Saturday 22 November, 2008

ವಿಶ್ವಮಂಗಲಕ್ಕಾಗಿ ಭಾರತದ ಗೋಯಾತ್ರೆ....

ಗೋವು ಉಳಿಯಬೇಕು. ಅದು ಭಾರತಕ್ಕೆ ಅನಿವಾರ್ಯ. ವಿಶ್ವಕ್ಕೂ ಅನಿವಾರ್ಯವೇ. ಭಾರತೀಯತೆ ಅದರ ಮಹತ್ತ್ವವನ್ನು ಹಾಗೆ ಗುರುತಿಸಿದೆ.

ಭಾರತೀಯತೆಯ ಮೊದಲ ಲಕ್ಷಣವೇ ಅನ್ವೇಷಣೆ. ಎಲ್ಲದರ ಮೂಲದ ಹುಡುಕಾಟಕ್ಕೆ ಅದು ತನ್ನನ್ನು ಕೊಟ್ಟುಕೊಂಡಿದೆ. ಈ ಹುಡುಕಾಟದಲ್ಲಿ ಅದಕ್ಕೆ ಕಾಣಸಿಕ್ಕಿದ್ದು ಗೋವು. ಇಹಕ್ಕೂ ಪರಕ್ಕೂ ಗೋವು ಬೇಕೆಂಬುದನ್ನು ಅದು ಮನಗಂಡಿತು. ಅದಕ್ಕಾದ ಆ ಸತ್ಯದರ್ಶನ, ಗೋವನ್ನು ಬದುಕಿನೊಂದಿಗೆ ಹಾಸುಹೊಕ್ಕಾಗಿ ಹೆಣೆಯಿತು. ಹಾಗಾಗಿ ಗೋವು ಅಧ್ಯಾತ್ಮದ ಸಾಧನವಾಯಿತು ; ಭೌತಿಕದ ಜೀವಿಕೆಯಾಯಿತು.

ಆಧುನಿಕದ ಬದುಕು ಇದನ್ನೆಲ್ಲ ಮರೆತಿದೆ. ಅದು ಸಹಜ. ಮುನ್ನೋಟದ ಯಾನದಲ್ಲಿ ಹಿಂದಿನದ್ದು ಕಾಣದು. ಹಾಗೆಂದು ಅನುಭವವನ್ನು ನಿರಾಕರಿಸುವಂತಿಲ್ಲ. ಆದರೂ ಮರೆತಿದೆ. ಮರೆತದ್ದನ್ನು ನೆನಪಿಸಬೇಕಿದೆ. ಅದು ಸಮಾಜ ಚಿಂತಕರ ಪರಮ ಕರ್ತವ್ಯ.

ಅಂತದ್ದೊಂದು ಕಾರ್ಯಕ್ಕೆ ಸುದೀರ್ಘ ಇತಿಹಾಸವಿದೆ. ಗೋವನ್ನು ಉಳಿಸಿಕೊಳ್ಳಬೇಕೆನ್ನುವ ಜಾಗೃತಿ ಇಂದು - ನಿನ್ನೆ ಮೂಡಿದ್ದಲ್ಲ. ಪರಕೀಯರ ಧಾಳಿ ಆರಂಭವಾದಂದಿನಿಂದಲೇ ಅದೂ ಆರಂಭಗೊಂಡಿದೆ. ಯಾಕೆಂದರೆ ಗೋವಿಗೆ ಅಪಾಯ ಆರಂಭವಾದದ್ದು ಅಂದಿನಿಂದಲೇ.

ಗೋಸಂರಕ್ಷಣೆಗಾಗಿ ಪ್ರಾಣಾಹುತಿಗಳೂ ನಡೆದಿವೆ ಎನ್ನುವುದು ಇತಿಹಾಸಪುಟಗಳು ಗುರುತಿಸಿವೆ. ಎಂಬಲ್ಲಿಗೆ ಅದರ ಮಹತ್ತ್ವ ಮತ್ತು ಅದಕ್ಕಿರುವ ಪ್ರಬಲ ಪ್ರತಿರೋಧ ಎಷ್ಟೆನ್ನುವುದು ಅರಿವಾಗುತ್ತದೆ.

ನಾವು ಬದುಕುತ್ತಿರುವ ಕಾಲಘಟ್ಟದಲ್ಲಿಯೂ ಈ ಎರಡೂ ಹಾಗೆಯೇ ಮುಂದುವರಿದಿದೆ. ಗೋವಿನ ಮಹತ್ತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದೆ, ಹಾಗೆಯೇ ಪ್ರತಿರೋಧವೂ.

ವರ್ತಮಾನದಲ್ಲಿಯೂ ಗೋವಿಗಾಗಿ ಅನೇಕ ಸಂಸ್ಥೆಗಳಿಂದ, ಅಸಂಖ್ಯ ವ್ಯಕ್ತಿಗಳಿಂದ ಕಾರ್ಯ ನಡೆಯುತ್ತಿದೆ ; ಅವರವರದ್ದೇ ಆದ ವಿಧಾನಗಳಲ್ಲಿ.

