Saturday 28 November, 2009

ಸಿಟ್ಯಾಕೊ ಸಿಡುಕ್ಯಾಕೊ... ನನ ಜಾಣ!

{28.11.2009ರ ವಿಜಯ ಕರ್ನಾಟಕ-ಲವಲvkಯಲ್ಲಿ ಪ್ರಕಟಿತ ಬರಹ}

ದಿನ ಕಳೆದಂತೆ 'ಒರಟುತನ' ನಮ್ಮ ಹೊಸ ಜೀವನಶೈಲಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕಂಡಕಂಡವರ ಮೈಮೇಲೆ ಏರಿಹೋಗುವ, ಕಾಲು ಕೆದರಿ ಜಗಳಕ್ಕೆ ನಿಲ್ಲುವ ಸ್ವಭಾವ ನಮ್ಮದಾಗಿದೆ. ಯಾರನ್ನೂ ಸಹಿಸಿಕೊಳ್ಳುವ ಮನಸ್ಥಿತಿಯಲ್ಲಿಯೇ ನಾವಿಲ್ಲ. ಪಕ್ಕದವರ ಅತಿಸಣ್ಣ ತಪ್ಪನ್ನೂ ಮರಣ ದಂಡನೆಗೆ ಅರ್ಹವಾದ ಅಪರಾಧ ಅಂತ ಭಾವಿಸತೊಡಗಿದ್ದೇವೆ.

* ಪಕ್ಕದ ವಾಹನದವ ಓವರ್ ಟೇಕ್ ಮಾಡುವ ತವಕದಲ್ಲಿದ್ದಾನೆ. ಮುಂದೆ ಹೋಗುವ ಪ್ರಯತ್ನದಲ್ಲಿ ತಾಗಿದಂತಾಗಿದೆ, ತಾಗಿಲ್ಲ. ನಾವು ಬೈಯಲಾರಂಭಿಸುತ್ತೇವೆ. ಆತ ನುಗ್ಗಬಾರದಿತ್ತು, ಸರಿ. ಆದರೆ ಅವನಿಗೆ ತುರ್ತಾಗಿ ಹೋಗಬೇಕಾಗಿತ್ತೇನೋ, ನಾವೇ ದಾರಿ ಬಿಡಬಹುದುತ್ತು ಅಂತ ಯೋಚಿಸುವುದೇ ಇಲ್ಲ. ವಾಹನಕ್ಕೆ ತಾಗಿಸಿದರಂತೂ ಮುಗಿದೇ ಹೋಯಿತು. ಇಬ್ಬರೂ ರಸ್ತೆಗಿಳಿದು ಕೂಗಾಡಲಾರಂಭಿಸುತ್ತೇವೆ.ಎರಡೂ ಕಡೆ ಟ್ರಾಫಿಕಜಾಮ್.ಕೊನೆಗಾದ ಲಾಭ? ಏನೂ ಇಲ್ಲ. ಹತ್ತು ನಿಮಷ ಕೂಗಾಡಿ, ನಮ್ಮ ನಮ್ಮ ವಾಹನ ಹತ್ತಿ ಮುಂದುವರೆಯುತ್ತೇವೆ. ಇಷ್ಟೆಲ್ಲದರ ಬದಲು "ಹೋಗಲಿ ಬಿಡು, ದೊಡ್ಡ ನಷ್ಟವೇನಾಗಿಲ್ಲ" ಎಂದು ಅವನೆಡೆಗೆ ಕಿರುನಗೆ ಹಾರಿಸಿದ್ದರೆ ಅವನೂ ಪಶ್ಚಾತ್ತಾಪ ಭಾವದಲ್ಲಿ "ಸಾರಿ ಗುರೂ" ಎಂದಿರುತ್ತಿದ್ದ. ಸೀನ್ ಕ್ರಿಯೇಟ್ ಆಗುತ್ತಿರಲಿಲ್ಲ.


* ಬಸ್ಸು ತುಂಬಿ ತುಳುಕುತ್ತಿದೆ. ನಮಗಿಂತ ಹಿಂದಿರುವವನ ಸ್ಟಾಪ್ ಬಂದಿದೆ. ಇಳಿಯುವ ಗಡಿಬಿಡಿ ಅವನಿಗೆ. ನುಗ್ಗಿ ದಾಟು ಭರದಲ್ಲಿ ನಮ್ಮ ಕಾಲು ತುಳಿದು ಬಿಟ್ಟ. ಎಲ್ಲಿತ್ತೋ ಸಿಟ್ಟು "ಕಣ್ಣು ಕಾಣ್ಸಲ್ವೇನ್ರಿ? ದನ ನುಗ್ಗಿದಾಗೆ ನುಗ್ತೀರಲ್ಲ" ಎಂದಿದ್ದೇವೆ. ಅವನಿಗೂ ಇಳಿಯುವುದು ಮರೆತುಹೋಗಿದೆ. ತಿರುಗಿ ನಿಂತು ಅಬ್ಬರಿಸಿದ್ದಾನೆ "ನಿಮ್ಮಂತವರು ಕಾರಲ್ಲಿ ಓಡಾಡ್ಬೇಕ್ರಿ, ಬಸ್ಸಿಗ್ಯಾಕೆ ಬರ್ತೀರಾ?" ಸಹ ಪ್ರಯಾಣಿಕರಿಗೆ ಪುಕ್ಕಟೆ ಮನರಂಜನೆ.ಗಲಾಟೆ ಜೋರಾಯ್ತು. ನಮ್ಮ ಸ್ಟಾಪ್ ಕೂಡ ದಾಟಿ ಹೋಯಿತು. ಇದರ ಬದಲು - ಅವನು ಬೇಕಂತಲೇ ಮಾಡಿದ್ದಲ್ಲ ಎಂದುಕೊಂಡಿದ್ದರೆ? ಯಾಕೆಂದರೆ ಅಷ್ಟು ನೋವನ್ನು ಸಹಿಸಿಕೊಳ್ಳದಷ್ಟು ದುರ್ಬಲರೇನಲ್ಲ ನಾವು.

* ನಾವು ಹಣ ಕಟ್ಟಿದ್ದೇವೆ. ಆದರೂ ಆಪರೇಟರ್ ಮಾಡಿದ ಸಣ್ಣ ತಪ್ಪಿನಿಂದಾಗಿ ನಮ್ಮ ದೂರವಾಣಿಯ ಹೊರಹೋಗುವ ಕರೆಯನ್ನು ಸ್ಥಗಿತಗೊಳಿಸಲಾಗಿದೆ. ಕೋಪ ನೆತ್ತಿಗೇರಿದೆ. ನೇರ ಆಫೀಸ್ ಗೆ ಧಾಳಿ. ಸದರಿ ಆಪರೇಟರ್ ನನ್ನು ಹುಡುಕಿ ಆಗಿದೆ."ಏನಯ್ಯಾ, ಹೊಟ್ಟೆಗೆ ಅನ್ನ ತಿಂತೀಯಾ? ಮಣ್ಣು ತಿಂತೀಯಾ?" ತನ್ನದೇ ತಪ್ಪಿದ್ದರೂ ಎಲ್ಲರೆದುರಿಗೆ ಅವಮಾನ ಸಹಿಸಲಾರ ಆತ. ಸೇರಿಗೆ ಸವ್ವಾಸೇರು ಎನ್ನುವಂತೆ ಮಾತನಾಡಿದ್ದಾನೆ.ಪರಸ್ಪರ ಅತ್ಯುತ್ತಮ ಪದಪುಂಜಗಳ ಸುರಿಮಳೆ. ಗಲಾಟೆ ತಾರಕಕ್ಕೇರಿದಾಗ ಆಫೀಸರ್ ಹೊರಬಂದಿದ್ದಾರೆ. ನಮ್ಮನ್ನು ಕ್ಯಾಬಿನ್ ಒಳಗೆ ಕೂರಿಸಿದ್ದಾರೆ.ಎರಡೇ ನಿಮಿಷದಲ್ಲಿ ಸಮಸ್ಯೆ ಪರಿಹಾರವಾಗಿದೆ.ಇಷ್ಟೇ ಕೆಲಸವನ್ನು ಅದೇ ಆಪರೇಟರ್ ಮಾಡಿಕೊಡುತ್ತಿದ್ದ. ಮುಗುಳ್ನಗುತ್ತಾ "ಸ್ವಲ್ಪ ಏನಾಗಿದೆ ನೋಡಿ" ಎಂದಿದ್ದರೆ "ಸಾರಿ ಸರ್, ತಪ್ಪಾಗಿ ಬಿಟ್ಟಿದೆ" ಎಂದು ನಗೆ ಬೀರುತ್ತಿದ್ದ.

ನಾವೇಕೆ ಸ್ವಲ್ಪ ತಾಳ್ಮೆ ಕಲಿತುಕೊಳ್ಳಬಾರದು. ಅದರಿಂದ ನಮ್ಮ ಹಣ, ಶ್ರಮ, ಮರ್ಯಾದೆ ಎಲ್ಲವೂ ಉಳಿಯತ್ತದೆ. ಅಲ್ಲದೆ ಸಿಟ್ಟು, ಕೂಗಾಟ, ಜಗಳಗಳಿಂದ ನಾವೇನೂ ಪಡೆದುಕೊಳ್ಳುವುದಿಲ್ಲ. ಆತ ಮೊದಲು ತಪ್ಪು ಮಾಡಿದ್ದ, ಈಗ ನಾವು ತಪ್ಪಿತಸ್ಥರಾದೆವು ಅಷ್ಟೆ. ಮೃದುವಾಗಿ ವರ್ತಿಸಿದ್ದರೆ ಕೆಲಸವೂ ಆಗಿರುತ್ತಿತ್ತು, ತಪ್ಪು ಮಾಡಿದ ವ್ಯಕ್ತಿ; ಸುತ್ತಲಿನವರೆಲ್ಲರ ಮನಸ್ಸನ್ನೂ ಗೆದ್ದಿರುತ್ತಿದ್ದೆವು.

ಮಹಾಭಾರತ ಸುಂದರವಾಗಿ ಇದನ್ನು ನಿರೂಪಿಸುತ್ತದೆ-

ಮೃದುನಾ ದಾರುಣಂ ಹಂತಿ ಮೃದುನಾ ಹಂತ್ಯದಾರುಣಮ್/
ನಾಸಾಧ್ಯಂ ಮೃದುನಾ ಕಿಂಚಿತ್ ತಸ್ಮಾತ್ತೀವ್ರತರಂ ಮೃದು//

ಮೃದುತ್ವ ಕಠಿಣವನ್ನೂ ಗೆಲ್ಲುತ್ತದೆ; ಮೃದುವನ್ನೂ ಗೆಲ್ಲುತ್ತದೆ.
ಮೃದುತ್ವದಿಂದ ಸಾಧ್ಯವಾಗದಿರುವುದು ಯಾವುದೂ ಇಲ್ಲ.
ಮೃದುತ್ವವೇ ಶಕ್ತಿಶಾಲಿ.

Tuesday 6 October, 2009

ಹೀಗಿರಲಿ ಮನಸು....

ಧರ್ಮದ ಕುರಿತು ನೋಡಹೊರಟಂತೆಲ್ಲ ಅದು ಅದ್ಭುತ ಚಿಂತನೆಗಳ ಆಗರವೆನ್ನುವುದು ಮನದಟ್ಟಾಗುತ್ತದೆ. ಮಹಾಭಾರತದ ಧರ್ಮವ್ಯಾದ-ಕೌಶಿಕ ಸಂವಾದ ಅದಕ್ಕೊಂದು ಉತ್ತಮ ಉದಾಹರಣೆ. ಧರ್ಮಮಯವಾದ ಬದುಕೆಂದರೇನೆಂದು ತನ್ನ ಬದುಕಿನ ಮೂಲಕವೇ ವಿವರಿಸಹೊರಡುವ ಧರ್ಮವ್ಯಾಧ ಸದಾ ಸಂತೋಷವಾಗಿರುವ ತಂತ್ರವೊಂದನ್ನು ಬಿಚ್ಚಿಡುತ್ತಾನೆ.

