Saturday 28 November, 2009

ಸಿಟ್ಯಾಕೊ ಸಿಡುಕ್ಯಾಕೊ... ನನ ಜಾಣ!

{28.11.2009ರ ವಿಜಯ ಕರ್ನಾಟಕ-ಲವಲvkಯಲ್ಲಿ ಪ್ರಕಟಿತ ಬರಹ}

ದಿನ ಕಳೆದಂತೆ 'ಒರಟುತನ' ನಮ್ಮ ಹೊಸ ಜೀವನಶೈಲಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕಂಡಕಂಡವರ ಮೈಮೇಲೆ ಏರಿಹೋಗುವ, ಕಾಲು ಕೆದರಿ ಜಗಳಕ್ಕೆ ನಿಲ್ಲುವ ಸ್ವಭಾವ ನಮ್ಮದಾಗಿದೆ. ಯಾರನ್ನೂ ಸಹಿಸಿಕೊಳ್ಳುವ ಮನಸ್ಥಿತಿಯಲ್ಲಿಯೇ ನಾವಿಲ್ಲ. ಪಕ್ಕದವರ ಅತಿಸಣ್ಣ ತಪ್ಪನ್ನೂ ಮರಣ ದಂಡನೆಗೆ ಅರ್ಹವಾದ ಅಪರಾಧ ಅಂತ ಭಾವಿಸತೊಡಗಿದ್ದೇವೆ.

* ಪಕ್ಕದ ವಾಹನದವ ಓವರ್ ಟೇಕ್ ಮಾಡುವ ತವಕದಲ್ಲಿದ್ದಾನೆ. ಮುಂದೆ ಹೋಗುವ ಪ್ರಯತ್ನದಲ್ಲಿ ತಾಗಿದಂತಾಗಿದೆ, ತಾಗಿಲ್ಲ. ನಾವು ಬೈಯಲಾರಂಭಿಸುತ್ತೇವೆ. ಆತ ನುಗ್ಗಬಾರದಿತ್ತು, ಸರಿ. ಆದರೆ ಅವನಿಗೆ ತುರ್ತಾಗಿ ಹೋಗಬೇಕಾಗಿತ್ತೇನೋ, ನಾವೇ ದಾರಿ ಬಿಡಬಹುದುತ್ತು ಅಂತ ಯೋಚಿಸುವುದೇ ಇಲ್ಲ. ವಾಹನಕ್ಕೆ ತಾಗಿಸಿದರಂತೂ ಮುಗಿದೇ ಹೋಯಿತು. ಇಬ್ಬರೂ ರಸ್ತೆಗಿಳಿದು ಕೂಗಾಡಲಾರಂಭಿಸುತ್ತೇವೆ.ಎರಡೂ ಕಡೆ ಟ್ರಾಫಿಕಜಾಮ್.ಕೊನೆಗಾದ ಲಾಭ? ಏನೂ ಇಲ್ಲ. ಹತ್ತು ನಿಮಷ ಕೂಗಾಡಿ, ನಮ್ಮ ನಮ್ಮ ವಾಹನ ಹತ್ತಿ ಮುಂದುವರೆಯುತ್ತೇವೆ. ಇಷ್ಟೆಲ್ಲದರ ಬದಲು "ಹೋಗಲಿ ಬಿಡು, ದೊಡ್ಡ ನಷ್ಟವೇನಾಗಿಲ್ಲ" ಎಂದು ಅವನೆಡೆಗೆ ಕಿರುನಗೆ ಹಾರಿಸಿದ್ದರೆ ಅವನೂ ಪಶ್ಚಾತ್ತಾಪ ಭಾವದಲ್ಲಿ "ಸಾರಿ ಗುರೂ" ಎಂದಿರುತ್ತಿದ್ದ. ಸೀನ್ ಕ್ರಿಯೇಟ್ ಆಗುತ್ತಿರಲಿಲ್ಲ.


* ಬಸ್ಸು ತುಂಬಿ ತುಳುಕುತ್ತಿದೆ. ನಮಗಿಂತ ಹಿಂದಿರುವವನ ಸ್ಟಾಪ್ ಬಂದಿದೆ. ಇಳಿಯುವ ಗಡಿಬಿಡಿ ಅವನಿಗೆ. ನುಗ್ಗಿ ದಾಟು ಭರದಲ್ಲಿ ನಮ್ಮ ಕಾಲು ತುಳಿದು ಬಿಟ್ಟ. ಎಲ್ಲಿತ್ತೋ ಸಿಟ್ಟು "ಕಣ್ಣು ಕಾಣ್ಸಲ್ವೇನ್ರಿ? ದನ ನುಗ್ಗಿದಾಗೆ ನುಗ್ತೀರಲ್ಲ" ಎಂದಿದ್ದೇವೆ. ಅವನಿಗೂ ಇಳಿಯುವುದು ಮರೆತುಹೋಗಿದೆ. ತಿರುಗಿ ನಿಂತು ಅಬ್ಬರಿಸಿದ್ದಾನೆ "ನಿಮ್ಮಂತವರು ಕಾರಲ್ಲಿ ಓಡಾಡ್ಬೇಕ್ರಿ, ಬಸ್ಸಿಗ್ಯಾಕೆ ಬರ್ತೀರಾ?" ಸಹ ಪ್ರಯಾಣಿಕರಿಗೆ ಪುಕ್ಕಟೆ ಮನರಂಜನೆ.ಗಲಾಟೆ ಜೋರಾಯ್ತು. ನಮ್ಮ ಸ್ಟಾಪ್ ಕೂಡ ದಾಟಿ ಹೋಯಿತು. ಇದರ ಬದಲು - ಅವನು ಬೇಕಂತಲೇ ಮಾಡಿದ್ದಲ್ಲ ಎಂದುಕೊಂಡಿದ್ದರೆ? ಯಾಕೆಂದರೆ ಅಷ್ಟು ನೋವನ್ನು ಸಹಿಸಿಕೊಳ್ಳದಷ್ಟು ದುರ್ಬಲರೇನಲ್ಲ ನಾವು.