ಶ್ರೀರಾಮಚಂದ್ರಾಪುರಮಠ ಗೋಸಂರಕ್ಷಣೆಯ ಕಾರ್ಯವನ್ನು ಈ ಕಾಲಘಟ್ಟದ ತನ್ನ ಆದ್ಯತೆಯನ್ನಾಗಿ ಸ್ವೀಕರಿಸಿದೆ. ಆ ದಿಸೆಯಲ್ಲಿ ಹೆಜ್ಜೆಯಿಟ್ಟು 'ಕಾಮದುಘಾ' ಯೋಜನೆಯನ್ನು ಕೈಗೊಂಡಿದೆ. ಸಂರಕ್ಷಣೆ - ಸಂವರ್ಧನೆ - ಸಂಶೋಧನೆ - ಸಂಬೋಧನೆ ಎನ್ನುವ ನಾಲ್ಕು ಆಯಾಮಗಳನ್ನು ಗುರುತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆಯನ್ನೂ ಮಾಡಿದೆ.

ಜನಜಾಗೃತಿಯ 'ಸಂಬೋಧನೆ'ಯಲ್ಲಿ ಈಗಾಗಲೇ ಭಾರತೀಯ ಗೋಯಾತ್ರೆ - ಗೋಸಂಧ್ಯಾ - ಗೋಸಂಸತ್ - ವಿಶ್ವಗೋಸಮ್ಮೇಳನ - ಕೋಟಿನೀರಾಜನ - ದೀಪಗೋಪುರ ಮುಂತಾದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಒಂದಿಷ್ಟು ಜಾಗೃತಿ ಇದರಿಂದ ಸಾಧಿತವಾಗಿದೆ.

ಈಗ ರಾಷ್ಟ್ರದ ಮೂಲೆ -ಮೂಲೆಗೆ ತಲುಪಿಸಲು 'ವಿಶ್ವಮಂಗಲ ಗೋ ಗ್ರಾಮ ಯಾತ್ರಾ' ಸಂಘಟಿತಗೊಳ್ಳುತ್ತಿದೆ. ವಿರೋಧಿ ಸಂವತ್ಸರದ ವಿಜಯದಶಮಿಯಂದು ಆರಂಭಗೊಳ್ಳುವ ಯಾತ್ರೆ ಸಮಗ್ರ ಭಾರತದ ಆದ್ಯಂತ ಸಂಚರಿಸಲಿದೆ. ಯಾತ್ರೆ ಪೂರ್ಣಗೊಂಡಾಗ ಗೋಸಂರಕ್ಷಣೆಯ ಮೊದಲ ಹೆಜ್ಜೆ ಪೂರ್ಣಗೊಂಡಂತಾಗುತ್ತದೆ.

ಯಾತ್ರೆಯ ಕುರಿತು :
* ಯಾತ್ರೆಯ ಸಂಕಲ್ಪ, ಪರಿಕಲ್ಪನೆ ಮತ್ತು ಮಾರ್ಗದರ್ಶನ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರದ್ದು.

* ಯಾತ್ರೆ 'ಸಂತಮಂಡಲ'ದ ಬೆಂಬಲದಲ್ಲಿ ನಡೆಯಲಿದೆ.

* ಯಾತ್ರೆಯ ಪ್ರಸ್ಥಾವಕರು ; ಶ್ರೀಶ್ರೀರವಿಶಂಕರ ಗುರೂಜಿ - ಶ್ರೀರಾಮದೇವಜೀಬಾಬಾ - ಪೂಜ್ಯಾ ಅಮೃತಾನಂದಮಯೀಜೀ - ಪೂಜ್ಯ ಆಚಾರ್ಯ ವಿದ್ಯಾಸಾಗರಜೀ ಮಹಾರಾಜ್ - ಪೂಜ್ಯ ಆಚಾರ್ಯ ಮಹಾಪ್ರಾಜ್ಞಜೀ - ಪೂಜ್ಯ ರತ್ನಸುಂದರ ಸುರೇಶ್ವರಜೀ - ಪೂಜ್ಯ ದಯಾನಂದ ಸರಸ್ವತೀಜೀ.

* ಯಾತ್ರಾ ಸಮಯ 108 ದಿನಗಳು.

* 400 ಸ್ಥಳಗಳಲ್ಲಿ ಸಭಾಕಾರ್ಯಕ್ರಮಗಳು.

* ಹಳ್ಳಿಗಳಿಂದ ಮುಖ್ಯಕೇಂದ್ರಗಳಿಗೆ ಉಪಯಾತ್ರೆಗಳು.

* ಗೋಹತ್ಯಾ ನಿಷೇಧ ಕಾನೂನಿಗೆ ಸಹಿ ಸಂಗ್ರಹ.

* ಮೆರವಣಿಗೆಗಳು.

* ಗೋಪೂಜೆಗಳು.

* ಸಂತರು, ವಿಜ್ಞಾನಿಗಳಿಂದ ಗೋಸಂದೇಶ.