ಮನಸ್ಸೆಂಬುದು ಜಗತ್ತಿನ ವಿಚಿತ್ರ ವಸ್ತುಗಳಲ್ಲಿ ಮೊದಲನೆಯದು. ಅಷ್ಟೇ ಅಲ್ಲ, ಅತ್ಯಂತ ಬೇಗ ತನ್ನನ್ನೇ ಬದಲಾಯಿಸಿಕೊಳ್ಳುವ ಗೋಸುಂಬೆಯನ್ನೂ ಮೀರಿಸುವ ಚಾಂಚಲ್ಯ ಹೊಂದಿದ್ದು. ಹಾಗಾಗಿ ಸದಾಕಾಲ ಮನಸ್ಸನ್ನು ಏಕರೂಪವಾಗಿರಿಸಿಕೊಳ್ಳುವುದು ಕಷ್ಟವೇ ಆಗಿದೆ.ನಮ್ಮ ಮನಸ್ಸಿನ ಶಾಂತತೆಯನ್ನು ಕದಡುವ ಕಾರ್ಯ ಬೇರೆಯವರಿಂದ ನಡೆಯುತ್ತಲೇ ಇರುತ್ತದೆ. ಕೆಲವರು ನಮ್ಮನ್ನು ಹೊಗಳುತ್ತಾರೆ; ಮನಸ್ಸು ಆಗ ಸಂತೋಷ ಪಡುತ್ತದೆ. ಕೆಲವರು ನಮ್ಮನ್ನು ತೆಗಳುತ್ತಾರೆ; ಸಂತೋಷಗೊಂಡ ಅದೇ ಮನಸ್ಸು ಆಗ ಮುದುಡುತ್ತದೆ. ನಮ್ಮದೇ ಮನಸ್ಸು ಯಾರದೋ ಮಾತಿನಿಂದ ವಿಕಸಿತವೂ ಆಯಿತು, ಸಂಕುಚಿತವೂ ಆಯಿತು.ಈ ಎರಡೂ ಸಂದರ್ಭಗಳಲ್ಲಿ ಮನಸ್ಸನ್ನು ಸಮಾಧಾನವಾಗಿ ಇರಿಸಿಕೊಂಡಾಗ ಮಾತ್ರ ಬದುಕು ಸುಂದರ. ಹೆಚ್ಚು ಹಿಗ್ಗುವಿಕೆ ಮತ್ತು ಕುಗ್ಗುವಿಕೆಯ ಈ ಸಂದರ್ಭಗಳಲ್ಲಿ ನಮ್ಮ ಪ್ರತಿಕ್ರಿಯೆಯ ಸ್ವರೂಪವನ್ನು ಬದಲಿಸಿಕೊಂಡಾಗ ನಾವು ಸುಖವಾಗಿರಲು ಸಾಧ್ಯ. ಮನಸ್ಸಿನ ಈ ಸ್ಥಿತಿಗೆ ಧರ್ಮವ್ಯಾಧ ನೀಡುವ ಪರಹಾರ ಹೀಗಿದೆ:
ಯೇ ಚೈವ ಮಾಂ ಪ್ರಶಂಸಂತಿ ಯೇ ಚ ನಿಂದಂತಿ ಮಾನವಾಃ |
ಸರ್ವಾನ್ಸುಪರಿಣೀತೇನ ಕರ್ಮಣಾ ತೋಷಯಾಮ್ಯಹಮ್ ||
" ಯಾರು ನನ್ನನ್ನು ಹೊಗಳುತ್ತಾರೋ, ಯಾರು ನನ್ನನ್ನು ತೆಗಳುತ್ತಾರೋ ಅವರೀರ್ವರನ್ನೂ ನಾನು ಸಮಾನವಾಗಿಯೇ ಕಾಣುತ್ತೇನೆ. ಉತ್ತಮ ಕಾರ್ಯದಿಂದ ಆ ಇಬ್ಬರನ್ನೂ ನಾನು ಸಂತೋಷಪಡಿಸುತ್ತೇನೆ".

ಬೈದಾಗ, ಭಂಗಿಸಿದಾಗ, ದ್ರೋಹವೆಸಗಿದಾಗ, ಅವಮಾನಿಸಿದಾಗ, ನಿರ್ಲಕ್ಷಿಸಿದಾಗ ಹೀಗೊಂದು ಮನಸ್ಸ್ಥಿತಿಯನ್ನು ಇಟ್ಟುಕೊಳ್ಳುವುದು ನಮಗೆ ಸಾಧ್ಯವಾದರೆ ನಾವು ಜಗತ್ತನ್ನೇ ಗೆದ್ದಂತೆ. ಹಾಗಾಗಲು ಮನಸ್ಸಿಗೊಂದು ಶಿಕ್ಷಣವನ್ನು ಕೊಟ್ಟುಕೊಳ್ಳಬೇಕು. ಅದು ಹೇಗೆ?
ನಿಂದೆಯ ಪ್ರತಿಕ್ರಿಯೆಯನ್ನು ಎರಡು ತರಹದಲ್ಲಿ ಇಟ್ಟುಕೊಳ್ಳಬೇಕು.

ಮೊದಲನೆಯದು - ನಿಂದೆಯ ಅಂಶಗಳು ನಮಗೆ ಹೊಂದಿಕೊಳ್ಳುತ್ತಿವೆಯೇ ಎನ್ನುವ ಪರಿಶೀಲನೆ. ಹೊಂದಿಕೊಳ್ಳುತ್ತಿದೆಯಾದರೆ ಅದು ನಿಂದೆಯೇ ಅಲ್ಲ.ಅದು ಜೀವನ ಮಾರ್ಗದರ್ಶನ.

ಎರಡನೆಯದು - ನಿಂದೆ ಹೊಂದಿಕೊಳ್ಳದಿದ್ದರೆ ಅದು ನಿಂದಿಸಿದವರ ತಪ್ಪು ಗ್ರಹಿಕೆ. ಆರಡಿಯ ವ್ಯಕ್ತಿಯನ್ನು ಮೂರಡಿ ಎಂದೊಬ್ಬ ಭಾವಿಸಿದರೆ ಅವನಿಗಿನ್ನೂ ಅಡಿಯ ಅಳತೆ ಸಿಕ್ಕಿಲ್ಲವೆಂದಷ್ಟೇ ಅರ್ಥ. ಸಾಧ್ಯವಾದರೆ ಅವನಿಗೆ ಅಡಿಯ ಲೆಕ್ಕ ಕಲಿಸೋಣ. ಸಾಧ್ಯವಾಗದಿದ್ದರೆ 'ಅಯ್ಯೋ ಪಾಪ' ಎಂದುಕೊಳ್ಳೋಣ.

ಈ ಎರಡು ಮಾರ್ಗಗಳನ್ನು ಅನುಸರಿಸಿದಾಗ ಮನಸ್ಸು ಕುಗ್ಗಲಾರದು. ಸದಾ ಹಿಗ್ಗಿದ ಆ ಮನಸ್ಸು ಜಗತ್ತಿನೆಲ್ಲ ಸಂತೋಷವನ್ನೂ ತನ್ನಲ್ಲಿ ತುಂಬಿಕೊಳ್ಳಬಲ್ಲದು. ಅಷ್ಟೇ ಏಕೆ? ಎಲ್ಲ ಸಂತೋಷದ ಮೂಲನಿಧಿಯಾದ ಆ ಆನಂದೋಬ್ರಹ್ಮವನ್ನೇ ತನ್ನೊಳಗೆ ತುಂಬಿಕೊಳ್ಳಬಹುದು ಅಥವಾ ಅದರಲ್ಲೇ ತಾನು ತುಂಬಿಹೋಗಬಹುದು.

{ ಬ್ರಹ್ಮ ಪತ್ರಿಕೆಯ ಅಂಕಣ ಬರಹ }

Friday 25 September, 2009

ರಾಜ್ಯವೇ ಬೇಡವೆಂದವಗೆ "ಸಾಸಿವೆ ಕಳ್ಳ" ಎಂದಂತೆ

(ಅಕ್ಟೋಬರ್ ೨೦೦೯ರ ಧರ್ಮಭಾರತೀ ಸಂಪಾದಕೀಯ)

ಗಣೇಶ ಚತುರ್ಥಿ ಮೊನ್ನೆಯಷ್ಟೆ ಮುಗಿದಿದೆ. ಅಂದು ಆಗಸದಲ್ಲಿ ಎಂದಿನಂತೆ ಮಿನುಗುವ ಚಂದ್ರನನ್ನು ನೋಡಬಾರದಂತೆ. ಅಕಸ್ಮಾತ್ ನೋಡಿಬಿಟ್ಟರೆ? 'ಮಿಥ್ಯಾಪವಾದ' ಬರುತ್ತದಂತೆ. ಹಾಗೆಂದರೆ? ಮಾಡದ್ದನ್ನು ಮಾಡಿದ್ದಾನೆ ಎಂದು ಜಗವೆಲ್ಲ ತಿಳಿದುಕೊಳ್ಳುತ್ತದೆ. ಅದರ ಪರಿಹಾರಕ್ಕೆ ಶಮಂತಕೋಪಾಖ್ಯಾನವನ್ನು ಓದಬೇಕಂತೆ ಅಥವಾ ಕೇಳಬೇಕಂತೆ.

ಏನದು ಆ ಉಪಾಖ್ಯಾನ? ಅದೊಂದು ಕಥೆ. ಓರ್ವ ಚಾರಿತ್ರ್ಯವಂತನ ತೇಜೋವಧೆಯ ಪ್ರಯತ್ನದ ವ್ಯಥೆ. ಶ್ರೀಕೃಷ್ಣನ ಜೀವನದ ಘಟನೆಯೊಂದದು. ಯಾದವರ ಉತ್ಕರ್ಷಕ್ಕೆ ಶ್ರೀಕೃಷ್ಣನ ಕೊಡುಗೆ ದೊಡ್ಡದು ಅಥವಾ ಅದಕ್ಕೆ ಅವನೇ ಕಾರಣ. ಆದರೂ ಅವರು ಅವನನ್ನು ಅನುಮಾನಿಸುತ್ತಾರೆ. ಅನುಮಾನದಿಂದಲೇ ಅವಮಾನಿಸುತ್ತಾರೆ ಕೂಡ.

ಘಟನೆ ಪ್ರಾರಂಭವಾಗುವುದು ಸತ್ರಾಜಿತನ ಸೂರ್ಯಭಕ್ತಿಯಿಂದ. ಅದರ ಪರಿಣಾಮವಾಗಿ ಅವನಿಗೊಂದು ದಿವ್ಯಮಣಿ ದೊರೆಯುತ್ತದೆ. ಪ್ರತಿನಿತ್ಯ ಸಂಪತ್ತನ್ನು ಸ್ರವಿಸುವ ಬೆರಗಿನ ಮಣಿಯದು. ಸತ್ರಾಜಿತ ಅದನ್ನು ಧರಿಸಿ ದ್ವಾರಕೆಯೆಡೆಗೆ ಬರುತ್ತಾನೆ, ತನ್ನ ದೇವರ ಮನೆಯಲ್ಲಿ ಸ್ಥಾಪಿಸುತ್ತಾನೆ. ಆ ಮಣಿ ದಿನವೊಂದಕ್ಕೆ ೧೦೮ ಮಣ ಬಂಗಾರವನ್ನು ನೀಡುತ್ತಿತ್ತು. ಅಲ್ಲದೇ ಅದಿದ್ದಲ್ಲಿ ಬರ - ರೋಗಗಳೇ ಇದ್ದಿರಲಿಲ್ಲ. ಸಾವಿರಾರು ಜನರಿಗೆ ಉಪಯುಕ್ತವಾಗುವ ವಸ್ತು ರಾಜನ ಬಳಿ ಇರಬೇಕು ಎಂದೋ ಅಥವಾ ಮುಂದಾಗುವ ತೊಡಕುಗಳ ಅರಿವಿನಿಂದಲೋ ಕೃಷ್ಣ ಅದನ್ನು ದೊರೆ ಉಗ್ರಸೇನನಿಗಾಗಿ ಕೇಳುತ್ತಾನೆ. ಸತ್ರಾಜಿತ ಅರ್ಥಲೋಭಿಯಾಗಿ ನಿರಾಕರಿಸುತ್ತಾನೆ. ಇದೇ ಮಣಿಯ ಪ್ರಕರಣದಿಂದಾಗಿ ಮುಂದೆ ಸತ್ರಾಜಿತನ ತಮ್ಮ ಪ್ರಸೇನನೂ ಮತ್ತು ಸ್ವಯಂ ಸತ್ರಾಜಿತನೂ ಸಾಯುತ್ತಾರೆ. ಆದರೆ ಮುಂದಾಗುವುದು ಇಂದು ಹೇಗೆ ಅವನಿಗೆ ಅರಿವಾಗಬೇಕು? ಆಪತ್ತು ಆರಂಭವಾಗಿಯೇ ಬಿಡುತ್ತದೆ.

