Monday 7 July, 2008

ಕಾರಂತರೂ, ಬೆಟ್ಟದ ಜೀವವೂ

ಶಿವರಾಮ ಕಾರಂತರ 'ಬೆಟ್ಟದ ಜೀವ' ಓದಿದೆ. ಸಾಮಾಜಿಕವಾಗಿ ಉತ್ತಮ ಬದುಕು ಮಾಡಹೊರಡುವ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ. 'ಕಾದಂಬರಿ'ಯ ಕುರಿತಾದ ಇಂದಿನ ಮನೋಭೂಮಿಕೆಯನ್ನು ಮನದಲ್ಲಿಟ್ಟುಕೊಂಡು 'ಬೆಟ್ಟದ ಜೀವ'ವನ್ನು ವಿಮರ್ಶಿಸಹೊರಟರೆ ಅದನ್ನು 'ಕಾದಂಬರಿ'ಯ ಪ್ರಕಾರಕ್ಕೆ ಸೇರಿಸಬಾರದೆನ್ನಿಸುತ್ತದೆ.


ಇಡೀ ಹೊತ್ತಿಗೆ ನಾಲ್ಕೈದು ದಿನಗಳಲ್ಲಿ ನಡೆಯುವ ಘಟನೆಯಲ್ಲಿಯೇ ಮುಗಿದುಹೋಗುತ್ತದೆ. ಅಷ್ಟರೊಳಗೆ ಒಂದು ಕಾಲಘಟ್ಟದ ಬದುಕು, ಬವಣೆ ಎಲ್ಲವನ್ನೂ ನಿರೂಪಿಸುವ ಪರಿ ವಿಶೇಷವಾಗಿದೆ.


ಲೇಖಕರು ದಾರಿತಪ್ಪಿ ರಾತ್ರಿಯೊಂದರ ಆಸರೆಗಾಗಿ ಮನೆಯೊಂದನ್ನು ಸೇರುತ್ತಾರೆ. ಬೆಳಗ್ಗೆ ಎದ್ದು ಹೊರಡಬೇಕಾದವರು ಒಂದೊಂದಾಗಿ ಘಟನೆಗಳು ನಡೆಯತೊಡಗಿದಂತೆ ಹೊರಡುವುದನ್ನು ಮುಂದೂಡುತ್ತಾ ಬರುತ್ತಾರೆ. ಇದರೊಂದಿಗೆ ಆ ಮನೆಯ ಕಥೆ - ವ್ಯಥೆ, ನೋವು - ನಿರಾಸೆ, ಸಾಮರ್ಥ್ಯ - ಔದಾರ್ಯ, ನಲಿವು - ಗೆಲುವು..... ಎಲ್ಲವೂ ಬಿಚ್ಚಿಕೊಳ್ಳತೊಡಗುತ್ತದೆ.


ಸಣ್ಣಸಣ್ಣ ತೊಡಕುಗಳು ಎದುರಾದಾಗಲೂ ಆಕಾಶವೇ ಕಳಚಿ ಮೈಮೇಲೆ ಬಿದ್ದಂತೆ ವರ್ತಿಸುತ್ತಿರುತ್ತೇವೆ. ನಮಗಾದ ಕಷ್ಟ ಪ್ರಪಂಚದ ಇನ್ನಾರಿಗೂ ಆಗಲೇ ಇಲ್ಲವೇನೋ ಎನ್ನುವಂತೆ ಕೂಗಾಡುತ್ತೇವೆ, ರೇಗಾಡುತ್ತೇವೆ, ಗೋಳಾಡುತ್ತೇವೆ, ಚೀರಾಡುತ್ತೇವೆ. 'ಬೆಟ್ಟದ ಜೀವ'ದ ಕಥಾನಾಯಕ ಬೆಟ್ಟವನ್ನೂ ಬರಿದಾಗಿಸಿ ಬದುಕಿ 'ಬೆಟ್ಟದ ಜೀವ'ವಾಗಿ ನಿಂತ ರೀತಿ ನಮಗೆಲ್ಲ ಮಾದರಿ. ಕಥಾನಾಯಕನ ನೈಜ ಬದುಕಿನ ಚಿತ್ರಣ ಅದು ಎಂದು ಕಾರಂತರು ನುಡಿಯುವಾಗಲಂತೂ, ಆ ವ್ಯಕ್ತಿಯನ್ನು ನಾವು ನೋಡಬೇಕಿತ್ತು ಎನಿಸುತ್ತದೆ.


ಒಂದು ಹವ್ಯಕ ಕುಟುಂಬದ ಕತೆ ಇದಾಗಿರುವುದು, ಮತ್ತೊಬ್ಬ ಹವ್ಯಕನಾಗಿ ನನಗೆ ಆತ್ಮೀಯ ಎನಿಸುತ್ತದೆ.


ಕಾರಂತರ ಕಥನಶೈಲಿಗೆ ತಲೆದೂಗಲೇಬೇಕು; ತಲೆಬಾಗಲೇಬೇಕು.

1 comment:

ಯಜ್ಞೇಶ್ (yajnesh) said...

ನೀವು ಬರೆದಿದ್ದನ್ನು ನೋಡಿದ ಮೇಲೆ 'ಬೆಟ್ಟದ ಜೀವ' ಓದಲೇಬೇಕೆಂಬ ಆಸೆಯಾಗುತ್ತಿದೆ.