ಹೀಗೆ ಯಾತ್ರೆ ಭಾರತದೆಲ್ಲೆಡೆ ಸಂಚರಿಸಲಿದೆ ; ಭಾರತದ ಪ್ರತಿ ಮನೆಯನ್ನು ಗೋ 'ಅಭಯಧಾಮ'ವನ್ನಾಗಿಸಲು ಪ್ರಯತ್ನಿಸಲಿದೆ.

ನಮ್ಮ ಕಾಲಘಟ್ಟದ ಈ ಮಹತ್ತ್ವಾಕಾಂಕ್ಷಿ ಯಾತ್ರೆಗೆ ನಮ್ಮನ್ನು ನಾವೇ ತೊಡಗಿಸಿಕೊಳ್ಳೋಣ.


(ಡಿಸೆಂಬರ್ 2008ರ ಧರ್ಮಭಾರತಿಯ ಸಂಪಾದಕೀಯ)

Thursday 20 November, 2008

ಜೀವನ ಸಂಧ್ಯೆ

ಅಸ್ತಗಿರಿಯಂಚಿನಲಿ ಮುಳುಗಿದನು ರವಿತೇಜ
ಆವರಿಸುತಿದೆ ಜಗವ ತಿಮಿರ ಪಂಕ್ತಿ ;
ಬಾನಿನಂಗಳದಲ್ಲಿ ತಾರೆಗಳ ಸುಳಿವಿಲ್ಲ ;
ಮೋಡ ಮುಸುಕಿದೆ ನಭವ ಶಶಿರಹಿತ ರಾತ್ರಿ.

ಉದಯಿಸುತ ರವಿಯಾಗ ಬೆಳಗಿದ್ದ ಈ ಜಗವ ;
ಬೆಳೆಸಿದ್ದ ವನಸಿರಿಯ ತರುಲತೆಗಳ,
ಸೂರ್ಯಕಿರಣದಿ ಲೋಕ ತಿಳಿದೆದ್ದು ನಲಿದಿತ್ತು ;
ಯಾರಿಲ್ಲ ಅವನ ಜೊತೆ ಮುಳುಗುವಾಗ.

ತಂದೆ ತಾಯಿಗಳೆಂದು, ಅಣ್ಣತಮ್ಮರು ಎಂದು
ಸವೆಸಿದ್ದೆ ಬಾಲ್ಯವನು ಶ್ರಮದಿ ಬೆರೆತು
ಮತ್ತೆ ಯೌವನದಲ್ಲಿ ಪತ್ನಿಮಕ್ಕಳಿಗೆಂದು
ದುಡಿದಿದ್ದೆ ನನ್ನೆಲ್ಲ ಸುಖವ ಮರೆತು.

ಜಗದಗಲ ತುಂಬಿರುವ ನೋವು ತುಂಬಿದ ಜನರ
ಕಣ್ಣೀರ ಕರೆಗೆಂದು ಹೃದಯ ದ್ರವಿಸಿ
ಕೈನೀಡಿ ; ಮೇಲೆತ್ತಿ ; ಮೈದಡವಿ ; ಸಂತೈಸಿ
ಹೋರಾಟ ಮಾಡಿದ್ದೆ ಕಷ್ಟ ಸಹಿಸಿ.

ನನ್ನ ದೇಹದ ಶಕ್ತಿ ನೀರಾಗಿ ಹರಿದಂದು
ನನಗಿಲ್ಲವಾಯಿತು ಊರುಗೋಲು
ಊರು ಕೇರಿಯ ಜನರು ನೋಡಿ ಸಾಗುತಲಿಹರು
ಅಯ್ಯೋ! ಬಿರಿಯುತಲಿದೆ ನನ್ನ ಒಡಲು.

ವಿಗಡವಿಧಿ ಬರೆದಿರುವ ರುದ್ರನಾಟಕದಲ್ಲಿ
ಶೋಕನಾಯಕ ನಾನು ನನಗೆಲ್ಲಿ ಸೊಗಸು?
ನನ್ನ ಜೀವನ ನದಿಯು ಸಾಗರವ ಸೇರುತಿದೆ
ಬದುಕ ಸಂಧ್ಯೆಯೊಳಿಲ್ಲ ಸಾಂತ್ವನದ ಹೊಳಪು.

ಸೂರ್ಯನಿಗೆ ಬೇಳಗುಂಟು ; ನನಗಿಲ್ಲ ಬೆಳಕು
ನನ್ನ ಜೊತೆ ಯಾರಿಲ್ಲ ; ಏಕಾಂಗಿ ಬದುಕು
ಏ...ಕಾಂ....ಗಿ......
ಬ........ದು......ಕು

Tuesday 18 November, 2008

ಸಿದ್ಧ, ಬುದ್ಧನಾದದ್ದು

ಮಹಾರಾಜ ಶುದ್ಧೋದನನ ಅರಮನೆಯಲ್ಲಿ ಅಂದು ಸಂತಸದ ಹೊಳೆ. ಅರಮನೆಯಷ್ಟೇ ಏನು? ರಾಜ್ಯಕ್ಕೆ ರಾಜ್ಯವೇ ಹರ್ಷಗೊಂಡಿತ್ತು. ಮಹಾರಾಜನಿಗೊಬ್ಬ ಮಗ ಹುಟ್ಟಿದ್ದು ಈ ಸಂತೋಷಕ್ಕೆ ಕಾರಣ.