ಸತ್ರಾಜಿತನ ತಮ್ಮ ಪ್ರಸೇನ. ಅವನೊಂದು ದಿನ ಬೇಟೆಗೆ ತೆರಳುತ್ತಾನೆ. ಹೋಗುವಾಗ ಮಣಿಯನ್ನು ಧರಿಸಿರುತ್ತಾನೆ. ಕಾಡಿನಲ್ಲೊಂದು ಸಿಂಹ ಅವನನ್ನು ಕೊಲ್ಲುತ್ತದೆ, ಮಣಿಯನ್ನು ಕೊಂಡೊಯ್ಯುತ್ತದೆ. ರಾಮಾಯಣದ ಜಾಂಬವ ಆ ಸಿಂಹವನ್ನು ಕೊಲ್ಲುತ್ತಾನೆ. ಮಣಿಯನ್ನು ಗುಹೆಯಲ್ಲಿದ್ದ ಮಗುವಿಗೆ ಆಟಕ್ಕೆ ನೀಡುತ್ತಾನೆ. ಭೇಟೆಗೆ ಹೋದ ಪ್ರಸೇನ ಹಿಂದಿರುಗುವುದಿಲ್ಲ. ಸತ್ರಾಜಿತ ಏನಾಗಿರಬೇಕೆಂದು ಚಿಂತಿಸಿದವ ಕೂಡಲೇ ನಿರ್ಣಯಕ್ಕೆ ಬರುತ್ತಾನೆ " ಇದು ಕೃಷ್ಣನದೇ ಕೆಲಸ. ಯಾಕೆಂದರೆ ಹಿಂದೆ ಕೃಷ್ಣ ಮಣಿಯನ್ನು ಕೇಳಿದ್ದನಲ್ಲ. ಕೊಡದ ಸಿಟ್ಟಿಗೆ ಅವನನ್ನು ಕೊಂದ" ಎಂದು.

ಆಗ ಇಂದಿಗೂ ಅಂದಿಗೂ ಜನರ ಸಹಜವೋ ಎಂಬಂತಿರುವ ಸ್ವಭಾವವೊಂದು ಅನಾವರಣಗೊಂಡುಬಿಡುತ್ತದೆ. ಸತ್ರಾಜಿತ ನುಡಿದದ್ದನ್ನು ಜನರು ಒಪ್ಪಿಯೇ ಬಿಡುತ್ತಾರೆ ; ಪರಿಶೀಲನೆಯೇ ಇಲ್ಲದೆ. ಎಲ್ಲರೂ ಕಿವಿಯಿಂದ ಕಿವಿಗೆ ಪ್ರಸಾರ ಮಾಡಿದರಂತೆ. ಇದು ವಿಚಿತ್ರ ; ಆದರೂ ಸತ್ಯ. ಈ ಆರೋಪ ಬರುವವರೆಗೆ ಕೃಷ್ಣ ದ್ವಾರಕೆಯ ಜನಕ್ಕೆ ಆರಾಧ್ಯದೈವ. ಅವರ ರಕ್ಷಕ, ಪೋಷಕ ಎಲ್ಲವೂ. ಯಾದವರನ್ನು ಮೇಲೆತ್ತಿದವನೇ ಕೃಷ್ಣ. ಕೃಷ್ಣ ಬರುವವರೆಗೆ ಯಾದವರು ನಗಣ್ಯರು.ಅವರನ್ನು ಉಳಿಸಿ, ಬೆಳೆಸಿ ಗಣ್ಯರನ್ನಾಗಿಸಿದವ ಕೃಷ್ಣ. ಇಂತಹ ಕೃಷ್ಣನನ್ನೇ 'ಕೊಲೆಗಡುಕ, ಕಳ್ಳ' ಎಂದು ಬಿಡುತ್ತಾರೆ.

ಮುಂದಿನದೋ ಕೃಷ್ಣನ ಪರಿಪಾಟಲು. ತನಗಂಟಿದ ಅಪಖ್ಯಾತಿಯನ್ನು ತೊಳೆದುಕೊಳ್ಳಲು ಅವನೇ ಹೊರಡುತ್ತಾನೆ. ನಿರಪರಾಧಿಯನ್ನು 'ಅಪರಾಧಿ' ಎಂದರೆ ಅವನೇ 'ನಾನು ನಿರಪರಾಧಿ' ಎಂದು ನಿರೂಪಿಸಲು ಮುಂದಾಗಬೇಕು ತಾನೆ? ಆತ್ಮೀಯರೊಂದಿಗೆ ಪ್ರಸೇನನನ್ನು ಹುಡುಕುತ್ತಾ ಕೃಷ್ಣ ಕಾಡು ಸೇರುತ್ತಾನೆ. ಅಲ್ಲಿ ಜಾಂಬವಂತನೊಂದಿಗೆ ಯುದ್ಧವಾಗಿ ಮಣಿಯೂ, ಜಾಂಬವತಿಯೆನ್ನುವ ಕನ್ಯಾಮಣಿಯೂ ಅವನದಾಗುತ್ತಾರೆ. ಸತ್ಯವರಿತು ಪಶ್ಚಾತ್ತಾಪಗೊಂಡ ಸತ್ರಾಜಿತ ಮಣಿಯನ್ನೂ, ಸತ್ಯಭಾಮೆಯೆನ್ನುವ ಕನ್ಯಾಮಣಿಯನ್ನೂ ಅವನಿಗೆ ನೀಡುತ್ತಾನೆ. ಮುಂದೆ ಅಕ್ರೂರ - ಕೃತವರ್ಮರ ಪ್ರಲೋಭನೆಯಿಂದ ಶತಧನ್ವ ಸತ್ರಾಜಿತನನ್ನು ಕೊಂದು ಮಣಿಯನ್ನು ಅಪಹರಿಸುತ್ತಾನೆ. ಅವನ ಸಂಹಾರ, ಅಕ್ರೂರನಲ್ಲಿ ನ್ಯಾಸವಾಗಿದ್ದ ಮಣಿಯ ದರ್ಶನ, ಎಲ್ಲರಿಗೂ ನಂಬಿಕೆ ಉಂಟಾಗುವುದು ಹೀಗೆ ಕತೆ ಮುಗಿಯುತ್ತದೆ.

ಹೀಗೆ ಕತೆಯನ್ನು ವಿಸ್ತಾರವಾಗಿ ನಿರೂಪಿಸುವ ವ್ಯಾಸರು " ಆ ಆಖ್ಯಾನವನ್ನು ಓದುವವನ, ಕೇಳುವವನ, ನೆನಪಿಸಿಕೊಳ್ಳುವವನ ಮಿಥ್ಯಾರೋಪವುಇಲ್ಲವಾಗುತ್ತದೆ" ಎಂದು ನುಡಿಯುತ್ತಾರೆ. ಆದರೆ ಸುಳ್ಳು ಆರೋಪಗಳನ್ನು ಸೃಷ್ಟಿಸಿದ, ಪಸರಿಸಿದ, ದ್ವಾರಕೆಯ ಜನ ತಮ್ಮ ಪಾಪವನ್ನು ಹೇಗೆ ಪರಿಹರಿಸಿಕೊಂಡರೆನ್ನುವ ವಿಚಾರವನ್ನಾಗಲೀ, ಬೇರೆ ಯಾರಾದರೂ ಇಂತಹ ತಪ್ಪು ಮಾಡಿದರೆ ಅವರು ಹೇಗ ಶುದ್ಧರಾಗಬೇಕೆನ್ನುವ ವಿಷಯವನ್ನಾಗಲೀ ಈ ಪ್ರಕರಣದಲ್ಲಿ ವ್ಯಾಸರು ನಿರೂಪಿಸುವುದೇ ಇಲ್ಲ.

Sunday 1 March, 2009

ರಾಮ ದೊಡ್ಡವನೇಕೆ?

* ರಾಮನೆನ್ನುವವನೊಬ್ಬನಿದ್ದ ;
ರಾಮ ಒಬ್ಬನೇ ಏನು? ಸೃಷ್ಟಿಯ ಇತಿಹಾಸದಲ್ಲಿ ಅಸಂಖ್ಯ ಜನರಿದ್ದರು.

* ಅವನು ರಾಜನಾಗಿದ್ದ ;
ರಾಜರ ಗಣನೆಯೂ ಅಗಣಿತ.

* ಅವನು ಚಕ್ರವರ್ತಿಯಾಗಿದ್ದ :
ಚಕ್ರವರ್ತಿಗಳೂ ಅಸಂಖ್ಯರಿದ್ದರು.

* ಜನಕನ ಮಗಳು ಸೀತೆಯನ್ನವನು ವಿವಾಹವಾದ ;
ಎಲ್ಲ ರಾಜಕುಮಾರರೂ ರಾಜಕುಮಾರಿಯರನ್ನೇ ವಿವಾಹವಾಗುತ್ತಿದ್ದರು.

* ಅವನು ರಾಕ್ಷಸರನ್ನು ಕೊಂದ ;
ರಾಕ್ಷಸರನ್ನು ಹಲವರು ಕೊಂದಿದ್ದಾರೆ.

* ಅವನಿಗೆ ಅಪರಿಮಿತ ಸಾಮರ್ಥ್ಯವಿತ್ತು ;
ಅವನೊಬ್ಬನಿಗೆ ಏನೂ ಅಲ್ಲ.

* ಅವನು ಯಜ್ಞಗಳನ್ನು ರಕ್ಷಿಸಿದ ;
ಆ ಕಾರ್ಯ ಮಾಡಿದವರೂ ಬಹುಜನರಿದ್ದಾರೆ.

* ಮಿತ್ರರಾದ ಸುಗ್ರೀವ - ವಿಭೀಷಣರಿಗೆ ಸಹಾಯ ಮಾಡಿದ ;
ಮಿತ್ರರಿಗೆ ಸಹಕರಿಸುವವರು ಈಗಲೂ ಇದ್ದಾರೆ.

* ತನ್ನ ಪತ್ನಿಯನ್ನವನು ಅಪವಾದ ಬಂದಾಗ ಬಿಟ್ಟುಬಿಟ್ಟ ;
ಅಪವಾದ ಬಂದ ಪತ್ನಿಯನ್ನು ಎಲ್ಲರೂ ಬಿಡುತ್ತಾರೆ.

* ಅವನಿಗೆ ಸಹೋದರರ ಮೇಲೆ ತುಂಬಾ ಪ್ರೀತಿಯಿತ್ತು ;
ಅದು ದುರ್ಯೋಧನನಿಗೂ ಇತ್ತು.

* ಅವನು ದಿವಿಯಿಂದ ಇಳಿದು ಬಂದ ;
ಭಾರತೀಯ ದರ್ಶನದಂತೆ ಎಲ್ಲರೂ ಅಲ್ಲಿಂದ ಬಂದವರೇ.

ಹಾಗಿದ್ದರೇನು ರಾಮನ ವೈಶಿಷ್ಟ್ಯ? ಅವನಿಗೇಕೆ ಅತ್ಯುನ್ನತಸ್ಥಾನ?

ಚಕ್ರವರ್ತಿಪುತ್ರನಾಗಿಯೂ ರಾಮ ಅದನ್ನು ಸ್ವಲ್ಪವೂ ಬೇಸರವಿಲ್ಲದೆ ತಮ್ಮ ಭರತನಿಗೆ ಬಿಟ್ಟುಕೊಡುತ್ತಾನೆ. ಚಕ್ರವರ್ತಿಸ್ಥಾನವೆಂದರೆ ಸಾಮಾನ್ಯದ್ದಲ್ಲ. ಅಂದಿನ ಸಮಸ್ತ ವಿಶ್ವದ ಆಳ್ವಿಕೆ ಚಕ್ರವರ್ತಿಯದ್ದು. ಪ್ರಪಂಚವನ್ನೇ ಆಳುವ ವ್ಯಕ್ತಿಯ ವೈಭವ ಎಷ್ಟಿರಬೇಕು? ಅದನ್ನವನು ತಂದೆಯ ಮಾತನ್ನು ಉಳಿಸಲಿಕ್ಕಾಗಿ ಬಿಟ್ಟ. ಬಿಡುವಾಗಲೂ, ಬಿಟ್ಟಮೇಲೂ ಸಹೋದರ ಪ್ರೇಮವನ್ನು ರಾಮ ತೋರಿದ ಪರಿ ಅನನ್ಯ. ವನವಾಸ ಮುಗಿಸಿದ ಮೇಲೂ ಭರತ ಬಯಸಿದ್ದರೆ ರಾಜ್ಯವನ್ನು ಬಿಟ್ಟುಕೊಡಲು ಸಿದ್ಧನಿದ್ದ ಶ್ರೀರಾಮ. ಇದು ಅವನ ಹಿರಿಮೆ.

ಸೀತೆಯ ಕುರಿತಾಗಿ ಜನತೆ ಅಪವಾದದ ಮಾತುಗಳನ್ನು ಆಡತೊಡಗಿದಾಗ ಅವಳನ್ನು ಶ್ರೀರಾಮ ಪರಿತ್ಯಾಗ ಮಾಡುತ್ತಾನೆ. ಬೇರೆ ಗಂಡಂದಿರಂತೆ ಹೆಂಡತಿಯ ಮೇಲೆ ಅನುಮಾನ ಮೂಡಿ ಅವಳನ್ನು ಬಿಡುವುದಿಲ್ಲ. ಸೀತೆಯ ಪಾವಿತ್ರ್ಯದ ಮೇಲೆ ಅವನಿಗೆ ಪೂರ್ಣ ವಿಶ್ವಾಸವಿದೆ. ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾದದ್ದು ರಾಜನ ಕರ್ತವ್ಯ ಎನ್ನುವುದನ್ನು ಸಾರ್ವಕಾಲಿಕವಾಗಿ ಜಗತ್ತಿಗೆ ತಿಳಿಸಲು ಅತ್ಯಂತ ಪ್ರೀತಿಪಾತ್ರಳಾದ ತನ್ನ ಪತ್ನಿಯನ್ನು ಶ್ರೀರಾಮ ಬಿಡುತ್ತಾನೆ. ಇದು ಅವನ ಗರಿಮೆ.

ಸುಗ್ರೀವ - ವಿಭೀಷಣರಿಗೆ ಪಟ್ಟ ಕಟ್ಟಿದ್ದು ಮಿತ್ರರಿಗೆ ಸಹಾಯ ಮಾಡಬೇಕು ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ. ಜಗತ್ತಿನ ಯಾವ ಜೀವಿಗೆ ಅನ್ಯಾಯವಾದರೂ ಶ್ರೀರಾಮ ರಕ್ಷಣೆಗೆ ಮುಂದಾಗುತ್ತಿದ್ದ, ನ್ಯಾಯ ಒದಗಿಸಿ ಕೊಡುತ್ತಿದ್ದ. ಯಜ್ಞರಕ್ಷಣೆ ಮತ್ತು ರಾಕ್ಷಸ ಸಂಹಾರಗಳು ಅವನ ಸಾಮರ್ಥ್ಯವನ್ನು ಮಾತ್ರ ತೋರಿಸುತ್ತಿಲ್ಲ. ಅಲ್ಲಿಯೂ ಅವನ ನ್ಯಾಯಪರತೆ ಅನನ್ಯವಾಗಿ ಕಾರ್ಯಮಾಡಿದೆ. ಇದು ಅವನ ಮಹಿಮೆ.

ಎಲ್ಲ ಜೀವಿಗಳು ಬ್ರಹ್ಮದಿಂದಲೇ ಬಂದವರಾದರೂ ಒಂದು ವ್ಯತ್ಯಾಸವಿದೆ. ನಾವೆಲ್ಲ ಮೇಲಿನಿಂದ ಬಿದ್ದವರು. ಬಿದ್ದ ನಮ್ಮನ್ನು ಮೇಲೆತ್ತಲು ಶ್ರೀರಾಮ ಇಳಿದವನು ; ಅವತರಿಸಿದವನು.

ಇಂತಹ ರಾಮನ ಉಪಾಸನೆಗೆ ಸಮಯ ಬಂದಿದೆ.
ಅಣಿಯಾಗೋಣ.

(ಏಪ್ರಿಲ್ ೨೦೦೮ನೇ ಧರ್ಮಭಾರತೀ ಸಂಪಾದಕೀಯ)

Friday 6 February, 2009

ವಿಷದೂಟಕಿಂತುಪೋಷಿತವೆ ಲೇಸಲ್ತೆ.....?

"ದೀರ್ಘಂ ಪಶ್ಯತ ಮಾ ಹ್ರಸ್ವಮ್" ಮಹರ್ಷಿಗಳ ದೀರ್ಘದೃಷ್ಟಿಯ ಉಪದೇಶವಿದು ಮಾನವ ಸಂಕುಲಕ್ಕೆ. "ದೀರ್ಘದರ್ಶಿಗಳಾಗಿ, ಸಮೀಪದರ್ಶಿಗಳಾಗಬೇಡಿ" ಅವರು ಕಂಡು ನುಡಿದ ದೀರ್ಘ ಭಗವಂತನವರೆಗೆ ವ್ಯಾಪಿಸಿದ್ದು. ನಮ್ಮ ಪರಿಸ್ಥಿಯಲ್ಲಿ ಜೀವನದ ಗುರಿಯಾದ ಅಧ್ಯಾತ್ಮದ ದೀರ್ಘದೆಡೆಗಿನ ಸಾಗುವಿಕೆ ಒತ್ತಟ್ಟಿಗಿರಲಿ, ಲೌಕಿಕ ಬದುಕಿನ ದೂರದರ್ಶಿತ್ವವೂ ನಮಗಿಲ್ಲವಾಗಿದೆ. ನಾವಿಂದು ಆಹಾರದ ಹೆಸರಿನಲ್ಲಿ ವಿಷವನ್ನು ಉಣ್ಣುತ್ತಿದ್ದೇವೆ. ಹೆಚ್ಚು ಇಳುವರಿಯೆನ್ನುವ ಭ್ರಮಾಲೋಕದ ಕೋಟೆಯೊಳಗಿನ ಬಂಧಿಗಳಾಗಿ ನಾವು ನವನಾಗರಿಕತೆಯ ಸಿದ್ಧಾಂತವನ್ನು ರೂಪಿಸಿದ್ದು, ರಾಸಾಯನಿಕಗಳ ರೂಪದಲ್ಲಿ.

ಫಸಲನ್ನು ಹೆಚ್ಚಿಸುವ ಗೊಬ್ಬರವಾಗಿ ರಾಸಾಯನಿಕಗಳ ಬಳಕೆ ; ಬೆಳೆದ ಫಸಲನ್ನು ಕೀಟಗಳ ಬಾಧೆಯಿಂದ ಸಂರಕ್ಷಿಸಲೋಸುಗ ರಾಸಾಯನಿಕ ಕೀಟನಾಶಕಗಳ ಉಪಯೋಗ ; ಕೃಷಿಕ್ಷೇತ್ರದಿಂದ ಬೇರ್ಪಡಿಸಿದ ಬೆಳೆಗಳ ಸಂರಕ್ಷಣೆಗಾಗಿ ಮತ್ತೆ ರಾಸಾಯನಿಕಗಳಿಗೆ ಮೊರೆ - ಇದು ನಮ್ಮ ವಿಷವ್ಯೂಹ.

ರಾಸಾಯನಿಕಗಳ ವ್ಯಾಪಕ ಬಳಕೆ ಸೃಷ್ಟಿಸುವ ಸಮಸ್ಯೆಗಳು ಸರಮಾಲೆಯೇ ಸರಿ. ದೈಹಿಕವಾಗಿ ಅನಾರೋಗ್ಯಗಳ ಸಾಲು ಸಾಲು, ಭಾರತೀಯರ ಮಹತ್ತ್ವದ ಶೋಧನೆಯಾದ 'ಅನ್ನಸ್ಯ ಯೋ ಆಣಿಷ್ಠೋ ರಸಃ ತನ್ಮನಃ''ಅನ್ನಮಯಂ ಹಿ ಸೋಮ್ಯ ಮನಃ' ಎನ್ನುವ ಅನ್ನದಿಂದಲೇ ರೂಪುಗೊಳ್ಳುವ ಮನಸ್ಸಿನ ಮೇಲಾಗುವ ದುಷ್ಪರಿಣಾಮ ನಿಜಕ್ಕೂ ಭಯಂಕರ. ಈ ವಿಷವ್ಯೂಹದ ಘೋರ ಪರಿಣಾಮ ಇಷ್ಟಕ್ಕೇ ಸೀಮಿತವೇನೂ ಅಲ್ಲ. ಇದು ಪ್ರಕೃತಿಮಾತೆಯ ದಿವ್ಯ ಮಡಿಲನ್ನು ಛಿದ್ರಗೊಳಿಸುತ್ತಿರುವುದು, ಅದನ್ನು ಕಂಡೂ ಕಾಣದಂತಿರುವ ಕಂದರಾದ ನಮ್ಮ ವರ್ತನೆ ಮೂರ್ಖತೆಯ ತುಟ್ಟತುದಿ.

ನಮ್ಮ ಪರಂಪರೆಯ ಆಹಾರ ಸ್ವೀಕಾರದ ಕ್ರಮ ನಮ್ಮ ಆಹಾರದ ಉತ್ಪಾದನೆ ಮತ್ತು ಸಂರಕ್ಷಣೆಗಳು ಹೇಗಿರಬೇಕೆನ್ನುವುದು ತೋರಿಸಿಕೊಡುತ್ತಿದೆ. ನಾವು ಆಹಾರ ಸ್ವೀಕರಿಸುವಾಗ ಕೈಯಲ್ಲಿ ಶುದ್ಧ ಜಲವನ್ನು "ಅಮೃತೋಪಿಸ್ತರಣಮಸಿ ಸ್ವಾಹಾ" ಎಂದು ನುಡಿದು ಆ ಜಲವನ್ನು ಕುಡಿಯುತ್ತೇವೆ. ಮುಂದೆ ಸ್ವೀಕರಿಸಲಿರುವ ಆಹಾರಕ್ಕಿಂತ ಮೊದಲು ಉದರದಲ್ಲಿ ಅಮೃತಮಯವಾದ ಅಡಿಪಾತ್ರವಾಗಿ ಆ ಜಲ ಕಾರ್ಯನಿರ್ವಹಿಸಬೇಕೆನ್ನುವುದು ಅದರ ಆಶಯ. ಊಟ ಮುಗಿದಾಗ ಮತ್ತೆ ಶುದ್ಧ ಜಲವನ್ನು "ಅಮೃತಾಪಿಧಾನಮಸಿ ಸ್ವಾಹಾ" ಎಂದು ಸ್ವೀಕರಿಸಿದ ಆಹಾರದ ಮೇಲೆ ಅಮೃತಮಯವಾದ ಮುಚ್ಚಳವಾಗಿ ರೂಪುಗೊಳ್ಳಬೇಕೆಂದು ಬಯಸಿ ಸ್ವೀಕರಿಸುತ್ತೇವೆ. ಆದ್ದರಿಂದ ಆಹಾರ ಅಮೃತವಾಗಬೇಕೇ ಹೊರತು ವಿಷವಾಗಬಾರದು.

"ಅಮೃತಸ್ಯ ಪುತ್ರಾಃ" ಎಂದು ಕರೆಸಿಕೊಳ್ಳುವ ನಾವು, ನಮ್ಮ ಆಹಾರವು ಮೃತಸತ್ತ್ವವಾಗದೆ ಅಮೃತಸತ್ತ್ವವಾಗುವಂತೆ ಬಯಸಿ ಅಮೃತಪುತ್ರರಾಗೋಣವೇ?

(ನವೆಂಬರ್ ೨೦೦೪ನೇ ಧರ್ಮಭಾರತೀ ಸಂಪಾದಕೀಯ)

Wednesday 4 February, 2009

ಮನುಭಾಷಿತ - 14

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಆಸೆ"-

ಜಗದ ಅಸ್ತಿತ್ವಕ್ಕೆ ಇದೇ ಕಾರಣ. ಈಗಿನ್ನೂ ಕಣ್ಬಿಟ್ಟ ಹಸುಗೂಸಿನಿಂದಾರಂಭಿಸಿ ಜೀರ್ಣಗೊಂಡ ಹಿರಿಯಜ್ಜನವರೆಗೂ ಆಸೆ ಸಾಮಾನ್ಯವೇ. ಬಣ್ಣ ಬೇರೆ, ಒಳ ಆಕೃತಿ ಒಂದೇ.

ಜಗತಿನ ಇತಿಹಾಸ - ವರ್ತಮಾನ - ಭವಿಷ್ಯತ್ತುಗಳನ್ನು ತುಂಬಿ ನಿಂತ ಮಹಿಮೆ ಅದರದ್ದು.

ಅದರಿಂದಾಗಿಯೇ ಎಲ್ಲ ; ಅದಿಲ್ಲದೆ ಏನೂ ಇಲ್ಲ.

ಕವಿಯೊಬ್ಬ ಹೃದ್ಯವಾಗಿ ಅದರ ದೊಡ್ಡತನವನ್ನು ತಿಳಿಸುತ್ತಾನೆ -
"ಪರ್ವತ ದೊಡ್ಡದು ; ಅದಕ್ಕಿಂತ ಸಮುದ್ರ ; ಸಮುದ್ರವನ್ನು ಮೀರಿದ್ದು ಆಗಸ ; ಆಗಸ ಬ್ರಹ್ಮನಷ್ಟಲ್ಲ ; ಆಸೆ ಬ್ರಹ್ಮನಿಗಿಂತಲೂ ದೊಡ್ಡದು".

ಭಗವಂತನ ಜಗತಿನ ರಚನೆಯನ್ನೇ "ಹಾಗಿರಬೇಕಿತ್ತು - ಹೀಗಿರಬೇಕಿತ್ತು" ಎಂದು ಕಲ್ಪಿಸಬಲ್ಲದು ಆಸೆ.

ಸೃಷ್ಟಿಯಾರಂಭವೇ ಆಸೆಯಿಂದ ಎನ್ನುತ್ತದೆ ಉಪನಿಷತ್ತು - "ಸೋಕಾಮಯತ" ಎಂದು.

ಮನುವೂ
"ಪ್ರಜೆಗಳನ್ನು ಸೃಷ್ಟಿಸಲು ಹೊರಟ ಭಗವಂತ ಮೊದಲು ಇಚ್ಛೆಯನ್ನು ಸೃಷ್ಟಿಸಿದ" ಎನುತ್ತಾನೆ.

ಹೀಗೆ ಸೃಷ್ಟಿಯನ್ನು ಆಮೂಲಾಗ್ರ ವ್ಯಾಪಿಸಿದ ಆಸೆಯ ಸ್ಥಾನ ಜೀವನದಲ್ಲೇನು? ಎನುವ ಜಿಜ್ಞಾಸೆಗಿಳಿದರೆ "ಆಸೆ ನಿಯಂತ್ರಿತವಾಗಬೇಕು" ಎನ್ನುವುದೇ ಹಲವರ ಅಭಿಮತ.

ಯಾರು ಆಸೆಗೆ ದಾಸರೋ ಅವರು ಲೋಕಕ್ಕೇ ಅಡುಯಾಳು ;
ಯಾರಿಗೆ ಆಸೆಯೇ ಅಡಿಯಾಳೋ ಅವರು ಲೋಕದ ಒಡೆಯರು-

ಆಶಾಯಾ ಯೇ ದಾಸಾಃ ತೇ ದಾಸಾಃ ಸರ್ವಲೋಕಸ್ಯ |
ಅಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ||ಎನ್ನುತ್ತಾನೆ ಅನುಭವಿ.

ಮನು ಆಸೆಯ ಕುರಿತಾಗಿ ಜೀವಲೋಕಕ್ಕೆ ಅಮರಸಂದೇಶ ನೀಡುತ್ತಾನೆ. ಆ ಸಂದೇಶ ಪ್ರತಿ ವ್ಯಕ್ತಿಯ ಪ್ರಾತಃ ಸ್ಮರಣೀಯವಾಗಬೇಕು ; ಶಯನ ಪ್ರತಿಜ್ಞೆಯೂ ಆಗಬೇಕು.

ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ |
ಹವಿಷಾ ಕೃಷ್ಣವರ್ತ್ಮೇನ ಭೂಯ ಏವಾಭಿವರ್ಧತೇ ||

ಆಸೆ, ಅದರ ಅನುಭವದಿಂದ ಉಪಶಮನಗೊಳ್ಳುವುದಿಲ್ಲ ; ಆಸೆಯನ್ನು ಈಡೇರಿಸಿದಷ್ಟೂ ಅದು ವಿಜೃಂಭಿಸುತ್ತದೆ - ಅಗ್ನಿಗೆ ನೀಡುವ ಹವಿಸ್ಸಿನಿಂದ ಅಗ್ನಿಯ ಜ್ವಾಲೆ ಹೆಚ್ಚಾದಂತೆ.

ಆಸೆಯ ನಿಯಂತ್ರಣವೇ ಜೀವನ ಯಶಸ್ಸಿನ ಮಹಾಮಂತ್ರ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ

(ಧರ್ಮಭಾರತೀ ಅಂಕಣ ಬರಹ)

Monday 2 February, 2009

ಮನುಭಾಷಿತ - 13

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ನಾವಿಷ್ಣುಃ ಪೃಥಿವೀಪತಿಃ - ವಿಷ್ಣುವಾಗದವ ಭೂಮಿಯಾಳಲಾರ".
ಸನಾತನ ಸಂಸ್ಕೃತಿ ಪ್ರಭುತ್ವಕ್ಕೆ ಕೊಡುವ ಅದ್ಭುತ ವಿವರಣೆ.

ಜೀವಜಗತ್ತು ಸುಖಮಯವಾಗಿ ಬದುಕಲು ಪ್ರಭುತ್ವ ಬೇಕು, ಪ್ರಭು ಬೇಕು. ರಾಜನಿಲ್ಲದೆ ಅರಾಜಕಸ್ಥಿತಿಯ ದೇಶ ವಾಸಕ್ಕೆ ಅನರ್ಹ. ಅರಾಜಕತ್ವ ಸೃಷ್ಟಿಗೆ ಭಯಕಾರಕ. ಆದ್ದರಿಂದಲೇ ಭಗವಂತನಿಂದ ರಾಜತ್ವದ ಸೃಷ್ಟಿ.

ಆದರೆ ರಾಜ ಹೇಗಿರಬೇಕು? ರಾಜನ ಗುಣ - ಸ್ವಭಾವ ಎಂತಿರಬೇಕು? ಎಂತಹ ವ್ಯಕ್ತಿತ್ವವುಳ್ಳವ ರಾಜನಾಗಬೇಕು?

ಚರ್ಚೆ ಇಂದಿನದು ಮಾತ್ರವಲ್ಲ ; ಹಿಂದಿನದೂ ಹೌದು. ನಾಳೆಯದು ಅಲ್ಲವೆನ್ನುವಂತೆಯೂ ಇಲ್ಲ. ಅಂದರೆ ಚರ್ಚೆ ಸಾರ್ವಕಾಲಿಕ.

ಚರ್ಚೆಯೇ ಸಾರ್ವಕಾಲಿಕವೆಂದಾದರೆ ವಿಷಯಕ್ಕೊಂದು ನಿರ್ಣಯವಿಲ್ಲ ಎಂದಾಯಿತು. ವಾಸ್ತವ ಹಾಗಿಲ್ಲ. ಎಂದೋ ಇದು ನಿರ್ಣೀತವಾದ ವಿಷಯ. ಹಾಗಿದ್ದರೆ ಚರ್ಚೆಯೇಕೆ? ಅದು ಅರ್ಥಮಾಡಿಕೊಳ್ಳದವರ ಕಾರ್ಯ. ಅರ್ಥಮಾಡಿಕೊಳ್ಳುವ ಮನಸ್ಸು ಮಾಡಿದರೆ...ಸಿದ್ಧವಿದೆ ಸಾನಾತನ ಸಾಹಿತ್ಯ.

ಮೂರ್ಧನ್ಯ ಸಾಹಿತ್ಯ ಮನುಸ್ಮೃತಿ ರಾಜಧರ್ಮವನ್ನು ವಿಸ್ತಾರವಾಗಿ ವಿವರಿಸುತ್ತದೆ. ವರ್ತಮಾನದ ರಾಜತ್ವದ ಸಮಸ್ಯೆಯಲ್ಲಿ ಪ್ರಧಾನವಾದುದು ಭ್ರಷ್ಟಾಚಾರ. ಭ್ರಷ್ಟಾಚಾರಕ್ಕೆ ಕಾರಣ ಭೋಗಲಾಲಸೆ.

ಪರಿಹಾರ?

ಮನುಭಾಷಿತ ಹೀಗಿದೆ -

ಇಂದ್ರಿಯಾಣಾಂ ಜಯೇ ಯೋಗಂ ಸಮಾತಿಷ್ಠೇದ್ದಿವಾನಿಶಮ್ |
ಜಿತೇಂದ್ರಿಯೋ ಹಿ ಶಕ್ನೋತಿ ವಶೇ ಸ್ಥಾಪಯಿತುಂ ಪ್ರಜಾಃ ||

ರಾಜನಾದವನು ರಾತ್ರಿ - ಹಗಲು ಇಂದ್ರಿಯ ಜಯಕ್ಕಾಗಿ ಪ್ರಯತ್ನಶೀಲನಾಗಬೇಕು. ಜಿತೇಂದ್ರಿಯನಾದವನೇ ಪ್ರಜಾಪಾಲನೆಗೆ ಅರ್ಹ.

ದೇಶದ ಸಂಪತ್ತೂ ರಾಜನ ಅಧೀನ. ಅಧೀನವಾಗಿಸದಿದ್ದರೆ ಆಳುವುದು ಅಸಾಧ್ಯ. ಅಧೀನವಾಗಿಸಿದರೆ ದುರುಪಯೋಗ ಸಾಧ್ಯ.

ರಾಜವ್ಯವಸ್ಥೆಯ ಆರಂಭಿಕ ಹಂತದಲ್ಲಿಯೇ ಇದನ್ನು ಚಿಂತಿಸಿದ ಮನು ಸೂಚಿಸಿದ ಪರಿಹಾರ "ಇಂದ್ರಿಯಜಯ".

ಇದನ್ನೇ ಕೌಟಿಲ್ಯ ಪುನರುಚ್ಚರಿಸಿದ -

"ಅರಿಷಡ್ವರ್ಗತ್ಯಾಗೇನೇಂದ್ರಿಯಜಯಂ ಕುರ್ವೀತ - ರಾಜನು ಅರಿಷಡ್ವರ್ಗವನ್ನು ತ್ಯಜಿಸಿ ಜಿತೇಂದ್ರಿಯನಾಗಬೇಕು" ಎಂದು.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Saturday 31 January, 2009

ಅವನಿಗೊಪ್ಪುವ ನಡೆ - ನುಡಿ

ಜಗತ್ತಿಗೆ ಈಶನಾದ ಅವನೇ ನಮೆಲ್ಲರ ಅಪ್ಪ. ಅವನ ಅಡಿಗೆ ಬಾಗುವುದೇ ಜೀವಿಯ ಸೌಜನ್ಯ. ಅವನೇ ನಾಥನಿರುವಾಗ ಅನಾಥರಾರು? ಎಲ್ಲರು ಸನಾಥರೇ. ನಮೆಲ್ಲರ ಅಪ್ಪನಿಗೆ ಬೇಸರ ಉಂಟುಮಾಡದಿರುವುದೇ ಮಕ್ಕಳಾದ ನಮ್ಮೆಲ್ಲರ ಜೀವನ ವ್ರತವಾಗಬೇಕು. ಅವನಿಗೆ ಬೇಸರವಾಗುವುದು ಯಾವಾಗ? ಅವನ ಅಭಿಪ್ರಾಯಕ್ಕೆ ವಿರುದ್ಧವಾಗಿ ವರ್ತಿಸಿದಾಗ. ಸೃಷ್ಟಿ ಅವನದು. ಹಾಗಾಗಿ ಸೃಷ್ಟಿಯ ಕುರಿತಾದ ನಮ್ಮ ಧೋರಣೆಗಳು ಅವನೂ ಒಪ್ಪುವಂತಿರಬೇಕು. ಸೃಷ್ಟಿಯ ಬಳಕೆ ಅವನ ಅನುಮತಿಯಂತಿರಬೇಕು. ಅವನಿಗೆ ಸಂತಸವಾಗುವುದು ಈ ಎರಡನ್ನು ಒಪ್ಪಿಕೊಂಡಾಗ. ಅವನ ಮನ ಒಪ್ಪುವಂತೆ ನುಡಿಯಿರಲಿ ; ನಡೆಯಿರಲಿ.

Thursday 29 January, 2009

ಮನುಭಾಷಿತ - 12

ವ್ಯಕ್ತಿ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಮನುಷ್ಯನ ಎಲ್ಲ ಚಟುವಟಿಕೆಗಳು ಮನಸ್ಸಿನ ಅಧೀನ. ಮನಸ್ಸು ಕುಣಿಸಿದಂತೆ ಕುಣಿಯುವ ಸೂತ್ರದ ಬೊಂಬೆ ಈ ದೇಹ. ಕಣ್ಣು - ಮೂಗು - ಕಿವಿ - ಚರ್ಮ - ನಾಲಗೆ ಮುಂತಾದ ಇಂದ್ರಿಯಗಳೆಲ್ಲ ಮನಸ್ಸು ನುಡಿದಂತೆ ತಾನೇ ನಡೆಯುವುದು?

ಪ್ರತಿಯೊಬ್ಬ ಕೊಲೆಗಾರ ಹೊರಗೆ ಕೊಲ್ಲುವ ಮುನ್ನ ತನ್ನ ಮನಸ್ಸಿನಲಿಯೇ ಕೊಂದಿರುತ್ತಾನೆ. ಕಳ್ಳ ಕಳ್ಳತನ ಮಾಡುವುದು ಮೊದಲು ಮನಸ್ಸಿನಲ್ಲಿಯೇ. ವ್ಯಭಿಚಾರಿ ವ್ಯಭಿಚಾರ ಮಾಡುವುದೂ ಮೊದಲು ಮನದಲ್ಲಿಯೇ. ಎಲ್ಲ ಅಪರಾಧಗಳ ಜನ್ಮಭೂಮಿ ಮನಸ್ಸು.

ಅಪರಾಧ ಜಗತ್ತಿನಲ್ಲಿ ಶಿಕ್ಷೆಯಾಗುವುದು, ಹೊರ ಅಪರಾಧಗಳಿಗೆ. ಯಾಕೆಂದರೆ ಮನಸ್ಸಿನೊಳಗಿನ ಅಪರಾಧಕ್ಕೆ ಸಾಕ್ಷಿ ಇಲ್ಲ ; ಸಾಕ್ಷಿಯಿಲ್ಲದ ಅಪರಾಧ ಸಿಂಧುವಲ್ಲ ; ಸಿಂಧುವಾಗದ್ದಕ್ಕೆ ಶಿಕ್ಷೆಯಿಲ್ಲ.

ಮನಸ್ಸು ತಪ್ಪು ಮಾಡದಂತಿರಲು ಅಂತಸ್ಸಾಕ್ಷಿಯ ಜಾಗ್ರತಿ ಅಗತ್ಯ. ನ್ಯಾಯದ ಹಾದಿಯಲ್ಲಿ ಮುನ್ನಡೆಸುವ ಆ ಅಂತಸ್ಸಾಕ್ಷಿಗೆ ಹೆಸರು 'ವೈವಸ್ವತಯಮ'. ಅನುಭವಿಗಳು ನುಡಿಯುವುದು ಅದನ್ನೇ-

ಯಮೋ ವೈವಸ್ವತೋ ರಾಜಾ ಯಸ್ತವೈಷ ಹೃದಿಸ್ಥಿತಃ |
ತೇನ ಚೇದವಿವಾದಸ್ತೇ ಮಾ ಗಂಗಾನ್ ಮ ಕುರೂನ್ ಗಮಃ |
ತೇನ ಚೇಚ್ಚ ವಿವದಸ್ತೇ ಮಾ ಗಂಗಾನ್ ಮಾ ಕುರೂನ್ ಗಮಃ |

"ನಿನ್ನ ಹೃದಯದಲಿ ಬೆಳಗುತ್ತಿರುವ ಯಮಧರ್ಮನೊಂದಿಗೆ ನಿನಗೆ ವಿವಾದವಿಲ್ಲವಾದರೆ, ಅವನ ಧರ್ಮಪಥ ನಿನಗೆ ಪಥ್ಯವೆನಿಸಿದರೆ, ನಿನ್ನ ನಡೆ ಅವನಿಗೆ ಸಮ್ಮತವಾದರೆ, ನೀನು ಪುಣ್ಯಜೀವಿ ; ಪುಣ್ಯ ಸಂಪಾದನೆಗಾಗಿ ನೀನು ಕಾಶಿಕ್ಷೇತ್ರಕ್ಕೋ, ಕುರುಕ್ಷೇತ್ರಕ್ಕೋ ಯಾತ್ರೆ ಮಾಡಬೇಕಿಲ್ಲ. ನಿನಗೂ ಯಮನಿಗೂ ವಿವಾದವಿದ್ದರೆ, ನಿನ್ನ ಮನಸ್ಸು ಅವನಿಗೆ ಸರಿಹೊಂದದಿದ್ದರೆ ನೀನು ಪಾಪಿ ; ನೀನೆಲ್ಲಿಗೂ ಯಾತ್ರೆ ಮಾಡಬೇಕಿಲ್ಲ ; ನಿನ್ನ ಯಾತ್ರೆ ವ್ಯರ್ಥ".

ಮನು ತಪಸ್ಸಿನ ತಪ್ಪಾದ ಚಿಂತನೆಗಳನ್ನೂ ಅಶುಭ ಕರ್ಮವೆಂದು ಹೆಸರಿಸುತ್ತಾನೆ-

ಪರದ್ರವ್ಯೇಷ್ವಭಿಧ್ಯಾನಂ ಮನಸಾsನಿಷ್ಟಚಿಂತನಮ್ |
ವಿತಥಾಭಿನಿವೇಶಶ್ಚ ತ್ರಿವಿಧಂ ಕರ್ಮ ಮಾನಸಮ್ ||

ಅನ್ಯರ ಗಳಿಕೆಯನ್ನು ಕಬಳಿಸುವ ಯೋಚನೆ ; ಮನಸ್ಸಿನ ತುಂಬ ಕೆಟ್ಟ ಚಿಂತನೆ. ಸತ್ಯವನ್ನು ಸುಳ್ಳೆಂದೂ, ಸುಳ್ಳನ್ನು ಸತ್ಯವೆಂದೂ ನಂಬುವುದು ಇದು ಮನಸ್ಸಿನ ಅಪರಾಧ. ಈ ಅಪರಾಧ ಮನಸ್ಸಿನ ಕ್ಷೋಭೆಗೆ ಕಾರಣ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Tuesday 27 January, 2009

ಅದಾಗಿ ಬರದಿರಲಿ....

"ಹನ್ನೆರಡು ವರ್ಷಗಳ ಕಾಲ ಸತತ ಯಾಗ ಮಾಡಿದವನಿಗಿಂತ ಒಮ್ಮೆಯೂ ಸಿಟ್ಟು ಮಾಡದವ ಶ್ರೇಷ್ಠ" ಎನ್ನುತ್ತದೆ ಮಹಾಭಾರತ.ಕೋಪವೊಂದಿಲ್ಲದಿರೆ ಮನಸ್ಸು ಅಸೀಮ ಶಾಂತಿಯ ಸರೋವರವಾಗಿರುತ್ತದೆ.ಮನವೆಂಬ ಮಾನಸ ಸರೋವರದ ನಿಶ್ಚಲತೆಯನ್ನು ಭಂಗಗೊಳಿಸಿ, ಅದನ್ನು ಅಲ್ಲೋಲಕಲ್ಲೋಲಗೊಳಿಸಲು ಕ್ಷಣಮಾತ್ರದ ಕೋಪವೆಂಬ ಕಲ್ಲು ಸಾಕು.ಮನದ ನಿಶ್ಚಲತೆಯೆಂದರೆ ಅದು ಅಧ್ಯಾತ್ಮದ ಉನ್ನತಿ ; ದೈವಿಕದ ಭವ್ಯತೆ ; ಭೌತಿಕದ ಬಂಗಾರ ; ಬುದ್ಧಿಯ ವಿಜಯ. ಹಾಗಿರುವಾಗ ಮನದ ನಿಶ್ಚಲತೆಯನ್ನು ಹಾಳುಮಾಡಿಕೊಳ್ಳದಿರುವುದು ಅಪೇಕ್ಷಣೀಯ. ಕೋಪ ಅದನ್ನು ಭಗ್ನಗೊಳಿಸುತ್ತದೆ ಎಂದಾದರೆ ಅದು ನಮಗೇಕೆ ಬೇಕು? ಕೋಪವೇ ಇಲದ ಬದುಕನ್ನು ಆಶಿಸೋಣ. ಕೋಪವೇ ಬೇಡವೆಂದಲ್ಲ. ನಾವಾಗಿ ಬೇಕಾದಾಗ ತರಿಸಿಕೊಳ್ಳೋಣ ; ಅದಾಗಿ ಬರುವುದು ಬೇಡ.

Monday 26 January, 2009

ಮನುಭಾಷಿತ - 11

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಬಯಕೆ ಬದುಕಿನ ಜೀವಸ್ರೋತ. ಸಾಮಾನ್ಯರಲ್ಲಿ ಸಾಮಾನ್ಯನ ಕ್ಷುದ್ರಾತಿಕ್ಷುದ್ರ ಬಯಕೆಯಿಂದಾರಂಭಿಸಿ ಅಧ್ಯಾತ್ಮಸಾಧಕರ ಪರಮೋನ್ನತ ಪರಮಾತ್ಮ ಕಾಮನೆಯವರೆಗೆ ಅದರ ಹರವು.

ಆದ್ದರಿಂದಲೇ ಫಲದ ಪ್ರತೀಕ್ಷೆಯಲ್ಲಿ ಕರ್ಮ.ಎಲ್ಲ ಸಲವೂ ನಿರೀಕ್ಷೆ ಸಫಲವಾಗುತ್ತದೆಯೆಂದೇನೂ ಇಲ್ಲ. ನಿರೀಕ್ಷಿತ ಫಲ ದೊರೆಯದಿದ್ದಾಗ ನಿರಾಸೆ ಸಹಜ.

ನಿರಾಸೆ, ಕಾರ್ಯದಿಂದಲೇ ವಿಮುಖವಾಗಿಸುತ್ತದೆ. ನಿರಾಸೆಯ ಕಬಂಧಬಾಹುಗಳಲ್ಲಿ ಬಂಧಿಯಾಗುವ ಮನುಷ್ಯ ಸ್ತಬ್ಧನಾಗುತ್ತಾನೆ ; ಜೀವನೋತ್ಸಾಹವನ್ನು ಕಳೆದುಕೊಳ್ಳುತ್ತಾನೆ ; ತನ್ನನ್ನು ಅಸಮರ್ಥ, ಅಪ್ರಯೋಜಕ ಎಂದುಕೊಳ್ಳುತ್ತಾನೆ ; ಜಗತಿನೆಲ್ಲೆಡೆ ಅವನಿಗೆ ಶೂನ್ಯವೇ ಕಾಣುತ್ತದೆ.

ಹಾಗೆಂದು ಈ ನಿರಾಸೆ ವ್ಯಕ್ತಿಯನ್ನು ಆಸೆಯೇ ಇಲ್ಲದವನನ್ನಾಗಿಯೇನೂ ಮಡುವುದಿಲ್ಲ. ಆಸೆ ಮನದೊಳಗೆ ಮಡುಗಟ್ಟಿಯೇ ಇರುತ್ತದೆ. ಬಯಕೆಯ ಈಡೇರಿಕೆಯತ್ತ ಕಾರ್ಯರತನಾಗುವುದಿಲ್ಲ ಅಷ್ಟೆ.