* ನಾವು ಹಣ ಕಟ್ಟಿದ್ದೇವೆ. ಆದರೂ ಆಪರೇಟರ್ ಮಾಡಿದ ಸಣ್ಣ ತಪ್ಪಿನಿಂದಾಗಿ ನಮ್ಮ ದೂರವಾಣಿಯ ಹೊರಹೋಗುವ ಕರೆಯನ್ನು ಸ್ಥಗಿತಗೊಳಿಸಲಾಗಿದೆ. ಕೋಪ ನೆತ್ತಿಗೇರಿದೆ. ನೇರ ಆಫೀಸ್ ಗೆ ಧಾಳಿ. ಸದರಿ ಆಪರೇಟರ್ ನನ್ನು ಹುಡುಕಿ ಆಗಿದೆ."ಏನಯ್ಯಾ, ಹೊಟ್ಟೆಗೆ ಅನ್ನ ತಿಂತೀಯಾ? ಮಣ್ಣು ತಿಂತೀಯಾ?" ತನ್ನದೇ ತಪ್ಪಿದ್ದರೂ ಎಲ್ಲರೆದುರಿಗೆ ಅವಮಾನ ಸಹಿಸಲಾರ ಆತ. ಸೇರಿಗೆ ಸವ್ವಾಸೇರು ಎನ್ನುವಂತೆ ಮಾತನಾಡಿದ್ದಾನೆ.ಪರಸ್ಪರ ಅತ್ಯುತ್ತಮ ಪದಪುಂಜಗಳ ಸುರಿಮಳೆ. ಗಲಾಟೆ ತಾರಕಕ್ಕೇರಿದಾಗ ಆಫೀಸರ್ ಹೊರಬಂದಿದ್ದಾರೆ. ನಮ್ಮನ್ನು ಕ್ಯಾಬಿನ್ ಒಳಗೆ ಕೂರಿಸಿದ್ದಾರೆ.ಎರಡೇ ನಿಮಿಷದಲ್ಲಿ ಸಮಸ್ಯೆ ಪರಿಹಾರವಾಗಿದೆ.ಇಷ್ಟೇ ಕೆಲಸವನ್ನು ಅದೇ ಆಪರೇಟರ್ ಮಾಡಿಕೊಡುತ್ತಿದ್ದ. ಮುಗುಳ್ನಗುತ್ತಾ "ಸ್ವಲ್ಪ ಏನಾಗಿದೆ ನೋಡಿ" ಎಂದಿದ್ದರೆ "ಸಾರಿ ಸರ್, ತಪ್ಪಾಗಿ ಬಿಟ್ಟಿದೆ" ಎಂದು ನಗೆ ಬೀರುತ್ತಿದ್ದ.

ನಾವೇಕೆ ಸ್ವಲ್ಪ ತಾಳ್ಮೆ ಕಲಿತುಕೊಳ್ಳಬಾರದು. ಅದರಿಂದ ನಮ್ಮ ಹಣ, ಶ್ರಮ, ಮರ್ಯಾದೆ ಎಲ್ಲವೂ ಉಳಿಯತ್ತದೆ. ಅಲ್ಲದೆ ಸಿಟ್ಟು, ಕೂಗಾಟ, ಜಗಳಗಳಿಂದ ನಾವೇನೂ ಪಡೆದುಕೊಳ್ಳುವುದಿಲ್ಲ. ಆತ ಮೊದಲು ತಪ್ಪು ಮಾಡಿದ್ದ, ಈಗ ನಾವು ತಪ್ಪಿತಸ್ಥರಾದೆವು ಅಷ್ಟೆ. ಮೃದುವಾಗಿ ವರ್ತಿಸಿದ್ದರೆ ಕೆಲಸವೂ ಆಗಿರುತ್ತಿತ್ತು, ತಪ್ಪು ಮಾಡಿದ ವ್ಯಕ್ತಿ; ಸುತ್ತಲಿನವರೆಲ್ಲರ ಮನಸ್ಸನ್ನೂ ಗೆದ್ದಿರುತ್ತಿದ್ದೆವು.

ಮಹಾಭಾರತ ಸುಂದರವಾಗಿ ಇದನ್ನು ನಿರೂಪಿಸುತ್ತದೆ-

ಮೃದುನಾ ದಾರುಣಂ ಹಂತಿ ಮೃದುನಾ ಹಂತ್ಯದಾರುಣಮ್/
ನಾಸಾಧ್ಯಂ ಮೃದುನಾ ಕಿಂಚಿತ್ ತಸ್ಮಾತ್ತೀವ್ರತರಂ ಮೃದು//

ಮೃದುತ್ವ ಕಠಿಣವನ್ನೂ ಗೆಲ್ಲುತ್ತದೆ; ಮೃದುವನ್ನೂ ಗೆಲ್ಲುತ್ತದೆ.
ಮೃದುತ್ವದಿಂದ ಸಾಧ್ಯವಾಗದಿರುವುದು ಯಾವುದೂ ಇಲ್ಲ.
ಮೃದುತ್ವವೇ ಶಕ್ತಿಶಾಲಿ.