ವಿಧಿ - ವಿಧಾನದಂತೆ ಜಾತಕರ್ಮ, ನಾಮಕರಣಗಳು ನಡೆದವು. ಸರ್ವಾರ್ಥಸಿದ್ಧ ಎಂದು ಹೆಸರನ್ನೂ ಇಡಲಾಯಿತು. ಸಂಭ್ರಮದ ಸಂದರ್ಭದಲ್ಲಿಯೇ ಅರಮನೆಗೆ 'ಅಸಿತ' ಮಹರ್ಷಿಯ ಆಗಮನವಾಯಿತು. ಮುನಿಯನ್ನು ಯಥೋಚಿತವಾಗಿ ಸತ್ಕರಿಸಲಾಯಿತು. ಮಂಗಲ ಸಮಯದಲ್ಲಿ ಮಹರ್ಷಿ ಬಂದಿರುವಾಗ ಮಗನ ಭವಿಷ್ಯ ಕೇಳದಿದ್ದರೆ ಹೇಗೆ? ಶುದ್ಧೋದನ ತನ್ನ ಮಗನ ಮುಂದಿನ ಬದುಕು ಹೇಗೆಂದು ಕೇಳಿದ.

ಇಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಮುನಿ ನುಡಿದ ಮಾತು !?!

" ದೊರೆಯೇ, ನಿನ್ನ ಮಗನದ್ದು ಅದ್ಭುತ ಜನ್ಮಕುಂಡಲಿ. ಜಗತ್ತು ಎಂದೆಂದಿಗೂ ನೆನಪಿನಲ್ಲಿಡುವ ವ್ಯಕ್ತಿಯಾಗುತ್ತಾನೀತ. ಆದರೆ......"

ಮುನಿ ಮಾತು ನಿಲ್ಲಿಸಿದರು.

ರಾಜನ ಕುತೂಹಲ ಎಲ್ಲೆಮೀರಿತು. "ಆದರೆ....ಆದರೇನು? ಮುನಿವರ್ಯ!" ದೊರೆ ಕೇಳಿದ.

"ರಾಜನ್, ನಿನ್ನ ಮಗ ಸಮಸ್ತ ಭೂಮಂಡಲದ ಚಕ್ರವರ್ತಿಯಾಗುತ್ತಾನೆ. ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಗುರುತಿಸುವಂತೆ ಜಗತ್ತನ್ನು ಆಳುತ್ತಾನೆ."

ರಾಜ ಮುನಿಯ ಮಾತನ್ನು ತುಂಡರಿಸಿದ "ತಾವು ಆದರೆ... ಎಂದು ನಿಲ್ಲಿಸಿದ್ದನ್ನು ನೋಡಿ ಬೆದರಿದ್ದೆ ಪೂಜ್ಯರೇ. ಈಗ ಮನಕ್ಕೆ ಮಹದಾನಂದವಾಯಿತು."

ಮುನಿ ಮುಗುಳ್ನಗುತ್ತಾ ನುಡಿದರು "ನನ್ನ ಮಾತಿನ್ನೂ ಮುಗಿದಿಲ್ಲ ಮಹಾರಾಜ. ಅವನು ಅಖಂಡ ಭೂಮಂಡಲಕ್ಕೆ ಸಾರ್ವಭೌಮನಾಗುತ್ತಾನೆ, ಅಥವಾ ಎಲ್ಲವನ್ನೂ ಬಿಟ್ಟ ಪರಿವ್ರಾಜಕನಾಗುತ್ತಾನೆ. ಅವನಿಗೆಂದು ಬದುಕಿನ ನೋವುಗಳ ಸಂವೇಗ ಉಂಟಾಗುತ್ತದೆಯೋ ಅಂದು ಅವನ ದಾರಿ ಬದಲಾಗುತ್ತದೆ." ಮುನಿ ಮಾತು ನಿಲ್ಲಿಸಿದರು.

ರಾಜನೂ.

ರಾಜ ನಿರ್ಣಯಿಸಿ ಬಿಟ್ಟ, ನನ್ನ ಮಗನಿಗೆ ಬದುಕಿನ ಯಾವ ಕಷ್ಟವೂ ತಿಳಿಯದಂತೆಯೇ ಅವನನ್ನು ಬೆಳೆಸುತ್ತೇನೆ ಎಂದು. ಹಾಗೆಯೇ ಬೆಳೆಸಿದ ಕೂಡ. ಸರ್ವಾರ್ಥಸಿದ್ಧ ವಿಶಾಲ ಅರಮನೆಯ ಅಂಗಳದಲ್ಲಿಯೇ ಬೆಳೆದ. ಅವನ ಸುತ್ತೆಲ್ಲ ಸದಾ ಸಮೃದ್ಧಿಯೇ ತುಂಬಿತ್ತು. ಎಲ್ಲೆಂದರಲ್ಲಿ ಸಂತೋಷ ಕೂಟಗಳು. ನಲಿವೋ ನಲಿವು. ಅಚ್ಚರಿಯ ಮಾತೆಂದರೆ ರಾಜಕುಮಾರ ಹೊರಪ್ರಪಂಚವನ್ನೇ ನೋಡಿರಲಿಲ್ಲ. ಅಷ್ಟರಲ್ಲಾಗಲೇ ಯಶೋಧರೆಯೊಂದಿಗೆ ಮುದುವೆಯೂ ಆಗಿ ರಾಹುಲ ಹುಟ್ಟಿಯೂ ಆಗಿತ್ತು.

ಒಂದು ದಿನ, ರಾಜಕುಮಾರನಿಗೆ ಅರಮನೆಯನ್ನು ದಾಟಿದ ಪ್ರಪಂಚವನ್ನು ನೋಡಬೇಕೆನಿಸಿತು. ತಂದೆಗೆ ತನ್ನಾಸೆಯನ್ನು ಹೇಳಿದ. ಆಗಲೇ ಸಂಸಾರಿಯಾಗಿದ್ದವ ಸಂನ್ಯಾಸಿಯಾಗುವುದು ಹೇಗೆ? ಹಾಗಾಗಿ ಶುದ್ಧೋದನ ಸಂತೋಷದಿಂದ ಅವನ ಹೊರ ವಿಹಾರವನ್ನು ಒಪ್ಪಿದ.

ಸಾರಥಿಯೊಂದಿಗೆ ಸವಾರಿ ಹೊರಟಿತು. ಸರ್ವಾರ್ಥಸಿದ್ಧ ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಸಾಗಿದ.

ಮುಂದೊಂದು ಅಚ್ಚರಿ ಕಾದಿತ್ತು ರಾಜಕುಮಾರನಿಗೆ. ಅಲ್ಲೊಬ್ಬ ಎದುರಾದ. ಅವನ ಬೆನ್ನು ಬಾಗಿತ್ತು. ಹುಬ್ಬುಗಳು ಜೋಲುತ್ತಾ ಕಣ್ಣನ್ನು ಮುಚ್ಚಿದ್ದವು. ಕೈಕಾಲುಗಳು ನಡುಗುತ್ತಿದ್ದವು. ತುಟಿ ಅದುರುತ್ತಿತ್ತು. ಕೈಯಲ್ಲಿದ್ದ ಕೋಲನ್ನು ನೆಲದ ಮೇಲೆ ಊರಿ ನಡೆಯುತ್ತಿದ್ದ. ತಲೆಯ ಕೂದಲು ಬಿಳಿಯಾಗಿತ್ತು. ಹಿಂದೆಂದೂ ನೋಡದ ಈ ರೂಪ ಸರ್ವಾರ್ಥಸಿದ್ಧನನ್ನು ಚಕಿತಗೊಳಿಸಿತು.

ಸಾರಥಿಯನ್ನು ಕೇಳಿದ "ಇದೇನಿದು? ಇವನಿಗೇಕೆ ಹೀಗಾಗಿದೆ?" ಸಾರಥಿ ನುಡಿದ. "ರಾಜಕುಮಾರ! ಇದು ಮುಪ್ಪು. ಪ್ರತಿಯೊಬ್ಬನಿಗೂ ಇದು ಬಂದೇಬರುತ್ತದೆ. ಜೀವನ ಸಂಧ್ಯೆಯ ಅವಸ್ಥೆಯಿದು."

ರಾಜಕುಮಾರ ಗಂಭೀರನಾದ. ಅರಮನೆಗೆ ಹಿಂದಿರುಗುವಂತೆ ಆದೇಶಿಸಿದ. ಹಿಂದಿರುಗಿದವ ಚಿಂತೆಗೀಡಾದ. ಆಗಾಗ ಶೂನ್ಯದೆಡೆಗೆ ನೋಡುತ್ತಾ ಯೋಚಿಸುತ್ತಿದ್ದ.

ಸ್ವಲ್ಪಸಮಯ ಕಳೆಯಿತು. ಮತ್ತೊಮ್ಮೆ ಹೊರ ಹೋಗುವ ಮನಸ್ಸಾಯಿತು ಸರ್ವಾರ್ಥಸಿದ್ಧನಿಗೆ.

ಮುಂದಿನದೆಲ್ಲ ಹಿಂದಿನಂತೆಯೇ. ಈಗ ಎದುರಾದದ್ದು ಇನ್ನೊಂದು ವಿಚಿತ್ರ. ಅದೂ ಹೊಚ್ಚಹೊಸತು ರಾಜಕುಮಾರನಿಗೆ. ಎದುರಾದವನ ಹೊಟ್ಟೆ ವಿಚಿತ್ರವಾಗಿ ಉಬ್ಬಿತ್ತು. ಕೈಕಾಲುಗಳು ಬಡವಾಗಿದ್ದವು. ಉಸಿರಾಡಿದಂತೆ ಇಡೀ ದೇಹವೇ ಅಲುಗಾಡುತ್ತಿತ್ತು. ಒಂದೊಂದು ಹೆಜ್ಜೆಗೂ "ಅಮ್ಮಾ" ಎಂದು ಕಿರುಚುತ್ತಿದ್ದ.

ಬೆಚ್ಚಿದ ಸರ್ವಾರ್ಥಸಿದ್ಧ ಸಾರಥಿಯನ್ನು ಇದೇನೆಂದು ಕೇಳಿದ. ಸಾರಥಿ ನುಡಿದ "ಇವನು ರೋಗಿ. ಯಾವುದೋ ರೋಗ ಇವನನ್ನು ಬಾಧಿಸುತ್ತಿದೆ. ರೋಗಗಳು ಎಲ್ಲ ಮನುಷ್ಯರನ್ನು ಕಾಡುವುದು ಸಹಜವೇ."

ರಾಜಕುಮಾರ ಅರಮನೆಗೆ ಹಿಂದಿರುಗಿದ, ಪ್ರಯಾಣ ಮೊಟುಕುಗೊಳಿಸಿದ. ಶೂನ್ಯದ ಅವಲೋಕನ ಮತ್ತಷ್ಟು ಹೆಚ್ಚಾಯಿತು.

ಕೆಲಕಾಲ ಕಳೆಯಿತು. ಮತ್ತೆ ವಿಹಾರದ ಮನಸ್ಸಾಯಿತು.

ದೊರೆ ಅರೆ ಮನಸ್ಸಿಂದ ಒಪ್ಪಿದ. ಆದರೆ ಸಾರಥಿ ಮತ್ತು ದಾರಿ ಬದಲಾಯಿತು. ಪ್ರಯಾಣ ಸಾಗಿತು. ಮತ್ತೊಂದು ಹೊಸ ದೃಶ್ಯ ಎದುರಾಯಿತು. ಮಲಗಿದ್ದ ಓರ್ವನನ್ನು ನಾಲ್ವರು ಹೊತ್ತು ಸಾಗುತ್ತಿದ್ದರು. ಹಿಂದೊಂದು ಗುಂಪು ಹಿಂಬಾಲಿಸುತ್ತಿತ್ತು. ಕೆಲವರು ಜೋರಾಗಿ ಅಳುತ್ತಿದ್ದರು, ಗೋಳಿಡುತ್ತಿದ್ದರು. ಕೆಲವರು ಅವರನ್ನು ಸಮಾಧಾನಪಡಿಸುತ್ತಿದ್ದರು.

ಸಾರಥಿಯನ್ನು "ಇದೆಂತಹ ಮೆರವಣಿಗೆ" ಎಂದು ಕೇಳಿದ ಸರ್ವಾರ್ಥಸಿದ್ಧ. ಸಾರಥಿ ವಿವರಿಸತೊಡಗಿದ "ಇದು ಸಾವು. ಎಲ್ಲರೂ ಆಯುಷ್ಯ ತೀರಿದ ಮೇಲೆ ಸಾಯಲೇಬೇಕು. ಸತ್ತಾಗ ಹೀಗೆಯೇ ಮೆರವಣಿಗೆ. ಕೊನೆಗೆ ಸ್ಮಶಾನದಲ್ಲಿ ಬೂದಿಯಾಗುವುದು.ಅಲ್ಲಿಗೆ ಬದುಕಿನ ಕೊನೆ".

ರಥ ಹಿಂದಿರುಗಿತು ಅರಮನೆಗೆ. ರಾಜಕುಮಾರ ಮೌನಿಯಾಗಿಬಿಟ್ಟ. ಈ ಎಲ್ಲ ಬದುಕಿನ ನೋವುಗಳನ್ನು ಕಳೆದುಕೊಳ್ಳಬೇಕೆನಿಸಿತು. ಪ್ರಪಂಚದ ಎಲ್ಲರ ನೋವನ್ನು ಕಳೆಯಬೇಕೆನಿಸಿತು.

ಒಂದು ಮಧ್ಯರಾತ್ರಿ ಎಲ್ಲವನ್ನೂ ಬಿಟ್ಟು ಶಾಶ್ವತ ಸುಖವನ್ನರಸುತ್ತಾ ಹೊರಟ.

* * *

ಗೆಳೆಯರೆ,

ಈ ಹಿನ್ನ್ಮೆಲೆಯಲ್ಲಿ ನನ್ನ "ನಾನು ಬುದ್ಧನಾಗುವುದಿಲ್ಲ" ಕವಿತೆಯನ್ನು ಮತ್ತೊಮ್ಮೆ ಓದಿ.

Monday 17 November, 2008

ನಾನು ಬುದ್ಧನಾಗುವುದಿಲ್ಲ........

