Friday 26 September, 2008

ಮನುಭಾಷಿತ 1

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)


'ಮನುಸ್ಮೃತಿ' ಸನಾತನಧರ್ಮದ ಆಧಾರ ಗ್ರಂಥ. ಬದುಕಿನ ಎಲ್ಲ ಎಳೆಗಳನ್ನೂ ಜೋಡಿಸಿ ಸುಸೂತ್ರಗೊಳಿಸುವ ಜೀವನಮಾರ್ಗದರ್ಶಿ. ಮನುಸ್ಮೃತಿ ಸ್ಪರ್ಶಿಸದ ಯಾವ ಕ್ಷೇತ್ರವೂ ಜೀವನದಲ್ಲಿಲ್ಲವೇನೋ ಎನ್ನುವಷ್ಟು ಹರಡಿದೆ ಇದರ ವಿಷಯವ್ಯಾಪ್ತಿ. ಮನುಸ್ಮೃತಿ ಮನುಮಹರ್ಷಿಗಳ ಉಪದೇಶ.

"ಯದ್ವೈ ಕಿಂ ಚ ಮನುರವದತ್ ತದ್ಭೇಷಜಮ್ - ಮನು ನುಡಿದದ್ದೆಲ್ಲವೂ ಜೀವನೌಷಧ" ಎಂದು ವೇದವಾಣಿ ಮೊಳಗುವಷ್ಟು ಮನುಮಹರ್ಷಿಗಳ ಮಾತಿಗೆ ಭಾರತೀಯ ಪರಂಪರೆಯಲ್ಲಿ ಉನ್ನತಸ್ಥಾನ.

ಅಂತಹ ಮನುಮಹರ್ಷಿಗಳ ಕೆಲವು ಮಾತುಗಳನ್ನು ಪರಿಚಯಿಸುವುದು ಈ ಅಂಕಣದ ಉದ್ದೇಶ.

ಅಂಕಣವಿದು "ಮನುಭಾಷಿತ". ಭಾಷಿತವೆಂದರೆ ಮಾತು. ಅಂಕಣದ ಮೊದಲ ಮಾತು ಮಾತಿನ ಕುರಿತಾದ ಮನುವಿನ ಮಾತಿನಿಂದ.

ಮಾತು ಬದುಕಿಗೆ ಅತ್ಯವಶ್ಯಕ. ಮಾತಿಲ್ಲದ ವ್ಯವಹಾರ ಪ್ರಪಂಚ ಊಹಾತೀತ. ಮಾತೆನ್ನುವ ಬೆಳಕು ಜಗತ್ತನ್ನು ಬೆಳಗದೇ ಇದ್ದಿದ್ದರೆ ಮೂರ್ಲೋಕಗಳೂ ಕತ್ತಲೆಯಲ್ಲಿ ಮುಳುಗುತ್ತಿದ್ದವು ಎನ್ನುತ್ತಾನೆ ಆಚಾರ್ಯದಂಡಿ.

ಮಾತು ಹೇಗಿರಬೇಕು?
ಮನುವಿನ ಮಾತಿನಲ್ಲಿಯೇ ಕೇಳುವುದಾದರೆ -
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾತ್ ಏಷಧರ್ಮಃ ಸನಾತನಃ ||

ಸತ್ಯವನ್ನಾಡಬೇಕು - ಪ್ರಿಯವನ್ನಾಡಬೇಕು.

ಇರುವುದನ್ನು ಇದ್ದಂತೆ ನುಡಿಯುವುದು ಸತ್ಯ. ಕೇಳುಗನ ಮನಸ್ಸು ಸಂತಸಪಡುವಂತೆ ನುಡಿಯುವುದು ಪ್ರಿಯ.

ಆದರೆ ಸತ್ಯವೆಲ್ಲವೂ ಪ್ರಿಯವಾಗಲಾರದು. ಹಾಗೆಯೇ ಪ್ರಿಯವೆಲ್ಲವೂ ಸತ್ಯವೂ ಆಗಲಾರದು.

ಅಪ್ರಿಯವಾದ ಸತ್ಯ - ಅಸತ್ಯವಾದ ಪ್ರಿಯ ಇವೆರಡು ಮಾತಿನ ವಿಷಯವಾದಾಗ?
ಸತ್ಯವೇ ಆಗಿದ್ದರೂ ಪ್ರಿಯವಲ್ಲವಾದರೆ ನುಡಿಯಬಾರದು. ಹಾಗೆಂದು ಪ್ರಿಯವೇ ಆಗಿದ್ದರೂ ಅಸತ್ಯವಾದರೆ ನುಡಿಯಬಾರದು.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

No comments: