ಸಂತೋಷ ಪಡಬೇಕು; ಅದನ್ನು ಅಭಿನಂದಿಸಬೇಕು.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ

2 comments:

ಯಜ್ಞೇಶ್ (yajnesh) said...

ಉತ್ತಮ ಲೇಖನ.

ಆಹಾರಕ್ಕೆ ಸಂಬಂದ ಪಟ್ಟ ಲೇಖನಗಳು ಧರ್ಮಭಾರತಿಯಲ್ಲಿ ಮೂಡಿಬರಲಿ. ಜನರಲ್ಲಿ ಆರೋಗ್ಯದ ಮಹತ್ವ ಮತ್ತು ಪ್ರಾಚೀನರ ಆಹಾರ ಪದ್ದತಿಯ ಬಗ್ಗೆ ಅರಿವು ಮೂಡಲಿ.

ಜಗದೀಶಶರ್ಮಾ said...

ಧನ್ಯವಾದ, ಯಜ್ಞೇಶ.