ಸಾಗುತಿದೆ ಶವಯಾತ್ರೆ
ಅನಂತದೆಡೆಗೆ
ಜೊತೆಗೆ
ಅಳು ಆಕ್ರಂದನ
ಬೆಂಕಿ ಮಡಿಕೆ
ಚಟ್ಟ ಕಟ್ಟಿಗೆ
ಕಂಡರೂ
ನಾನಾಗುವುದಿಲ್ಲವೇಕೆ ಬುದ್ಧ?

ಚರ್ಮಕ್ಕೆಲ್ಲ ತೊನ್ನು
ಒಂಟಿಕೈ
ತಿರುಚಿದ ಕಾಲು
ಸುರಿಯುತ್ತಿದೆ ಸಿಂಬಳ
ಆಗಾಗ ವಾಂತಿ
ಕಜ್ಜಿ ತುರಿ
ಎಂಜಲೆಲೆಗಳ ಮಧ್ಯೆ
ಹುಡುಕಾಟ ಬದುಕಿಗಾಗಿ ಅಲ್ಲೂ ಸ್ಪರ್ಧೆ ನಾಯಿಗಳೊಂದಿಗೆ
ಕಂಡರೂ
ನಾನಾಗುವಿದಿಲ್ಲವೇಕೆ ಬುದ್ಧ?

ಬಾಗಿದ ಬೆನ್ನು
ಕೋಲು ಕೈಯಲ್ಲಿ
ಮುಖ ಬದನೆಕಾಯಿ ಬಜ್ಜಿ
ಕೂದಲು?
ಒಣಗಿದ ಭತ್ತದ ಹುಲ್ಲು
ಕೈಕಾಲು ಕಟ್ಟಿಗೆ
ಹೊಟ್ಟೆಯಂತೂ ಪೆಟ್ಟಿಗೆ
ಉಬ್ಬಸ ಎದೆನೋವು ...ವಗೈರೆ...ವಗೈರೆ...
ಕಂಡರೂ
ನಾನಾಗುವುದಿಲ್ಲವೇಕೆ ಬುದ್ಧ?

Tuesday 11 November, 2008

ಹುತ್ತದ ಬೆಳಕು

ಹುತ್ತಗಟ್ಟಿದೆ ಸುತ್ತ, ಮತ್ತೆಲ್ಲ ಕತ್ತಲೆಯು
ಆಳದಲಿ ಹತ್ತುತಿದೆ ಹಣತೆ ದೀಪ |
ಮುನಿಯ ಮಾತೇ ಮಂತ್ರ, ಮನನಕ್ಕೆ ತ್ರಾಣವದು
ಮೈಮರೆತು ಮನವರಿತು ಮುಳುಗಿತಲ್ಲೆ ||

ಹೆಪ್ಪುಗಟ್ಟಿದ ಹುತ್ತ ಕರಗತೊಡಗಿದ ಸಮಯ
ಮಂತ್ರ ಮನದಾಳಕ್ಕೆ ಇಳಿಯುತಿರಲು |
ಆಳದಾಳದ ಬೆಳಕು ಮೇಲುಮೇಲಕೆ ಬರಲು
ಕತ್ತಲೆಯ ಕೋಟೆಯೊಳು ಬಿರುಕು ಬಿರುಕು ||

ಕೋಟೆ ಬಿರಿದಾಕ್ಷಣವು ಜಗಕೆಲ್ಲ ಮಂಗಲವು
ಸತ್ವದುನ್ನತಿಗೇರ್ದ ಮಧುರ ಗಳಿಗೆ |
ಕಂಡ ರೂಪದ ಬಿಂಬ ಜಗದಗಲ ಹರಡಿತ್ತು
ಹುತ್ತದೊಳ ಚೈತನ್ಯ ಇಳಿಯಿತಿಳೆಗೆ ||

Sunday 9 November, 2008

ಮನುಭಾಷಿತ - 7

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಸಮಾಜವೊಂದರ ಬೆಳವಣಿಗೆಯೆಂದರೆ ಅದೊಂದು ಸರಪಳಿಯಂತಹ ವ್ಯವಸ್ಥೆ. ಒಂದು ಕೊಂಡಿಯೊಳಗೆ ಇನ್ನೊಂದು ಕೊಂಡಿ ; ಇದರೊಳಗೆ ಇನ್ನೊಂದು ಕೊಂಡಿ ; ಮತ್ತದರೊಳಗೆ ಮುಂದಿನದು ; ಮುಂದಿನದರೊಳಗೆ ಹಿಂದಿನದು....ಹೀಗೆ ಹಿಂದಿನದು ಮುಂದಿನದಕ್ಕೆ ಕೊಟ್ಟುಕೊಳ್ಳುತ್ತಾ, ತಾನೂ ಪಡೆದುಕೊಳ್ಳುತ್ತಾ ಸಾಗುವಿಕೆ, ಮುಂದಿನದೂ ಕೂಡ ಹಿಂದಿನದರಿಂದ ಪಡೆದುಕೊಳ್ಳುತ್ತಾ, ತಾನೂ ಕೊಟ್ಟುಕೊಳ್ಳುತ್ತಾ ಸಾಗುವ ಕ್ರಮ - ಸರಪಳಿಯದ್ದು.