ಮಾನವ ಸಂಪನ್ಮೂಲ ಸರ್ವಶ್ರೇಷ್ಠ ಸಂಪನ್ಮೂಲ. ಸೃಷ್ಟಿಯ ಯಾವ ಸಂಪತ್ತೂ ವ್ಯರ್ಥವಾಗಬಾರದು. ಒಂದಲ್ಲ ಒಂದು ರೀತಿಯಲ್ಲಿ ಸೃಷ್ಟಿಗೆ ಸಹಕಾರಿಯಾಗಲೇ ಬೇಕು ಅದು. ಅದರಲ್ಲೂ ಭಗವಂತನ ಅದ್ಭುತ ಸೃಷ್ಟಿಯಾದ ಮಾನವ ನಿರುಪಯೋಗಿಯಾಗಬಾರದು.

"ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಂ ಸಮಾಃ - ಕರ್ಮಗಳನ್ನು ಮಾಡುತ್ತಲೇ ಪೂರ್ಣಾಯುಷ್ಯವನ್ನು ಪೂರ್ಣಗೊಳಿಸು" ಎನ್ನುತ್ತದೆ ಉಪನಿಷತ್ತು. ನಿರಾಶಾವದಿಯಾಗಿ ಕಾರ್ಯವಿಹೀನನಾಗುವುದು ಸನಾತನ ಸಂಸ್ಕೃತಿಯ ಸದಾಚಾರವಲ್ಲ.

ಇಂತಹ ನಿರಾಶಾವದಿಗೆ ಮನು ನೀಡುವ ಮಾರ್ಗದರ್ಶನ -

ಆರಭೇತೈವ ಕರ್ಮಾಣಿ ಶ್ರಾಂತಃ ಶ್ರಾಂತಃ ಪುನಃ ಪುನಃ |
ಕರ್ಮಾಣ್ಯಾರಭಮಾಣಂ ಹಿ ಪುರುಷಂ ಶ್ರೀರ್ನಿಷೇವತೇ ||

ಕಾರ್ಯಗಳಲ್ಲಿ ಎಷ್ಟೇ ವಿಘ್ನಗಳು ಎದುರಾದರೂ, ವಿಘ್ನಗಳು ಎಷ್ಟೇ ಖಿನ್ನನನ್ನಾಗಿಸಿದರೂ ಮತ್ತೆ ಮತ್ತೆ ಪ್ರಯತ್ನಶೀಲನಾಗಬೇಕು.

ನಿರಾಶನಾಗದೆ ನಿರಂತರ ಕಾರ್ಯಶೀಲನಾಗುವ ಪುರುಷನಲ್ಲಿಗೆ ಸಂಪತ್ತು ಹರಿದುಬರುತ್ತದೆ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Friday 16 January, 2009

ನಿಯಮ ಕೋಟೆಯೊಳ ಸಾಮ್ರಾಟ

ಬದುಕಿನ ಗತಿ ಅನೂಹ್ಯ. ಅದು ಆರಂಭವಾಗುವುದು ಹೇಗೆ? ಅದರ ಮಧ್ಯ ಹೇಗೆ? ಅದರ ಅಂತ್ಯ ಹೇಗೆ? ಬರುವ ಸವಾಲುಗಳು ಹೇಗಿರುತ್ತವೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುವುದು ಕಷ್ಟ.

ಪರಿಸರ, ಪ್ರವಾಹದಂತೆ ಬದುಕನ್ನು ತೇಲಿಸಿಕೊಂಡು ಹೋಗುವಂತದ್ದು. ಬದುಕು ತೇಲಿಹೋಗದಂತಿರಲು ದೃಢವಾದ ಆಸರೆ ಬೇಕು. ವಿವೇಕಕ್ಕಿಂತ ದೃಢವಾದ ಆಸರೆ ಬೇರಿಲ್ಲ. ವಿವೇಕ ಜೊತೆಯಿದ್ದಾಗ ಕುದಿಯುವ ಲಾವಾರಸವೂ ತಂಪಾಗುತ್ತದೆ ; ಸುರಿಯುವ ವರ್ಷಧಾರೆಯೂ ಸಿಂಚನವಾಗುತ್ತದೆ ; ಉಬ್ಬರದ ಸಾಗರವೂ ಶಾಂತಗಂಭೀರವಾಗುತ್ತದೆ ; ಬೀಸುವ ಚಂಡಮಾರುತವೂ ಅನುಕೂಲವಾತವಾಗುತ್ತದೆ.

'ವಿವೇಕ' ಜೀವನವನ್ನು ಲಯಬದ್ಧಗೊಳಿಸುತ್ತದೆ. ಲಯವಿಲ್ಲದ ಗೀತವೂ - ವಾದ್ಯವೂ ಕರ್ಕಶವೆನಿಸುತ್ತದೆ. ಕರ್ಣ ಮಾಧುರ್ಯಕ್ಕೆ ಅದು ಲಯಸಂಪನ್ನವಾಗಬೇಕು.

ಲಯಬದ್ಧ ಜೀವನಕ್ಕೆ ನಿಯಮ ಬೇಕು. ನಮ್ಮದೇ ಬದುಕನ್ನು ನಾವು ಸಜ್ಜನಿಕೆಯ ಬೇಲಿಯೊಳಗೆ ಬಂಧಿಸುವುದೇ ನಿಯಮ. ನಿಯಮ ಕೋಟೆಯೊಳಗಿನ ಬದುಕು ಸಾಮ್ರಾಟನ ಬದುಕು ; ಚಕ್ರಾಧಿಪತಿಯ ಬದುಕು. ಈ ಕೋಟೆ, ಸುತ್ತ ಇಲ್ಲದಿದ್ದರೆ ಅದು ಅನಾಥ ಬದುಕು ; ಭಿಕ್ಷುಕನ ಬದುಕು ; ಸೂತ್ರ ಹರಿದ ಗಾಳಿಪಟದಂತಹ ಬದುಕು.

Tuesday 6 January, 2009

ಮನುಭಾಷಿತ - 10

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಸುಖ ಮತ್ತು ದುಃಖ. ಇವೆರಡು ಜಿಜ್ಞಾಸುಲೋಕಕ್ಕೊಂದು ಸವಾಲು. ಶೋಧಕರ ಶೋಧನೆಯ ಆದ್ಯತೆ ಕೂಡ. ಯಾಕೆಂದರೆ ಮನುಷ್ಯನ ಇತಿಹಾಸ ಪುಟಗಳು ಸಾರುತ್ತಿರುವುದು ; ವರ್ತಮಾನ ಕ್ರಿಯಾಶೀಲವಾಗಿರುವುದು ; ಭವಿಷ್ಯದ ಆಶೋತ್ತರಗಳು ಮೂಡಿಬರುವುದು ಈ ಎರಡು ವಿಷಯಗಳನ್ನು ಆಧರಿಸಿಯೇ.

ಸುಖ - ದುಃಖಗಳ ಜಿಜ್ಞಾಸೆ ಸೃಷ್ಟಿಯಷ್ಟೇ ಪ್ರಾಚೀನ. ಸೃಷ್ಟಿಯಾರಂಭದಿಂದ ಈ ಕುರಿತ ಚರ್ಚೆ ಜೀವಂತ. ಇಂದಿಗೂ ಜಗತ್ತಿನ ಚಿಂತಕರು ಇದರ ನಿರ್ವಚನವನ್ನು ನೀಡಲು ಪ್ರಯತ್ನಿಸುತ್ತಿರುವುದು ಅದರ ಗಾಂಭೀರ್ಯಕ್ಕೆ ದ್ಯೋತಕ.

ಇದು ಚಿಂತಕ ವರ್ಗಕ್ಕೆ ಮಾತ್ರವಲ್ಲ, ಸಾಮಾನ್ಯರಿಗೂ ಜಿಜ್ಞಾಸೆಯೇ. ಯಾಕೆಂದರೆ ವಿದ್ಯಾವಂತ - ಅನಕ್ಷರಸ್ಥ, ಬಡವ - ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲರ ಬಾಳಿನ ಗುರಿಯೂ ಸುಖವೇ. ಸುಖದ ಅಪೇಕ್ಷೆ ಮನದಲ್ಲಿ ಮನೆಮಾಡಿದಾಗ ಮೊದಲು ಏಳುವ ಪ್ರಶ್ನೆಯೇ 'ಹಾಗೆಂದರೇನು?' ಎನ್ನುವುದು. ಸುಖದ ಅಭಿಲಾಷೆ ಮತ್ತು ದುಃಖದ ನಿವಾರಣೆ ಇವೆರಡು ಜೀವಿಯ ನಿರಂತರ ಕ್ರಿಯಾಶೀಲತೆಯ ಗುರಿಗಳು. ಗುರಿಯೆಡೆಗೆ ಸಾಗುವ ಪ್ರಯತ್ನದಲ್ಲಿ ಸುಖಕ್ಕೆ ಕಾರಣವಾಗುವವರ ಕುರಿತು ಪ್ರೀತಿ ; ದುಃಖವನ್ನುಂಟುಮಾಡುವವರ ಬಗ್ಗೆ ದ್ವೇಷಮೂಡುವುದು ಸಹಜವೇ ಎನ್ನಬೇಕು.

ಮನಸ್ಸಿನ ಇನ್ನೊಂದು ನಿರ್ಣಯವೆಂದರೆ ಸುಖ - ದುಃಖಗಳು ಬೇರೆಯವರಿಂದ ದೊರೆಯುತ್ತದೆನ್ನುವುದು. ಇದರಿಂದಾಗಿ ಸುಖದ ಬೆಂಬತ್ತಿ ಮರೀಚಿಕೆಯೆನ್ನುವ, ದುಃಖವನ್ನು ನಿರಾಕರಿಸಿ ಜನ್ಮಕ್ಕಂಟಿದ ಜಾಡ್ಯವೆನ್ನುವ ಪರಿಸ್ಥಿತಿಯ ನಿರ್ಮಾಣ.

ಮನು, ಅರ್ಥಮಾಡಿಕೊಂಡಷ್ಟೂ ಅರ್ಥದ ವ್ಯಾಪ್ತಿ ವಿಸ್ತಾರಗೊಳ್ಳುವ ವಿಶಿಷ್ಟ ಮಾತನ್ನಾಡುತ್ತಾನೆ-

ಸರ್ವಂ ಪರವಶಂ ದುಃಖಂ ಸರ್ವಮಾತ್ಮವಶಂ ಸುಖಮ್ |
ಏತದ್ವಿದ್ಯಾತ್ಸಮಾಸೇನ ಲಕ್ಷಣಂ ಸುಖದುಃಖಯೋಃ ||

ಎಲ್ಲ ದುಃಖವೂ ಅನ್ಯರ ಅಧೀನ. ಎಲ್ಲ ಸುಖವೂ ತನ್ನೊಳಗಿನ ನಿಧಿ. ಹೀಗಿದೆ ಸುಖ - ದುಃಖದ ಸ್ವರೂಪ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Monday 5 January, 2009

ನಿನ್ನಂಘ್ರಿ ಪದರೇಣು ಶಿರಧರಿಪ ಹೊನ್ನಯ್ಯ
ಭಾಗ್ಯವದು ಎನಗಿರಲಿ ನಾ ದಾಸನಯ್ಯ

ನಿನ್ನ ಕಾಯಕಗೈವ ಹಂಬಲದ ಮಧುರಸವ
ಕಚ್ಚದೆಲೆ ಕಡಿಯದೆಲೆ ಮಧುಕರವು ನೀಡುವುದೇ
ಮಧುಕರಕೆ ಬೆಚ್ಚಿದರೆ ರಸದ ಸ್ವಾದದ ಸೊಲ್ಲ
ಸಾರಲಹುದೇ ದೇವ ಜಗಪೊರೆವ ಜಗದೀಶ

ನಿನ್ನ ಮಹಿಮೆಯ ಜಗಕೆ ಸಾರುವುದೇ ಪರಧರ್ಮ
ಸಾರುವರೆ ಬಲನೀಡು ಓ ಮಹಾಬಲದೇವ
ಮಧುಕರಕೆ ಶುಭವಿರಲಿ ಮಧುವು ಜಗಕಾಗಿರಲಿ
ಮಧುವ ಜಗಕುಣಿಸುವುದು ಬದುಕ ಗುರಿಯಾಗಿರಲಿ

Sunday 4 January, 2009

ಮನುಭಾಷಿತ - 9

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಸ್ತ್ರೀ - ಪುರುಷ ಸಂಯೋಗ ಸೃಷ್ಟಿಸಹಜ ಕಾರ್ಯ. ಹೆಣ್ಣಿಗೆ ಗಂಡಿನಲ್ಲಿ ಒಲವು ; ಗಂಡಿಗೆ ಹೆಣ್ಣಿನಲ್ಲಿ ಅನುರಕ್ತಿ ; ಇದು ಸೃಷ್ಟೀಶ ಸೃಷ್ಟಿಗಿತ್ತ ವರ.