ಅಂತೆಯೇ ಸಮಾಜದ ಕ್ರಮಣವೂ. ಹಿರಿಯ ತಲೆಮಾರು ಮತ್ತು ಕಿರಿಯ ತಲೆಮಾರು ಪರಸ್ಪರ ಕೊಟ್ಟುಕೊಳ್ಳುತ್ತ ಸಾಗಬೇಕು.

ಇದರಲ್ಲಿ ಹಿರಿಯ ತಲೆಮಾರಿನ ಕೊಡುಗೆ ಅನನ್ಯ, ಅನುಪಮ. ತಾನು ತುಂಬಿಕೊಂಡದ್ದೆಲ್ಲವನ್ನೂ ಬರಿದಾಗಿಸುವ ಪ್ರಕ್ರಿಯೆ ಅದರದ್ದು. ತಮ್ಮ ಮುಂದಿನ ಜಗತ್ತಿನ ಸೌಖ್ಯಕ್ಕಾಗಿ ತಮ್ಮ ಸಾಧನೆ - ಅನುಭವಗಳನ್ನವರು ಸ್ವಾರ್ಥರಹಿತರಾಗಿ ಸಮರ್ಪಿಸುತ್ತಾರೆ ಸೃಷ್ಟಿಗೆ. ಈ ಜಗತ್ತಿನ ಸಂಬಂಧವನ್ನು ಮರಣವೆನ್ನುವ ಹೆಸರಿನಿಂದ ಕಡಿದುಕೊಳ್ಳುವ ಅವರಿಗೆ ಈ ಸಮರ್ಪಣೆಯಿಂದಾಗುವ ಲಾಭವೇನು?

ಇಂತಹ ತ್ಯಾಗಶೀಲತೆ ಗೌರವಾರ್ಹ. ಅವರ ಅನುಭವ ಸ್ವೀಕಾರಾರ್ಹ. ಯಾವ ಕಾಲ, ಯಾವ ದೇಶ, ಯಾವ ಜನಾಂಗ ಅವರನ್ನು ನಿರ್ಲಕ್ಷಿಸಿದೆಯೋ ಅದು ನಿಶ್ಚಿತವಾಗಿಯೂ ಪತನಮುಖಿ.

ಹಿರಿಯರ ಅನುಭವ ಕಿರಿಯರ ಬಾಳಬುತ್ತಿ. ಬುತ್ತಿಯೆಂದರೆ ಅದೇ, ಬೆಂಕಿ ಹತ್ತಿಸಬೇಕಿಲ್ಲ ; ನೀರು ಕುದಿಸಬೇಕಿಲ್ಲ ; ಪದಾರ್ಥಗಳ ಸಂಯೋಜನೆಯ ಕಾರ್ಯವಿಲ್ಲ. ಅದು ಸಿದ್ಡ ಆಹಾರ. ಬಾಯಿಗಿಟ್ಟುಕೊಳ್ಳುವುದು ಮಾತ್ರ ನಮ್ಮ ಕೆಲಸ. ಹಿರಿಯರ ಅನುಭವವೂ ಹಾಗೆಯೇ. ಶೂನ್ಯ ಜಗತ್ತಿನಲ್ಲಿ ನಾವು ಯೋಚಿಸಬೇಕಿಲ್ಲ. ಹೊಸದಾಗಿ ಕಾರ್ಯಾರಂಭ ಮಾಡಬೇಕಿಲ್ಲ. ಹೊಸ ಬದುಕಿಗೆ ಅದನ್ನು ಅನ್ವಯಿಸಿಕೊಳ್ಳುವುದು ಮಾತ್ರ ಕಿರಿಯ ತಲೆಮಾರಿನ ಕಾರ್ಯ.

ಇಂತಹ ಬಾಳಬುತ್ತಿಯನ್ನು ನೀಡುವ ಹಿರಿಯರನ್ನು ನಿತ್ಯವೂ ಗೌರವಿಸಬೇಕು ; ಅದರಿಂದ ದೊರೆಯುವ ನಾಲ್ಕು ಲಾಭಗಳನ್ನು ಪಡೆದುಕೊಳ್ಳಬೇಕು ಎನ್ನುವುದು ಮನುಭಾಷಿತ -

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ |
ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್ ||

ನಿತ್ಯವೂ ವೃದ್ಡರನ್ನು ಸೇವಿಸುವವನಿಗೆ, ವೃದ್ಧರಿಗೆ ತಲೆಬಾಗುವವನಿಗೆ ಆಯುಸ್ಸು ; ವಿದ್ಯೆ ; ಯಶಸ್ಸು ; ಬಲಗಳು ವೃದ್ಡಿಯಾಗುತ್ತವೆ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ

(ಧರ್ಮಭಾರತಿಯ ಅಂಕಣ ಬರಹ)