ಪ್ರಾಣಿಸಮೂಹದಲ್ಲಿ ಇದು ಮುಕ್ತ. ಮನುಷ್ಯರಲ್ಲಿ ಅದರಲ್ಲೂ ಭಾರತೀಯರಲ್ಲಿ ಇದಕ್ಕೊಂದು ಚೌಕಟ್ಟಿದೆ ; ಪರಿಧಿಯಿದೆ. ಈ ಚೌಕಟ್ಟಿಗೆ "ದಾಂಪತ್ಯ" ಎಂದು ಹೆಸರು.

ದಾಂಪತ್ಯ ಎರಡು ಹೃದಯಗಳ ಕೂಡುವಿಕೆಯ ವಿಶಿಷ್ಟ ಬದುಕು. ಅದು ಅನನ್ಯ ಕೂಡ.

ಮಮ ಹೃದಯಂ ತೇ ಅಸ್ತು |
ಮಮ ಚಿತ್ತೋ ಚಿತ್ತಮಸ್ತು ತೇ ||

ನನ್ನ ಹೃದಯದಲ್ಲಿ ನಿನ್ನ ಹೃದಯವಿರಲಿ, ನನ್ನ ಮನದಲ್ಲಿ ನಿನ್ನ ಮನಸ್ಸು ನೆಟ್ಟಿರಲಿ. ವಿವಾಹದ ಮಂಗಲ ಮುಹೂರ್ತದಲ್ಲಿ ವರ ವಧುವಿನೊಂದಿಗೆ ಹಂಚಿಕೊಳ್ಳುವ ಮಧುರ ಭಾವಾಭಿವ್ಯಕ್ತಿಯಿದು.

ಇಂತಹ ದಾಂಪತ್ಯವನ್ನೇ ಕವಿ ಭವಭೂತಿ ಅದ್ವೈತಕ್ಕೆ ಹೋಲಿಸುತ್ತಾನೆ. ಅವನ ನೋಟದಲ್ಲಿ ದಾಂಪತ್ಯ ಸುಖ - ದುಃಖಗಳ ಸಮ್ಮಿಶ್ರಣ ; ಅಸಂಖ್ಯ ಅವಸ್ಥೆಗಳ ಸಮ್ಮಿಲನ.

ಸಂಕೀರ್ಣವಾದ ದಾಂಪತ್ಯದ ಸಮಸ್ಯೆಗೆ ಮನು ಸೂಚಿಸುವುದು ಸರಳವಾದ ಪರಿಹಾರವನ್ನು -

ಸಂತುಷ್ಟೋ ಭಾರ್ಯಯಾ ಭರ್ತಾ
ಭರ್ತ್ರಾ ಭಾರ್ಯಾ ತಥೈವ ಚ |
ಯಸ್ಮಿನ್ನೇವ ಕುಲೇ ನಿತ್ಯಂ
ಕಲ್ಯಾಣಂ ತತ್ರ ವೈ ಧ್ರುವಮ್ ||

ಕುಟುಂಬದಲ್ಲಿ ಕಲ್ಯಾಣ ಸದಾ ನೆಲೆಸಿರಬೇಕೆಂದರೆ ಸತಿಪತಿಯರ ಪರಸ್ಪರ ಸಂಬಂಧ ಸುಮಧುರವಾಗಿರಬೇಕು.

ಸಂಬಂಧ ಸುಮಧುರವಾಗಿರಬೇಕೆಂದರೆ ಒಬ್ಬರಿಂದೊಬ್ಬರು ಸಂತುಷ್ಟರಾಗಬೇಕು. ಪತ್ನಿಯಿಂದಾಗಿ ಪತಿಯ ಬದುಕು ಸದಾ ಹಸಿರಾಗಬೇಕು ; ಪತಿಯಿಂದ ಪತ್ನಿಯ ಜೀವನಕ್ಕೆ ಹರ್ಷದ ನೆಲೆ ಒದಗಬೇಕು.

ಅರಿವಿನಿಂದ ಕೂಡಿದ ಅನ್ಯೋನ್ಯತೆಯ ಅನನ್ಯ ಸಹಜೀವನ ಭಾರತೀಯ ಪರಂಪರೆಯ ಅನುಪಮ ಕೊಡುಗೆ. ಅದನ್ನು ಉಳಿಸುಕೊಳ್ಳುವ ಮನೋದಾರ್ಢ್ಯ ದಂಪತಿಗಳದ್ದಾಗಿರಬೇಕಷ್ಟೇ!

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Saturday 3 January, 2009

ರಾಮರಾಜ್ಯ

ಕಳೆದ ಶತಮಾನ ಮತ್ತು ಈ ಶತಮಾನಗಳ ಭಾರತದ ರಾಜಕೀಯ ಪುಟಗಳನ್ನು ತೆರೆದಾಗ 'ರಾಮರಾಜ್ಯ' ಎನ್ನುವ ಶಬ್ದದ ವ್ಯಾಪಕ ಬಳಕೆಯನ್ನು ಗಮನಿಸಬಹುದು. ಈ ಶಬ್ದದ ಬಳಕೆಗೆ ಅಥವಾ 'ರಾಮರಾಜ್ಯ'ದ ಪರಿಕಲ್ಪನೆಗೆ ಕಾರಣವಾದದ್ದು ವಾಲ್ಮೀಕಿಗಳು ವರ್ಣಿಸಿದ ರಾಮರಾಜ್ಯದ ಹಿರಿಮೆ - ಗರಿಮೆ.

ರಾಮರಾಜ್ಯದ ವಿಧಾನದ ಕುರಿತಾಗಿ ಅಲ್ಲ ; ರಾಮರಾಜ್ಯದ ಪರಿಣಾಮದ ಕುರಿತಾಗಿ ವಾಲ್ಮೀಕಿಗಳ ಕಥನವನ್ನು ಇಲ್ಲಿ ಸಂಗ್ರಹಿಸಿದೆ.

ರಾಮರಾಜ್ಯದಲ್ಲಿ....

* ಯಾರೂ ಅಕಾಲ ಮರಣಕ್ಕೆ ತುತ್ತಾಗುತ್ತಿರಲಿಲ್ಲ ; ಇದರಿಂದಾಗಿ ವಿಧವೆಯರ ದುಃಖದ ಪರಿಚಯ ಯಾರಿಗೂ ಇರಲಿಲ್ಲ.

* ವಿಷವೈದ್ಯರಿಗೆ ವೃತ್ತಿಯಿರಲಿಲ್ಲ ; ಏಕೆಂದರೆ ಸರ್ಪ ಮುಂತಾದ ವಿಷಜಂತುಗಳ ಭಯವೇ ಇರಲಿಲ್ಲ.

* ರೋಗದ ಭೀತಿ ಯಾರಿಗೂ ಇರಲಿಲ್ಲ ; ಏಕೆಂದರೆ ರೋಗವೇ ಇರಲಿಲ್ಲ.

* ಮನೆಗಳಿಗೆ ಅಲಂಕಾರಕ್ಕಾಗಿ ಮಾತ್ರ ದ್ವಾರಗಳಿದ್ದವು ; ಏಕೆಂದರೆ ಕಳ್ಳರೇ ಇರಲಿಲ್ಲ.

* ಹಿರಿಯರು ಕಿರಿಯರಿಗೆ ಪ್ರೇತಕಾರ್ಯ ಮಾಡುವ ಪರಿಸ್ಥಿತಿ ಇರಲಿಲ್ಲ ; ಏಕೆಂದರೆ ಎಲ್ಲರೂ ದೀರ್ಘಾಯುಷಿಗಳಾಗಿದ್ದರು.

* ಅಳು - ಆಕ್ರಂದನ ಎಲ್ಲೂ ಕೇಳುತ್ತಿರಲಿಲ್ಲ ; ಏಕೆಂದರೆ ಎಲ್ಲೆಲ್ಲೂ ಆನಂದವೇ ತುಂಬಿತ್ತು.

* ನ್ಯಾಯಸ್ಥಾನಗಳ ಅವಶ್ಯಕತೆ ಇರಲಿಲ್ಲ ; ಏಕೆಂದರೆ ಪ್ರಜೆಗಳು ಪರಸ್ಪರ ಕಲಹವನ್ನೇ ಮಾಡುತ್ತಿರಲಿಲ್ಲ.

* ಕಲಹ ಇಲ್ಲವಾಗಿತ್ತು ; ಆದ್ದರಿಂದ ಹಿಂಸೆಯೇ ಇರಲಿಲ್ಲ.

* ವೃಕ್ಷಗಳು ಬೀಳುತ್ತಿರಲಿಲ್ಲ ; ಏಕೆಂದರೆ ಆಳವಾದ - ದೃಢವಾದ ಬೇರುಗಳನ್ನು ಹೊಂದಿದ್ದವು.

* ನಿರ್ದಿಷ್ಟ ಫಲಪುಷ್ಪಗಳಿಗಾಗಿ ನಿರೀಕ್ಷಿಸಬೇಕಾಗಿರಲಿಲ್ಲ ; ಏಕೆಂದರೆ ವರ್ಷವಿಡೀ ಫಲಪುಷ್ಪ ಸಮೃದ್ಧಿ ಇರುತ್ತಿತ್ತು.

* ಪ್ರವಾಹ - ಬರಗಾಲ ಎರಡೂ ಇರಲಿಲ್ಲ ; ಏಕೆಂದರೆ ಪರ್ಜನ್ಯನು ಜನರ ಇಚ್ಛೆಯಂತೆ ಮಳೆಯನ್ನು ಸುರಿಸುತ್ತಿದ್ದನು.

* ಉಷ್ಣ ಮತ್ತು ಶೀತದ ಬಾಧೆಯೇ ಇರುತ್ತಿರಲಿಲ್ಲ ; ಏಕೆಂದರೆ ಜನರಿಗೆ ಹಿತವಾಗುವಂತೆಯೇ ವಾಯುವು ಸದಾ ಬೀಸುತ್ತಿದ್ದನು.

* ಕಾರ್ಯಗಳನ್ನು ನಿರ್ವಹಿಸಲು ಅಧಿಕಾರಿಗಳು ಬೇಕಿರಲಿಲ್ಲ ; ಏಕೆಂದರೆ ಎಲ್ಲರೂ ತಮ್ಮ ವೃತ್ತಿಯನ್ನು ಪ್ರೀತಿಸಿ ನಿರ್ವಹಿಸುತ್ತಿದ್ದರು.

* ಸುಳ್ಳು ಎಲ್ಲಿಯೂ ಇರಲಿಲ್ಲ ; ಏಕೆಂದರೆ ಎಲ್ಲರೂ ಸತ್ಯವಂತರಾಗಿದ್ದರು.

* ಅಧರ್ಮದ ಪ್ರಸಕ್ತಿಯೇ ಇರಲಿಲ್ಲ ; ಎಲ್ಲರೂ ಧರ್ಮಪರಾಯಣರಾಗಿದ್ದರು.

ಇದು ವಾಲ್ಮೀಕಿಗಳು ಕಂಡ ರಾಮರಾಜ್ಯ.
ಇಂತಹ ರಾಮರಾಜ್ಯವೇ ತಾನೇ ನಮಗೂ ಬೇಕಿರುವುದು?


(೨೦೦೬ ಸೆಪ್ಟೆಂಬರ್ 'ಧರ್ಮಭಾರತೀ'ಯಲ್ಲಿ ಪ್ರಕಟಿತ ಲೇಖನ)